ಗುಜರಾತ್ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ?
Recommended Video

ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದಿರುವ ಗುಜರಾತ್ ಅಸೆಂಬ್ಲಿಗೆ ಮೊದಲ ಹಂತದ ಚುನಾವಣೆ ಶನಿವಾರ (ಡಿ 9) ಈಗ ಚಾಲ್ತಿಯಲ್ಲಿದೆ, ಎರಡನೇ ಹಂತದ ಚುನಾವಣೆ ಗುರುವಾರ (ಡಿ 14) ನಡೆಯಲಿದೆ. ಫಲಿತಾಂಶ ಸೋಮವಾರ (ಡಿ 18) ಹೊರಬೀಳಲಿದೆ.
ಗುಜರಾತ್ ಚುನಾವಣಾ ಫಲಿತಾಂಶ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಹೇಗೆ ನಿರ್ಣಾಯಕವೋ, ಹಾಗೇ ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕದಲ್ಲೂ ಈ ಫಲಿತಾಂಶ ಭಾರೀ ರಾಜಕೀಯ ಧೃವೀಕರಣಕ್ಕೆ ಮುನ್ನುಡಿ ಬರೆಯಲಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಕಾಂಗ್ರೆಸ್ಸಿನ ಹಲವು ಮುಖಂಡರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡಾ, ಗುಜರಾತ್ ಚುನಾವಣಾ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವಂತಹ ಬೆಳವಣಿಗೆಗಳು ನಡೆಯಲಿದೆ ಎಂದು ಸೂಚ್ಯವಾಗಿ ಈಗಾಗಲೇ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ನಾವೇ ಜಯಗಳಿಸುವುದು ಎಂದು ಹೇಳುತ್ತಿದ್ದರೂ, ಅಧಿಕಾರ ರಚನೆಗೆ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿಲ್ಲದಿಲ್ಲ ಎನ್ನುವ ರಾಜಕೀಯ ಲೆಕ್ಕಾಚಾರ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ.
ಜೊತೆಗೆ, ಗುಜರಾತ್ ಚುನಾವಣೆಯ ಫಲಿತಾಂಶ ಕರ್ನಾಟಕದ ಮತದಾರರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದು ಮುಂದಿನ ಲೆಕ್ಕಾಚಾರ. ಸದ್ಯಕ್ಕೆ ಮೂರೂ ಪಕ್ಷಗಳು, ಗುಜರಾತ್ ಚುನಾವಣೆಯ ಫಲಿತಾಂಶದ ನಂತರ ಪಕ್ಷಾಂತರದ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಯಾವ ಪಕ್ಷಕ್ಕೆ ಹೆಚ್ಚಿನ ತೊಂದರೆಯಾಗಲಿದೆ, ಮುಂದೆ ಓದಿ...

ಪಕ್ಷಾಂತರದ ಸಮಸ್ಯೆಯನ್ನು ಎದುರಿಸಬೇಕಾಗಬಹುದು
ಗುಜರಾತ್ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಸೋತರೆ, ರಾಜ್ಯ ಘಟಕದಲ್ಲಿ ಪಕ್ಷ ತೀವ್ರ ಪಕ್ಷಾಂತರದ ಸಮಸ್ಯೆಯನ್ನು ಎದುರಿಸಬೇಕಾಗಬಹುದು ಎನ್ನುವುದು ಸದ್ಯ ರಾಜಕೀಯ ಜಗಲಿಯಲ್ಲಿ ನಡೆಯುತ್ತಿರುವ ಚರ್ಚೆ. ಪ್ರಮುಖವಾಗಿ, ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದ ಭಾಗದಲ್ಲಿನ ಪ್ರಭಾವಿ ಬಿಜೆಪಿ ಮುಖಂಡರು, ಗುಜರಾತ್ ಚುನಾವಣೆಯ ಫಲಿತಾಂಶವನ್ನು ಆಧರಿಸಿ, ಪಕ್ಷದಲ್ಲಿರಬೇಕೋ, ಬೇಡವೋ ಎನ್ನುವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಅನ್ನುತ್ತವೆ ಕೆಲವೊಂದು ಮಾಧ್ಯಮಗಳ ವರದಿಗಳು.

ಮೋದಿ ಎನ್ನುವ ಹೆಸರು, ಸ್ವಂತ ನೆಲೆಯಲ್ಲೇ ವರ್ಕೌಟ್ ಆಗಿಲ್ಲ ಎಂದ ಮೇಲೆ?
ಮೋದಿ ಎನ್ನುವ ಹೆಸರು, ಅಮಿತ್ ಶಾ ರಾಜಕೀಯ ಚಾಣಾಕ್ಷತನ, ತಮ್ಮ ಸ್ವಂತ ನೆಲೆಯಲ್ಲೇ ವರ್ಕೌಟ್ ಆಗಿಲ್ಲ ಎಂದ ಮೇಲೆ, ಅವರಿಬ್ಬರ ಪ್ರಭಾವ ಕರ್ನಾಟಕದಲ್ಲಿ ಯಾವುದೇ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎನ್ನುವ ಲೆಕ್ಕಾಚಾರಕ್ಕೆ ಬಂದು, ಹಾಲೀ ಬಿಜೆಪಿ ಧುರೀಣರು, ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗಬಹುದು ಎನ್ನುವ ಮಾತು ಚಾಲ್ತಿಯಲ್ಲಿದೆ.

ಪ್ರಭಾವಿ ಮುಖಂಡರು ಬಿಜೆಪಿಯತ್ತ ನಿಷ್ಠೆ ತೋರಬಹುದು
ಚುನಾವಣಾಪೂರ್ವ ಸಮೀಕ್ಷೆಯ ವರದಿಯಂತೆ ಬಿಜೆಪಿ, ಗುಜರಾತಿನಲ್ಲಿ ಅಧಿಕಾರ ಉಳಿಸಿಕೊಂಡರೆ, ಬಿಜೆಪಿಯಿಂದ ಗುಳೇ ಹೋಗುವವರು ತಮ್ಮ ನಿರ್ಧಾರವನ್ನು ಹಿಂದಕ್ಕೆ ಪಡೆಯಬಹುದು, ಜೊತೆಗೆ, ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಹಲವಾರು ಪ್ರಭಾವಿ ಮುಖಂಡರು ಬಿಜೆಪಿಯತ್ತ ನಿಷ್ಠೆ ತೋರಬಹುದು.

ಬಿಎಸ್ವೈ, ಎಚ್ಡಿಕೆ ಮನೆಬಾಗಿಲು ತಟ್ಟುವವರು ಇರದೇ ಇರುತ್ತಾರಾ?
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿಲ್ಲದಿದ್ದರೂ, ಸಿಎಂ ಸಿದ್ದರಾಮಯ್ಯನವರ ಮೇಲೆ ಮುನಿಸಿಕೊಂಡ ಮೂಲ ಕಾಂಗ್ರೆಸ್ಸಿಗರ ಅಥವಾ ಪಕ್ಷದಿಂದ ಮೂಲೆಗುಂಪಾದ ಮುಖಂಡರ ಲೆಕ್ಕ ಕಮ್ಮಿಯೇನೂ ಇಲ್ಲ. ನೋಡೋಣ ಒಂದು ಚಾನ್ಸ್ ಎಂದು ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರ ಮನೆಬಾಗಿಲು ತಟ್ಟುವವರು ಇರದೇ ಇರುತ್ತಾರಾ? ಯಾಕೆಂದರೆ ಇದು ರಾಜಕೀಯ, ನಿಂತ ನೀರಲ್ಲಾ..

ಗುಜರಾತ್ ಚುನಾವಣೆಯ ಫಲಿತಾಂಶ ಮೂರೂ ಪಕ್ಷಗಳಿಗೂ ಅತ್ಯಂತ ನಿರ್ಣಾಯಕ
ಸದ್ಯದ ರಾಜ್ಯ ರಾಜಕೀಯವನ್ನು ಅವಲೋಕಿಸುವುದಾದರೆ, ಗುಜರಾತ್ ಚುನಾವಣೆಯ ಫಲಿತಾಂಶ ಮೂರೂ ಪಕ್ಷಗಳಿಗೂ ಅತ್ಯಂತ ನಿರ್ಣಾಯಕ. ಅದರಲ್ಲಿ ಪ್ರಮುಖವಾಗಿ ಇದರ ಲಾಭ, ನಷ್ಟ ಬಿಜೆಪಿಗೆ, ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ಸಿಗೆ. ಪಕ್ಷಗಳ ಲೆಕ್ಕಾಚಾರ ಇದ್ದದ್ದೇ, ಗುಜರಾತಿಗರು ಮತದಾನ ಎನ್ನುವ ತಮ್ಮ ಹಕ್ಕನ್ನು ಚಲಾಯಿಸಿ, ತಮಗೆ ಸೂಕ್ತ ಎನಿಸಿದ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಎನ್ನುವುದು ಎಲ್ಲರ ಆಶಯ.












Click it and Unblock the Notifications