ಮುಂದಿನ ಲೋಕಸಭಾ ಚುನಾವಣಾ ಫಲಿತಾಂಶ ಮೇಲೆ ಸರ್ಕಾರದ ಭವಿಷ್ಯ : ಹೆಚ್. ಡಿ.ಕುಮಾರಸ್ವಾಮಿ ಹೇಳಿದ್ದೇನು?
ಬೆಂಗಳೂರು, ಮೇ 25: ಮುಂದಿನ ಲೋಕಸಭಾ ಚುನಾವಣಾ ಫಲಿತಾಂಶ ಮೇಲೆ ಸರ್ಕಾರದ ಭವಿಷ್ಯ ನಿಂತಿದೆ. ಮುಂದೆ ಏನಾಗುತ್ತೊ ಅಂತ ನಾನು ಜ್ಯೋತಿಷ್ಯ ಹೇಳುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಜೆಡಿಎಸ್ ಸೋಲಿನ ಆತ್ಮಾವಲೋಕನ ಸಭೆಯ ವೇಳೆ ಮಾತನಾಡಿದ ಅವರು, ನಾನು ಯಾರ ಜೊತೆ ಸೇರಿ ಸರ್ಕಾರ ಮಾಡಲು ನಾನು ಹೀಗೆ ಹೇಳುತ್ತಿಲ್ಲ. ನನ್ನ ಮೇಲೆ ಅನುಮಾನ ಬೇಡ, ಏನು ಆಗುತ್ತೋ ಗೊತ್ತಿಲ್ಲ ಎಂದು ಹೊಸ ಬಾಂಬ್ ಸಿಡಿದಿದ್ದಾರೆ.

ಮೈಮರೆತಿದ್ದು ನಮಗೆ ಹಿನ್ನಡೆಯಾಗೋದಕ್ಕೆ ಕಾರಣವಾಯ್ತು. ಕಾಂಗ್ರೆಸ್ ನಲ್ಲಿ ಬಹುಮತ ಪಡೆದರು, ವಿಶ್ವಾಸದ ಕೊರತೆ ಶುರುವಾಗಿದೆ. ಹೊಸ ಪುನರುಶ್ಚೇತನ ನಿರ್ಮಾಣ ಮಾಡೋದಕ್ಕೆ ಮತ್ತೆ ಜೀವತುಂಬುದಕ್ಕೆ ಯಾವ ರೀತಿ ಕೆಲಸ ಮಾಡಬೇಕೆಂದು ಚಿಂತಿಸಬೇಕಿದೆ. ವೈಯಕ್ತಿಕವಾಗಿ ಚರ್ಚೆ ಬೇಡ. ಮಾದ್ಯಮದವರ ಮುಂದೆ ಮುಕ್ತವಾಗಿ ಚರ್ಚೆಯಾಗಲಿ, ನಾನು ಕಠಿಣವಾಗಿ ಮಾತಡಲ್ಲ ಎಂದು ಹೇಳಿದರು.
ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಂಘಟನೆಯಲ್ಲಿ ಸೊರಗಿದ್ದೇವೆ, ಕೆಲವು ತೀರ್ಮಾನ ಮಾಡೋದಕ್ಕೆ ಆಸ್ಪದ ಕೊಡಲಿಲ್ಲ, ಇಡೀ ವಿಧಾನಸಭಾ ಕ್ಷೇತ್ರಗಳು ನನ್ನ ಹಿಡಿತದಲ್ಲಿ ಇರಬೇಕಂತ ಕೆಲವರು ಹೇಳುತ್ತಿದ್ದರು. ಕಠಿಣವಾದ ನಿರ್ಧಾರ ಮಾಡುವ ಸಮಯ ಬಂದಿದೆ. ಪಕ್ಷದ ಅಭ್ಯರ್ಥಿಗಳನ್ನ ಸಿದ್ದ ಮಾಡಿದ್ದಿರಿ, ಜಿಲ್ಲಾ ಅಧ್ಯಕ್ಷರು ಇವತ್ತು ವಿಮರ್ಶೆ ಮಾಡಬೇಕಿದೆ. ಎಲ್ಲಿ ಎಡವಿದ್ದೇವೆ ಅನ್ನೊದು ಗೊತ್ತಾಗಬೇಕು. ಪ್ರತಿಯೊಂದಕ್ಕೂ ನನ್ನ ಮೇಲೆ ಅವಲಂಬನೆ ಆದರೆ ಹೇಗೆ? ನನ್ನ ನೋವು ನನಗೆ ಗೊತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ಬಳಿ ಹೆಚ್ಚು ಹಣವಿಲ್ಲ ಅಂತಾ ಕೆಲವರು ಮಾತಾಡ್ತಾರೆ. ಸಮಸ್ಯೆ ಆರೋಗ್ಯದ ಸಮಸ್ಯೆ ನಡುವೆ ನನ್ನ ನೋವು ನನಗೆ ಗೊತ್ತಿದೆ, ಇವತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಸಾವಿರ ಕೊಡ್ತಾರೆ. ಬಿಜೆಪಿಯವರು ಮೂರು ಸಾವಿರ ಕೊಡ್ತಾರೆ ಎಂದು ಹೇಳುತ್ತಾರೆ. ಹಣದ ಮೂಲಕ ಚುನಾವಣೆ ನಡೆಸುವುದಕ್ಕೆ ಸಾದ್ಯವಿಲ್ಲ. ಬದಲಾವಣೆ ಮಾಡಬೇಕಾದ್ರೆ ಹಣ ಖರ್ಚು ಮಾಡಬೇಕಿಲ್ಲ. ಜನರನ್ನ ಬದಲಾವಣೆ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ನ 5 ಗ್ಯಾರಂಟಿ ಘೋಷಣೆ ಮಾಡಿದ್ದಾರೆ. 200 ಯುನಿಟ್ ವಿದ್ಯುತ್ ಫ್ರಿಗೆ ಕಂಡೀಷನ್ ಹಾಕ್ತಿದ್ದಾರೆ ಅಂತಾರೆ, ಫ್ರಿ ಬಸ್ ಘೋಷಣೆ ಮಾಡಿದ್ರು ನಿಮ್ಮ ಅತ್ತೆ ಮನೆಗೆ ನಿಮ್ಮ ಮನೆಗೆ ಹೋಗೋಕೆ ಫ್ರಿ ಅಂದ್ರು ಈಗ ವೊಲ್ವೊ ಎಕ್ಸ್ ಪ್ರೆಸ್ ಹೋಗುವಂತಿಲ್ಲ ಅಂತಿದ್ದಾರೆ. ಸ್ವಲ್ಪ ದಿನ ಕಾಯ್ದು ನೊಡೋಣ, ನಿಮ್ಮ ಮನೆ ಮಠ ಹರಾಜಕಾಬೇಕಾಗುತ್ತದೆ ಎಂದು ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ದ ಕಿಡಿಕಾರಿದರು.
ಕಾಂಗ್ರೆಸ್, ಬಿಜೆಪಿ ಪಕ್ಷಗಳು ಹೇರಳವಾಗಿ ಹಣ ವೆಚ್ಚ ಮಾಡಿದವು, ಆಮಿಷಗಳನ್ನು ಒಡ್ಡಿದವು. ಅವುಗಳಿಗೆ ಪೈಪೋಟಿ ಕೊಡಲು ನನ್ನಿಂದ ಸಾಧ್ಯವಾಗಲಿಲ್ಲ. ನಾನು ಅಂತಹ ಕೆಲಸ ಮಾಡಲು ಹೋಗಲಿಲ್ಲ. ವೈಯಕ್ತಿಕ ನೆಲೆಗಟ್ಟಿನಲ್ಲಿ ಯಾರನ್ನೂ ನಾವು ಟೀಕೆ ಮಾಡಲಿಲ್ಲ, ತೇಜೋವಧೆ ಮಾಡಲಿಲ್ಲ, ಅಭಿವೃದ್ಧಿ ವಿಷಯ ಇಟ್ಟುಕೊಂಡು ಹೋದೆವು. ಅದಕ್ಕಾಗಿ ನಾವು ಸೋಲಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿಯಿಂದ ನಲುಗಿದ ಒಂದು ಸಮಾಜದ ಪರವಾಗಿ ನಾವು ದನಿ ಎತ್ತಿದೆವು, ಅಚಲವಾಗಿ ಬೆಂಬಲ ಕೊಟ್ಟೆವು, ಹೆಜ್ಜೆ ಹೆಜ್ಜೆಗೂ ಅವರಿಗೆ ಬಿಜೆಪಿ ಸರಕಾರ ತೊಂದರೆ ಕೊಟ್ಟಾಗ ಧೈರ್ಯವಾಗಿ ನಿಂತೆವು. ಆದರೆ ಅವರು ನಮ್ಮ ಪಕ್ಷದ ಪರವಾಗಿ ನಿಲ್ಲದೆ ಹೋದರು ಎಂದು ಕುಮಾರಸ್ವಾಮಿ ಹೇಳಿದರು.
ಆರ್ಥಿಕ ಸಮಸ್ಯೆಗಳೂ ನಮ್ಮ ಸೋಲಿಗೆ ಕಾರಣ, ಅಭ್ಯರ್ಥಿಗಳ ಖರ್ಚಿಗೆ ನಾವು ಹಣ ಕೊಡಲಿಲ್ಲ. ಬಿಜೆಪಿ ಕಾಂಗ್ರೆಸ್ ಪಕ್ಷಗಳಿಗೆ ಸರಿ ಸಮವಾಗಿ ಖರ್ಚು ಮಾಡಲು ನಮ್ಮಿಂದ ಆಗಲಿಲ್ಲ. ಕೇವಲ 600 ಮತಗಳಲ್ಲಿ ಸೋತ ಕುಮಟಾ ಕ್ಷೇತ್ರದ ಸೂರಜ್ ನಾಯಕ್ ಸೋನಿ ಅವರ ಸೋಲು ನನಗೆ ಅತೀವ ನೋವು ಉಂಟು ಮಾಡಿದೆ.
ಫಲಿತಾಂಶದಿಂದ ಧೃತಿಗೆಡಬೇಕಿಲಿಲ್ಲ. 1989ರಲ್ಲಿ ದೇವೇಗೌಡರು ಎರಡು ಕ್ಷೇತ್ರಗಳಲ್ಲಿ ಸೋತಿದ್ದರು. ಆ ನಂತರ ಐದು ವರ್ಷಗಳಲ್ಲಿ ದೇವೇಗೌಡರ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ರಾಜ್ಯ ಸರಕಾರ ಬಂದು ಅವರು ಮುಖ್ಯಮಂತ್ರಿ ಆಗಿ, ಆ ನಂತರ ಪ್ರಧಾನಿಯೂ ಅದರು. ಇಂಥ ಸೋಲು ಶಾಶ್ವತ ಅಲ್ಲ, ಹಾಗಂತ ಮೈಮರೆಯಬೇಡಿ ಎಂದು ಮುಖಂಡರಿಗೆ ಕುಮಾರಸ್ವಾಮಿ ತಾಕೀತು ಮಾಡಿದರು.












Click it and Unblock the Notifications