ಅಮಿತ್ ಶಾ ಬೆಂಗಳೂರು ನಿರ್ಗಮನದ ನಂತರ ಗುಸುಗುಸು ಸುದ್ದಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಒಂದು ದಿನದ ಕರ್ನಾಟಕ ಪ್ರವಾಸ ಮುಕ್ತಾಯಗೊಂಡಿದೆ. ಕೆಲವೊಂದು ಊಹಾಪೋಹಗಳಿಗೆ ಬೆಂಗಳೂರಿನಲ್ಲೇ ಉತ್ತರ ಕೊಡುವ ಕೆಲಸವನ್ನು ಉಸ್ತುವಾರಿ ಅರುಣ್ ಸಿಂಗ್ ಜೊತೆ ಅಮಿತ್ ಶಾ ಕೂಡಾ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಾಯಕತ್ವ ಬದಲಾವಣೆ ವಿಚಾರದಲ್ಲಿ ನಿಟ್ಟುಸಿರು ಬಿಡುವಂತಾಗಿದೆ. ಆಡಳಿತ ಯಂತ್ರವನ್ನು ಕ್ರಿಯಾಶೀಲಗೊಳಿಸಿ ಎನ್ನುವ ಫರ್ಮಾನು ಅಮಿತ್ ಶಾ ಅವರ ಕಡೆಯಿಂದ ಬಂದಿದೆ.
ಅಮಿತ್ ಶಾಗೆ ಬೆಳ್ಳಿತಟ್ಟೆಯಲ್ಲಿ ಊಟ: 40% ಕಮಿಷನ್ ದುಡ್ಡಾ ಎಂದ ಕಾಂಗ್ರೆಸ್
ವಿರೋಧ ಪಕ್ಷದ ನಲವತ್ತು ಪರ್ಸೆಂಟ್ ಕಮಿಷನ್ ಆಪಾದನೆ, ಪಿಎಸ್ಐ ಪರೀಕ್ಷೆ ಅಕ್ರಮ ವಿಚಾರದ ನಡುವೆ ಮುಖ್ಯಮಂತ್ರಿಗಳಿಗೆ ಕೇಂದ್ರದಿಂದ ಅಭಯ ಹಸ್ತ ಸಿಕ್ಕಿದೆ. ಜೊತೆಗೆ, ಸಂಪುಟ ವಿಸ್ತರಣೆಯ ವಿಚಾರವೂ ಬಹುತೇಕ ಅಂತಿಮ ಹಂತಕ್ಕೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ.
ಇವೆಲ್ಲದರ ನಡುವೆ ಇನ್ನೊಂದು ವಿಚಾರ ಮತ್ತೆ ಬಿಜೆಪಿ ಪಡಶಾಲೆಯಲ್ಲಿ ಚರ್ಚೆಯ ವಿಷಯವಾಗಿದೆ. ಚುನಾವಣಾ ವರ್ಷವಾಗಿರುವುದರಿಂದ, ಜಾತಿ ಲೆಕ್ಕಾಚಾರ ಪ್ರಮುಖ ಸಮೀಕರಣವಾಗಿರುವುದರಿಂದ ಮತ್ತೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಬಗ್ಗೆ ಹೈಕಮಾಂಡ್ ಯೋಚನೆ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಅಮಿತ್ ಶಾ ಬೆಂಗಳೂರಿನಲ್ಲಿ ಇರುವಾಗಲೇ ಯತ್ನಾಳ್ ಹೊಸ ಬಾಂಬ್
ಯಡಿಯೂರಪ್ಪನವರ ಅವಧಿಯಲ್ಲಿ ಮೂವರು ಉಪ ಮುಖ್ಯಮಂತ್ರಿಗಳು
ಸಮ್ಮಿಶ್ರ ಸರಕಾರ ಪತನಗೊಂಡ ನಂತರ ಯಡಿಯೂರಪ್ಪನವರ ಅವಧಿಯಲ್ಲಿ ಮೂವರು ಉಪ ಮುಖ್ಯಮಂತ್ರಿಗಳಿದ್ದರು. ಲಿಂಗಾಯತ ಸಮುದಾಯದಿಂದ ಲಕ್ಷ್ಮಣ ಸವದಿ, ಒಕ್ಕಲಿಗ ಸಮುದಾಯದಿಂದ ಡಾ.ಅಶ್ವಥ್ ನಾರಾಯಣ ಮತ್ತು ಹಿಂದುಳಿದ ವರ್ಗದಿಂದ ಗೋವಿಂದ ಕಾರಜೋಳ ಡಿಸಿಎಂ ಆಗಿದ್ದರು. ಆದರೆ, ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಡಿಸಿಎಂ ಹುದ್ದೆಯನ್ನು ಮರು ಸೃಷ್ಟಿಸಿರಲಿಲ್ಲ. ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಬಿಜೆಪಿ ಹೈಕಮಾಂಡ್ ಚಿಂತನೆ
ಈಗ, ಚುನಾವಣೆ ಎದುರಾಗುತ್ತಿರುವುದರಿಂದ ಮತ್ತೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಹಲವು ಆಯಾಮಗಳಿಂದ ವರದಿಯನ್ನು ತರಿಸಿಕೊಳ್ಳುತ್ತಿರುವ ವರಿಷ್ಠರು ಪ್ರಾದೇಶಿಕ ಮತ್ತು ಜಾತಿ ಸಮತೋಲನ ಸಾಧಿಸಲು ಚಿಂತನೆ ನಡೆಸಿದ್ದಾರೆ. ಯಾವ ಸಮುದಾಯದವರಿಗೆ ಡಿಸಿಎಂ ಹುದ್ದೆ ಕೊಟ್ಟರೆ, ಅದು ಮುಂದಿನ ಚುನಾವಣೆಯಲ್ಲಿ ಉಪಯೋಗಕ್ಕೆ ಬರಲಿದೆ ಎನ್ನುವ ಲೆಕ್ಕಾಚಾರವನ್ನೂ ಹೈಕಮಾಂಡ್ ಹಾಕಿಕೊಳ್ಳುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಹಿಂದಿನಂತೆ ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ
ಹಿಂದಿನಂತೆ ಮೂರು ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಲು ಅಥವಾ ಅಗತ್ಯ ಬಿದ್ದರೆ ನಾಲ್ಕು ಹುದ್ದೆ ರಚಿಸಿ ಜಾತಿ ಪ್ರಾತಿನಿಧ್ಯತೆ ನೀಡಲು ಬಿಜೆಪಿಯ ಕೇಂದ್ರದ ನಾಯಕರು ಮುಂದಾಗುವ ಸಾಧ್ಯತೆಯಿದೆ. ಎಲ್ಲಾ ವರ್ಗದ ಜನರ ಮೆಚ್ಚುಗೆಯನ್ನು ಗಳಿಸಲು ಡಿಸಿಎಂ ಹುದ್ದೆ ಸೃಷ್ಟಿಸುವುದನ್ನೂ ಆಯ್ಕೆಯಾಗಿ ಬಿಜೆಪಿ ಹೈಕಮಾಂಡ್ ಇಟ್ಟುಕೊಂಡಿದೆ ಎಂದು ಹೇಳಲಾಗುತ್ತಿದೆ. ಸದ್ಯದ ಮಟ್ಟಿಗೆ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆಯಾಗಲಿದೆ.
ಮುಖ್ಯಮಂತ್ರಿಗಳ ನಿವಾಸದಲ್ಲಿನ ಭೋಜನ ಕೂಟ
ಮುಖ್ಯಮಂತ್ರಿಗಳ ನಿವಾಸದಲ್ಲಿನ ಭೋಜನ ಕೂಟದ ನಂತರ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಮತ್ತು ಕೋರ್ ಕಮಿಟಿ ಸದಸ್ಯರೊಂದಿಗೆ ಅಮಿತ್ ಶಾ ಮಾತುಕತೆ ನಡೆಸುವ ಕಾರ್ಯಕ್ರಮ ರದ್ದಾಗಿತ್ತು. ಇದು ಕೂಡಾ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ಅಮಿತ್ ಶಾ ಅವರನ್ನು ಖುದ್ದಾಗಿ ಭೇಟಿಯಾಗಲು ಬಯಸಿದ್ದರು. ಆದಾಗ್ಯೂ, ಹಲವು ನಾಯಕರು ತಮ್ಮ ಪರಿಚಯವನ್ನು ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಅಮಿತ್ ಶಾ ಬೆಂಗಳೂರಿನಿಂದ ನಿರ್ಗಮಿಸಿದ ನಂತರ, ಡಿಸಿಎಂ ಹುದ್ದೆಯ ಬಗ್ಗೆ ಚರ್ಚೆಗಳು ಆರಂಭವಾಗಿವೆ.