Free Bus: ಶಕ್ತಿ ಯೋಜನೆ ಅಡಿ ಗಂಡಸರಿಗೂ ಉಚಿತ ಪ್ರಯಾಣ : ಮಹತ್ವದ ಸುಳಿವು ನೀಡಿದ ಡಿಕೆ ಶಿವಕುಮಾರ್
ಬೆಂಗಳೂರು, ನವೆಂಬರ್ 15: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಕ್ತಿ ಯೋಜನೆಯ ಅಡಿ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಿದೆ. ಇದೀಗ ಶಕ್ತಿ ಯೋಜನೆಯಡಿ ವಯೋಮಿತಿಗೊಳಪಡಿಸಿ ಗಂಡು ಮಕ್ಕಳಿಗೂ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಉಚಿತ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಮುಂದೆ ಕ್ರಮ ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಪ್ರಧಾನಿ ಜವಾಹರ್ ಲಾಲ್ ನೆಹರು ಅವರ 135ನೇ ಜಯಂತಿ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ವಿಧಾನಸೌಧದಲ್ಲಿ ಗುರುವಾರ ಆಯೋಜಿಸಿದ್ದ ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳೊಂ ದಿಗಿನ ಸಂವಾದದಲ್ಲಿ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಈ ಭರವಸೆ ನೀಡಿದ್ದಾರೆ.

ನೀಲಸಂದ್ರದ ಬಿಬಿಎಂಪಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಚರಣ್, 'ನಿಮ್ಮ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೀರಿ. ಅದರಲ್ಲಿ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರು ಉಚಿತ ಸಂಚಾರಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತಂದಿದ್ದೀರಿ. ಇದರಿಂದ ನಮ್ಮ ಅಮ್ಮ, ಅಕ್ಕ, ತಂಗಿಯರು, ಸ್ನೇಹಿತೆ ಯರಿಗೆ ಅನುಕೂಲ ಆಗುತ್ತಿದೆ. ನಮ್ಮ ಅಮ್ಮ ಅಕ್ಕ ತಂಗಿಯರನ್ನು ಮಾತ್ರ ಊರಿಗೆ ಕರೆದುಕೊಂಡು ಹೋಗುತ್ತಾರೆ. ಗಂಡು ಮಕ್ಕಳಿಗಾಗಿ ಯಾವುದೇ ಯೋಜನೆ ಇಲ್ಲವೇ? ಎಂದು ಪ್ರಶ್ನೆ ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ಅವರು, ನಿಮ್ಮ ತಾಯಿಗೆ ಗೃಹಲಕ್ಷ್ಮಿ ಯೋಜ ನೆಯಡಿ ಮಾಸಿಕ 2 ಸಾವಿರ ಅನ್ನಭಾಗ್ಯದಡಿ 10 ಕೇಜಿ ಅಕ್ಕಿ, ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್, ಎಲ್ಲ ಹೆಣ್ಣು ಮಕ್ಕಳಿಗೂ ಬಸ್ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗುತ್ತಿದೆ. ಈಗ ನೀನು ಕೇಳಿರುವ ಪ್ರಶ್ನೆಗೆ, ಶಕ್ತಿ ಯೋಜನೆಯಡಿ ಒಂದು ವಯೋಮಾನದ ವರೆಗಿನ ಗಂಡು ಮಕ್ಕಳಿಗೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಯೋಚಿಸಿ ಮುಂದೆ ಕ್ರಮ ವಹಿಸಲಾಗುವುದು ಎಂದರು.
ಮತ್ತಿಕೆರೆಯ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಮಹೇಶ್ವರಿ, ಹೆಣ್ಣು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪೋಷಕರು ಬೇರೆ ಊರುಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದೆಬರುವುದಿಲ್ಲ ಎಂದು ಕೇಳಿದಾಗ, "ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕಲ್ಯಾಣ ಕರ್ನಾಟಕ ಆಗಲಿ, ಇಡೀ ರಾಜ್ಯ ಒಂದೇ, ಎಲ್ಲಾ ಕಡೆ ಒಂದೇ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನೀವು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ" ಎಂದು ಧೈರ್ಯ ತುಂಬಿದರು.
ಭೈರಸಂಧ್ರದ ಪ್ರೌಢಶಾಲೆಯ 9ನೇ ತರಗತಿ ಕೌಸಲ್ಯ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಮಾಲಿನ್ಯವೂ ಹೆಚ್ಚುತ್ತಿದೆ ಎಂದು ಕೇಳಿದಾಗ, "ಬೆಂಗಳೂರು ನಗರವನ್ನು ಕೆಂಪೇಗೌಡರು ಕಟ್ಟಿದ್ದಾರೆ. ದೊಡ್ಡ ಗಾತ್ರದಲ್ಲಿ ಇಡೀ ದೇಶದಲ್ಲಿ ಯಾವ ನಗರವೂ ಬೆಳೆಯುತ್ತಿಲ್ಲ. ಮುಂಬೈ, ಚೆನ್ನೈ, ಕಲ್ಕತ್ತಾಗೆ ಸಮುದ್ರ ಹತ್ತಿರವಾಗಿದೆ. ಸಮುದ್ರದಿಂದ ನಗರಗಳು ಬೆಳೆದು ಅಲ್ಲಿ ವಹಿವಾಟು ವ್ಯವಹಾರ ಹೆಚ್ಚಾಗಿರುತ್ತದೆ. ಆದರೆ, ಇಲ್ಲಿ ಆ ರೀತಿಯ ವಹಿವಾಟಿಲ್ಲ. ನಮ್ಮಲ್ಲಿರುವ ಹವಾಗುಣದಿಂದ, ಇಲ್ಲಿ ಐಟಿ ಹಬ್, ಟೆಕ್ನಿಕಲ್ ಹಬ್, ಮೆಡಿಕಲ್ ಹಬ್ ಆಗಿ ಬೆಳೆದಿದೆ. 20 ವರ್ಷದಿಂದ ನಗರಾಭಿವೃದ್ಧಿ ಸಚಿವನಾಗಿದ್ದಾಗ 70 ಲಕ್ಷ ಜನಸಂಖ್ಯೆಯಿತ್ತು.
ಇದೀಗ ದ್ವಿಗುಣವಾಗಿ 1.40 ಕೋಟಿ ಜನಸಂಖ್ಯೆಯಾಗಿದೆ. ಅದೇ ರಸ್ತೆಯಿದ್ದು, ವಾಹನಗಳ ಸಂಖ್ಯೆ ಮಾತ್ರ ಹೆಚ್ಚಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಸರ್ಕಾರದಿಂದ ಎಷ್ಟೇ ಬಸ್, ಮೆಟ್ರೋ ಹಾಕಿದರು ಕೂಡಾ ಸ್ವಂತ ವವಾಹನಗಳನ್ನೇ ಬಳಸುತ್ತಾರೆ. ಆದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ರಿಂಗ್ ರಸ್ತೆ, ಮೆಟ್ರೋ 3ನೇ ಫೇಸ್ ಮಾಡಲಾಗುತ್ತಿದ್ದು, ಅಂತರಾಷ್ಟ್ರೀಯ ಮಟ್ಟದ ಮೆಟ್ರೋ ನಿರ್ಮಾಣ ಮಾಡಲಾಗಿದೆ. ನಗರದಲ್ಲಿ ಸಬ್ ಅರ್ಬನ್ ಮಾಡಲಾಗುತ್ತಿದೆ. ಎಷ್ಟೇ ಮೇಲ್ಸೇತುವೆ ಮಾಡುತ್ತಿದ್ದರೂ, ಸಂಚಾರ ದಟ್ಟಣೆ ನಿಯಂತ್ರಣವಾಗುತ್ತಿಲ್ಲ. ಇದೀಗ ಟನಲ್ ರಸ್ತೆ ಕೂಡಾ ಪ್ರಾರಂಭಿಸಲಾಗುತ್ತಿದೆ. ನಗರದಲ್ಲಿ ಬೇರೆ ನಗರಗಳಿಗೆ ಹೋಲಿಸಿದರೆ ಮಾಲಿನ್ಯ ನಿಯಂತ್ರಣದಲ್ಲಿದೆ" ಎಂದು ತಿಳಿಸಿದರು.
ಲಗ್ಗೆರೆಯ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಲಿಖಿತ, ನಿಮ್ಮ ಮಕ್ಕಳು ಚಿಕ್ಕವರಾಗಿದ್ದಾಗ ನೀವು ಅವರೊಂದಿಗೆ ಸಲುಗೆಯಿಂದ ಇದ್ದಿರಾ, ಕಟ್ಟುನಿಟ್ಟಾಗಿ ಇದ್ದಿರಾ, ಯಾವ ಸಲಹೆ ನೀಡುತ್ತಿದ್ದಿರಿ ಎಂದು ಕೇಳಿದಾಗ, "ನಾನು ಸಣ್ಣ ವಯಸ್ಸಿನಿಂದಲೇ ರಾಜಕೀಯದಲ್ಲಿ ತೊಡಗಿಕೊಂಡು ಬಂದಿದ್ದೇನೆ. ಆದ್ದರಿಂದ ನನ್ನ ಮಕ್ಕಳಿಗೆ ಸಮಯ ಕೊಡಲು ಆಗಿಲ್ಲ, ಆದರೂ ಅವರನ್ನು ತುಂಬಾ ಪ್ರೀತಿ ಹಾಗು ಕಾಳಜಿ ಮಾಡುತ್ತೇನೆ. ನನ್ನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದೇನೆ. ಆದರೆ, ರಾಜಕೀಯದಲ್ಲಿರುವ ಕಾರಣ ಹೆಚ್ಚು ಸಮಯ ನೀಡಲು ಸಾಧ್ಯವಾಗಿಲ್ಲ. ಮದುವೆಯಾಗುವ ಮುಂಚೆಯೇ ಮಂತ್ರಿಯಾಗಿದ್ದೆ. ಶಿಕ್ಷಣದ ಬಗ್ಗೆ ನನಗೆ ಹೆಚ್ಚು ಕಾಳಜಿಯಿದ್ದು, ನಗರದ ಖಾಸಗಿ ಶಾಲೆಗಳಲ್ಲಿ ಸಿಗುವಂತಹ ಗುಣಮಟ್ಟದ ಶಿಕ್ಷಣ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಿಗಬೇಕೆಂಬ ನಿಟ್ಟಿನಲ್ಲಿ ಸಿಎಸ್ಆರ್ ಅಡಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ" ಎಂದು ತಿಳಿಸಿದರು.
ಜೋಗುಪಾಳ್ಯದ ಬಾಲಕರ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿ ರಿಚರ್ಡ್, ಪಾಲಿಕೆ ಶಾಲೆಯ ಗುಣಮಟ್ಟ ಶಿಕ್ಷಣ ಹಾಗೂ ವ್ಯವಸ್ಥೆ ಬಗ್ಗೆ ಬೇರೆಯವರಿಗೂ ಅರಿವು ಮೂಡಿಸಿ ಎಂದು , "ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ, ಉಚಿತ ಸೌಲಭ್ಯ ಸಿಗಲಿದೆ ಎಂಬುದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.












Click it and Unblock the Notifications