Get Updates
Get notified of breaking news, exclusive insights, and must-see stories!

ಕರ್ನಾಟಕ ಭೂ ಕಂದಾಯ 2025 ವಿಧೇಯಕಕ್ಕೆ ತಿದ್ದುಪಡಿ: ಈ ಭಾಗದ ಆಸ್ತಿದಾರರಿಗೆ ಗುಡ್‌ನ್ಯೂಸ್

ರಾಜ್ಯ ಕಾಂಗ್ರೆಸ್ ಸರ್ಕಾರವು ಭೂ ಕಂದಾಯ ವಿಚಾರದಲ್ಲಿ ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) 2025 ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಈ ನಿರ್ಧಾರದಿಂದ ರಾಜ್ಯದ ಕೆಲವು ಭಾಗದ ಆಸ್ತಿದಾರರಿಗೆ ಲಾಭವಾಗಲಿದೆ ಎಂದು ಹೇಳಲಾಗಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರವು ಆಸ್ತಿ ವಿಚಾರದಲ್ಲಿ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಭೂ ಕಂದಾಯ ವಿಚಾರದಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇನ್ನು ಈ ವಿಧೇಯಕದ ಬಗ್ಗೆ ಮಾತನಾಡಿರುವ ಸಚಿವ ಕೃಷ್ಣ ಬೈರೇಗೌಡ ಅವರು, ಈ ವಿಧೇಯಕ ಈ ಹಿಂದೆಯೂ ಸದನದಲ್ಲಿ ಮಂಡನೆಯಾಗಿತ್ತು. ಆ ಸಂದರ್ಭದಲ್ಲಿ ಸದನದ ಸಲಹೆಯಂತೆ ಈ ವಿಧೇಯಕವನ್ನು ಪರಿಶೀಲನಾ ಸಭೆಗೆ ಸಲ್ಲಿಸಿ ಸಮಿತಿಯಲ್ಲಿ ಎಲ್ಲ ಪಕ್ಷದ ಸದಸ್ಯರೂ ಸಮಾಲೋಚಿಸಿ ಹಲವು ಪ್ರಮುಖ ಸಭೆಗಳನ್ನು ನಡೆಸಿದ್ದು, ಎಲ್ಲರ ಸಹಮತದೊಂದಿಗೆ ಈ ನೂತನ ತಿದ್ದುಪಡಿ ಮಾಡಿ ಮತ್ತೊಮ್ಮೆ ವಿಧೇಯಕವನ್ನು ಸದನದ ಅನುಮೋದನೆಗೆ ಮಂಡಿಸಲಾಗಿದೆ ಎಂದು ಹೇಳಿದ್ದಾರೆ.

Good News for Property Owners Karnataka Amends Land Revenue Bill 2025

ಸಮಿತಿಯಲ್ಲಿ ಸಾಕಷ್ಟು ಚರ್ಚೆ ನಡೆಸಲಾಗಿದ್ದು, ಕೊಡಗು ಜಿಲ್ಲೆಯಲ್ಲಿ ಇದು ಪ್ರಮುಖವಾದ ವಿಚಾರವಾಗಿದೆ. ಈ ತಿದ್ದುಪಡಿ ವಿಧೇಯದ ಉದ್ದೇಶ ಭಾಗದಲ್ಲಿ ಈ ತಿದ್ದುಪಡಿ ಏಕೆ, ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸಾರ್ವಜನಿಕರ ಚರ್ಚೆ ಅಭಿಪ್ರಾಯವೂ ಮುಖ್ಯ ಎಂಬ ಕಾರಣಕ್ಕೆ ಈ ತಿದ್ದುಪಡಿಯನ್ನು ಕೊಡಗು ಜಿಲ್ಲೆಯಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿ, ಅಲ್ಲಿನ ಜನರ ಅಭಿಪ್ರಾಯವನ್ನು ಜಿಲ್ಲಾಧಿಕಾರಿಗಳ ಮೂಲಕ ಸಂಗ್ರಹಿಸಿ ತಿದ್ದುಪಡಿ ತರಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಸ್ವತಂತ್ರ್ಯಪೂರ್ವ ಕಾಲದ ಮಹಾರಾಜರ ಆಡಳಿತ ಕಾಲದಲ್ಲಿ ಅವರದ್ದೇ ಆದ ಕಂದಾಯ ಕಾನೂನುಗಳಿದ್ದವು. ಕರ್ನಾಟಕ ರಾಜ್ಯದಲ್ಲಿ 1964ರಲ್ಲಿ ನಾವು ಕರ್ನಾಟಕ ಭೂ ಕಂದಾಯ ಕಾನೂನನ್ನು ಜಾರಿಗೆ ತಂದ ರಾಜ್ಯಾದ್ಯಂತ ಏಕರೂಪ ಕಾನೂನು ರೂಪಿಸಿದ್ದೆವು. ಆದರೆ, ಆ ಕಾನೂನಿಗೆ ತದ್ವಿರುದ್ಧವಾಗಿ ಕೊಡಗಿನಲ್ಲಿ ಈ ಹಿಂದೆ ಇದ್ದಂತಹ ಪದ್ಧತಿಯ ಪ್ರಕಾರವೇ ದಾಖಲೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ. 2000ನೇ ಇಸವಿಯ ವರೆಗೂ ಇದೇ ಪದ್ಧತಿ ಮುಂದುವರಿದಿದೆ. ಆದರೆ, ಇದೇ ವರ್ಷ ಭೂಮಿ ಯೋಜನೆ ಜಾರಿಯಾಗಿ ಪಹಣಿಯನ್ನು ಕಡ್ಡಾಯವಾಗಿ ಗಣಕೀಕರಣ ಮಾಡಲು ಮುಂದಾದಾಗ ಅನಿರ್ವಾಯವಾಗಿ ಈ ಹಳೆ ಪದ್ಧತಿ ಸ್ಥಗಿತಗೊಂಡಿತು ಎಂದು ಕೃಷ್ಣ ಬೈರೇಗೌಡ ಅವರು ವಿವರಿಸಿದ್ದಾರೆ.

ಕೊಡಗಿನಲ್ಲಿ ಇಲ್ಲಿಯ ವರೆಗೆ ಅನುಸರಿಸಲಾಗುತ್ತಿದ್ದ ಪದ್ಧತಿಗೂ ನಮ್ಮ ಪಹಣಿ ವ್ಯವಸ್ಥೆಗೂ ಎರಡಕ್ಕೂ ಹೊಂದಾಣಿಕೆಯೇ ಆಗುತ್ತಿರಲಿಲ್ಲ. ಕೊಡಗಿನಲ್ಲಿ ಈ ಹಿಂದಿನಿಂದಲೂ ಪಹಣಿಯಲ್ಲಿ ಪಟೇದಾರ್ ಎಂಬ ಕಾಲಂ ಇತ್ತು. ಆದರೆ, ಕರ್ನಾಟಕ ಭೂ ಕಂದಾಯ ಕಾನೂನಿನಲ್ಲಿ ಪಟೇದಾರ್ಗಳ ಬಗ್ಗೆ ಉಲ್ಲೇಖವೇ ಇಲ್ಲ. ಅದಕ್ಕೆ ಅವಕಾಶವೂ ಇಲ್ಲ. 2000ನೇ ಇಸವಿಯಲ್ಲಿ ಅಂದಿನ ಸರ್ಕಾರ ಈ ಬಗೆಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಸಮಸ್ಯೆಯನ್ನು ಬಗೆಹರಿಸಬೇಕಿತ್ತು. ಆದರೆ, ಅಂದಿನ ಜಿಲ್ಲಾಧಿಕಾರಿಗಳು ಈ ಬಗ್ಗೆ ಕಾನೂನಿನ ಅಡಿಯಲ್ಲಿ ಚರ್ಚಿಸದೆ ತಮ್ಮ ಹಂತದಲ್ಲಿ ಒಂದು ಆದೇಶ ಹೊರಡಿಸಿ ಪಟೇದಾರ್ ಗಳನ್ನು ಕಾಲಂ 9ರಲ್ಲಿ ನಮೂದಿಸಲು ಸೂಚಿಸಿದ್ದಾರೆ. ಇದರ ಪರಿಣಾಮ ನಿಜವಾದ ಮಾಲೀಕರಲ್ಲದವರೂ ಕೂಡ ಪಟೇದಾರ್ ಎಂಬ ಏಕೈಕ ಕಾರಣಕ್ಕೆ ಅವರ ಹೆಸರು ಕಾಲಂ 9 ರಲ್ಲಿ ನಮೂದಾಗಲು ಆರಂಭವಾಯಿತು ಎಂದು ವಿವರಿಸಿದ್ದಾರೆ.

ಜಮೀನು ಯಾರಿಗೋ ಸೇರಿದ್ದರೂ ಸಹ ಪಹಣಿಯಲ್ಲಿ ಪಟೇದಾರರ ಹೆಸರಿದೆ. ಇದರಿಂದ ಹಲವು ವ್ಯಾಜ್ಯಗಳು ಹುಟ್ಟಿಕೊಳ್ಳುತ್ತಿವೆ. ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಭೂ ಹಕ್ಕು ವರ್ಗಾವಣೆ ಮಾಡುವುದು ದುಸ್ಸಾಧ್ಯವಾಗುತ್ತಿದೆ. ಅಲ್ಲದೆ, ಪಟೇದಾರರ ಸಹಮತಿ ಇಲ್ಲದೆ, ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡುವುದೂ ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳು ಅರ್ಧ ಭಾಗದಷ್ಟು ಕೊಡಗಿನಲ್ಲಿ ಇನ್ನೂ ಹಾಗೆ ಉಳಿದಿವೆ. 2012-13ರಲ್ಲಿ ಒಂದು ತಿದ್ದುಪಡಿ ಆಗಿದೆ. ಪರಿಣಾಮ ಈ ಸಮಸ್ಯೆಗೆ ಅಲ್ಪ ಪರಿಹಾರ ಲಭಿಸಿದೆ. ಆದರೆ, ತಳಮಟ್ಟದಲ್ಲಿ ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಕಳೆದ ಎರಡು ವರ್ಷದಿಂದ ಸತತವಾಗಿ ಸಮಾಲೋಚನೆ ಮಾಡಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂಬ ಕಾರಣದಿಂದಾಗಿ ಈ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತರಲಾಗಿದೆ ಎಂದು ಕೃಷ್ಣ ಬೈರೇಗೌಡ ಅವರು ವಿವರಣೆ ನೀಡಿದ್ದಾರೆ.

ಈ ವಿಧೇಯಕದ ಆಧಾರದಲ್ಲಿ ಕೊಡಗು ಜಿಲ್ಲೆಯಲ್ಲಿ ಅದಾಲತ್ ಮಾದರಿಯಲ್ಲಿ ಕಾರ್ಯಕ್ರಮ ರೂಪಿಸಿ ರೈತರು, ಭೂ ಮಾಲೀಕರು ಹಾಗೂ ಪಟೇದಾರ್ಗಳ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು. 1964 ಹಾಗೂ 2000ನೇ ಇಸವಿಯಲ್ಲಿ ಸರ್ಕಾರದಿಂದ ಕೊಡಗಿನ ಜನರಿಗೆ ಆಗಿರುವ ತೊಂದರೆಗೆ ಈ ವಿಧೇಯಕದ ಮೂಲಕ ಪರಿಹಾರ ನೀಡಲಾಗುವುದು. ಈ ವಿಧೇಯಕ ಕೊಡಗಿನ ಜನರ ಬೇಡಿಕೆಯಾಗಿದ್ದು, ನ್ಯಾಯಾಲಯಗಳೂ ಸಹ ಈ ಬಗ್ಗೆ ನಿರ್ದೇಶನ ನೀಡಿವೆ. ಈ ಎಲ್ಲಾ ವಿಚಾರದ ಬಗ್ಗೆ ಸಮಿತಿಯಲ್ಲಿ ಕೂಲಂಕುಷವಾಗಿ ಚರ್ಚಿಸಿ ಪರಿಹಾರ ನೀಡುವ ಉದ್ದೇಶದಿಂದ ನೂತನ ತಿದ್ದುಪಡಿಯನ್ನು ತರಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+