ಎಚ್.ಡಿ ಕುಮಾರಸ್ವಾಮಿ ಬನ್ರಿ ಕಂಪ್ಯಾರಿಟಿವ್ ಸ್ಟಡಿ ಮಾಡೋಣ ಅಂದ ಜಿ. ಪರಮೇಶ್ವರ್
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಗೆ ರಾಜ್ಯದ ಒಂದೊಂದೇ ಸಚಿವರು ಪದೇ ಪದೇ ಟಾಂಗ್ ಕೊಡುತ್ತಲ್ಲೇ ಇದ್ದಾರೆ. ಇದೀಗ ಕುಮಾರಸ್ವಾಮಿಗೆ ಟಾಂಗ್ ಕೊಡುವ ಸರದಿ ಗೃಹ ಸಚಿವ ಜಿ. ಪರಮೇಶ್ವರ್ ಅವರದ್ದು. ಕುಮಾರಸ್ವಾಮಿ ಅವರಿಗೆ ನೇರಾ ನೇರ ಸವಾಲು ಹಾಕಿರುವ ಜಿ. ಪರಮೇಶ್ವರ್ ಅವರು, ಕುಮಾರಸ್ವಾಮಿ ಅವರೇ ಬನ್ನಿ ಕಂಪ್ಯಾರಿಟಿವ್ ಸ್ಟಡಿ ಮಾಡೋಣ ಎಂದು ಕರೆದಿದ್ದಾರೆ. ಯಾಕೆ ಕಂಪ್ಯಾರಿಟಿವ್ ಸ್ಟಡಿ (ಅಧ್ಯಯನ) ಯಾವ ವಿಷಯದ ಬಗ್ಗೆ ಎನ್ನುವ ವಿವರ ಇಲ್ಲಿದೆ.
ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗೂ ರಾಜ್ಯ ಸರ್ಕಾರದ ನಡುವೆ ವಾಕ್ಸಮರ ಮುಂದುವರಿದಿದೆ. ರಾಜ್ಯದಲ್ಲಿ ನಡೆಯುವ ಎಲ್ಲ ವಿಯಷಗಳಿಗೂ ಎಚ್.ಡಿ ಕುಮಾರಸ್ವಾಮಿ ಅವರು ರಿಯಾಕ್ಟ್ ಮಾಡುತ್ತಿದ್ದಾರೆ. ಕೇಂದ್ರದ ಜವಾಬ್ದಾರಿ ಸ್ಥಾನದಲ್ಲಿ ಇರುವ ಅವರು ಇತ್ತೀಚಿನ ದಿನಗಳಲ್ಲಿ ಜಾಣ್ಮೆಯಿಂದಲೇ ಹೇಳಿಕೆಗಳನ್ನು ನೀಡುತ್ತಿದ್ದು, ವಿವಾದಗಳಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಮುಖ ಸಚಿವರ ವಿರುದ್ಧ ಅವರು ನೀಡುತ್ತಿರುವ ಹೇಳಿಕೆಗಳು ಕಾಂಗ್ರೆಸ್ ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ರಾಜ್ಯದ ಸಚಿವರು ಸಹ ಎಚ್.ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಡುತ್ತಿದ್ದಾರೆ. ಇದೀಗ ಗೃಹ ಸಚಿವ ಜಿ. ಪರಮೇಶ್ವರ್ ಅವರು ಕುಮಾರಸ್ವಾಮಿ ಅವರಿಗೆ ಒಪನ್ ಚಾಲೆಂಜ್ವೊಂದನ್ನು ಹಾಕಿದ್ದಾರೆ.

ಕಂಪ್ಯಾರಿಟಿವ್ ಸ್ಟಡಿಗೆ ಬರ್ಲಿ: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ಸರ್ಕಾರದ ಅವಧಿಯಲ್ಲಿಯೇ ಉತ್ತಮ ಆಡಳಿತ ನೀಡಿದ್ದಾಗಿ ಹೇಳಿದ್ದಾರೆ. ಇದಕ್ಕೆ ಪರಮೇಶ್ವರ್ ಅವರು ಟಾಂಗ್ ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದರೆ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉತ್ತಮ ಆಡಳಿತ ನೀಡಿದ್ದಾಗಿ ಕುಮಾರಸ್ವಾಮಿ ಅವರು ಹೇಳಿದ್ದರು. ಇದಕ್ಕೆ ಜಿ ಪರಮೇಶ್ವರ್ ಅವರು,ಕ್ರೆಡಿಟ್, ಡಿಸ್ ಕ್ರೆಡಿಟ್ ಎರಡೂ ನಮಗೂ (ಕಾಂಗ್ರೆಸ್) ಸೇರಬೇಕು ಎಂದಿದ್ದಾರೆ. ಅಲ್ಲದೇ 14 ತಿಂಗಳ ಆಡಳಿತದಲ್ಲಿ ನಾನೂ ಅವರ ಜೊತೆಗೇ ಇದ್ದೆ ಅಲ್ವಾ. ಕುಮಾರಸ್ವಾಮಿ ಅವರೇ ಬನ್ನಿ ಒಂದು ಕಂಪ್ಯಾರಿಟಿವ್ ಸ್ಟಡಿ ಮಾಡೋಣ ಎಂದ ಹೇಳಿದ್ದಾರೆ.
ಜಾತಿ ಜನಗಣತಿ ಸ್ವೀಕಾರ ಪರಂ ಏನದ್ರು: ಇನ್ನು ರಾಜ್ಯದಲ್ಲಿ ಜಾತಿಗಣತಿ ವರದಿ ಸ್ವೀಕಾರದ ಬಗ್ಗೆಯೂ ಪರಮೇಶ್ವರ್ ಅವರು ಮಾತನಾಡಿದ್ದಾರೆ. ಇದೊಂದು ವಿಚಿತ್ರ ಸಂದರ್ಭ ಎಂದಿರುವ ಅವರು, ಜಾತಿ ಜನಗಣತಿ ಸ್ವೀಕಾರ ಮಾಡದಿದ್ದರೆ, ಸರ್ಕಾರ ಸ್ವೀಕಾರ ಮಾಡಲಿಲ್ಲ ಎನ್ನುತ್ತಾರೆ. ಒಂದೊಮ್ಮೆ ಮಾಡಿದರೆ, ಯಾಕೆ ಈಗ ಮಾಡುತ್ತೀರಿ ಎನ್ನುತ್ತಾರೆ. ಜನಗಣತಿ ಸ್ವೀಕಾರ ವಿಳಂಬಕ್ಕೂ ಕಾರಣಗಳಿವೆ. ಕ್ಯಾಬಿನೆಟ್ನಲ್ಲೂ ಚರ್ಚೆ ಮಾಡಿ ಅಸೆಂಬ್ಲಿಗೆ ತರಬೇಕೇ ಇಲ್ಲವೇ ಕ್ಯಾಬಿನೆಟ್ ತೀರ್ಮಾನ, ಅಸೆಂಬ್ಲಿಗೆ ತೆಗೆದುಕೊಂಡು ಹೋಗಬೇಕಾಗಿಲ್ಲ ಅಂತ ಕ್ಯಾಬಿನೆಟ್ ತೀರ್ಮಾನ ಮಾಡಿದರೂ ಆಯಿತು. ಅಲ್ಲದೇ ರಾಜ್ಯದಂತೆ ಕೇಂದ್ರ ಜನಗಣತಿ ಸಹ ಆಗಲಿ. ಒಂದೊಮ್ಮೆ ಓವರ್ ಲ್ಯಾಪ್ ಆಗಿದ್ದರೆ ಮುಂದೆ ಸರಿಪಡಿಸಿಕೊಳ್ಳಬಹುದು ಎಂದು ಪರಮೇಶ್ವರ್ ಅವರು ಹೇಳಿದ್ದಾರೆ.

ಜಾತಿ ಗಣತಿಯಲ್ಲಿ ಒಂದೊಮ್ಮೆ ಯಾವುದಾದರೂ ಸಮುದಾಯದ ಅಂಕಿ - ಸಂಖ್ಯೆ ಹೆಚ್ಚು ಕಮ್ಮಿ ಆಗಿದ್ದರೆ, ಮುಂದೆ ಸರಿಪಡಿಕೊಳ್ಳಬಹುದು. ಕೇಂದ್ರ ಸರ್ಕಾರದ ಜನಗಣತಿಯನ್ನೇ ಎಲ್ಲರೂ ಪರಿಗಣಿಸುತ್ತಾರೆ ಹಾಗೂ ಉಪಯೋಗಿಸುತ್ತಾರೆ. ಒಂದು ಸಾರಿ ಕ್ಯಾಬಿನೆಟ್ನಲ್ಲಿ ಚರ್ಚೆಯಾಗಲಿ, ಆಮೇಲೆ ನೋಡೋಣ. ರಾಜ್ಯ ಸರ್ಕಾರ 160 ಕೋಟಿ ಖರ್ಚು ಮಾಡಿದೆ ಅದಕ್ಕೂ ಲೆಕ್ಕ ಕೊಡಬೇಕಾಗುತ್ತದೆ. ಮುಂದೆ ಸಿಎಜಿ ಸಹ ಇದಕ್ಕೆ ಆಕ್ಷೇಪ ಮಾಡಬಹುದು. ಹೀಗಾಗಿ, ರಾಜ್ಯದ ಜನಗಣತಿ ಕ್ಯಾಬಿನೆಟ್ಗೆ ತರುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications