ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ನನಗೂ ತಿಳಿದಿಲ್ಲ : ಸತೀಶ್ ಜಾರಕಿಹೊಳಿ
ಬೆಂಗಳೂರು, ಜನವರಿ 30 : ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ?. ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದ ಅವರು ಇದುವರೆಗೂ ಕ್ಷೇತ್ರಕ್ಕೆ ಬಂದಿಲ್ಲ. ಕಾಂಗ್ರೆಸ್ ನಾಯಕರು ಕೈಗೂ ಸಿಕ್ಕಿಲ್ಲ.
ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು, 'ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ಗೋಕಾಕ್ನಲ್ಲಿ ಇಲ್ಲ. ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ' ಎಂದರು.
ಶಾಸಕಾಂಗ ಸಭೆಗೆ ಗೈರಾದವರಿಗೆ ಸಿದ್ದರಾಮಯ್ಯ ನೋಟಿಸ್!
ಜನವರಿ 18ರಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ರಮೇಶ್ ಜಾರಕಿಹೊಳಿ ಅವರು ಗೈರಾಗಿದ್ದರು. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ಗೆ ಅವರು ಉತ್ತರಿಸಿದ್ದರು. ಬಳಿಕ ಮತ್ತೊಂದು ಷೋಕಾಸ್ ನೋಟಿಸ್ ನೀಡಲಾಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂದಿನ ನಡೆ ಏನು?
ರಮೇಶ್ ಜಾರಕಿಹೊಳಿ ಅವರು ಮುಂಬೈನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಮೇಶ್ ಜಾರಕಿಹೊಳಿ ಅವರ ಜೊತೆ ಕಾಂಗ್ರೆಸ್ನ ಇನ್ನೂ ಮೂವರು ಶಾಸಕರು ಇರಬಹುದು ಎಂದು ಶಂಕಿಸಲಾಗಿದೆ. ಅವರು ಕಾಂಗ್ರೆಸ್ ತೊರೆಯಲಿದ್ದಾರೆಯೇ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ರಮೇಶ್ ಜಾರಕಿಹೊಳಿಗೆ ಸಂದೇಶ ಕೊಟ್ಟ ಕೆಪಿಸಿಸಿ
ಸತೀಶ್ ಜಾರಕಿಹೊಳಿ ಹೇಳಿದ್ದೇನು?
'ರಮೇಶ್ ಜಾರಕಿಹೊಳಿ ಅವರ ಎಲ್ಲಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ನನ್ನ ಸಹೋದರನಾದರೂ ನಮ್ಮ ವ್ಯವಹಾರಗಳು ಬೇರೆ-ಬೇರೆ. ಅವರನ್ನು ಯಾರೂ ಬಲತ್ಕಾರವಾಗಿ ಹಿಡಿದಿಟ್ಟಿಲ್ಲ. ಈಗಾಗಲೇ ಪಕ್ಷದಿಂದ ಅವರಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ. ಸಿಎಲ್ಪಿ ನಾಯಕರನ್ನು ಅವರು ಬಂದು ಭೇಟಿಯಾಗುವ ಸಾಧ್ಯತೆ ಇದೆ' ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಸಿದ್ದರಾಮಯ್ಯ ಅವರ ಕೈಗೆ ಸಿಕ್ಕಿಲ್ಲ
ಜನವರಿ 17ರಂದು ರಮೇಶ್ ಜಾರಕಿಹೊಳಿ ಭೇಟಿಯಾಗಲು ಸಿದ್ದರಾಮಯ್ಯ ಬೆಳಗಾವಿಗೆ ತೆರಳಿದ್ದರು. ಆದರೆ, ಅವರು ಬೆಳಗಾವಿಗೆ ಆಗಮಿಸಲಿಲ್ಲ. ಜನವರಿ 18ರ ಶಾಸಕಾಂಗ ಸಭೆಗೆ ಹಾಜರಾಗುವಂತೆ ಸೂಚಿಸಲು ಫೋನ್ ಕರೆ ಮಾಡಿದ್ದರು. ಆದರೆ, ಕರೆ ಸ್ವೀಕಾರ ಮಾಡಿರಲಿಲ್ಲ. ರಾಜ್ಯದ ಯಾವ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೂ ಅವರು ಸಿಕ್ಕಿಲ್ಲ.
ಮುಂಬೈನಲ್ಲಿದ್ದಾರಾ?
ರಮೇಶ್ ಜಾರಕಿಹೊಳಿ ಅವರು ಮುಂಬೈನಲ್ಲಿದ್ದಾರೆ ಎಂದು ಶಂಕಿಸಲಾಗಿದೆ. ಅಥಣಿ ಶಾಸಕ ಮಹೇಶ್ ಕಮಟಳ್ಳಿ ಅವರು ಸಹ ರಮೇಶ್ ಜಾರಕಿಹೊಳಿ ಅವರ ಜೊತೆ ಇದ್ದರು ಎಂಬ ಸುದ್ದಿಗಳು ಕಳೆದ ವಾರ ಹರಿಡಾಡುತ್ತಿತ್ತು. ಆದರೆ, ರಮೇಶ್ ಜಾಕಿಹೊಳಿ ಅವರು ಎಲ್ಲೂ ಕಾಣಿಸಿಕೊಂಡಿಲ್ಲ. ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿಲ್ಲ.
ಮತ್ತೊಂದು ಸುತ್ತಿನ ಆಪರೇಷನ್ ಕಮಲ
ಕರ್ನಾಟಕ ಬಜೆಟ್ಗೂ ಮುನ್ನ ಮತ್ತೊಂದು ಸುತ್ತಿನ ಆಪರೇಷನ್ ಕಮಲ ನಡೆಯಲಿದೆ. ಆಗ ಅಸಮಾಧಾನಗೊಂಡಿರುವ ಎಲ್ಲಾ ಕಾಂಗ್ರೆಸ್ ನಾಯಕರು ಒಂದಾಗಿ ರಾಜೀನಾಮೆ ನೀಡಲು ಆಗಮಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಫ್ರೆಬ್ರವರಿ 6ರಂದು ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 8ರಂದು ಎಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡಿಸಲಿದ್ದಾರೆ. ಅದಕ್ಕೂ ಮೊದಲು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ.