ಕೊರೊನಾವನ್ನು ಆಯುರ್ವೇದದ ಮೂಲಕ ಗುಣಪಡಿಸಬಲ್ಲೆ: ಖ್ಯಾತ ಆಯುರ್ವೇದ ತಜ್ಞ, ಡಾ.ಕಜೆ
ಬೆಂಗಳೂರು, ಏಪ್ರಿಲ್ 9: ನಾಡಿನ ಖ್ಯಾತ ಆಯುರ್ವೇದ ತಜ್ಞರಾದ ಡಾ. ಗಿರಿಧರ ಕಜೆ ಅವರು ಕರ್ನಾಟಕ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ.
"ಮಹಾಮಾರಿ ಕೊರೊನಾವನ್ನು ಆಯುರ್ವೇದಿಕ್ ಔಷಧದಿಂದ ಗುಣಪಡಿಸಬಹುದಾಗಿದ್ದು, ನಾನು ಸಂಶೋಧಿಸಿರುವ ಔಷಧದಿಂದ ಇದನ್ನು ಗುಣಪಡಿಸಬಲ್ಲೆ" ಎಂದು ದಾಖಲೆಗಳ ಸಮೇತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಕಳೆದ 23 ವರ್ಷಗಳಿಂದ ಆಯುರ್ವೇದ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದು, 2 ಲಕ್ಷಕ್ಕೂ ಅಧಿಕ ರೋಗಿಗಳನ್ನು ಗುಣಪಡಿಸಿದ ಅನುಭವ ಹೊಂದಿರುವುದಾಗಿ" ತಿಳಿಸಿರುವ ಡಾ.ಕಜೆ, ಡೆಂಗ್ಯು, ಚಿಕನ್ ಗುನ್ಯಾ, ಹೆಚ್1 ಎನ್ 1 ಸೇರಿದಂತೆ ಅನೇಕ ವೈರಲ್ ರೋಗಗಳಿಗೆ ಆಯುರ್ವೇದ ಔಷಧ ಮಾತ್ರದಿಂದ ಸಹಸ್ರಾರು ರೋಗಿಗಳನ್ನು ಗುಣಪಡಿಸಿರುವುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ಸಾಂಕ್ರಾಮಿಕ ರೋಗಗಳ ನಿರ್ವಹಣೆಯ ಕುರಿತಾಗಿ ಆಯುರ್ವೇದದಲ್ಲಿ ಹಲವಾರು ಉಲ್ಲೇಖಗಳಿದ್ದು, ಆಯುರ್ವೇದ ಪದ್ಧತಿಯ ಆಧಾರದಲ್ಲಿ ನಾನು ಸಂಶೋಧಿಸಿರುವ 'ಭೌಮ್ಯ' ಸಾಥ್ಮ್ಯ' ಎಂಬ ಔಷಧಗಳು 'ಕೋವಿಡ್ 19' ಅನ್ನು ಗುಣಪಡಿಸಲು ಶಕ್ತವಾಗಿವೆ" ಎಂದು ಡಾ.ಕಜೆ ಹೇಳಿದ್ದಾರೆ.
"ಇವು ಆ್ಯಂಟಿ ವೈರಲ್ ಗುಣಮಾತ್ರವನ್ನು ಹೊಂದಿರದೇ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಈ ಔಷಧದ ಬಳಕೆಯಿಂದ ಈ ಕೆಳಗಿನ ಪ್ರಯೋಜನಗಳನ್ನು ಕಾಣಬಹುದು" ಎಂದು ಡಾ.ಕಜೆ ವಿವರಿಸಿದ್ದಾರೆ:
* ಕೋವಿಡ್ 19 ರೋಗಿಗಳನ್ನು ಗುಣಮುಖವಾಗಿಸಬಲ್ಲದು.
* ರೋಗಿಗಳ ಔಷದೋಪಚಾರದ ಸಮಯವನ್ನು ಕಡಿತಗೊಳಿಸಬಹುದು.
* ರೋಗಿಗಳು ತೀವ್ರ ಅಸ್ವಸ್ಥತರಾಗುವುದನ್ನು ತಡೆಯುತ್ತದೆ.
* ರೋಗಿಗಳ ಮರಣ ಪ್ರಮಾಣವನ್ನು ತಗ್ಗಿಸುತ್ತದೆ.
* ರೋಗಿಗಳ ಮೇಲೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ.
* ಆರೋಗ್ಯ ಸುಧಾರಣೆಗೆ ಸಹಕರಿಸುತ್ತದೆ.
"ಭಾರತದಲ್ಲಿ ಇರುವ 5,000+ ಪಾಸಿಟಿವ್ ರೋಗಿಗಳಿಗೆ ಹಾಗೂ ಕ್ಲಿನಿಕಲ್ ಅಧ್ಯಯನಕ್ಕೆ ಈ ಔಷಧವನ್ನು ಉಚಿತವಾಗಿ ಕೊಡಲು ಸಿದ್ಧನಿದ್ದೇನೆ. ಅಂತೆಯೇ ನಾನು ಸಂಶೋಧಿಸಿರುವ 'ಭೌಮ್ಯ' ಹಾಗೂ 'ಸಾಥ್ಮ್ಯ' ಮಾತ್ರೆಗಳ ಫಾರ್ಮುಲಾ ಹಾಗೂ ಸ್ವಾಮ್ಯವನ್ನು ಕೊವಿಡ್ 19 ವಿರುದ್ಧ ಹೋರಾಡಲು ಹಾಗೂ ಜೀವಜಗತ್ತಿನ ಒಳಿತಿಗಾಗಿ ಕೇಂದ್ರ ಸರ್ಕಾರಕ್ಕೆ ನೀಡಲು ಬದ್ಧನಾಗಿದ್ದೇನೆ" ಎಂದು ತಮ್ಮ ಪತ್ರದಲ್ಲಿ ಡಾ. ಗಿರಿಧರ್ ಕಜೆ ಉಲ್ಲೇಖಿಸಿದ್ದಾರೆ.












Click it and Unblock the Notifications