ಸಂದರ್ಶನ : ಟಿಕೆಟ್ ಬೇಕೇಬೇಕು ಎಂದು ಪಟ್ಟು ಹಿಡಿದಿರುವ ಕಟ್ಟೆ ಸತ್ಯ
Recommended Video
ಬೆಂಗಳೂರು, ಜನವರಿ 10 : 25 ವರ್ಷದಿಂದ ರಾಜಕಾರಣದಲ್ಲಿದ್ದಾರೆ ಬಿಬಿಎಂಪಿ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ. ಪ್ರತಿಪಕ್ಷ ನಾಯಕರಾಗಿ, ಆಡಳಿತ ಪಕ್ಷದ ನಾಯಕರಾಗಿ, ಪಾಲಿಕೆಯ ಮೇಯರ್ ಆಗಿರುವ ಅವರು ಈಗ ವಿಧಾನಸಭೆ ಪ್ರವೇಶಿಸಿಸುವ ಆಕಾಂಕ್ಷೆ ಹೊಂದಿದ್ದಾರೆ.
ಕಟ್ಟೆ ಸತ್ಯಾನಾರಾಯಣ ಅವರು ಪ್ರಸ್ತುತ ಬಸವನಗುಡಿ ಕ್ಷೇತ್ರದ ಬಿಬಿಎಂಪಿ ಸದಸ್ಯರು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯವರೇ ಆದ ರವಿ ಸುಬ್ರಮಣ್ಯ.
ಬಸವನಗುಡಿ ಕ್ಷೇತ್ರದ ಟಿಕೆಟ್ಗೆ ಬೇಡಿಕೆ ಇಟ್ಟ ಕಟ್ಟೆ ಸತ್ಯ!
ಬಿಜೆಪಿ ಶಾಸಕರು ಇರುವ ಕ್ಷೇತ್ರದಲ್ಲೇ ಟಿಕೆಟ್ಗೆ ಬೇಡಿಕೆ ಇಟ್ಟಿರುವುದು ಹಲವರ ಹುಬ್ಬೇರಿಸಿದೆ. 'ಇದು ಅಸಮಾಧಾನವಲ್ಲ, ಆದ್ಯತೆ ನೀಡಿ ಎಂಬ ಮನವಿ' ಎಂದು ಕಟ್ಟೆ ಸತ್ಯಾ ಎಂದೇ ಪ್ರಸಿದ್ಧಿ ಪಡೆದಿರುವ ಕಟ್ಟೆ ಸತ್ಯನಾರಾಯಣ ಸ್ಪಷ್ಟ ಪಡಿಸಿದ್ದಾರೆ.
ಮಂಡ್ಯದಿಂದ ಅಂಬರೀಶ್, ಬಸವನಗುಡಿಯಿಂದ ರಮ್ಯಾ ಸ್ಪರ್ಧೆ?
ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಏಕೆ ಟಿಕೆಟ್ ಬೇಕು, ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಗಬೇಕು ಎಂಬ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ವಿವರಗಳು ಇಲ್ಲಿವೆ...
ಕಟ್ಟೆ ಸತ್ಯಾನಾರಾಯಣ 'ಕಟ್ಟೆ ಸತ್ಯ' ಆಗಿದ್ದು ಹೇಗೆ?
ಗೋಕಾಕ್ ಚಳವಳಿ ಸಮಯದಲ್ಲಿ ನಾವು 'ಕಟ್ಟೆ ಬಳಗ'ವನ್ನು ಆರಂಭಿಸಿದೆವು. ಬಳಗ ಆರಂಭವಾಗಿ 33 ವರ್ಷಗಳು ಕಳೆದವು. ಸಮಾಜ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಕಟ್ಟೆ ಭವನ ಕಟ್ಟೆ ಬಳಗದ ಚಟುವಟಿಕೆಗಳಿಗೆ ವೇದಿಕೆಯಾಗಿದೆ. ಯೋಗ, ವೇದ, ಡ್ಯಾನ್ಸ್ ಕ್ಲಾಸ್ ಮುಂತಾದವುಗಳನ್ನು ನಡೆಲಾಗುತ್ತಿದೆ.33 ವರ್ಷ ಆದ ಹಿನ್ನಲೆಯಲ್ಲಿ ಒಂದು ಕಾರ್ಯಕ್ರಮ ಮಾಡಲು ಮುಂದಾಗಿದ್ದೇವೆ. ಜನವರಿ 28ರಂದು ಈ ಕುರಿತು ಸಭೆ ನಡೆಸಲಿದ್ದೇವೆ.
ಕಟ್ಟೆ ಸತ್ಯನಾರಾಯಣ ಟಿಕೆಟ್ ಆಕಾಂಕ್ಷಿಯೇ?
ಖಂಡಿತಾ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿ. 5 ಬಾರಿ ಬಿಬಿಎಂಪಿ ಸದಸ್ಯನಾಗಿದ್ದೇನೆ. ಒಂದು ಬಾರಿ ಮೇಯರ್ ಆಗಿದ್ದೇನೆ. ಕಟ್ಟೆ ಸತ್ಯನಾರಾಯಣ ಅಂದರೆ ಜನರಿಗೆ ಗೊತ್ತು. ಕ್ಷೇತ್ರದ ಜನರೂ ಸತ್ಯಣ್ಣ ಎಂದು ಪ್ರೀತಿ, ಅಭಿಮಾನ ಹೊಂದಿದ್ದಾರೆ.
ಬಿಜೆಪಿ ಪಕ್ಷ ಪ್ರಬಲವಾಗಿ ಬೆಳೆಯಲು ಹಗಲಿರುಳು ಕೆಲಸ ಮಾಡಿದ್ದೇನೆ. ಶ್ವೇತಾದ್ರಿ ಅವರಿಗೆ ಟಿಕೆಟ್ ನೀಡಿದಾಗ ವಾರ್ಡ್ ಅಧ್ಯಕ್ಷನಾಗಿದ್ದೆ. ಎಚ್.ಎನ್.ನಂಜೇಗೌಡರಿಗೆ ಟಿಕೆಟ್ ನೀಡಿದಾಗ ನಾನು ಸಹ ಟಕೆಟ್ ಕೇಳಿದ್ದೆ. ಪಕ್ಷ ಬೆಳೆಯಲಿ ಎಂದು ಸುಬ್ಬಾರೆಡ್ಡಿ ಅವರಿಗೆ ಟಿಕೆಟ್ ಕೊಟ್ಟಾಗಲೂ ಸುಮ್ಮನಾದೆ.
ಬಿಬಿಎಂಪಿ, ಲೋಕಸಭೆ, ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಕೆಲಸ ಮಾಡಿದ್ದೇನೆ. ಕಳೆದ ಚುನಾವಣೆಯಲ್ಲಿಯೂ ಟಿಕೆಟ್ ಕೇಳಿದ್ದೆ. ಕೊನೆ ಕ್ಷಣದ ತನಕ ನೋಡಣ ಎನ್ನುತ್ತಿದ್ದ ನಾಯಕರು ಕೊನೆಗೆ ಮೌನವಾದರು.
ಟಿಕೆಟ್ ಬಗ್ಗೆ ಪಕ್ಷದ ವೇದಿಕೆಯಲ್ಲಿ ಏಕೆ ಚರ್ಚೆ ಮಾಡಲಿಲ್ಲ?
ಈಗ ಚುನಾವಣೆ ಸಿದ್ಧತೆಗಳು ಆರಂಭವಾಗಿವೆ. ಸಂಘಟನೆ ಬಗ್ಗೆ ರೂಪುರೇಷೆ ಸಿದ್ಧವಾಗುತ್ತಿದೆ. 20 ದಿನಗಳಲ್ಲಿ ಪಕ್ಷದ ಎಲ್ಲಾ ರಾಜ್ಯ ನಾಯಕರನ್ನು ಭೇಟಿಯಾಗುವೆ. ಏಕೆ ಟಿಕೆಟ್ ಕೊಡಬೇಕು ಎಂದು ಮನವರಿಕೆ ಮಾಡಿಕೊಡುವೆ. ಕೇಂದ್ರದ ನಾಯಕರಾದ ಅನಂತ್ ಕುಮಾರ್, ಸದಾನಂದ ಗೌಡ ಅವರನ್ನು ಭೇಟಿ ಮಾಡುವೆ.
ರವಿ ಸುಬ್ರಮಣ್ಯ, ಕಟ್ಟೆ ಸತ್ಯಾ ನಡುವೆ ಅಸಮಾಧಾನ?
'ಇದು ಅಸಮಾಧಾನದ ಮಾತಲ್ಲ ಆದ್ಯತೆಯ ವಿಷಯ. ಜನರು ನನ್ನನ್ನು ಕೇಳುತ್ತಿದ್ದಾರೆ 10 ವರ್ಷಗಳಿಂದ ಬಿಬಿಎಂಪಿ ಸದಸ್ಯರಾಗೆ ಇದ್ದೀರಿ ನೀವು ಬೆಳೆಯುವುದು ಯಾವಾಗ? ಎಂದು.
ಕ್ಷೇತ್ರದ ಜನರು ಪ್ರೀತಿ, ಅಭಿಮಾನ ಹೊಂದಿದ್ದಾರೆ. ನೀವು ಶಾಸಕರಾಗಿ ನಾವು ಬೆಂಬಲ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇಷ್ಟು ವರ್ಷ ಪಕ್ಷಕ್ಕೆ ಮತ ನೀಡಿ ಎಂದು ಕೇಳಿದೆ. ಇದರಿಂದ ಬೇರೆಯವರಿಗಗೆ ಸಹಕಾರ ಆಗಿರಬಹುದು.
ಈ ಬಾರಿಗೆ ನನಗೆ ಟಿಕೆಟ್ ಕೊಡಿ ಎಂದು ಕೇಳುವೆ. ವಾರ್ಡ್ ಮಟ್ಟದಿಂದ ಬೆಂಗಳೂರು ಮೇಯರ್ ತನಕ ಬೆಳೆದವನು ನಾನು. ಏಕಾಏಕಿ ಶಾಸಕನಾಗುತ್ತಿಲ್ಲ. ತಳಹಂತದಿಂದ ಬಂದವರಿಗೆ ಕೆಲಸಗಳನ್ನು ಮಾಡಿಸುವುದು ಗೊತ್ತಿರುತ್ತದೆ. ಇಷ್ಟು ವರ್ಷ ಪಕ್ಷಕ್ಕಾಗಿ ಕೆಲಸ ಮಾಡಿದ್ದರಿಂದ ಟಿಕೆಟ್ ನೀಡಿದರೆ ಉಪಯೋಗವಾಗಲಿದೆ.
ಬಸವನಗುಡಿಯಿಂದ ರಮ್ಯಾ ಕಾಂಗ್ರೆಸ್ ಅಭ್ಯರ್ಥಿ?
ಕಾಂಗ್ರೆಸ್ನಿಂದ ಯಾರೇ ಅಭ್ಯರ್ಥಿಯಾದರೂ ಸ್ವಾಗತಿಸುತ್ತೇನೆ. ಕಟ್ಟೆ ಸತ್ಯನಾರಾಯಣಗೆ ಟಿಕೆಟ್ ಸಿಕ್ಕಿದರೆ 15 ಸಾವಿರದಿಂದ ಮತ ಎಣಿಕೆ ಮಾಡಲು ಆರಂಭ ಮಾಡುತ್ತೇವೆ. ರಮ್ಯಾ ಅಥವ ಯಾರೇ ಸ್ಪರ್ಧೆ ಮಾಡಿದರೂ ಪ್ರತಿಸ್ಪರ್ಧೆ ಒಡ್ಡುವುದು ಖಂಡಿತ.
ಬಸವನಗುಡಿಯಲ್ಲಿನ ಪಾರ್ಕಿಂಗ್ ಸಮಸ್ಯೆಗೆ ಪರಿಹಾರವೇನು?
ಬಸವನಗುಡಿ ಭಾಗದಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಪಾರ್ಕಿಂಗ್ ಸಮಸ್ಯೆ ಹೆಚ್ಚುತ್ತಿದೆ. ಎನ್.ಆರ್.ಕಾಲೋನಿ ಆಸ್ಪತ್ರೆ ಹಿಂಭಾಗದಲ್ಲಿನ ಜಾಗದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸುವ ಕುರಿತು ಮಾತುಕತೆ ನಡೆಯುತ್ತಿದೆ. ಗಾಂಧಿ ಬಜಾರ್ನಲ್ಲಿಯೂ ಇಂತಹ ಕಟ್ಟಡ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ.
ಎನ್.ಆರ್.ಕಾಲೋನಿಯಲ್ಲಿ ಕಸದ ಸಮಸ್ಯೆ?
ಹೌದು ಹಬ್ಬಗಳ ಸಂದರ್ಭದಲ್ಲಿ ಎನ್.ಆರ್.ಕಾಲೋನಿಯಲ್ಲಿ ಮಾವಿನ ಸೊಪ್ಪು, ಕುಂಬಳಕಾಯಿ, ಬಾಳೆಗಿಡ ತಂದು ಮಾರುತ್ತಾರೆ. ನಮಗೆ ಇಲ್ಲಿ ಬೇರೆ ಜಾಗವಿಲ್ಲ. ವ್ಯಾಪಾರಿಗಳಿಗೆ ಕಸ ಹರಡಬೇಡಿ. ವ್ಯಾಪಾರ ಮುಗಿದ ತಕ್ಷಣ ಕಸವನ್ನು ಗಂಟು ಕಟ್ಟಿ ಎಂದು ಸೂಚನೆ ಕೊಟ್ಟಿದ್ದೇವೆ. ಈಗ ನಿಯಂತ್ರಣಕ್ಕೆ ಬರುತ್ತಿದೆ.
ಮನೆ-ಮನೆ ಕಸ ಸಂಗ್ರಹಣೆಯಲ್ಲಿ ನಮ್ಮ ಕ್ಷೇತ್ರದಲ್ಲಿ ಸಮಸ್ಯೆ ಇಲ್ಲ. ಹಸಿ, ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಣೆ ಮಾಡಿ, ಪ್ರತ್ಯೇಕ ಲಾರಿಗಳಲ್ಲಿ ಕಳಿಸಲಾಗುತ್ತಿದೆ. ಹಸಿ ಕಸವನ್ನು ಕತ್ತರಿಸಲಸು ಯಂತ್ರವನ್ನು ಇಟ್ಟುಕೊಂಡಿದ್ದೇವೆ. ಕತ್ತರಿಸಿದ ಹಸಿ ಕಸವನ್ನು ಉಚಿತವಾಗಿ ನೀಡಲಾಗುತ್ತಿದ್ದು, ರೈತರು ಅದನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
ಬಸವನಗುಡಿ ಅಭಿವೃದ್ಧಿಗೆ ನಿಮ್ಮ ಯೋಜನೆ ಏನು?
5 ಬಾರಿ ಪಾಲಿಕೆ ಸದಸ್ಯನಾಗಿ, ಒಂದು ಬಾರಿ ಮೇಯರ್ ಆಗಿ ಕ್ಷೇತ್ರದಲ್ಲಿ ಹಲವು ಕೆಲಸಗಳನ್ನು ಮಾಡಿಸಿದ್ದೇನೆ. 1965-66ರಲ್ಲಿ ಇದ್ದ ಆಸ್ಪತ್ರೆಯನ್ನು ನವೀಕರಣ ಮಾಡಲಾಗಿದೆ. ಹೊಸ ಬಿಎಂಟಿಸಿ ಬಸ್ ನಿಲ್ದಾಣ ಕಟ್ಟಲಾಗಿದೆ.
ಆಸ್ಪತ್ರೆಯಲ್ಲಿ ಕೆಲವೇ ದಿನಗಳಲ್ಲಿ ಹಾರ್ಟ್ ಕೇರ್ ಸೆಂಟರ್ ಆರಂಭವಾಗಲಿದೆ. ಕೇಂದ್ರ ಗ್ರಂಥಾಲಯ ಈ ತಿಂಗಳು ಆರಂಭವಾಗಲಿದ್ದು, ಇಂಡೀಡ್ ಸ್ಟೇಡಿಯಂ ನಿರ್ಮಾಣವಾಗುತ್ತಿದೆ. ಜನರ ಜೊತೆ ಚರ್ಚಿಸಿ ಅವರಿಗೆ ಅಗತ್ಯವಿರುವ ಸೇವೆ ಒದಗಿಸಲು ಪ್ರಯತ್ನಿಸುವೆ.