ರಾಜ್ಯದ ಹಾಲಿ 5 ಸಂಸದರಿಗೆ ಟಿಕೆಟಿಲ್ಲ, ಕಾರಣ?
2014ರ ಸಾರ್ವತ್ರಿಕ ಚುನಾವಣೆಗೆ ವೇದಿಕೆ ಬಹುತೇಕ ಸಿದ್ದವಾಗಿದೆ. ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದಿದ್ದು, ಹಿಂದಕ್ಕೆ ಪಡೆಯಲು ಶನಿವಾರ ( ಮಾ 29) ಒಂದು ದಿನದ ಕಾಲಾವಕಾಶ ಉಳಿದಿದೆ.
ಕಳೆದ ಬಾರಿಯ (2009) ಲೋಕಸಭಾ ಚುನಾವಣೆಯಲ್ಲಿ ಉತ್ತಮ ಅಂತರದಿಂದ ಗೆದ್ದಿದ್ದರೂ ಈ ಬಾರಿಯ ಚುನಾವಣೆಯಲ್ಲಿ ಕಾರಣಾಂತರದಿಂದ ಸ್ಪರ್ಧಿಸದ ಹಾಲಿ ಸಂಸದರನ್ನು ಪಟ್ಟಿ ಮಾಡಲು ಹೊರಟರೆ ಬರುವ ಹೆಸರೆಲ್ಲಾ ಕಮಲದ ಪಕ್ಷದವರದ್ದು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಟಿಕೆಟ್ ಹಂಚಿಕೆ ವಿಚಾರದಲ್ಲಿ ಏನೇ ಭಿನ್ನಾಭಿಪ್ರಾಯ ಮತ್ತು ಭಿನ್ನಮತವಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಘೋಷಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಬದಲಾವಣೆ ಮಾಡದೇ ಇದ್ದಿದ್ದು ಈ ಬಾರಿಯ ವಿಶೇಷ.
2009ರ ಚುನಾವಣೆಯಲ್ಲಿ ಬಿಜೆಪಿ 19, ಕಾಂಗ್ರೆಸ್ 6 ಮತ್ತು ಜೆಡಿಎಸ್ 3 ಸ್ಥಾನಗಳಲ್ಲಿ ಜಯಭೇರಿ ಭಾರಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಜೆಡಿಎಸ್ 26 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
ಅಂತೆಯೇ, ಕಳೆದ ಚುನಾವಣೆಯಲ್ಲಿ ಉಡುಪಿ - ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದಿದ್ದ ಸದಾನಂದ ಗೌಡ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗ್ಡೆ ಗೆದ್ದಿದ್ದರು.
2014ರ ಚುನಾವಣೆಯ ಹೊಸ್ತಿಲಲ್ಲಿ ಪಕ್ಷಗಳ ಬಲಾಬಲ ಹೇಗಿದೆಯೆಂದರೆ ಬಿಜೆಪಿ 18, ಕಾಂಗ್ರೆಸ್ 9 ಮತ್ತು ಜೆಡಿಎಸ್ 1.
ಟಿಕೆಟ್ ಸಿಗದ ರಾಜ್ಯದ ಹಾಲಿ ನಾಲ್ಕು ಸಂಸದರು ಯಾರು? ಸ್ಲೈಡಿನಲ್ಲಿ ನೋಡಿ
ಜೆಡಿಎಸ್ ಇಬ್ಬರ ರಾಜೀನಾಮೆ
ಕಳೆದ ಬಾರಿಯ ಚುನಾವಣೆಯಲ್ಲಿ (2009) ಜೆಡಿಎಸ್ ಪಕ್ಷದಿಂದ ದೇವೇಗೌಡ, ಕುಮಾರಸ್ವಾಮಿ ಮತ್ತು ಚೆಲುವರಾಯಸ್ವಾಮಿ ಗೆದ್ದಿದ್ದರು. ಮೇ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ (ರಾಮನಗರ), ಚೆಲುವರಾಯಸ್ವಾಮಿ (ನಾಗಮಂಗಲ) ಗೆದ್ದಿದ್ದರಿಂದ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಲೋಕಸಭೆಯ ಉಪಚುನಾವಣೆ ನಡೆದಿತ್ತು. ಎರಡೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದವು.
ಡಿ ಬಿ ಚಂದ್ರೇಗೌಡ
ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆದ್ದಿದ್ದ ಬಿಜೆಪಿಯ ಚಂದ್ರೇಗೌಡರು ಈ ಬಾರಿ ಸ್ಪರ್ಧಿಸುತ್ತಿಲ್ಲ. ಅವರಿಗೆ ಟಿಕೆಟ್ ನಿರಾಕರಿಸಲಾಯಿತು ಮತ್ತು ಕಣಕ್ಕಿಳಿಯಲು ಡಿಬಿಸಿ ಆಸಕ್ತಿ ತೋರಲಿಲ್ಲ ಎನ್ನುವ ಎರಡೂ ಮಾತುಗಳು ಕೇಳಿ ಬರುತ್ತಿವೆ. ಆದರೂ, ಬಿಜೆಪಿ ಇವರನ್ನು ಮೂಲೆಗುಂಪು ಮಾಡಿತು ಎನ್ನುವುದು ಸತ್ಯಕ್ಕೆ ಹತ್ತಿರವಾದ ಮಾತು. ಇಲ್ಲಿ ಈ ಬಾರಿ ಬಿಜೆಪಿಯಿಂದ ಮಾಜಿ ಸಿಎಂ ಸದಾನಂದ ಗೌಡ ಸ್ಪರ್ಧಿಸುತ್ತಿದ್ದಾರೆ.
ಸಣ್ಣ ಫಕೀರಪ್ಪ
ರಾಯಚೂರು ಕ್ಷೇತ್ರದಿಂದ ಕಳೆದ ಬಾರಿ ಬಿಜೆಪಿ ಟಿಕೆಟಿನಿಂದ ಸಣ್ಣಫಕೀರಪ್ಪ ಗೆದ್ದಿದ್ದರು. ಗಣಿಧಣಿಗಳು ಉಚ್ಚ್ರಾಯ ಸ್ಥಿತಿಯಲ್ಲಿದ್ದ ಕಾಲವದು. ಶ್ರೀರಾಮುಲು ಅವರ BSR ಕಾಂಗ್ರೆಸ್ ಜೊತೆ ಗುರುತಿಸಿ ಕೊಂಡಿದ್ದ ಫಕೀರಪ್ಪ ಈ ಬಾರಿ ಟಿಕೆಟಿಗೆ ಕನಿಷ್ಠ ಪ್ರಯತ್ನವೂ ಪಟ್ಟಿಲ್ಲ ಎನ್ನುವ ಮಾತಿದೆ. ಬಿಜೆಪಿ ಇಲ್ಲಿಂದ ಈ ಬಾರಿ ಶಿವನಗೌಡ ಪಾಟೀಲ್ ಅವರಿಗೆ ಟಿಕೆಟ್ ನೀಡಿದೆ.
ಜೆ ಶಾಂತಾ
ಗಣಿಧಣಿಗಳ ಕ್ಯಾಂಪಿನ ಶಾಂತಾ ಕಳೆದ ಬಾರಿ ಬಳ್ಳಾರಿಯಿಂದ ಗೆದ್ದಿದ್ದರು. ಈ ಬಾರಿ ಇಲ್ಲಿ ಶಾಂತಾ ಅವರ ಸಹೋದರ ಬಿ ಶ್ರೀರಾಮುಲು ಬಿಜೆಪಿಯಿಂದ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ. ಹಾಗಾಗಿ ಶಾಂತಾ ಈ ಬಾರಿ ಸ್ಪರ್ಧಿಸುತ್ತಿಲ್ಲ.
ಬಿ ವೈ ರಾಘವೇಂದ್ರ
ಕಳೆದ ಬಾರಿಯ ಚುನಾವಣೆಯಲ್ಲಿ ದಿ.ಬಂಗಾರಪ್ಪ ವಿರುದ್ದ ಜಯಭೇರಿ ಭಾರಿಸಿದ್ದ ಬಿಜೆಪಿಯ ರಾಘವೇಂದ್ರ ಈ ಬಾರಿ ಸ್ಪರ್ಧಿಸುತ್ತಿಲ್ಲ. ಕಾರಣ, ಇಲ್ಲಿ ಈ ಬಾರಿ ಅವರ ತಂದೆ ಯಡಿಯೂರಪ್ಪ ಸ್ಪರ್ಧಿಸುತ್ತಿದ್ದಾರೆ.
ಶಿವರಾಮೇಗೌಡ
ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಶಿವರಾಮೇಗೌಡ ಅವರಿಗೂ ಬಿಜೆಪಿ ಈ ಬಾರಿ ಟಿಕೆಟ್ ನೀಡಿಲ್ಲ. ಅಲ್ಲಿ ಸಂಗಣ್ಣ ಕರಡಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.