ಕುಮಾರಸ್ವಾಮಿ ಅವರೇ ದಯವಿಟ್ಟು ಹತಾಶ ಸ್ವಾಮಿಯಂತೆ ಆಡಬೇಡಿ-ದಿನೇಶ್ ಗುಂಡೂರಾವ್
ಬೆಂಗಳೂರು, ಆಗಸ್ಟ್ 23: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬಳಿಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನವೇ ಸೃಷ್ಟಿಯಾಗಿದೆ. ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಮಾತಿನ ಜಟಾಪಟಿ ಜೋರಾಗಿದ್ದು, ಆರೋಪ ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇದೀಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಆರೋಪಗಳನ್ನು ಮಾಡಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಚಿವರು ಹಂಚಿಕೊಂಡಿದ್ದು, ಕುಮಾರಸ್ವಾಮಿ ಅವರೇ ದಯವಿಟ್ಟು ನೀವು ಹತಾಶ ಸ್ವಾಮಿಯಂತೆ ಆಡಬೇಡಿ ಎಂದು ವ್ಯಂಗ್ಯವಾಡಿದ್ದಾರೆ.

2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಮಾನ್ಯರು ತಾವೇ, ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. 2007ರ ಅಕ್ಟೋಬರ್ 10 ರಂದು ಸಾಯಿ ವೆಂಕಟೇಶ್ವರ ಮಿನರಲ್ಸ್ಗೆ ಸಂಬಂಧಿಸಿದ ಕಡತ ಅಂದಿನ ನಿಮ್ಮ ಕಾರ್ಯದರ್ಶಿ ಡಿ.ವಿ.ಪ್ರಸಾದ್ರವರಿಗೆ ಬರುತ್ತದೆ. ಅಂದೇ ಆ ಕಡತ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿಯ ಅವಗಾಹನೆಗೆ ಹೋಗುತ್ತದೆ.
ಅದ್ಯಾವ ಮಾಯೆಯೋ ಏನೋ ವಾಣಿಜ್ಯ ಇಲಾಖೆಯಿಂದ ಕ್ಲಿಯರೆನ್ಸ್ ಪಡೆದುಕೊಂಡ ಆ ಕಡತ ಅಂದೇ ನಿಮ್ಮ ಸಮಕ್ಷಮಕ್ಕೆ ತಲುಪುತ್ತದೆ. ಆ ಕಡತಕ್ಕೆ ತಾವೇ ಸಹಿ ಹಾಕಿ ನೋಂದಣಿಯೇ ಆಗದ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ 550 ಎಕರೆ ಭೂಮಿ ಕೂಡ ಮಂಜೂರಾಗುತ್ತದೆ. ಆದರೆ 18 ವರ್ಷಗಳ ಬಳಿಕ ಆ ಸಹಿಯೇ ನನ್ನದಲ್ಲ., ನನ್ನ ಸಹಿ ಫೋರ್ಜರಿ ಆಗಿದೆ ಎಂದು ಈಗ ನೀವು ಹೇಳುತ್ತಿರುವುದು ಯಾವ 'ನಕಲಿ ಶಾಮ'ನ ಮುಖವಾಡ ಕುಮಾರಸ್ವಾಮಿಯವರೆ.? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳ ಮುಂದೆ ಸಾವಿರಾರು ಕಡತಗಳು ಬರುತ್ತವೆ, ಅವೆಲ್ಲವನ್ನೂ ಗಮನಿಸಲು ಸಾಧ್ಯವಿಲ್ಲ ಎಂಬ ನಿಮ್ಮ ಹೇಳಿಕೆ ಸಾಂದರ್ಭಿಕ ಸಮರ್ಥನೆಯೂ ಆಗಲು ಯೋಗ್ಯತೆಯಿಲ್ಲ. ಅದು ನಕಲಿ ಶಾಮರೆನಿಸಿಕೊಂಡವರು ಮಾಡುವ ಪಲಾಯನದ ಸಮರ್ಥನೆಯಷ್ಟೆ ಎಂದಿದ್ದಾರೆ.
ಮಾನ್ಯ ಕುಮಾರಸ್ವಾಮಿಯವರೆ, ಮುಖ್ಯಮಂತ್ರಿಗಳಾಗಿದ್ದವರ ಸಹಿಯೇ ಫೋರ್ಜರಿಯಾಗುವುದನ್ನು ಪ್ರಪಂಚದ ಎಂಟನೇ ಅದ್ಭುತ ಎಂದು ಭಾವಿಸಬೇಕೆ.? ಅಥವಾ ನಿಮ್ಮ ಆಡಳಿತದಲ್ಲಿ ನಿಮ್ಮ ಸಹಿಯನ್ನೇ ಫೋರ್ಜರಿ ಮಾಡುವಷ್ಟು ಅರಾಜಕತೆಯ ಆಡಳಿತ ನಿಮ್ಮದಾಗಿತ್ತು ಎಂದು ಭಾವಿಸಬೇಕೆ ಎಂಬುದನ್ನು ದಯವಿಟ್ಟು ಹೇಳಿಬಿಡಿ. ಎಲ್ಲಾದರೂ ಮುಖ್ಯಮಂತ್ರಿಗಳ ಸಹಿ ಫೋರ್ಜರಿ ಆಗಲು ಸಾಧ್ಯವೇ.? ಈಗ ಹೇಳಿ ನಿಮ್ಮನ್ನು 'ನಕಲಿ ಶಾಮ' ಎನ್ನದೆ ಬೇರೇನು ಹೇಳಬೇಕು.? ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.












Click it and Unblock the Notifications