ಸಕಲೇಶಪುರದಲ್ಲಿ ಬಿಜೆಪಿ vs ಕಾಂಗ್ರೆಸ್ ಬಾಡೂಟದ 'ಪಾರ್ಟಿ ಪಾಲಿಟಿಕ್ಸ್
ಸಕಲೇಶಪುರ, ಜನವರಿ 22: ಕರ್ನಾಟಕದ ಸಮಶೀತೋಷ್ಣ ವಲಯ ಎನಿಸಿಕೊಂಡು ಜೈವಿಕ ವೈವಿಧ್ಯತೆಯುಳ್ಳ ವಿಧಾನಸಭಾ ಕ್ಷೇತ್ರ ಸಕಲೇಶಪುರದಲ್ಲೀಗ ಬಾಡೂಟ, ಪಾರ್ಟಿ ಮೋಜು ಮಸ್ತಿಯ ಪಾಲಿಟಿಕ್ಸ್ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದವರು ಇಲ್ಲಿನ ವಾತಾವರಣ ಹಾಳುಗೆಡವುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆಲೂರು- ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಬಯಸಿರುವ ಅನೇಕ ಮಂದಿ ಕಾಂಗ್ರೆಸ್ಸಿಗರು ನಮ್ಮ ಸುಂದರ ಸಾಮಾಜಿಕ ಪರಿಸರವನ್ನು ಹಾಳುಗೆಡವುತ್ತಿದ್ದಾರೆ. ಬೆಂಗಳೂರು ಮೂಲದ ಅಭ್ಯರ್ಥಿಗಳು ಇಲ್ಲಿಗೆ ಬಂದು ಕ್ಷೇತ್ರದೆಲ್ಲೆಡೆ ಮದ್ಯಪಾನ, ಬಾಡೂಟದ ಪಾರ್ಟಿಗಳನ್ನು ಆಯೋಜಿಸುತ್ತಿದ್ದಾರೆ. ಈ ಪಾರ್ಟಿಗಳಲ್ಲಿ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕುವ ಕಾರ್ಯ ಇದಾಗಿದೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಆರೋಪಿಸಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಡಾ. ನಾರಾಯಣಸ್ವಾಮಿ, ಮಲ್ಲಿಗೆಬಾಳು ದ್ಯಾವಪ್ಪ, ಬಿ.ಸಿ ರಾಜೇಶ್, ಎಂ ಚಂದ್ರು, ಭಾಗ್ಯ ಕಲಿವೀರ್ ಮುಂತಾದವರು ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಜಿಲ್ಲೆಯಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಪರಿಶಿಷ್ಟ ಜಾತಿ ಜನಾಂಗದಲ್ಲಿವರಿದ್ದಾರೆ. ಈ ಕ್ಷೇತ್ರದಲ್ಲಿ ಹುಟ್ಟಿ ಬೆಳೆದ ಜನರ ಆಶೋತ್ತರಗಳನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಇಲ್ಲಿ ಸ್ಪರ್ಧಿಸಲು ಅವಕಾಶ ಸಿಗಬೇಕು. ಎಲ್ಲೋ ನೆಲೆಸಿ, ಯಾವುದೋ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿಕೊಂಡು, ಅಕ್ರಮವಾಗಿ ಇಲ್ಲಿ ಜನ ಸಂಪಾದನೆ ಮಾಡಲು ಬರುವವರಿಗೆ ತಕ್ಕ ಪಾಠ ಕಲಿಸಿ ಎಂದು ಸಾರ್ವಜನಿಕರಲ್ಲಿ ಕೋರಿದರು.
ಡಾ. ಅಂಬೇಡ್ಕರ್ ಅವರ ಕನಸಿನ ಫಲವಾಗಿ ದೊರೆತಿರುವ ಈ ಮೀಸಲು ಕ್ಷೇತ್ರದಲಿ ಮದ್ಯ ಹಾಗೂ ಬಾಡೂಟದ ಮೂಲಕ ಆಮಿಷ ತೋರಿಸಿ, ಪ್ರಜೆಗಳ ಸ್ವಾಭಿಮಾನಕ್ಕೆ ಧಕ್ಕೆ ತರುವವರನ್ನು ಎಂದಿಗೂ ನಿಮ್ಮ ಬಳಿ ಸುಳಿದಂತೆ ನೋಡಿಕೊಳ್ಳಿ ಎಂದು ಆಗ್ರಹಿಸಿದರು.
ಮೀಸಲು ಕ್ಷೇತ್ರವಾಗಿರುವ ಸಕಲೇಶಪುರದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮತಗಳಲ್ಲದೆ ಒಕ್ಕಲಿಗ, ಲಿಂಗಾಯತ ಮತಗಳು ಪ್ರಮುಖ ಪಾತ್ರವಹಿಸಲಿವೆ. ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮತ್ತೊಮ್ಮೆ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಕಳೆದ ಬಾರಿ ಜೆಡಿಎಸ್ ನ ಎಚ್ ಕೆ ಕುಮಾರಸ್ವಾಮಿ ಅವರು 63,602 ಮತಗಳನ್ನು ಪಡೆದು ಕಾಂಗ್ರೆಸ್ಸಿನ ಡಿ ಮಲ್ಲೇಶ್ (57,110) ಅವರನ್ನು ಸೋಲಿಸಿ, ಜಯಭೇರಿ ಬಾರಿಸಿದ್ದರು. ಈ ಬಾರಿ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿಯ ನಿರ್ವಾಣಯ್ಯ ಅವರು ಹೆಚ್ಚಿನ ಪೈಪೋಟಿ ನೀಡುವ ಸಾಧ್ಯತೆಯಿದೆ.












Click it and Unblock the Notifications