ಡಿಕೆ ರವಿ ನಿಗೂಢ ಸಾವು : ಸೋಮವಾರ ಪ್ರಾಥಮಿಕ ವರದಿ
ಬೆಂಗಳೂರು, ಮಾ. 20 : ಐಎಎಸ್ ಅಧಿಕಾರಿ ಡಿಕೆ ರವಿ ಅವರ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಮಾ.23ರ ಸೋಮವಾರ ಸಲ್ಲಿಸಲಿದ್ದಾರೆ. ಸರ್ಕಾರ ಈಗಾಗಲೇ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಡಿಕೆ ರವಿ ಅವರ ಸಾವಿನ ಕುರಿತ ಮಾಹಿತಿ, ದೂರವಾಣಿ ಕರೆಗಳ ಮಾಹಿತಿ ಮುಂತಾದವುಗಳನ್ನು ಪ್ರಾಥಮಿಕ ವರದಿ ಒಳಗೊಂಡಿರುತ್ತದೆ. ಪ್ರಕರಣದ ಅಂತಿಮ ವರದಿ ಬಂದ ಮೇಲೆ ತನಿಖೆಯನ್ನು ಸಿಬಿಐಗೆ ವಹಿಸುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.[ಸಿಬಿಐಗೂ ಸಿಐಡಿ ತನಿಖೆಗೂ ವ್ಯತ್ಯಾಸವೇನು?]

ಸಿಬ್ಬಂದಿ, ಸ್ನೇಹಿತರ ವಿಚಾರಣೆ : ಅಸಹಜ ಸಾವಿನ ತನಿಖೆ ನಡೆಸುತ್ತಿರುವ ಸಿಐಡಿ ರವಿ ಅವರು ಸೋಮವಾರ ಮಾಡಿರುವ ದೂರವಾಣಿ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿದ್ದು, ಕರೆ ಮಾಡಿರುವ ವ್ಯಕ್ತಿಗಳ ವಿಚಾರಣೆ ನಡೆಸಿದೆ. 2009ರ ತಮ್ಮ ಐಎಎಸ್ ಬ್ಯಾಚ್ನ ಹಲವು ಸ್ನೇಹಿತರಿಗೆ ಅವರು ಕರೆ ಮಾಡಿದ್ದು, ಈ ಬಗ್ಗೆ ವಿಚಾರಣೆ ನಡೆಸಲಾಗಿದೆ. [ಡಿಕೆ ರವಿ ಸಾವು, ಶುಕ್ರವಾರದ ಬೆಳವಣಿಗೆಗಳು]
ಅದರಲ್ಲೂ ರವಿ ಅವರು ಸೋಮವಾರ ಬೆಳಗ್ಗೆ ಕರೆ ಮಾಡಿರುವ ಬ್ಯಾಚ್ ಮೇಟ್ ಅಧಿಕಾರಿಯ ಹೇಳಿಕೆಯನ್ನು ಪೊಲೀಸರು ಈಗಾಗಲೇ ದಾಖಲಿಸಿಕೊಂಡಿದ್ದಾರೆ. ಕರೆ ಸ್ವೀಕರಿಸಿರುವ ಅಧಿಕಾರಿ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ರವಿ ಅವರು ಏಕೆ ಕರೆ ಮಾಡಿದ್ದರು ಎಂಬುದನ್ನು ಈಗಾಗಲೇ ವಿವರಿಸಿದ್ದಾರೆ. ಸಿಐಡಿ ಪೊಲೀಸರಿಗೂ ಈ ಕುರಿತು ಮಾಹಿತಿ ನೀಡಿದ್ದಾರೆ. [ಈ ಸಾವು ನ್ಯಾಯವೇ ಮತ ಹಾಕಿ]
ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ : ರವಿ ಅವರ ಬ್ಯಾಚ್ ಮೇಟ್ಗಳು ಅವರ ಸಾವಿಗೆ ವೈಯಕ್ತಿಕ ಕಾರಣವಿತ್ತು ಎಂದು ಸಿಐಡಿ ಅಧಿಕಾರಿಗಳಿಗೆ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ. ಕೆಲವು ತಿಂಗಳಿನಿಂದ ಕೆಲವು ವೈಯಕ್ತಿಕ ಸಮಸ್ಯೆಗಳಿಗೆ ಅವರು ಸಿಲುಕಿದ್ದರು. ಇದೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.
ರವಿ ಅವರ ಪತ್ನಿ ಕುಸುಮಾ ಮತ್ತು ಮಾವ ಹನುಮಂತರಾಯಪ್ಪ ಅವರ ಹೇಳಿಕೆಗಳನ್ನು ಅಧಿಕಾರಿಗಳು ಈಗಾಗಲೇ ಪಡೆದಿದ್ದಾರೆ. ರವಿ ಅವರ ಕಾರು ಚಾಲಕನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಅವರು ಸಹ ಘಟನೆಗೆ ವೈಯಕ್ತಿಕ ಕಾರಣವಿತ್ತು ಎಂದು ತಿಳಿಸಿದ್ದಾರೆ.
ರವಿ ಅವರು ಮುಂದೆ ದಾಳಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದ ಫೈಲ್ಗಳನ್ನು ಸಿಐಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸಿಐಡಿ ಅಧಿಕಾರಿಗಳು ರವಿ ಅವರಿಗೆ ಬಂದಿರುವ ಬೆದರಿಕೆ ಕರೆಗಳ ಬಗ್ಗೆಯೂ ತನಿಖೆ ನಡೆಸಲಿದ್ದಾರೆ. ಮೃತ ರವಿ ಕುಟುಂಬದವರು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.












Click it and Unblock the Notifications