ರಾಮ ಮಂದಿರ ನಿರ್ಮಾಣಕ್ಕೆ ಸಿದ್ದರಾಮಯ್ಯ ದೇಣಿಗೆ ಕೊಟ್ಟರೇ? ಕುತೂಹಲಕ್ಕೆ ತೆರೆ
ನವದೆಹಲಿ, ಫೆ 16: ಇತ್ತೀಚೆಗೆ ವಿಶ್ವಹಿಂದೂ ಪರಿಷತ್ ಮುಖಂಡರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲು ಹೋಗಿದ್ದರು.
ಆದರೆ, ಸಿದ್ದರಾಮಯ್ಯ ದೇಣಿಗೆ ನೀಡಿದರೇ ಇಲ್ಲವೇ ಎನ್ನುವ ವಿಚಾರ ಬಹಿರಂಗವಾಗಿರಲಿಲ್ಲ, ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರು ನವದೆಹಲಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಅಯೋಧ್ಯೆಯಲ್ಲಿನ ವಿವಾದಿತ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ನಾನು ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದಿಲ್ಲ"ಎಂದು ಸಿದ್ದರಾಮಯ್ಯ ಹೇಳುವ ಮೂಲಕ, ಇದ್ದ ಎಲ್ಲಾ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

"ವಿವಾದದಲ್ಲಿರುವ ಭೂಮಿಯಿಂದ ಬೇರೆಕಡೆ ಅಥವಾ ನಮ್ಮೂರಿನಲ್ಲಿ ದೇವಾಲಯ ನಿರ್ಮಾಣವಾದರೆ ಅದಕ್ಕೆ ದೇಣಿಗೆ ನೀಡುವೆ. ಆದರೆ, ಅಯೋಧ್ಯೆಯಲ್ಲಿನ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದಿಲ್ಲ"ಎಂದು ಸಿದ್ದರಾಮಯ್ಯ ಕಡ್ಡಿಮುರಿದ ಹಾಗೇ ಹೇಳಿದ್ದಾರೆ.
"ಹಿಂದೆ ರಾಮ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಸಂಗ್ರಹಿಸಿದರು, ಅದು ಏನಾಯಿತು ಎಂದು ಗೊತ್ತಿಲ್ಲ. ಪಿಎಂ ಕೇರ್ಸ್ ಫಂಡ್ ಬಗ್ಗೆ ವಿವರ ನೀಡದವರು, ಈಗ ಸಂಗ್ರಹವಾಗುತ್ತಿರುವ ಹಣದ ಬಗ್ಗೆ ಲೆಕ್ಕ ಕೊಡುತ್ತಾರಾ? ಆರ್ ಎಸ್ ಎಸ್ ನವರು ಸಂಗ್ರಹಿಸುತ್ತಿರುವ ಹಣಕ್ಕೆ ರಸೀದಿ ಕೊಡುತ್ತಾರಾ"ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
"ಹಿಂದೆ ಸಂಗ್ರಹವಾಗಿದ್ದ ಇಟ್ಟಿಗೆ ಮತ್ತು ದುಡ್ಡಿನಲ್ಲಿ ಇಟ್ಟಿಗೆಯನ್ನು ಬಿಸಾಕಿ ಹಣವನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾರೆ. ಇದೆಲ್ಲಾ ರಾಮ, ಕೃಷ್ಣನ ಲೆಕ್ಕ"ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.












Click it and Unblock the Notifications