ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಏಳು ಅದ್ಭುತಗಳ ಅಂತಿಮ ಪಟ್ಟಿ ಪ್ರಕಟ

ಏಷ್ಯಾ ನೆಟ್ ಸುವರ್ಣ ನ್ಯೂಸ್, ಕನ್ನಡ ಪ್ರಭ ಮಾಧ್ಯಮ ಸಂಸ್ಥೆಗಳು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ 7 Wonders of Karnataka ಅಭಿಯಾನ ಅಂತಿಮ ಘಟ್ಟಕ್ಕೆ ತಲುಪಿದೆ.

|
Google Oneindia Kannada News

ಕರ್ನಾಟಕದ ಜನಪ್ರಿಯ ಮಾಧ್ಯಮ ಸಂಸ್ಥೆಗಳಾದ ಏಷ್ಯಾ ನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ, ರಾಜ್ಯ ಪ್ರವಾಸೋದ್ಯಮ ಇಲಾಖೆ ಜೊತೆಗೂಡಿ ಕರ್ನಾಟದ ಏಳು ಅದ್ಭುತಗಳನ್ನ ಹುಡುಕುವ ಅಭಿಯಾನ ಆರಂಭಿಸಿತ್ತು. ಡೈಲಿಹಂಟ್ ಮುಂದಾಳತ್ವದ ಜೋಶ್ ಅಪ್ಲಿಕೇಶನ್ ಡಿಜಿಟಲ್ ಪಾರ್ಟ್ನರ್ ಆಗಿದ್ದ ಈ ಅಭಿಯಾನ ಈಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಅಧಿಕೃತ ಪಟ್ಟಿ ಬಿಡುಗಡೆಯಾಗಿದೆ.

ಕರ್ನಾಟಕದ 7 ಅದ್ಭುತಗಳು ಎಂದರೆ ಕೇವಲ ಸುಂದರವಾಗಿರುವುದಷ್ಟೇ ಅಲ್ಲ. ಇಡೀ ಕರ್ನಾಟಕದ ಎಲ್ಲ ವೈವಿಧ್ಯಗಳ ಪ್ರಾತಿನಿಧಿಕ ಹೆಗ್ಗುರುತುಗಳು ಇವು. ನೆಲ, ಜಲ, ಕಾಡು, ಕಡಲು, ವಾಸ್ತು, ವಿಜ್ಞಾನ, ಶಿಲ್ಪ, ಕಲೆ, ಇತಿಹಾಸ, ಪರಂಪರೆ, ಕನ್ನಡಿಗರ ತತ್ವ ಸಿದ್ಧಾಂತಗಳೆಲ್ಲವನ್ನೂ ಪ್ರತಿನಿಧಿಸುವಂಥ ಸಮಗ್ರ ಕರ್ನಾಟಕದ ಪ್ರತೀಕಗಳಾಗಿರಬೇಕು ಅವು. ಅಂಥ ನೂರಾರು ಅದ್ಭುತಗಳಿರುವ ಕನ್ನಡನಾಡು ನಮ್ಮದು.

ಇವುಗಳಲ್ಲಿ ಪ್ರಾತಿನಿಧಿಕ ಎನ್ನುವಂಥ ಅದ್ಭುತಗಳನ್ನು 7 ವರ್ಗಗಳಾಗಿ ವಿಂಗಡಿಸಿ ಅವುಗಳಲ್ಲಿ 7 ಹೆಗ್ಗುರುತುಗಳನ್ನು ಇದೀಗ ವೈಜ್ಞಾನಿಕ ವಿಧಾನದಿಂದ ಆಯ್ಕೆ ಮಾಡಲಾಗಿದೆ. ಕರ್ನಾಟಕದ ಮೂಲೆ ಮೂಲೆಯ ಜನರಿಂದ 5000 ಕ್ಕೂ ಹೆಚ್ಚು ನಾಮನಿರ್ದೇಶನ, 82 ಲಕ್ಷಕ್ಕೂ ಅಧಿಕ ಜನಮತ ಚಲಾವಣೆ, 1 ವರ್ಷದ ಸ್ಥಳ ಸಮೀಕ್ಷೆ, ಜಾಗತಿಕ ಪ್ರವಾಸೋದ್ಯಮ ಹಾಗೂ ಇತಿಹಾಸ ತಜ್ಞರಿರುವ 7 ತೀರ್ಪುಗಾರರ ಸಮಿತಿಯ ವಿಚಾರ ಮಂಥನ... ಇವೆಲ್ಲವುಗಳ ನಂತರ ಕರ್ನಾಟಕದ 7 ಅದ್ಭುತಗಳ ಆಯ್ಕೆ... ಇಗೋ ಈಗ ನಿಮ್ಮ ಮುಂದಿವೆ.

 (ಬೃಹತ್ ಶಿಲಾಯುಗದ ಅದ್ಭುತ)

(ಬೃಹತ್ ಶಿಲಾಯುಗದ ಅದ್ಭುತ)

ಬಹುತೇಕ ಕನ್ನಡಿಗರಿಗೇ ಅಪರಿಚಿತವಾದ ಕರ್ನಾಟಕದ ಅದ್ಭುತ ಇದು. ಸುಮಾರು 3,000-4,000 ವರ್ಷಗಳಷ್ಟು ಹಳೆಯ ಇತಿಹಾಸ ಇರುವ ತಾಣ. ಕೊಪ್ಪಳ ಜಿಲ್ಲೆ ಗಂಗಾವತಿಯಿಂದ ಸುಮಾರು 10 ಕಿ.ಮೀ. ದೂರದ ಹಿರೇಬೆಣಕಲ್ ಗ್ರಾಮದ ಮೋರ್ಯಾರ ಗುಡ್ಡದಲ್ಲಿ ಆದಿಮಾನವ ನಿರ್ಮಿತ ಬೃಹತ್ ಶಿಲಾಯುಗದ ನೂರಾರು ಶಿಲಾಸಮಾಧಿಗಳು ಹಾಗೂ ಆದಿಮಾನವ ರಚಿತ ಗುಹಾಚಿತ್ರಗಳು ಇವೆ. ಲಂಡನ್ನಿನ ಸ್ಟೋನ್ ಹೆಂಜಸ್, ಈಜಿಪ್ಟಿನ ಪಿರಮಿಡ್ಡುಗಳು, ಬಹರೈನಿನ ದಿಲ್ಮನ್ ಸಮಾಧಿ ದಿಬ್ಬಗಳಂತೆ - ಸಾವಿನ ಗೌರವ ಸೂಚಕಗಳು - ಈ ಶಿಲಾಸಮಾಧಿ ಡೋಲ್ಮನ್ ಗಳು.

ವಿಶ್ವದ ಹಲವೆಡೆ ಇಂಥ ಡೋಲ್ಮನ್ ಗಳು ಇದ್ದು, ಕೊರಿಯಾ ಒಂದರಲ್ಲೇ ವಿಶ್ವದ ಶೇ.40ರಷ್ಟು ಡೋಲ್ಮನ್ ಗಳು ಪತ್ತೆಯಾಗಿವೆ. ಭಾರತದಲ್ಲಿ ಹಲವೆಡೆ ಈ ಶಿಲಾಸಮಾಧಿಗಳು ಪತ್ತೆಯಾಗಿವೆಯಾದರೂ, ಹಿರೇಬೆಣಕಲ್ ಮೋರ್ಯಾರ ಗುಡ್ಡ ಇಡೀ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮೆಗಾಲಿಥಿಕ್ ತಾಣವಾಗಿದೆ. ಒಂದು ಅಡಿಯ ಶಿಲಾಸಮಾಧಿಯಿಂದ ಹಿಡಿದು 10 ಅಡಿ ಶಿಲಾಚಪ್ಪಡಿಯ ಸಮಾಧಿಗಳು ಮೂರು-ನಾಲ್ಕು ಸಾವಿರ ವರ್ಷಗಳ ಪ್ರಾಕೃತಿಕ ಹೊಡೆತಗಳನ್ನು ತಾಳಿಯೂ ಇನ್ನೂ ಗಟ್ಟಿಯಾಗಿ ನಿಂತಿರುವುದು ನಿಜಕ್ಕೂ ಅದ್ಭುತ. ಕರ್ನಾಟಕದಲ್ಲಿ ಇರುವ ಇಂಥ ಅನೇಕ ಪ್ರಾಗೈತಿಹಾಸಿಕ ತಾಣಗಳ ಪ್ರಾತಿನಿಧಿಕ ಅದ್ಭುತವೇ ಹಿರೇಬೆಣಕಲ್ ಮೋರ್ಯಾರ ಗುಡ್ಡದ ಶಿಲಾ ಸಮಾಧಿಗಳು.

 (ಪುರಾತತ್ವ ಅದ್ಭುತ)

(ಪುರಾತತ್ವ ಅದ್ಭುತ)

ರೋಮ್ ನಂತೆ ಇಡೀ ಹಂಪಿಯೇ ಒಂದು ಅದ್ಭುತ. ಇದನ್ನು ಜಗತ್ತಿನ ಅತಿದೊಡ್ಡ ಓಪನ್ ಏರ್ ಆರ್ಕಿಯಾಲಜಿಕಲ್ ಮ್ಯೂಸಿಯಂಗಳಲ್ಲಿ ಒಂದು ಎಂದು ಹೇಳಬಹುದು. ಇಲ್ಲಿನ ಶಿಲ್ಪಕಲಾ ವೈಭವ, ಶಿಲ್ಪಕಲಾ ವೈವಿಧ್ಯ, ನೂರಾರು ಸ್ಮಾರಕಗಳು, ಜಗತ್ಪ್ರಸಿದ್ಧ. ಹಂಪಿಯ ಕಲ್ಲಿನ ರಥ ಯಾರಿಗೆ ಗೊತ್ತಿಲ್ಲ ಹೇಳಿ. ಇಲ್ಲಿನ ಕಲ್ಲುಕಲ್ಲಿನಲಿ ಶಿಲೆಗಳು ಸಂಗೀತ ನುಡಿಸುತ್ತವೆ ಎಂಬುದು ಅಕ್ಷರಶಃ ನಿಜ. ಇದಕ್ಕೆ ವಿಜಯ ವಿಠ್ಠಲ ದೇವಾಲಯದ ಸಂಗೀತ ಕಂಬಗಳಿಂದ ಹಿಡಿದು, ಮಹಾನವಮಿ ದಿಬ್ಬದ ಬಳಿ ಇರುವ ಕಲ್ಲಿನ ಊಟದ ತಟ್ಟೆಗಳವರೆಗೆ ಅನೇಕ ಸಾಕ್ಷಾತ್ ನಿದರ್ಶನಗಳಿವೆ.

ಅಲ್ಲದೆ, ಹಂಪಿಯ ಸುತ್ತ ಇರುವ ಬಂಡೆ ಬೆಟ್ಟಗಳ ಪರಿಸರ ಕರ್ನಾಟಕದ ವೈವಿಧ್ಯಮಯ ನಿಸರ್ಗ ಸೌಂದರ್ಯಕ್ಕೆ ಪ್ರತ್ಯೇಕ ಮೆರುಗನ್ನೇ ನೀಡಿದೆ. ಕರ್ನಾಟಕದಲ್ಲಿ ಹಂಪಿಯಂಥ ಹಲವಾರು ಶಿಲ್ಪಕಲೆಯ ಪುರಾತತ್ವ ಅದ್ಭುತಗಳಿವೆ. ಪ್ರತಿಯೊಂದೂ ತಾವೇ ತಾವಾಗಿ ಒಂದೊಂದು ಅದ್ಭುತ ಎನಿಸಿಕೊಳ್ಳಬೇಕಾದಂಥವು. ಬೇಲೂರು ಚನ್ನಕೇಶವ ದೇವಾಲಯ ಭಾರತೀಯ ಶಿಲ್ಪಕಲೆಯ ಔನ್ನತ್ಯಕ್ಕೆ ಉದಾಹರಣೆ.

ಹಳೇಬೀಡು, ಪಟ್ಟದಕಲ್ಲು ದೇವಾಲಯಗಳು ಒಂದೆಡೆಯಾದರೆ ಐಹೊಳೆಯು ಭಾರತೀಯ ದೇವಾಲಯ ಶಿಲ್ಪಕಲೆಯ ತೊಟ್ಟಿಲು ಎಂದೇ ಖ್ಯಾತ. ಬಾದಾಮಿಯ ಗುಹಾಂತರ ದೇವಾಲಯಗಳೂ ಏನೂ ಕಡಿಮೆ ಇಲ್ಲ. ಲಕ್ಕುಂಡಿ, ತಲಕಾಡು ಸೇರಿದಂತೆ ಕರ್ನಾಟಕಾದ್ಯಂತ ಇರುವ ಇಂಥ ಹಲವಾರು ಪುರಾತತ್ವ ವೈಭವದ ಪ್ರಾತಿನಿಧಿಕ ಅದ್ಭುತವೇ ಹಂಪಿ.

 (ತಾತ್ವಿಕ ಅದ್ಭುತ)

(ತಾತ್ವಿಕ ಅದ್ಭುತ)

ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ರಿಯೋ-ಡಿ-ಜನೈರೋದ ಕಿಸ್ತನ ಪ್ರತಿಮೆ ಹೇಗೋ, ನಮಗೆ ಕರ್ನಾಟಕದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಪ್ರತಿಮೆ ಹಾಗೆ. ಇತ್ತೀಚೆಗೆ ರಾಜ್ಯದಲ್ಲಿ ಅತಿ ಎತ್ತರದ ಅನೇಕ ಏಕಶಿಲಾ ಪ್ರತಿಮೆಗಳು ರಚನೆಯಾಗುತ್ತಿದ್ದರೂ ಶ್ರವಣಬೆಳಗೊಳದ ಗೊಮ್ಮಟನ ನೂರಾರು ವರ್ಷದ ಇತಿಹಾಸಕ್ಕೆ ಅದ್ಯಾವುದೂ ಸಮವಾಗಲಾರದು. ಶ್ರವಣಬೆಳಗೊಳದ ಬಾಹುಬಲಿ - ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಆಯ್ಕೆಯಾಗಲು ಈ ಪ್ರತಿಮೆ ಜಗತ್ತಿನಾದ್ಯಂತ ಪ್ರಸಿದ್ಧ ಎನ್ನುವುದಷ್ಟೇ ಕಾರಣವಲ್ಲ.

ಈ ಪ್ರತಿಮೆ ಕನ್ನಡನಾಡಿನ ಸಮರ-ಶಾಂತಿ ತತ್ವದ ಪ್ರಾತಿನಿಧಿಕ ಕುರುಹು. ಭರತ-ಬಾಹುಬಲಿಯ ಕಥೆಯನ್ನೊಮ್ಮೆ ಅವಲೋಕಿಸಿ. ನಾವು ಕನ್ನಡಿಗರೂ ಅಷ್ಟೇ ಸಮರಕ್ಕೂ ಸಿದ್ಧ, ಶಾಂತಿಗೂ ಬದ್ಧ. ನಮ್ಮ ಅಪಾರ ಶಕ್ತಿ ಸಾಮರ್ಥ್ಯ ಯಾರ ಮೇಲೋ ದಬ್ಬಾಳಿಕೆ ನಡೆಸಲು ಅಲ್ಲ. ಭರತನಂತೆ ಯಾರಾದರೂ ನಮ್ಮ ಮೇಲೆ ಹೋರಾಟಕ್ಕೆ ಇಳಿದಾಗ ಬಾಹುಬಲಿಯಾಗಿ ಅವರನ್ನು ಹೊಸಕಿ ಹಾಕುವುದು ನಮಗೆ ಕಷ್ಟವಲ್ಲ. ಆದರೂ ನಮ್ಮಷ್ಟಕ್ಕೆ ನಾವು ಗೊಮ್ಮಟನಂತೆ ಶಾಂತಿ ಪ್ರಿಯರು.

ನಮ್ಮ ಈ "ಸಮರಕ್ಕೂ ಸಿದ್ಧ, ಶಾಂತಿಗೂ ಬದ್ಧ" ತತ್ವದ ಪ್ರಾತಿನಿಧಿಕ ಅದ್ಭುತವೇ ಶ್ರವಣಬೆಳಗೊಳದ ಗೊಮ್ಮಟೇಶ್ವರ. ಅಷ್ಟೇ ಅಲ್ಲ, ಜಗತ್ತಿಗೆ ಅನೇಕ ತತ್ವಾದರ್ಶಗಳನ್ನು ನೀಡಿದ ಕನಕ, ಪುರಂದರ, ಬಸವ, ಮಧ್ವ, ಶಿಶುನಾಳ ಶರೀಫ ಮುಂತಾದ ಎಲ್ಲ ಕನ್ನಡನಾಡಿನ ಮಹನೀಯರ ತಾತ್ವಿಕ ಪ್ರತಿನಿಧಿಯೂ ಹೌದು ಈ ಅದ್ಭುತ.

 (ವಾಸ್ತು ವಿಜ್ಞಾನ ಅದ್ಭುತ)

(ವಾಸ್ತು ವಿಜ್ಞಾನ ಅದ್ಭುತ)

ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಶ್ವೇತ ಸುಂದರಿಯಾದರೆ, ಕರ್ನಾಟಕದ ಗೋಲ ಗುಮ್ಮಟ ಕೃಷ್ಣ ಸುಂದರಿ. ಜಗತ್ತಿನ ಅತಿ ದೊಡ್ಡ ಗುಮ್ಮಟಗಳಲ್ಲಿ ಒಂದು ವಿಜಯಪುರದ ಗೋಲ ಗುಮ್ಮಟ. ಇಂಡೋ-ಸಾರ್ಸೆನಿಕ್ ಶೈಲಿಯ ಈ ಬೃಹತ್ ಸ್ಮಾರಕ ಆದಿಲ್ ಶಾಹಿ ರಾಜಮನೆತನದ ಮಹಾನ್ ಸಮಾಧಿಯಾದರೂ ಪುರಾತತ್ವ ವಾಸ್ತುಶಾಸ್ತ್ರ, ರೇಖಾಗಣಿತ ಮತ್ತು ಶಬ್ದವಿಜ್ಞಾನಕ್ಕೂ ಅತ್ಯುತ್ತಮ ಉದಾಹರಣೆ. ನಾಲ್ಕು ಗೋಡೆಗಳ ಮೇಲೆ, ನಡುವೆ ಯಾವುದೇ ಆಧಾರಗಳಿಲ್ಲದೆ ಬಹುದೊಡ್ಡ ಗುಮ್ಮಟವೊಂದನ್ನು ನಿರ್ಮಿಸಿರುವುದು ವಾಸ್ತುಶಾಸ್ತ್ರಜ್ಞರ ಅಪ್ರತಿಮ ಕೌಶಲ್ಯಕ್ಕೆ ಸಾಕ್ಷಿ. ಅದಕ್ಕಿಂತ ಈ ಗುಮ್ಮಟದ ಶಬ್ದಚಾತುರ್ಯ ಅಮೋಘವಾದುದು.

ಗುಮ್ಮಟದ ಒಂದು ಬದಿಯಲ್ಲಿ ಪಿಸುಮಾತನ್ನಾಡಿದರೂ ಅಷ್ಟು ದೂರದ ಇನ್ನೊಂದು ತುದಿಯಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಗುಮ್ಮಟದಲ್ಲಿ ಒಂದು ಕೂಗು ಏಳು ಬಾರಿ ಮಾರ್ದನಿಸುತ್ತದೆ. ಈ ಶಬ್ದ ವೈಚಿತ್ರ್ಯವನ್ನು, ರೇಖಾಗಣಿತ ಆಧಾರಿತ ಕಟ್ಟಡ ವೈವಿಧ್ಯವನ್ನು ಪ್ರತಿನಿಧಿಸುವ ಕರ್ನಾಟಕದ ಅದ್ಭುತವೇ ಗೋಲ ಗುಮ್ಮಟ. ಅಷ್ಟೇ ಅಲ್ಲದೆ, ಕರ್ನಾಟಕದ ಅನೇಕ ಪ್ರಾಚೀನ ಹಾಗೂ ಆಧುನಿಕ ವಾಸ್ತು ವಿಜ್ಞಾನದ ಪ್ರಾತಿನಿಧಿಕವೂ ಹೌದು ಈ ಅದ್ಭುತ.

 (ರಾಜಪರಂಪರಾ ಅದ್ಭುತ)

(ರಾಜಪರಂಪರಾ ಅದ್ಭುತ)

ಭಾರತದ ಅತ್ಯಂತ ಸುಂದರ ಅರಮನೆಗಳಲ್ಲಿ ಒಂದು ಮೈಸೂರಿನ ಅರಮನೆ ಎಂದೇ ಖ್ಯಾತವಾದ ಮೈಸೂರಿನ ಅಂಬಾ ವಿಲಾಸ ಅರಮನೆ. ಕರ್ನಾಟಕದ ಗತವೈಭವವನ್ನು ಭವ್ಯವಾಗಿ ಬಿಂಬಿಸುವ ಈ ಅರಮನೆ ದೀಪಾಲಂಕಾರಗೊಂಡಾಗಲಂತೂ ಬಂಗಾರದ ಅರಮನೆಯಂತೆಯೇ ಭಾಸವಾಗುತ್ತದೆ. ತಾಜ್ ಮಹಲಿನಷ್ಟೇ ಪ್ರವಾಸಿಗರನ್ನು ಸೆಳೆಯುವ ಈ ಅರಮನೆ ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಪ್ರಮುಖ ಆಕರ್ಷಣೆಯೂ ಹೌದು. ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಇದು ಆಯ್ಕೆಯಾಗಲು ಇಷ್ಟೇ ಕಾರಣವಲ್ಲ.

ಸುಮಾರು 400 ವರ್ಷಗಳ ಇತಿಹಾಸ ಇರುವ ರಾಜಪರಂಪರೆಯ ಮೈಸೂರು ದಸರಾ ಹಬ್ಬ ಇಂದಿಗೂ ಸಜೀವ ಸಂಸ್ಕೃತಿಯಾಗಿ ವಿಜ್ರಂಭಣೆಯಿಂದ ಆಚರಣೆಯಾಗುತ್ತಿದೆ. ಅಲ್ಲದೆ, ಮೈಸೂರಿನ ಒಡೆಯರು, ಅಭಿವೃದ್ಧಿ, ಆಧುನಿಕತೆ, ಆಡಳಿತದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದರು. ಅಣೆಕಟ್ಟೆ, ನೀರಾವರಿ, ವಿದ್ಯುತ್, ಬೀದಿದೀಪ, ಚಿನ್ನದ ಗಣಿ, ರೈಲ್ವೆಯಂತಹ ಅನೇಕ ಪ್ರಗತಿಪರ ಕೈಂಕರ್ಯದಲ್ಲಿ ಅಗ್ರಗಣ್ಯರಾಗಿದ್ದ ಮೈಸೂರು ಅರಸರು ದೇಶದ ಸ್ವಾತಂತ್ರ್ಯಕ್ಕೂ ಮುನ್ನವೇ ಪ್ರಜಾಪ್ರತಿನಿಧಿ ಸಭೆಯನ್ನೂ ನಡೆಸಿ ದೇಶಕ್ಕೇ ಮಾದರಿಯಾಗಿದ್ದರು.

ಕರ್ನಾಟಕದಲ್ಲಿ ವಿಜಯನಗರ ಅರಸರು, ಕದಂಬರು, ರಾಷ್ಟ್ರಕೂಟರು, ಹೊಯ್ಸಳರು, ಚಾಲುಕ್ಯರು... ಹೀಗೆ ಅನೇಕ ಹಿರಿ-ಕಿರಿಯ ಸಂಸ್ಥಾನಗಳ ಶ್ರೇಷ್ಠ ರಾಜಪರಂಪರೆಯಿದೆ. ಈ ಎಲ್ಲ ರಾಜ-ರಾಣಿಯರ ಕೊಡುಗೆ, ದಿಟ್ಟ, ಭವ್ಯ ಪರಂಪರೆಯ ಪ್ರಾತಿನಿಧಿಕ ಅದ್ಭುತವೇ ಮೈಸೂರು ಅರಮನೆ.

 (ನೈಸರ್ಗಿಕ ಅದ್ಭುತ - ನೆಲ)

(ನೈಸರ್ಗಿಕ ಅದ್ಭುತ - ನೆಲ)

ಭಾರತದ ಅತ್ಯಂತ ಸುಂದರ ಹಾಗೂ ಬೃಹತ್ ಜಲಪಾತಗಳಲ್ಲಿ ಜೋಗ ಜಲಪಾತ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. 830 ಅಡಿ ಎತ್ತರದಿಂದ ಧುಮುಕುವ ಜೋಗ ಜಲಪಾತ ಮಳೆಗಾಲದಲ್ಲಂತೂ ನೀರಿನಿಂದ ತುಂಬಿ ರಾಜಗಾಂಭೀರ್ಯವನ್ನು ಪಡೆಯುತ್ತದೆ. ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಜೋಗ ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಪ್ರಮುಖ ಆಕರ್ಷಣೆಯಲ್ಲಿ ಒಂದು. ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಇದು ಆಯ್ಕೆಯಾಗಲು ಇವಿಷ್ಟೇ ಕಾರಣವಲ್ಲ. ಜೀವವೈವಿಧ್ಯಗಳಿಂದ ಶ್ರೀಮಂತವಾಗಿರುವ ಪಶ್ಚಿಮ ಘಟ್ಟಗಳು ಭೂಮಿಯ ಅತಿ ಅಪರೂಪದ ಕಾಡುಗಳಲ್ಲಿ ಒಂದು.

ಅಂತಹ ಅದ್ಭುತ ನಿಸರ್ಗದಲ್ಲಿರುವ ಜೋಗದ ಪರಿಸರಲ್ಲಿ ಕರ್ನಾಟಕದ ಅಪರೂಪದ ಸಸ್ಯ ಹಾಗೂ ಪ್ರಾಣಿಸಂಕುಲಗಳೂ ಇವೆ. ಶೋಲಾ ಕಾಡುಗಳಿಂದ ಹಿಡಿದು ದಟ್ಟ ನಿತ್ಯಹರಿದ್ವರ್ಣ ಕಾಡುಗಳವರೆಗೆ ಕರ್ನಾಟಕದಲ್ಲಿ 6 ವೈವಿಧ್ಯ ಕಾಡುಗಳಿವೆ. ನಾಗರಹೊಳೆ, ದಾಂಡೇಲಿಯಂಥ ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ. ಕುದುರೆಮುಖ, ಕೊಡಗು, ಕೊಡಚಾದ್ರಿಯಂಥ ಹಸಿರು ಗಿರಿಧಾಮಗಳಿವೆ.

ಶರಾವತಿಯಲ್ಲದೆ ಕಾವೇರಿ, ಕೃಷ್ಣೆ, ತುಂಗಭದ್ರಾದಂಥ ಅನೇಕ ಹಿರಿ-ಕಿರಿಯ ನದಿಗಳಿವೆ. ಹೆಬ್ಬೆ, ಗೋಕಾಕ್ ಫಾಲ್ಸ್, ಗಗನಚುಕ್ಕಿ, ಭರಚುಕ್ಕಿ, ಉಂಚಳ್ಳಿಯಂಥ ಹಲವಾರು ಸುಂದರ ಜಲಪಾತಗಳಿವೆ. ಈ ಎಲ್ಲ ಕರ್ನಾಟಕದ ನೆಲದ ಸೌಂದರ್ಯ ಮತ್ತು ಮಹತ್ವಗಳ ಪ್ರಾತಿನಿಧಿಕ ಅದ್ಭುತವೇ ಜೋಗ ಜಲಪಾತ.

 (ನೈಸರ್ಗಿಕ ಅದ್ಭುತ - ಜಲ)

(ನೈಸರ್ಗಿಕ ಅದ್ಭುತ - ಜಲ)

ಕರ್ನಾಟಕದ ಅದ್ಭುತಗಳೆಂದರೆ ಬರೀ ನೆಲದ ಮೇಲಿನ ಅದ್ಭುತಗಳಷ್ಟೇ ಅಲ್ಲ. ಕರ್ನಾಟಕದ ಅರಬ್ಬಿ ಸಮುದ್ರದ ಕಡಲಗರ್ಭವೂ ಕೂಡ ಅದ್ಭುತವೇ. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಬಳಿ ಇರುವ ನೇತ್ರಾಣಿ ದ್ವೀಪ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿದೆ. ಈ ದ್ವೀಪದ ಸುತ್ತ ಇರುವ ಸಮುದ್ರ ಗರ್ಭ ಎಷ್ಟು ಅದ್ಭುತವಾಗಿದೆಯೆಂದರೆ, ಸ್ಕೂಬಾ ಡೈವಿಂಗ್ ಮಾಡಲು ಭಾರತದಲ್ಲಿ ನೇತ್ರಾಣಿ ದ್ವೀಪ ಎರಡನೇ ಅತ್ಯುತ್ತಮ ಪ್ರದೇಶ. ಒಂದನೇ ಅತ್ಯುತ್ತಮ ಪ್ರದೇಶ ಅಂಡಮಾನ್ ದ್ವೀಪ.

ನೇತ್ರಾಣಿ ದ್ವೀಪದ ಕಡಲ ಗರ್ಭದಲ್ಲಿ ಆರೋಗ್ಯಕರ ಹವಳದ ಬಂಡೆಗಳಿವೆ. ಅಪರೂಪದ ಜಲಚರಗಳಿವೆ. ಸಾಗರ ಸಸ್ಯಗಳಿವೆ. ಇನ್ನೊಂದು ಗಮನೀಯ ವಿಚಾರ ಎಂದರೆ, ದೇಶದ ಎಲ್ಲ ರಾಜ್ಯಗಳಿಗೂ ಸಮುದ್ರ ಸೌಂದರ್ಯವಿಲ್ಲ. ಆದರೆ, ಕರ್ನಾಟಕದಲ್ಲಿ 310 ಕಿ.ಮೀ.ಯಷ್ಟು ಅದ್ಭುತ ಸಮುದ್ರ ಕಿನಾರೆಯಿದೆ. ನೇತ್ರಾಣಿ ಬಳಿ ಇರುವ ಮುರುಡೇಶ್ವರ ಈಗಾಗಲೇ ಕರ್ನಾಟಕದ ಪ್ರವಾಸೋದ್ಯಮದಲ್ಲಿ ಪ್ರಮುಖ ಸ್ಥಾನ ಪಡೆದಿದ್ದು ರಾಜ್ಯದ ಸಾಗರ ಪ್ರವಾಸೋದ್ಯಮಕ್ಕೆ ಇನ್ನಷ್ಟು ಹೇರಳ ಅವಕಾಶಗಳನ್ನು ಹೊಂದಿದೆ. ಇದರಿಂದ ಕರ್ನಾಟಕದ ಎಲ್ಲ ಸಮುದ್ರ ಕಿನಾರೆಗಳ ಪ್ರಾತಿನಿಧಿಕ ಅದ್ಭುತವೇ ನೇತ್ರಾಣಿ ದ್ವೀಪದ ಕಡಲಗರ್ಭ.

 ವಿಶ್ವದ ಏಳು ಅದ್ಭುತಗಳು ಯಾವುವು ಎಂದು ಕೇಳಿದರೆ ಉತ್ತರಿಸುವುದು ಸುಲಭ

ವಿಶ್ವದ ಏಳು ಅದ್ಭುತಗಳು ಯಾವುವು ಎಂದು ಕೇಳಿದರೆ ಉತ್ತರಿಸುವುದು ಸುಲಭ

ವಿಶ್ವದ ಏಳು ಅದ್ಭುತಗಳು ಯಾವುವು ಎಂದು ಕೇಳಿದರೆ ಉತ್ತರಿಸುವುದು ಸುಲಭ. ವಿಶ್ವದ ಹಳೆಯ ಅದ್ಭುತಗಳು ನಮ್ಮ ಮುಂದಿವೆ. ನೂತನ ಅದ್ಭುತಗಳನ್ನೂ ಗುರುತಿಸಲಾಗಿದೆ. ಇದೀ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸುವ ಪ್ರಯತ್ನ ಮಾಡಿದರೆ ಹೇಗೆ? ಈ ಆಲೋಚನೆ ಹೊಳೆದದ್ದೇ, ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣನ್ಯೂಸ್ ಸೆವೆನ್ ವಂಡರ್ಸ್ ಆಫ್ ಕರ್ನಾಟಕ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿತು.

ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸುವ ಅಭಿಯಾನ ಆರಂಭವಾದದ್ದು ವರುಷದ ಹಿಂದೆ. ಈ ಆಯ್ಕೆ ವೈಜ್ಞಾನಿಕವಾಗಿರಬೇಕು, ಪಾರದರ್ಶಕವಾಗಿರಬೇಕು ಮತ್ತು ಕರ್ನಾಟಕದ ಎಲ್ಲರನ್ನೂ ಒಳಗೊಂಡಿರಬೇಕು ಎಂದು ತೀರ್ಮಾನಿಸಿ, ಹಲವು ಹಂತಗಳ ಆಯ್ಕೆ ಪ್ರಕ್ರಿಯೆಯನ್ನು ನಿಗದಿಪಡಿಸಲಾಯಿತು.

ಮೊದಲ ಹಂತ: ಮೊದಲ ಹಂತದಲ್ಲಿ ಸಾರ್ವಜನಿಕರಿಂದ ನಾಮನಿರ್ದೇಶನಗಳನ್ನು ಆಹ್ವಾನಿಸಲಾಯಿತು. ಕರ್ನಾಟಕದ ಉದ್ದಗಲಕ್ಕೂ ಇರುವ ಮಂದಿ, ತಮಗೆ ಸೂಕ್ತವೆಂದು ತೋಚಿದ ಕರ್ನಾಟಕದ ಅದ್ಭುತಗಳನ್ನು ಕಳುಹಿಸಲು ಆರಂಭಿಸಿದರು. ಮೂವತ್ತು ದಿನಗಳ ಕಾಲ ನಡೆದ ಈ ಅಭಿಯಾನದಲ್ಲಿ ಐದು ಸಾವಿರಕ್ಕೂ ಹೆಚ್ಚು ನಾಮನಿರ್ದೇಶನಗಳನ್ನು ಆಸಕ್ತರು 7ವಂಡರ್ಸ್ಆಫ್ ಕರ್ನಾಟಕ. ಕಾಮ್ ವೆಬ್ಸೈಟಿನ ಮೂಲಕ ದಾಖಲಿಸಿದರು. ತಮ್ಮ ಮೆಚ್ಚಿನ ತಾಣದ ಫೋಟೋ ಮತ್ತು ಮಾಹಿತಿಗಳನ್ನು ನೀಡಿದರು.

ಎರಡನೆಯ ಹಂತ: ಐದು ಸಾವಿರ ನಾಮನಿರ್ದೇಶನಗಳನ್ನು ಆಂತರಿಕ ತೀರ್ಪುಗಾರರ ಸಮಿತಿ ಪರಿಶೀಲಿಸಿ, ಆಯ್ದ ನೂರು ತಾಣಗಳನ್ನು ವೆಬ್ಸೈಟಿನ ಮೂಲಕ ಪ್ರಕಟಿಸಿತು. ಆ ನೂರು ತಾಣಗಳ ಪೈಕಿ ಇಷ್ಟದ ತಾಣಗಳನ್ನು ಗುರುತಿಸುವುದಕ್ಕೆ ಮತ ಹಾಕುವುದಕ್ಕೂ ಅವಕಾಶ ಮಾಡಿಕೊಡಲಾಯಿತು. ಮೂವತ್ತು ದಿನಗಳ ಕಾಲ ಈ ಮತದಾನ ಅವ್ಯಾಹತವಾಗಿ ನಡೆಯಿತು.

ಮೂರನೆಯ ಹಂತ: ಆಯಾ ತಾಣಗಳು ಗಳಿಸಿದ ಮತಗಳ ಆಧಾರದ ಮೇಲೆ, ಕರ್ನಾಟಕದ ಏಳು ಅದ್ಭುತಗಳು ಅಭಿಯಾನದ ಮೂರನೆಯ ಸುತ್ತಿಗೆ 49 ತಾಣಗಳನ್ನು ಉಳಿಸಿಕೊಳ್ಳಲಾಯಿತು. ಹೆಚ್ಚು ಮತ ಪಡೆದ 49 ತಾಣಗಳಿಗೆ ಮತ ಹಾಕುವುದಕ್ಕೆ ಮತ್ತೆ ಮೂವತ್ತು ದಿನಗಳ ಅವಕಾಶ ನೀಡಲಾಯಿತು.

ನಾಲ್ಕನೆಯ ಹಂತ: ಆಯಾ ತಾಣಗಳು ಗಳಿಸಿದ ಮತಗಳ ಆಧಾರದ ಮೇಲೆ 21 ತಾಣಗಳನ್ನು ಕೊನೆಯ ಹಂತಕ್ಕೆ ಒಯ್ಯಲಾಯಿತು. ಅತಿ ಹೆಚ್ಚು ಮತ ಪಡೆದ ತಾಣ ಮೊದಲನೆಯ ಸ್ಥಾನದಲ್ಲಿ ಕಾಣಿಸಿಕೊಂಡಿತು. ಹೀಗೆ ಮತಗಳನ್ನು ಆಧರಿಸಿ ಟಾಪ್ 21 ತಾಣಗಳು ಕೊನೆಯ ಹಂತಕ್ಕೆ ತಲುಪಿದವು.

ಐದನೆಯ ಹಂತ: ಅಂತಿಮ ಹಂತ ತಲುಪಿದ 21 ತಾಣಗಳನ್ನು ವಿಷಯ ತಜ್ಞರ ಸಮಿತಿಯ ಮುಂದೆ ಇಡಲಾಯಿತು. ಏಳು ಮಂದಿ ತಜ್ಞರು, ಸಭೆ ಸೇರಿ, 21 ತಾಣಗಳಿಗೆ ಸಂಬಂಧಿಸಿದ ಮಾಹಿತಿ, ಫೋಟೋ, ವಿಡಿಯೋ, ಐತಿಹಾಸಿಕ ಪಠ್ಯ, ಕಲಾತ್ಮಕತೆಗಳನ್ನು ಚರ್ಚಿಸಿದರು.

 ಕರ್ನಾಟಕದ ಏಳು ಅದ್ಭುತಗಳ ಆಯ್ಕೆಯ ಮಾನದಂಡಗಳು

ಕರ್ನಾಟಕದ ಏಳು ಅದ್ಭುತಗಳ ಆಯ್ಕೆಯ ಮಾನದಂಡಗಳು

ಕರ್ನಾಟಕದ ಏಳು ಅದ್ಭುತಗಳ ಆಯ್ಕೆಯ ಮಾನದಂಡಗಳು ಹೀಗಿದ್ದವು. ಈ ಏಳು ಅಂಶಗಳ ಅಧಾರದ ಮೇಲೆ ತೀರ್ಪುಗಾರರು ಏಳು ಅದ್ಭುತಗಳನ್ನು ಆಯ್ಕೆ ಮಾಡಿದರು:

1. ಚಾರಿತ್ರಿಕ ಅಂಶ: ಏಳು ಅದ್ಭುತಗಳ ಪಟ್ಟಿಗೆ ಸೇರಲಿರುವ ತಾಣಕ್ಕೆ ಐತಿಹಾಸಿಕ ಹಿನ್ನೆಲೆ ಇರಬೇಕು. ಅದು ಚರಿತ್ರೆಯ ಕಾಲಘಟ್ಟದಲ್ಲಿ ನಿರ್ಮಾಣ ಆಗಿರಬೇಕು ಅಥವಾ ಚರಿತ್ರಾರ್ಹ ಸಂಗತಿಗಳನ್ನು ಒಳಗೊಂಡಿರಬೇಕು.

2. ನಿರ್ಮಾಣ, ಬಳಕೆಯಾದ ದ್ರವ್ಯ: ಕಟ್ಟಡವೋ ಮೂರ್ತಿಯೋ ಯಾವುದರಿಂದ ನಿರ್ಮಾಣವಾಗಿದೆ. ಅದಕ್ಕೆ ಬಳಕೆಯಾಗಿರುವುದು ಶಿಲೆಯೋ, ಲೋಹವೋ ಎಂಬ ವಿವರಗಳು.

3. ಪ್ರಾತಿನಿಧಿಕ ಅಂಶ: ಕರ್ನಾಟಕದ ಏಳು ಅದ್ಭುತಗಳ ಪಟ್ಟಿ ಸೇರಬೇಕಾದರೆ ಅದು ಕರ್ನಾಟಕವನ್ನು ಪ್ರತಿನಿಧಿಸುತ್ತಿರಬೇಕು.

4. ವೈಶಿಷ್ಟ್ಯ ಮತ್ತು ಅನನ್ಯ: ಅದು ವೈಶಿಷ್ಯಪೂರ್ಣವಾಗಿರಬೇಕು. ಹಾಗೇ ಅನನ್ಯನೂ ಅಮೂಲ್ಯವೂ ಆಗಿರಬೇಕು. ಅದನ್ನು ಕರುನಾಡಿನ ಹೆಗ್ಗುರುತು ಎಂದು ಗುರುತಿಸುವಂತಿರಬೇಕು.

5. ಸೌಂದರ್ಯ ಮತ್ತು ಕಲಾತ್ಮಕತೆ: ನೋಡುಗರಿಗೆ ಅದು ಸುಂದರವಾಗಿ ಕಾಣಬೇಕು ಅಷ್ಟೇ ಅಲ್ಲದೇ, ಅದರಲ್ಲಿ ಕಲಾತ್ಮಕ ಅಂಶಗಳೂ ಇರಬೇಕು.

6. ಬೃಹದಾಕಾರ: ಅದು ಗಾತ್ರದಲ್ಲಿಯೂ ಸಾಕಷ್ಟು ದೊಡ್ಡದಾಗಿರಬೇಕು ಮತ್ತು ತನ್ನ ಗಾತ್ರದಿಂದಲೇ ಗಮನ ಸೆಳೆಯುವಂತಿರಬೇಕು.

7. ಸುಸ್ಥಿತಿ ಅಂಶ: ಆಯ್ಕೆಯಾಗುವ ಅದ್ಭುತ ಸುಸ್ಥಿತಿಯಲ್ಲಿ ಇರಬೇಕು. ಅದು ಪ್ರವಾಸಿಗರಿಗೆ ಹೋಗಿ ನೋಡುವುದಕ್ಕೆ ಸಾಧ್ಯವಾಗುವಂಥ ಸ್ಥಿತಿಯಲ್ಲಿರಬೇಕು.

ತಜ್ಞರ ಸಮಿತಿ, ಈ ಏಳು ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಅಂತಿಮ ಸುತ್ತಿಗೆ ಬಂದ 21 ತಾಣಗಳನ್ನು ಪರಿಶೀಲಿಸಿ, ಅಂತಿಮವಾಗಿ ಕರ್ನಾಟಕದ ಏಳು ಅದ್ಭುತಗಳನ್ನು ಆಯ್ಕೆ ಮಾಡಿದರು. ಅದು ಈಗ ನಿಮ್ಮ ಮುಂದಿದೆ.

English summary
7 Wonders Of Karnataka Campaign Through Digital Partner Josh, A List Of 7 Wonders Of State. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X