ಕಲಬುರಗಿ, ಬೀದರ್ನಲ್ಲಿ ಭಾರಿ ಮಳೆ; ಕರಾವಳಿಯಲ್ಲಿ ಅಬ್ಬರ ಕಡಿಮೆ
ಕಲಬುರಗಿ, ಸೆಪ್ಟೆಂಬರ್ 16 : ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಬೀದರ್ ಜಿಲ್ಲೆಯ ಕಮಲನಗರದಲ್ಲಿ 14.2 ಸೆಂ. ಮೀ. ಮಳೆಯಾಗಿದೆ.
ಸೋಮವಾರ ರಾತ್ರಿ, ಮಂಗಳವಾರ ಕಲಬುರಗಿ ಮತ್ತು ಬೀದರ್ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ವಿವಿಧ ಗ್ರಾಮಗಳಲ್ಲಿ ಹಳ್ಳಗಳು ತುಂಬಿ ಹರಿದಿದ್ದು, ಹಳ್ಳಿಗಳಿಗೆ ಸಂಪರ್ಕ ಸ್ಥಗಿತಗೊಂಡಿತ್ತು. ಚಿತ್ತಾಪುರ, ಕಾಳಗಿ, ಸೇಡಂ ತಾಲೂಕುಗಳಲ್ಲಿ ಕಿರು ಸೇತುವೆಗಳು ಮುಳುಗಿ ಹೋಗಿದ್ದವು.
ವಿವಿಧ ಪ್ರದೇಶದಲ್ಲಿ ಬೆಳೆದುನಿಂತಿದ್ದ ಬೆಳೆಗಳು ಮಳೆ, ಗಾಳಿಗೆ ಸಿಲುಕಿ ಹಾನಿಯಾಗಿವೆ. "ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡುವಂತೆ ಜಿಲ್ಲಾಡಳಿತ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಕರಾವಳಿ ಭಾಗದಲ್ಲಿ ಮಂಗಳವಾರ ಬಿಡುವು ನೀಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಕೇವಲ 1 ಸೆಂ. ಮೀ. ಮಳೆಯಾಗಿದೆ. ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ರಸ್ತೆ ಸಂಪರ್ಕ ಕಡಿತ
ಭಾಲ್ಕಿ ತಾಲೂಕಿನ ಆನಂದವಾಡಿ ಸಮೀಪ ಕಾರಂಜಾ ನದಿ ಉಕ್ಕಿ ಹರಿದ ಪರಿಣಾಮ ಸುಮಾರು 2 ತಾಸು ರಸ್ತೆ ಸಂಪರ್ಕ ಕಡಿತವಾಗಿತ್ತು. ಸೇಡಂ ತಾಲೂಕಿನ ಕಿರು ಸೇತುವೆಗಳು ನೀರಿನಲ್ಲಿ ಮುಳುಗಿದ್ದವು.

ಜಮೀನಿಗೆ ನುಗ್ಗಿದ ನೀರು
ಭಾರಿ ಮಳೆಯಾದ ಕಾರಣ ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಬೆಳೆಗಳಿಗೆ ಹಾನಿಯಾಗಿದೆ. ಬೀದರ್ ಜಿಲ್ಲೆಯಲ್ಲಿ ಆದ ಬೆಳೆ ಹಾನಿ ಸಮೀಕ್ಷೆ ನಡೆಸುವಂತೆ ಕಾಂಗ್ರೆಸ್ ನಾಯಕ, ಶಾಸಕ ಈಶ್ವರ ಖಂಡ್ರೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿಯೂ ಮಳೆ
ಕಲಬುರಗಿ ಜಿಲ್ಲೆಯಲ್ಲಿಯೂ ಭಾರಿ ಮಳೆಯಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿದೆ. ಹಾಗರಗಾ-ಖಾಜಾ ಕೋಟನೂರ ಗ್ರಾಮಗಳ ಮಧ್ಯದ ಹಳ್ಳ ಉಕ್ಕಿ ಹರಿದಿದೆ. ಕಲಬುರಗಿಯ ಸಿದ್ದೇಶ್ವರ ನಗರದಲ್ಲಿ ಮನೆ ಕುಸಿದು ಮೂವರು ಗಾಯಗೊಂಡರು.
Recommended Video

ಎಲ್ಲಿ, ಎಷ್ಟು ಮಳೆ?
ಹುಮನಾಬಾದ್ ತಾಲೂಕಿನಲ್ಲಿ ಹೊಲದ ಮಣ್ಣು ನೀರಿನಲ್ಲಿ ಕೊಚ್ಚಿ ಹಳ್ಳಕ್ಕೆ ಹೋಗಿದೆ. ಕಮಲನಗರದ ಡಿಗ್ಗಿಯಲ್ಲಿ 6.6, ಠಾಣಾಕುಸನೂರಲ್ಲಿ 7.6, ಔರಾದ್ನಲ್ಲಿ 7.3, ಜಮಗಿಯಲ್ಲಿ 6.8 ಸೆಂ. ಮೀ. ಮಳೆಯಾಗಿದೆ.












Click it and Unblock the Notifications