IMD Weather Update: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ: ಭಾರತದ ಹಲವೆಡೆ ಅಲರ್ಟ್
ಬೆಂಗಳೂರು ಜನವರಿ 11: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಚಳಿಯೊಂದಿಗೆ ದಟ್ಟ ಮಂಜು ಹೆಚ್ಚಾಗಿದೆ. ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಚಳಿ ಹೆಚ್ಚಾಗಿದ್ದು ಗೋಚರತೆ ಕಡಿಮೆಯಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಇದರೊಂದಿಗೆ ಅಲ್ಲಲ್ಲಿ ಮಳೆಯ ಮುನ್ಸೂಚನೆ ಕೂಡ ಇದೆ. ಸಂಕ್ರಾಂತಿ ಬಳಿಕ ಕರ್ನಾಟಕದಲ್ಲಿ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನೂ ಜನವರಿ 15-16ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ರಾಮನಗರ, ಶಿವಮೊಗ್ಗ, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದೆ ಎಂದು ಐಎಂಡಿ ಸೂಚನೆ ನೀಡಿದೆ.

ಇನ್ನೂ ಉತ್ತರ ಒಳನಾಡಿನಲ್ಲಿ ಹವಾಮಾನದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಗದಗ, ಹಾವೇರಿ, ಕಲಬುರಗಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ರಾಯಚೂರು, ವಿಜಯಪುರ, ಯಾದಗಿರಿ, ಕೊಪ್ಪಳದಲ್ಲಿ ಒಣಹವೆ ಮುಂದುವರೆಯಲಿದೆ. ಜೊತೆಗೆ ಈ ಪ್ರದೇಶದಲ್ಲಿ ಚಳಿ ಕೂಡ ಹೆಚ್ಚಾಗಲಿದೆ. ದೇಶದ ಹಲವೆಡೆ ಮಳೆ ಹಾಗೂ ಚಳಿ ಹೇಗಿರಲಿದೆ ಎಂದು ತಿಳಿಯೋಣ.
ಭಾರತದ ಮಳೆ- ಹಿಮಪಾತದ ವರದಿ:-
ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ
ಭಾರತದ ಉತ್ತರದ ಬಹುತೇಕ ಭಾಗಗಳಲ್ಲಿ ಹೆಚ್ಚು ಹಿಮಪಾತವಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಇದರಿಂದ ಆರೋಗ್ಯ ಅಪಾಯಗಳು ಹೆಚ್ಛಾಗಲಿದ್ದು ಜನರಿಗೆ ಮನೆಯೊಳಗೆ ಇರಲು ಸೂಚಿಸಲಾಗಿದೆ. ಜನವರಿ 12 ರಂದು ಹಿಮಾಚಲ ಪ್ರದೇಶದ ಪ್ರತ್ಯೇಕ ಪ್ರದೇಶಗಳಲ್ಲಿ ತೀವ್ರ ಶೀತ ಅಲೆಯ ಪರಿಸ್ಥಿತಿಗಳು ಉಂಟಾಗಬಹುದು ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ. ಜಮ್ಮು-ಕಾಶ್ಮೀರ, ಲಡಾಖ್, ಇತ್ಯಾದಿಗಳಲ್ಲಿ ತಾಪಮಾನ ಘನೀಕರಿಸುವ ಹಂತಗಳನ್ನು ತಲುಪಿರುವುದರಿಂದ ಅಲ್ಲಿಯೂ ಸಹ ಪ್ರಸ್ತುತ ಹವಾಮಾನ ಪರಿಸ್ಥಿತಿಗಳಿಂದ ಯಾವುದೇ ವಿಶ್ರಾಂತಿ ನಿರೀಕ್ಷಿಸಲಾಗಿಲ್ಲ.

ಭಾರತದ ಈ ರಾಜ್ಯಗಳಲ್ಲಿ ಮಳೆ ಎಚ್ಚರಿಕೆ
ಪಶ್ಚಿಮ ರಾಜಸ್ಥಾನ, ಜಮ್ಮು-ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ಪಶ್ಚಿಮ ಯುಪಿ, ಪೂರ್ವ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಇಂದು (ಜನವರಿ 11) ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಜನವರಿ 11 ರಂದು ಪಶ್ಚಿಮ ರಾಜಸ್ಥಾನ, ಉತ್ತರಾಖಂಡ, ಪಂಜಾಬ್, ದಕ್ಷಿಣ ಹರಿಯಾಣ, ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಮಧ್ಯಪ್ರದೇಶದಲ್ಲಿ ಪ್ರತ್ಯೇಕ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ.
ಜನವರಿ 13 ಮತ್ತು 14 ರಂದು ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಕೇರಳ ಮತ್ತು ಮಾಹೆಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜನವರಿ 12 ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ದಟ್ಟವಾದ ಮಂಜಿನ ಎಚ್ಚರಿಕೆ
ಜನವರಿ 11 ರಿಂದ 13 ರವರೆಗೆ ಪಂಜಾಬ್, ಹರಿಯಾಣ, ಚಂಡೀಗಢ, ಪೂರ್ವ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಡರಾತ್ರಿ ಮತ್ತು ಮುಂಜಾನೆ ದಟ್ಟವಾದ ಮಂಜಿನ ಆವರಿಸಲಿದೆ ಎಂದು ಐಎಂಡಿ ತಿಳಿಸಿದೆ. ಈ ವಾರ ಉಪ-ಹಿಮಾಲಯನ್ ಪಶ್ಚಿಮ ಬಂಗಾಳ, ಬಿಹಾರ ಮತ್ತು ಹಿಮಾಚಲ ಪ್ರದೇಶಗಳು ಭಾರೀ ಮಂಜಿನ ವಾತಾವರಣವನ್ನು ಅನುಭವಿಸುವ ನಿರೀಕ್ಷೆಯಿದೆ. ಹೀಗಾಗಿ ಜನವರಿ 13 ರವರೆಗೆ ಏಳು ಸಹೋದರ ರಾಜ್ಯಗಳಿಗೆ (ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ) ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮೀನುಗಾರರಿಗೆ ಎಚ್ಚರಿಕೆ
ಜನವರಿ 11 ಮತ್ತು 12 ರಂದು ಮನ್ನಾರ್ ಕೊಲ್ಲಿ ಮತ್ತು ಪಕ್ಕದ ಕೊಮೊರಿನ್ ಪ್ರದೇಶಕ್ಕೆ ಮೀನುಗಾರರು ಹೋಗದಂತೆ ಸೂಚಿಸಲಾಗಿದೆ.
ದೆಹಲಿಯ ಹವಾಮಾನ ವರದಿ
ಶನಿವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಿದೆ. ವಾಯು ಗುಣಮಟ್ಟ ಮತ್ತೆ 400 ಅಂಕವನ್ನು ಮೀರಿದೆ. ಇದು ತೀವ್ರ ಮಾಲಿನ್ಯ ಮಟ್ಟವನ್ನು ಸೂಚಿಸುತ್ತದೆ. ಜನವರಿ 11 ಮತ್ತು 12 ರಂದು ಬೆಳಗಿನ ಸಮಯದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ನಗರದಲ್ಲಿ ತಾಪಮಾನ 1°C ವರೆಗೆ ಕುಸಿತ ಕಂಡಿದೆ.












Click it and Unblock the Notifications