ಬೆಂಗಳೂರು ಬಿಟ್ಟು ಇತರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ
ಬೆಂಗಳೂರು ಆಗಸ್ಟ 05: ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದೆ. ಆದರೆ ಬೆಂಗಳೂರಿನಲ್ಲಿ ಅಂರ್ಜಲ ಮಟ್ಟ ಕುಸಿತ ಕಂಡಿದೆ ಎಂದು ಸಣ್ಣ ನೀರಾವರಿ ಇಲಾಖೆಯಡಿಯಲ್ಲಿನ ಕರ್ನಾಟಕ ಅಂತರ್ಜಲ ಪ್ರಾಧಿಕಾರ (ಕೆಜಿಎ) ನಡೆಸಿದ ಮೌಲ್ಯಮಾಪನ ವರದಿ ತಿಳಿಸಿದೆ.
ಬೆಂಗಳೂರಿನಲ್ಲಿ ಪ್ರತಿ ಮಳೆಯಲ್ಲೂ ಇಷ್ಟೊಂದು ಪ್ರವಾಹ ಸಮಸ್ಯೆ ಉಂಟಾಗುತ್ತಿದ್ದರು ಅಂತರ್ಜಲ ಮರುಪೂರಣ ಸಾಧ್ಯವಾಗಿಲ್ಲ. ಬದಲಾಗಿ ಬೆಂಗಳೂರಿನ ಹಲವು ಕಡೆಗಳಲ್ಲಿ 800ರಿಂದ 900 ಅಡಿ ಆಳದಲ್ಲಿದ್ದ ಅಂತರ್ಜಲ ಪ್ರಮಾಣ ಈಗ ಮತ್ತಷ್ಟು 75ರಿಂದ 100 ಅಡಿಗಳಷ್ಟು ಆಳಕ್ಕೆ ಕುಸಿದಿದೆ ಎಂದು ಎಂದು ಕೆಜಿಎ ಅಧಿಕಾರಿಗಳು ತಿಳಿಸಿದ್ದಾರೆ.
ಬಂಡೀಪುರದಲ್ಲಿ ನೈಸರ್ಗಿಕ ಡ್ಯಾಂನಿಂದ ಅಂತರ್ಜಲ ವೃದ್ಧಿ!
ಸಣ್ಣ ನೀರಾವರಿ ಇಲಾಖೆಯಡಿ ಕರ್ನಾಟಕ ಅಂತರ್ಜಲ ಪ್ರಾಧಿಕಾರವು (ಕೆಜಿಎ) 2021ರಲ್ಲಿ ಅಂತರ್ಜಲ ಮಟ್ಟ ಕುರಿತು ಮೌಲ್ಯಮಾಪನ ಮಾಡಿತ್ತು. ಅದರ ಪ್ರಕಾರ ಕರ್ನಾಟಕದಾದ್ಯಂತ 2ರಿಂದ 4 ಮೀಟರ್ ನಷ್ಟು ಅಂತರ್ಜಲ ಮಟ್ಟ ಗಣನೀಯವಾಗಿ ಸುಧಾರಿಸಿದ್ದು ಕಂಡು ಬಂದಿದೆ.
1,200 ಹೆಚ್ಚಿನ ಪಾಯಿಂಟ್ಗಳಲ್ಲಿ ಮೌಲ್ಯಮಾಪನ
ಕರ್ನಾಟಕ ತುಂಬೆಲ್ಲ ಅಂತರ್ಜದ ಮಟ್ಟ ಸ್ಥಿತಿಯನ್ನು ಮೌಲ್ಯಮಾಪನಕ್ಕಾಗಿ ಅಧಿಕಾರಿಗಳು 1,200 ಹೆಚ್ಚಿನ ಪಾಯಿಂಟ್ಗಳಲ್ಲಿ ನೀರಿನ ಮಟ್ಟ ಅಳೆದಿದ್ದಾರೆ. ಭೌಗೋಳಿಕ ಭೂ ಪ್ರದೇಶದ ಅನ್ವಯವಾಗಿ, ಎಲ್ಲ ತಾಲೂಕು ಕೇಂದ್ರಗಳಲ್ಲಿ ಇರುವ ಬೋರ್ವೆಲ್ ಪಾಯಿಂಟ್ ಆಧರಿಸಿ ಅಧಿಕಾರಿಗಳು ನಿಯತಕಾಲಿಕವಾಗಿ ನೀರಿನ ಮಟ್ಟ ಮೇಲ್ವಿಚಾರಣೆ ಮಾಡಿದ್ದಾರೆ ಎಂದು ಕೆಜಿಎ ಹಿರಿಯ ವೈಜ್ಞಾನಿಕ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬೆಂಗಳೂರು ಸೇರಿ ಕೆಲವೆಡೆ ಮಾತ್ರ ಅಂತರ್ಜಲ ಕುಸಿತ
ಕರ್ನಾಟಕ ಅಂತರ್ಜಲ ಪ್ರಾಧಿಕಾರದ (ಕೆಜಿಎ) ವರದಿಯ ಪ್ರಕಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಇತರ ಜಿಲ್ಲೆಗಳ ಪ್ರತ್ಯೇಕ ಕಡೆಗಳಲ್ಲಿ 2 ಮೀಟರ್ಗಿಂತಲೂ ಕಡಿಮೆ ಪ್ರಮಾಣದಲ್ಲಿ ಅಂತರ್ಜಲ ಕುಸಿದಿರುವುದು ಗೊತ್ತಾಗಿದೆ. ಅದೇ ರೀತಿ ಮೈಸೂರು, ಶಿವಮೊಗ್ಗ ಸೇರಿದಂತೆ ಬೆಂಗಳೂರಿನ ಹಲವು ಭಾಗಗಳಲ್ಲಿ ನಾಲ್ಕುಮೀಟರ್ಗಿಂತಲೂ ಹೆಚ್ಚು ಅಂತರ್ಜಲ ಕುಸಿದಿರುವುದು ಮೌಲ್ಯಮಾಪನದಿಂದ ಬಹಿರಂಗವಾಗಿದೆ. ಉಳಿದಂತೆ ಎಲ್ಲೆಡೆ ಅಂತರ್ಜಲ ಮಟ್ಟ ಸುಧಾರಿಸಿದೆ ಎಂದರು.
ಅಂತರ್ಜಲ ವೃದ್ಧಿ ಕೆರೆ ಮರುಪೂರಣ ಯೋಜನೆ ಸಹಕಾರಿ
ರಾಜ್ಯ ಸರ್ಕಾರ ಕೆಸಿ ವ್ಯಾಲಿ ಯೋಜನೆಯಡಿ ನದಿ ನೀರನ್ನು ಟ್ಯಾಂಕ್ರ್ಗಳ ಮೂಲಕ ಕೆರೆಗಳಿಗೆ ತುಂಬಿಸುವ ಕ್ರಮ ಕೈಗೊಂಡ ಪರಿಣಾಮ, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳಲ್ಲಿ ಅಧಿಕ ನೀರಿನ ಸಂಗ್ರಹವಾಗಿದೆ. ವ್ಯರ್ಥವಾಗಿ ಹರಿದು ಹೋಗುವ ನೀರು ಕೆರೆಯಲ್ಲಿ ಶೇಖರಣೆ ಆಗುವುದರಿಂದ ಈ ಭಾಗದಲ್ಲಿನ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ
ಕರೆ ತುಂಬಿಸುವ ಸರ್ಕಾರದ ನಿರ್ಧಾರದಿಂದ ನೀರಿನ ಸಂಗ್ರಹಕ್ಕೆ ಉತ್ತೇಜನ ದೊರೆತಂತಾಗಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಕೆರೆಗಳು ಹೂಳು ತೆಗೆದಿದ್ದರೂ, ಅಲ್ಲಿ ನೀರಿನ ಸಂಗ್ರಹಿಸಲು ಕರೆ ಮರುಪೂರಣ ಯೋಜನೆ ಸಹಕಾರಿಯಾಗಲಿದೆ. ಆದರೆ ಈ ಕೆಲಗಳು ಬೆಂಗಳೂರಿನಲ್ಲಿ ಕಂಡು ಬಾರದಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಕೆಜಿಎ ಮತ್ತೊಬ್ಬ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಲ್ಲಿ ಅಂತರ್ಜಲ ಮರುಪೂರಣ ಆಗುತ್ತಿಲ್ಲ
ವಾಸ್ತವದಲ್ಲಿ ಬೆಂಗಳೂರು ನೋಡುವುದಾದರೆ ನಗರಾದ್ಯಂತ ನೀರು ಇಂಗಲು ಎಲ್ಲಿಯೂ ಸೂಕ್ತ ಸ್ಥಳವಿಲ್ಲ. ಕಾಂಕ್ರೀಟಿಕರಣವು ಸಹ ಬೆಂಗಳೂರಿನಲ್ಲಿ ಅಂತರ್ಜಲ ವೃದ್ಧಿಗೆ ಅಡ್ಡಿಯಾಗಿದೆ. ಅಲ್ಲದೇ ನಗರದಲ್ಲಿ ನೀರಿನ ಹೊರತೆಗೆಯುವಿಕೆ ಪ್ರಮಾಣವು ಹೆಚ್ಚಿದೆ ಎನ್ನಲಾಗಿದೆ. ಒಂದು ನೀರಿನ ಬಳಕೆಯು ಹೆಚ್ಚಾಗಿದ್ದರೆ, ಮತ್ತೊಂದು ಕಡೆ ಅಂತರ್ಜಲ ವೃದ್ಧಿ ಆಗುತ್ತಿಲ್ಲ ಜತೆಗೆ ಮರುಪೂರಣ ಕಾರ್ಯಗಳು ಆಗುತ್ತಿಲ್ಲ. ಇದು ಭವಿಷ್ಯ ನೀರಿನ ಮೂಲ, ನೀರಿನ ಬಳಕೆಯ ಮೇಲೆ ಪರಿಣಾಮ ಬೀರಲಿದೆ.
ಕರ್ನಾಕಟದ ಹಲವು ಜಿಲ್ಲೆಗಳಲ್ಲಿ ಬಿದ್ದ ಮಳೆ ನೀರು ಎಲ್ಲ ಹರಿವು ಹೋಗದೇ ಸಾಕಷ್ಟು ಪ್ರಮಾಣದಲ್ಲಿ ಇಂಗುತ್ತದೆ. ಕೆರೆ ತುಂಬಿಸುವ ಯೋಜನೆಗಳು ನಡೆದಿವೆ. ಇದರ ಅರ್ಧದಷ್ಟು ಸಹ ಬೆಂಗಳೂರಿನಲ್ಲಿ ಅಂತರ್ಜಲ ವೃದ್ಧಿ, ನೀರಿನ ಹರಿವು ತಡೆಗಟ್ಟುವ ಪ್ರಯತ್ನಗಳು ಆಗುತ್ತಿಲ್ಲ. ನಗರಾದ್ಯಂತ ಭೂಮಿಯನ್ನು ಕಾಂಕ್ರೀಟಿಕರಣಗೊಳಿಸುವ ಕೆಲಸ ದಿನನಿತ್ಯ ನಡೆದಿದೆ. ಇದರಿಂದ ಮುಂದೆ ಅಂತರ್ಜಲ ಸಮಸ್ಯೆ ಎದುರಾಗುವ ಸಂಭವವಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
Recommended Video