ಕ್ವಾರಂಟೈನ್ ನಿಂದ ಹೊರಬಂದ ಜೆಡಿಎಸ್: ಅಸಲಿ ಆಟ ಶುರು ಎಂದ ಎಚ್ಡಿಕೆ
"ಮುಂದಿನ ಎರಡು ವರ್ಷ ಏನು ನಿಮ್ಮ ಅಧಿಕಾರ ಇರುತ್ತೋ ಆ ವೇಳೆಯಲ್ಲಾದರೂ ಜನರ ಕಷ್ಟಸುಖದ ಕಡೆ ಗಮನ ಕೊಡಿ" ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎರಡು ರಾಷ್ಟ್ರೀಯ ಪಕ್ಷಗಳಿಗೆ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಎಚ್ಡಿಕೆ, "ಜೆಡಿಎಸ್ ಭವಿಷ್ಯ ಮುಗಿಯಿತು ಎಂದು ಹೇಳುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರುಗಳಿಗೆ ನಮ್ಮ ಶಕ್ತಿ ಏನು ಎಂದು ತೋರಿಸುವೆ"ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
"ಇಷ್ಟು ದಿನ ನಾವು ಕ್ವಾರಂಟೈನ್ ನಲ್ಲಿ ಇದ್ದೆವು, ಈಗ ಹೊರ ಬಂದಿದ್ದೇವೆ. ನಮ್ಮ ಅಸಲಿ ಆಟ ಏನು ಎನ್ನುವುದನ್ನು ನಾವು ತೋರಿಸಲಿದ್ದೇವೆ. ನಾನು ಅಸೆಂಬ್ಲಿಗೆ ಹೋಗುವುದನ್ನು ನಿಲ್ಲಿಸಿದ್ದಕ್ಕೆ ನಾನಾ ಕಥೆಗಳನ್ನು ಕಟ್ಟಲಾಯಿತು"ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದ ರೈತಸಂಘದ ಮುಖಂಡರನ್ನು ತಿಂಗಳಿಗೆ ಎರಡೆರಡು ಬಾರಿ ವಿಧಾನಸೌಧಕ್ಕೆ ಕರೆಸಿ, ಗಂಟೆಗಟ್ಟಲೆ ಮಾತುಕತೆ ನಡೆಸಿದ್ದೇನೆ. ನಿಮ್ಮ ಕಷ್ಟುಸುಖ ಏನು ಹೇಳಿ ಎಂದು ಅವರಲ್ಲಿ ಕೇಳಿಕೊಂಡೆ. ಆಗ ಯಾರೂ ಮುಂದೆ ಬಂದಿಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದರು.

ಸಿ.ಎಂ.ಉದಾಸಿಯವರ ನಿಧನದಿಂದ ತೆರವಾಗಿರುವ ಹಾನಗಲ್ ಉಪ ಚುನಾವಣೆ
ಹಾನಗಲ್ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ ವಿಚಾರದ ಬಗ್ಗೆ ಮಾತನಾಡುತ್ತಾ, "ಸೂತಕದ ಮನೆಯಲ್ಲಿ ರಾಜಕೀಯ ಮಾಡಬಾರದೆಂದು ಸುಮ್ಮನಿದ್ದೆವು. ಈಗ ನಮ್ಮ ಆಟ ಶುರುವಾಗಿದೆ. ನಮ್ಮ ಆಟ ಹೇಗಿರುತ್ತದೆ ಎನ್ನುವುದನ್ನು ಒಮ್ಮೆ ನೋಡಿ"ಎಂದು ಎಚ್ಡಿಕೆ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಸವಾಲು ಹಾಕಿದ್ದಾರೆ. ಸಿ.ಎಂ.ಉದಾಸಿಯವರ ನಿಧನದಿಂದ ತೆರವಾಗಿರುವ ಹಾನಗಲ್ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ.

ಬಿಜೆಪಿ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಲೇವಡಿ
"ಜೆಡಿಎಸ್ ಪಕ್ಷ ಕ್ವಾರಂಟೈನ್ ನಲ್ಲಿದೆ ಎಂದು ಬಿಜೆಪಿ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಲೇವಡಿ ಮಾಡಿದ್ದಾರೆ. ಇಲ್ಲಿನ ಸರಕಾರ ಮತ್ತು ಬಿಜೆಪಿ ಮುಖಂಡರಿಂದ ಹಣ ತೆಗೆದುಕೊಂಡು ಹೋಗಲು ಅರುಣ್ ಸಿಂಗ್ ಆವಾಗಾವಾಗ ಬೆಂಗಳೂರಿಗೆ ಬರುತ್ತಿದ್ದಾರೆ. ಅವರ ಜೊತೆ ಸಹವಾಸ ಮಾಡಿದರೆ ನಮಗೂ ರೋಗ ಬಂದೀತು"ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಪೀಠಾಧಿಪತಿಗಳು ಯಡಿಯೂರಪ್ಪನವರೇ ಸಿಎಂ ಆಗಿರಬೇಕೆಂದು ಬೆಂಬಲ
"ಜೆಡಿಎಸ್ ಪಕ್ಷ ಕ್ವಾರಂಟೈನ್ ನಲ್ಲಿತ್ತು, ಈಗ ಅದರಿಂದ ಹೊರಗೆ ಬಂದಿದ್ದೇವೆ. ರಾಜ್ಯದ ಕೆಲವು ಪೀಠಾಧಿಪತಿಗಳು ಯಡಿಯೂರಪ್ಪನವರೇ ಸಿಎಂ ಆಗಿರಬೇಕೆಂದು ಬೆಂಬಲಿಸುತ್ತಿದ್ದಾರೆ. ಬಿಎಸ್ವೈ ಅವರನ್ನೇ ತಲೆಮೇಲೆ ಹೊತ್ತುಕೊಂಡು ಓಡಾಡಿದರೆ ಏನು ಮಾಡಲು ಸಾಧ್ಯ"ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
Recommended Video

ನಮ್ಮನ್ನು ರಾಜಕೀಯವಾಗಿ ಮುಗಿಸಲು ಬಂದವರ ಕಥೆ ಏನಾಯಿತು
"ನಮ್ಮನ್ನು ರಾಜಕೀಯವಾಗಿ ಮುಗಿಸಲು ಬಂದವರ ಕಥೆ ಏನಾಯಿತು ಎನ್ನುವುದನ್ನು ರಾಜ್ಯದ ಜನತೆ ಅರಿತಿದ್ದಾರೆ. ನಾವು ಒಮ್ಮೆ ಬಿಜೆಪಿ, ಇನ್ನೊಮ್ಮೆ ಕಾಂಗ್ರೆಸ್ ಜೊತೆ ಹೋಗಬೇಕಾಯಿತು. ಹಾಗಂತ, ನಮ್ಮ ತತ್ವ ಮತ್ತು ಸಿದ್ದಾಂತಗಳನ್ನು ಗಾಳಿಗೆ ತೂರಲಿಲ್ಲ"ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದ್ದಾರೆ.












Click it and Unblock the Notifications