ಅಧಿಕಾರಿ ವರ್ಗಾವಣೆ ಗೊಂದಲ: 2013 ಮಾರ್ಗಸೂಚಿ ಮರುಪರಿಶೀಲನೆಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಸೆ.18: ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ಗೊಂದಲಗಳ ಬಗ್ಗೆ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಸರ್ಕಾರದ ವಿರುದ್ಧ ಬೇಸರ ಹೊರಹಾಕಿದೆ. ಅಷ್ಟೇ ಅಲ್ಲದೆ, ಆ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ 2013ರ ವರ್ಗಾವಣೆ ಮಾರ್ಗಸೂಚಿಗಳನ್ನು ಮರುಪರಿಶೀಲಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮೈಸೂರು ತಾಲೂಕಿನ ಬೀರಿಹುಂಡಿ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಿ ಹೊರಡಿಸಿದ್ದ ಆದೇಶ ರದ್ದುಪಡಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಕ್ರಮ ಪ್ರಶ್ನಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್.ಡಿ. ರಾಮದಾಸ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಜಿ.ನರೇಂದರ್ ಹಾಗೂ ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವರ್ಗಾವಣೆ ವಿಚಾರವಾಗಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಕೋರ್ಟ್ ಮೆಟ್ಟಿಲೇರುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದೆಯಲ್ಲದೆ, 2013ರ ವರ್ಗಾವಣೆ ಮಾರ್ಗಸೂಚಿಗಳ ಮರುಪರಿಶೀಲನೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದೆ.
ಮರುಪರಿಶೀಲನೆಗೆ
ಸಕಾಲ:
ನ್ಯಾಯಾಲಯಗಳಲ್ಲಿ
ಸರ್ಕಾರದ
ವಿರುದ್ಧ
ಹೆಚ್ಚು
ವ್ಯಾಜ್ಯಗಳಿದ್ದು,
ಅವುಗಳಲ್ಲಿ
ಬಹುತೇಕ
ಪ್ರಕರಣಗಳು
ನೇಮಕಾತಿ
ಹಾಗೂ
ವರ್ಗಾವಣೆಗೆ
ಸಂಬಂಧಿಸಿದ್ದಾಗಿವೆ.
ಮೊದಲು
ಕೆಎಟಿ
ಹೋಗಿ,
ಅಲ್ಲಿನ
ಆದೇಶಗಳನ್ನು
ಪ್ರಶ್ನಿಸಿ
ಹೈಕೋರ್ಟ್ಗೆ
ಮೇಲ್ಮನವಿ
ಸಲ್ಲಿಕೆಯಾಗುತ್ತವೆ.
ಹೆಚ್ಚಿನ ಪ್ರಮಾಣದಲ್ಲಿ ದಾವೆಗಳು ದಾಖಲಾಗುವುದರಿಂದ ನ್ಯಾಯಾಲಯಗಳಲ್ಲಿ ನ್ಯಾಯದಾನ ವಿಳಂಬಕ್ಕೆ ಕಾರಣವಾಗುತ್ತಿದೆ. ನ್ಯಾಯಮಂಡಳಿ ಹಾಗೂ ಹೈಕೋರ್ಟ್ನ ಅಮೂಲ್ಯ ಸಮಯ ಉಳಿಸುವ ನಿಟ್ಟಿನಲ್ಲಿ ಧನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದ್ದು, ಹಾಗಾಗಿ 2013ರ ವರ್ಗಾವಣೆ ಮಾರ್ಗಸೂಚಿ ಮರುಪರಿಶೀಲಿಸಲು ಇದು ಸಕಾಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೆಎಟಿ ಆದೇಶ ರದ್ದು: ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಗಮನಿಸಿದರೆ, ಇದೊಂದು ಅವಧಿ ಪೂರ್ವ ವರ್ಗಾವಣೆ ಎಂದೆನಿಸಿದರೂ ಮುಖ್ಯಮಂತ್ರಿಗಳ ಪೂರ್ವಾನುಮತಿ ಪಡೆಯಲಾಗಿದೆ. ವರ್ಗಾವಣೆ ಮಾರ್ಗಸೂಚಿಗಳ ಪ್ರಕಾರ ಮುಖ್ಯಮಂತ್ರಿಗಳ ಪೂರ್ವಾನುಮತಿ ಇದ್ದರೆ ಅವಧಿಪೂರ್ವ ವರ್ಗಾವಣೆಗಳನ್ನು ಮಾಡಬಹುದು ಎಂದು ಹೇಳಲಾಗಿದೆ. ಆದ್ದರಿಂದ, ಅರ್ಜಿದಾರರ ವರ್ಗಾವಣೆ ಮಾರ್ಗಸೂಚಿಯ ಪ್ರಕಾರವೇ ನಡೆದಿದೆ ಎಂದಿರುವ ಹೈಕೋರ್ಟ್, ರಾಮದಾಸ್ ಅವರ ವರ್ಗಾವಣೆ ರದ್ದುಪಡಿಸಿ ಕೆಎಟಿ ನೀಡಿದ್ದ ಆದೇಶ ರದ್ದುಗೊಳಿಸಿದೆ.
ವರ್ಗಾವಣೆಗೊಂಡಿರುವ ಇಬ್ಬರೂ ಅಧಿಕಾರಿಗಳ ಹುದ್ದೆಗಳೂ ಒಂದೇ ತಾಲೂಕಿನಲ್ಲಿದ್ದು, ಕೇವಲ 40 ಕಿ.ಮೀ. ಅಂತರವಿದೆ. ಆದ್ದರಿಂದ, ಈ ವರ್ಗಾವಣೆಯಿಂದ ದೊಡ್ಡ ಮಟ್ಟದ ತೊಂದರೆ ಏನೂ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಮೈಸೂರು ತಾಲೂಕಿನ ಬೀರೆಹುಂಡಿ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಳ್ಳೇಗೌಡ ಎಂಬುವರ ಸ್ಥಳಕ್ಕೆ ಅರ್ಜಿದಾರ ಆರ್.ಡಿ. ರಾಮದಾಸ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ಕ್ರಮ ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ್ದ ಕುಳ್ಳೇಗೌಡ, ಗ್ರೂಪ್ ಸಿ ಸಿಬ್ಬಂದಿಯನ್ನು ಕನಿಷ್ಠ 4 ವರ್ಷಗಳ ಕಾಲ ವರ್ಗಾವಣೆ ಮಾಡಬಾರದು ಎಂಬ ನಿಯಮವಿದೆ.
ಆದ್ದರೂ, ತಮ್ಮನ್ನು ಅವಧಿಪೂರ್ವ ವರ್ಗಾವಣೆ ಮಾಡಲಾಗಿದ್ದು, 2013ರ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಆಕ್ಷೇಪಿಸಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ ಕುಳ್ಳೇಗೌಡ ಅವರ ಅರ್ಜಿ ಮಾನ್ಯ ಮಾಡಿ, ರಾಮದಾಸ್ ವರ್ಗಾವಣೆ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ರಾಮದಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.