Gold: ಗದಗ - ಲಕ್ಕುಂಡಿ ಚಿನ್ನದ ನಿಧಿ ಪ್ರಕರಣಕ್ಕೆ ರೋಚಕ ತಿರುವು: 664 ಗ್ರಾಂ ಚಿನ್ನದ ಮೌಲ್ಯಕ್ಕೆ ಟ್ವಿಸ್ಟ್, ಹೊಸ ವಿಷಯ ರಿವೀಲ್
Gold: ಕರ್ನಾಟಕದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದ್ದ ಗದಗ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಹೊಸ ತಿರುವು ಸಿಕ್ಕಿದೆ. ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಟ್ವಿಸ್ಟ್ ಅನ್ನು ಇದೀಗ ಕರ್ನಾಟಕ ಸರ್ಕಾರವೇ ಕೊಟ್ಟಿದೆ. ಪ್ರಜ್ವಲ್ ರಿತ್ತಿ ಕುಟುಂಬವು ನಿಧಿ ನೀಡಿ ಪ್ರಮಾಣಿಕತೆ ಮೆರೆದಿತ್ತು. ಈ ಬೆಳವಣಿಗೆಯು ಸರ್ಕಾರ ಹಾಗೂ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಈ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಅಗೆಯುವ ಸಂದರ್ಭದಲ್ಲಿ ರಿತ್ತಿ ಕುಟುಂಬಕ್ಕೆ ಚಿನ್ನದ ನಿಧಿ ಸಿಕ್ಕಿತ್ತು. ನಿಧಿ ಸಿಕ್ಕ ಕೂಡಲೇ ಹಿಂದೆಮುಂದೆ ನೋಡದೆಯೇ ಈ ಕುಟುಂಬವು ಪೂರ್ಣ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಮಾಣಿಕತೆ ಮೆರೆದಿತ್ತು. ಐತಿಹಾಸಿಕ ಪ್ರಸಿದ್ಧ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕಿತ್ತು. ಇದಾದ ನಂತರ ನಡೆದ ಉತ್ಖನನ ಕಾರ್ಯದಲ್ಲೂ ಹಲವು ವಿಶೇಷ ವಸ್ತುಗಳು ಪತ್ತೆಯಾಗಿದ್ದವು. ಈ ಭಾಗದಲ್ಲಿ ಒಟ್ಟು 664 ಗ್ರಾಂ ತೂಕದ ಅಪರೂಪದ ಹಳೆಯ ಚಿನ್ನಾಭರಣಗಳ ನಿಧಿ ಸಿಕ್ಕಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರವು ಮಹತ್ವದ ವಿಷಯವನ್ನು ರಿವೀಲ್ ಮಾಡಿದೆ.
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಚಿನ್ನದ ನಿಧಿಯ ಅಂದಾಜು ಮೌಲ್ಯವೇ ಬರೋಬ್ಬರಿ 8 ಕೋಟಿ ರೂಪಾಯಿ ಇದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು ಹೇಳಿದ್ದಾರೆ. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಮಟ್ಟದ ಸಮಿತಿ ಸಭೆಯ ನಂತರ ಅವರು ಮಾತನಾಡಿದ್ದಾರೆ. ಗದಗ ಜಿಲ್ಲೆಯಲ್ಲಿ ಪತ್ತೆಯಾಗಿರುವ ಆಭರಣಗಳು 600 ವರ್ಷಗಳಷ್ಟು ಹಳೆಯದಾಗಿವೆ. ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಆಂಟಿಕ್ (ಪ್ರಾಚೀನ) ಒಡವೆಗಳಾಗಿವೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಇದಕ್ಕೆ ಬೃಹತ್ ಮೌಲ್ಯವಿದೆ ಎಂದು ಹೇಳಿದ್ದಾರೆ.

Gold: ಪುರಾತತ್ವ ಇಲಾಖೆಯಿಂದ ಪರಿಶೀಲನೆ
ಇನ್ನು ಈ ಭಾಗದಲ್ಲಿ ಸಿಕ್ಕಿರುವ ಚಿನ್ನದ ನೈಜ ಮೌಲ್ಯವನ್ನು ವೈಜ್ಞಾನಿಕವಾಗಿ ತಿಳಿಯುವ ಉದ್ದೇಶದಿಂದ ಪುರಾತತ್ವ ಇಲಾಖೆಯ ಆಯುಕ್ತರು ತಜ್ಞರ ವಿಶೇಷ ಸಮಿತಿಯೊಂದನ್ನು ರಚಿಸಲಾಗಿತ್ತು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಸಮಿತಿಯಲ್ಲಿ ಪ್ರಮುಖ ಇತಿಹಾಸಕಾರರು ಹಾಗೂ ತಜ್ಞರು ಭಾಗವಹಿಸಿ, ಆಭರಣಗಳ ಐತಿಹಾಸಿಕ ಹಿನ್ನೆಲೆಯನ್ನು ಪರಿಶೀಲಿಸಿ ಈ ವರದಿಯನ್ನು ನೀಡಿದ್ದಾರೆ ಎಂದು ಸಚಿವ ಎಚ್.ಕೆ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
ಮೂರು ಸಾವಿರ ಪ್ರಾಚ್ಯಾವಶೇಷ ಪತ್ತೆ
ಗದಗ ಜಿಲ್ಲೆಯ ಲಕ್ಕುಂಡಿ ಭಾಗದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ ಮೂರು ಸಾವಿರ ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸಲಾಗಿದೆ. 16 ಲಕ್ಕುಂಡಿಯ ದೇವಾಲಯಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಲಾಗಿದ್ದು, ಇಲ್ಲಿ ಚಾಲುಕ್ಯರ ಕಾಲದ ಹೊಯ್ಸಳ ವಿಜಯನಗರ ಶೈಲಿಯ ಪ್ರಾಚೀನ ದೇವಾಲಯಗಳ ಶಿಲ್ಪಕಲಾ ನೈಪುಣ್ಯವನ್ನು ತೋರಿಸುತ್ತವೆ. ಇದು ಸಾವಿರ ವರ್ಷಗಳ ಹಿಂದೆಯೇ ಉಚ್ಛಾಯ ಸ್ಥಿತಿಯಲ್ಲಿದ್ದ ಪ್ರಮುಖ ನಗರವಾಗಿತ್ತು. ಲಕ್ಕುಂಡಿ ಗ್ರಾಮದುದ್ದಕ್ಕೂ 50ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳು ಹಾಗೂ ಬಾವಿಗಳು ಇವೆ. ಚಾಲುಕ್ಯರು, ಕಲಚೂರಿಗಳು, ದೇವಗಿರಿಯ ಯಾದವರು, ಸೇವಣರು ಹಾಗೂ ಹೊಯ್ಸಳರ ಆಳ್ವಿಕೆಯಲ್ಲಿ ನಿರ್ಮಿಸಲಾದ ಅನೇಕ ಶಾಸನಗಳು ಇಲ್ಲಿ ಸಿಕ್ಕಿವೆ ಎಂದು ಸಚಿವ ಎಚ್.ಕೆ ಪಾಟೀಲ್ ಅವರು ಹೇಳಿದ್ದಾರೆ.
ಇನ್ನಷ್ಟು ಚಿನ್ನಾಭರಣ - ನಿಧಿ ನಿರೀಕ್ಷೆ ಉತ್ಖನನ ಕಾರ್ಯಕ್ಕೆ ಶೀಘ್ರ ಚಾಲನೆ
ಈ ಜಿಲ್ಲೆಯಲ್ಲಿ ಈಗಾಗಲೇ 600 ವರ್ಷಗಳಷ್ಟು ಹಳೆಯ ಚಿನ್ನಾಭರಣ ಸಿಕ್ಕಿದೆ. ಮುಂದುವರಿದು ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಇಲ್ಲಿಯ ವರೆಗೆ 32 ದೇವರ ಗುಡಿಗಳು ಮತ್ತು 36 ಬಾವಿಗಳನ್ನು ಪತ್ತೆ ಮಾಡಲಾಗಿದೆ. ಮುಂದುವರಿದು 68 ಗುಡಿಗಳು, 64 ಬಾವಿಗಳನ್ನು ಉತ್ಖನನ ಮಾಡಬೇಕಿದೆ. ಈ ಉತ್ಖನನ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು. ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಉತ್ಖನನ ಕಾರ್ಯ ಪೂರ್ಣಗೊಳಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಕ್ಕುಂಡಿಯನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸುವುದಕ್ಕೆ ಸಂಬಂಧಿಸಿದಂತೆ ಯುನೆಸ್ಕೋಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಎಚ್.ಕೆ.ಪಾಟೀಲ್ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.













Click it and Unblock the Notifications