ಎಚ್ಡಿಕೆ, ಬಾಲಕೃಷ್ಣಗೆ ದೇವೇಗೌಡ್ರು ಬುದ್ದಿಮಾತು ಹೇಳಿದ್ದು ಹೀಗೆ..
ಬೆಂಗಳೂರು, ಅ 24: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಗಡಿ ಶಾಸಕ ಬಾಲಕೃಷ್ಣ ನಡುವಿನ ವಾಕ್ ಸಮರದ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮಧ್ಯ ಪ್ರವೇಶಿಸಿದ್ದು ಇಬ್ಬರಿಗೂ ಬುದ್ದಿಮಾತನ್ನು ಹೇಳಿದ್ದಾರೆ.
ಶುಕ್ರವಾರ (ಅ 23) ಅರಮನೆ ಮೈದಾನದಲ್ಲಿ ಪುಸ್ತಕೋತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ದೇವೇಗೌಡ, ಬಾಲಕೃಷ್ಣ ಉತ್ಸಾಹಿ ಯುವಕ. ಕ್ಷೇತ್ರದ ಅಭಿವೃದ್ದಿಗೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿರಬಹುದು ಎಂದಿದ್ದಾರೆ.
ನಾನು ಕುಮಾರಸ್ವಾಮಿ ಮತ್ತು ಬಾಲಕೃಷ್ಣ ಅವರನ್ನು ಕರೆದು ಮಾತನಾಡುತ್ತೇನೆ. ಅಧಿಕಾರ ಇದ್ದರೆ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬಹುದು ಎನ್ನುವುದು ಬಾಲಕೃಷ್ಣ ಅವರ ನಿಲುವಾಗಿರಬಹುದು. (ಕುಮಾರಸ್ವಾಮಿ, ಬಾಲಕೃಷ್ಣ ವಾಕ್ಸಮರ)
ಈ ವಿಚಾರವನ್ನು ದೊಡ್ದದು ಮಾಡುವ ಅವಶ್ಯಕತೆಯಿಲ್ಲ, ಕಾರ್ಯಕರ್ತರನ್ನು ಭೇಟಿಯಾಗಿ ಪಕ್ಷ ಬಲವರ್ಧನೆಗೆ ಇಬ್ಬರೂ ಮುಂದಾಗಲಿ ಎಂದು ಇಬ್ಬರು ನಾಯಕರಿಗೆ ತನ್ನ ಎಂದಿನ ಶೈಲಿಯಲ್ಲಿ ದೇವೇಗೌಡ್ರು ಕಿವಿಹಿಂಡಿದ್ದಾರೆ.
ಮುಂದಿನ ಅಸೆಂಬ್ಲಿ ಅಧಿವೇಶನಕ್ಕೆ ಮುನ್ನ ಕುಮಾರಸ್ವಾಮಿ ಶಾಸಕರ ಸಭೆಯನ್ನು ಕರೆಯಬಹುದು. ಒಂದು ವೇಳೆ ನನಗೆ ಆಹ್ವಾನ ಬಂದರೆ ಅದರಲ್ಲಿ ಭಾಗವಹಿಸುತ್ತೇನೆ. ನಮ್ಮ ಶಾಸಕರಿಗೆ ಯಾವ ರೀತಿ ಕಾರ್ಯತಂತ್ರ ರೂಪಿಸಬೇಕು ಎನ್ನುವುದನ್ನು ವಿವರಿಸುತ್ತೇನೆಂದು ದೇವೇಗೌಡ ಹೇಳಿದ್ದಾರೆ. ಮುಂದೆ ಓದಿ..
ಸದಸ್ಯತ್ವ ಅಭಿಯಾನ
ಸದಸ್ಯತ್ವ ಅಭಿಯಾನ ರಾಜ್ಯಾದ್ಯಂತ ಇನ್ನೂ ಚುರುಕುಗೊಳ್ಳಬೇಕಿದೆ. ಈ ಸಂಬಂಧ ಪಕ್ಷದ ಶಾಸಕರಿಗೆ ಮತ್ತು ಜಿಲ್ಲಾ ಮಟ್ಟದ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದು ದೇವೇಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೇಳಿದ್ದಾರೆ.
ರಾಷ್ಟ್ರೀಯ ಕಾರ್ಯಕಾರಿಣಿ
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಬೆಂಗಳೂರಿನಲ್ಲೇ ನಡೆಸಲು ನಿರ್ಧರಿಸಲಾಗಿದೆ. ಇದಕ್ಕೂ ಮುನ್ನ ಸದಸ್ಯತ್ವ ಅಭಿಯಾನ ತೀವ್ರ ಗತಿಯಲ್ಲಿ ಸಾಗಬೇಕಿದೆ. ಪಕ್ಷದ ಶಾಸಕರು ಮತ್ತು ಸಂಸದರು ಕಾರ್ಯಕಾರಿಣಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಕುಮಾರಸ್ವಾಮಿ ಭಾಗವಹಿಸಿದ್ದರು
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪುಸ್ತಕೋತ್ಸವಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಭೇಟಿ ನೀಡಿ ಕೆಲವು ಪುಸ್ತಕಗಳನ್ನು ಖರೀದಿಸಿದ್ದರು. ದೇವೇಗೌಡ್ರು ಪುಸ್ತಕೋತ್ಸವಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಖರೀದಿಸಿದ್ದಾರೆ.
ಬಾಲಕೃಷ್ಣ ಮತ್ತು ಕುಮಾರಸ್ವಾಮಿ ನಡುವೆ ಏನಾಗಿತ್ತು?
ಮಾಗಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಬಾಲಕೃಷ್ಣ ಅವರು 'ಜೆಡಿಎಸ್ 10 ವರ್ಷಗಳಿಂದ ಪ್ರತಿಪಕ್ಷ ಸ್ಥಾನದಲ್ಲೇ ಇದೆ. ಆದ್ದರಿಂದ, ಪಕ್ಷದ ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗುತ್ತಿಲ್ಲ. ಜನರ ನಿರೀಕ್ಷೆ ಪೂರೈಸಲು ಆಗುತ್ತಿಲ್ಲ. ಮುಂದಿನ ವಿಧಾನಸಭೆಗೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡರೆ ಒಳ್ಳೆಯದು' ಎಂದು ಹೇಳಿದ್ದರು.
ಕುಮಾರಸ್ವಾಮಿ ತಿರುಗೇಟು
ಬಾಲಕೃಷ್ಣ ಅವರ ಮಾತಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ, ಅಧಿಕಾರದ ಆಸೆ ಇದ್ದರೆ ತಕ್ಷಣವೇ ಕಾಂಗ್ರೆಸ್ ಸೇರಬಹುದು. ಹೇಗೂ ಸಚಿವ ಸಂಪುಟ ವಿಸ್ತರಣೆಯೂ ಆಗುತ್ತಿದೆ. ಜೆಡಿಎಸ್ಗೆ ರಾಜೀನಾಮೆ ಕೊಟ್ಟು ಅಧಿಕಾರದಲ್ಲಿರುವ ಕಾಂಗ್ರೆಸ್ಗೆ ಸೇರಿಕೊಳ್ಳಲಿ' ಎಂದು ಎಚ್ಡಿಕೆ ಹೇಳಿದ್ದರು. ಇದಕ್ಕೆ ಬಾಲಕೃಷ್ಣ ನಾನು ಪಕ್ಷ ಬಿಡುವುದಿಲ್ಲ ಎಂದು ಪ್ರತ್ಯುತ್ತರ ನೀಡಿದ್ದರು.