'ಡಿಕೆ ಶಿವಕುಮಾರ್ ಬಿಡುಗಡೆಯಿಂದ ಸಿದ್ದರಾಮಯ್ಯಗೆ ಸಂಕಟ'
Recommended Video
ಬೆಂಗಳೂರು, ಅಕ್ಟೋಬರ್ 23: ಮಾಜಿ ಸಚಿವ ಡಿಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ದೆಹಲಿ ಹೈಕೋರ್ಟ್ ಬುಧವಾರ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಬಗ್ಗೆ ಕಾಂಗ್ರೆಸ್ ಮತ್ತು ಇತರೆ ವಿರೋಧಪಕ್ಷಗಳು ಸಂತಸ ವ್ಯಕ್ತಪಡಿಸಿದೆ. ಆದರೆ ಬಿಜೆಪಿಯ ಹೆಚ್ಚಿನ ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಸಚಿವ ಜಗದೀಶ್ ಶೆಟ್ಟರ್ ಡಿಕೆ ಶಿವಕುಮಾರ್ ಅವರ ಬಿಡುಗಡೆ ಕುರಿತು ಹೇಳಿಕೆ ನೀಡದಿದ್ದರೂ, ಈ ಘಟನೆಯನ್ನು ಮುಂದಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಣಕಿದ್ದಾರೆ.
ಡಿಕೆ ಶಿವಕುಮಾರ್ ಬಂಧನ ರಾಜಕೀಯ ಪ್ರೇರಿತವಲ್ಲ. ಈ ಪ್ರಕರಣದೊಂದಿಗೆ ರಾಜಕೀಯ ತಳುಕು ಹಾಕುವುದು ಸರಿಯಲ್ಲ ಎಂದು ಬಂಧನದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಸಚಿವ ಆರ್ ಅಶೋಕ್, ಡಿಕೆ ಶಿವಕುಮಾರ್ ಅವರ ಬಿಡುಗಡೆಗೆ ಅಭಿಮಾನಿಗಳು ದೊಡ್ಡ ಅರ್ಥ ಕಲ್ಪಿಸಬೇಕಿಲ್ಲ. ಅವರಿಗೆ ಜಾಮೀನು ಸಿಕ್ಕಿರುವುದಷ್ಟೇ ವಿನಾ, ಪ್ರಕರಣದಿಂದ ತಪ್ಪಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿತ್ತು. ಅಕ್ರಮ ಹಣವರ್ಗಾವಣೆ ಪ್ರಕರಣದಲ್ಲಿ ನಾಲ್ಕು ದಿನ ಇಡಿ ವಿಚಾರಣೆ ಬಳಿಕ ಅವರನ್ನು ಸೆ. 3ರಂದು ಬಂಧಿಸಲಾಗಿತ್ತು. ಅಲ್ಲಿಂದ ಸುಮಾರು 50 ದಿನಗಳವರೆಗೆ ಡಿಕೆ ಶಿವಕುಮಾರ್ ಜೈಲಿನಲ್ಲಿಯೇ ಕಳೆಯುವುದು ಅನಿವಾರ್ಯವಾಗಿತ್ತು. ಅವರಿಗೆ ಜಾಮೀನು ದೊರೆತ ಬಳಿಕ ಬುಧವಾರ ರಾತ್ರಿ ತಿಹಾರ್ ಜೈಲಿನಿಂದ ಬಿಡುಗಡೆ ದೊರೆತಿದೆ. ಅಭಿಮಾನಿಗಳಲ್ಲಿ ಇದು ಸಂತಸ ಮೂಡಿಸಿದ್ದರೆ, ರಾಜಕೀಯ ಎದುರಾಳಿಗಳಲ್ಲಿ ಮತ್ತೊಂದು ಮಾತಿನ ಸಮರಕ್ಕೆ ನಾಂದಿ ಹಾಡಿದೆ.

ನ್ಯಾಯಕ್ಕೆ ದೊರೆತ ಜಯ-ಸಿದ್ದರಾಮಯ್ಯ
ಡಿ.ಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದು ನನಗೆ ಸಂತೋಷ ಉಂಟುಮಾಡಿದೆ. ದ್ವೇಷ ರಾಜಕಾರಣದ ಉದ್ದೇಶದಿಂದ ಪ್ರಕರಣವು ತನಿಖಾ ಹಂತದಲ್ಲಿರುವಾಗಲೇ ಅವರನ್ನು ಬಂಧಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡಲಾಗಿತ್ತು. ಅವರಿಗೆ ಜಾಮೀನು ದೊರೆತಿರುವುದು ನ್ಯಾಯಕ್ಕೆ ದೊರೆತ ಜಯ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ನಿಮ್ಮೊಳಗಿನ ಸಂಕಟ
'ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಜಗದೀಶ್ ಶೆಟ್ಟರ್, ಬಹುಶಃ ಸಿದ್ದರಾಮಯ್ಯನವರು ಊಹಿಸಲಾರದಂತಹ ತೀರ್ಪು ಇಂದು ದೆಹಲಿ ಹೈ ಕೋರ್ಟ್ ನೀಡಿದೆ. ಸ್ವಪಕ್ಷೀಯ ವಿರೋಧಿಗಳು ದೂರಾದರು ಎಂಬ ಕಾರಣದಿಂದ ಹೊಸ ಹುಮ್ಮಸ್ಸು ಹಾಗೂ ಧೈರ್ಯದಿಂದ ಉಪ ಚುನಾವಣೆಗೆ ಸಿದ್ದರಾಗುತ್ತಿದ್ದ ಸಿದ್ದರಾಮಯ್ಯನವರ ಕನಸಿಗೆ ತಣ್ಣೀರೆರಚಿದಂತಾಗಿದೆ. ನಿಮ್ಮ ಒಳಗಿನ ಸಂಕಟ ಅರ್ಥವಾಗುತ್ತದೆ' ಎಂದು ಶೆಟ್ಟರ್ ಟ್ವಿಟ್ಟರ್ನಲ್ಲಿ ಕಾಲೆಳೆದಿದ್ದಾರೆ.

ಸಿಕ್ಕಿರುವುದು ಜಾಮೀನು ಮಾತ್ರ
'ಡಿಕೆ ಶಿವಕುಮಾರ್ ಅವರಿಗೆ ಸಿಕ್ಕಿರುವುದು ಜಾಮೀನು ಮಾತ್ರ. ಅವರ ವಿರುದ್ಧದ ಪ್ರಕರಣ ವಜಾ ಆಗಿಲ್ಲ. ಇದನ್ನು ಅವರ ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು' ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಡಿಕೆ ಶಿವಕುಮಾರ್ ಅವರ ಅವ್ಯವಹಾರಗಳು ಬಯಲಿಗೆ ಬಂದಿವೆ. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಬಿಜೆಪಿಗೆ ನ್ಯಾಯಾಲಯದ ಮೇಲೆ ಗೌರವವಿದೆ. ಇಷ್ಟು ದಿನ ಈ ಪ್ರಕರಣ ಬಿಜೆಪಿಯ ಕೈವಾಡ ಎನ್ನುತ್ತಿದ್ದವರು ಈಗ ಹೇಳಲಿ. ಬಾಯಿಗೆ ಬಂದಂತೆ ಬಿಜೆಪಿ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಸಿಬಿಐ ಹೆಸರು ಬದಲಿಸಿ
ಪಿ ಚಿದಂಬರಂ, ಡಿಕೆ ಶಿವಕುಮಾರ್, ಡಾ. ಜಿ ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ನಾಯಕರನ್ನ ಮಟ್ಟಹಾಕಲು, ನರೇಂದ್ರ ಮೋದಿ ಸರ್ಕಾರ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಿಬಿಐ ಹೆಸರನ್ನು ಬಿಜೆಪಿ ಸೆಂಟ್ರಲ್ ಇನ್ವೆಸ್ಟಿಗೇಷನ್ ಬ್ಯೂರೊ ಎಂದು ಬದಲಾಯಿಸಿಕೊಳ್ಳಿ, ನಾವು ಹೆದರುವುದಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.












Click it and Unblock the Notifications