ಮಾಜಿ ಸಚಿವ ಎಂ.ಎಚ್.ಅಂಬರೀಶ್ ರಾಜಕೀಯ ಜೀವನದ ನೋಟ
ಬೆಂಗಳೂರು, ನವೆಂಬರ್ 25 : ಚಿತ್ರರಂಗದಿಂದ ರಾಜಕೀಯಕ್ಕೆ ಬಂದು ಯಶಸ್ಸುಕಂಡವರು ಎಂ.ಎಚ್.ಅಂಬರೀಶ್. ಸಂಸದರಾಗಿ, ಸಚಿವರಾಗಿ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 2013ರ ಚುನಾವಣೆ ಅವರ ಕೊನೆಯ ಚುನಾವಣೆ.
'15 ಜನ ಸಿಎಂಗಳ ಜೊತೆ ಟೀ ಕುಡಿದೋನು ಅಂಬರೀಶ್ . ನಾನು ಇವತ್ತಿನಿಂದ ರಾಜಕೀಯ ನೋಡ್ತಿಲ್ಲ. ನನಗೆ ಅವತ್ತಿಂದ ಇವತ್ತಿನ ತನಕ ರಾಜಕೀಯ ಗೊತ್ತು. ಮರ್ಯಾದಸ್ತರಿಗೆ ರಾಜಕೀಯವಲ್ಲ. ರಾಜಕೀಯವಾಗಿ ಹಣ ಮಾಡಿಕೊಳ್ಳುವುದಿದ್ರೆ ಮಾಡಿಕೋ. ರಾಜಕೀಯದಲ್ಲಿ ದುಡ್ಡು ಮಾಡಿ, ಹಣ ಚೆಲ್ಲಿ ಚುನಾವಣೆ ಮಾಡು' ಎಂದು 2018ರ ಚುನಾನವಣೆಯಲ್ಲಿ ಸಮಯದಲ್ಲಿ ಅವರು ಹೇಳಿಕೆ ಕೊಟ್ಟಿದ್ದರು.
ಕಂಠೀರವ ಸ್ಟುಡಿಯೋದಲ್ಲಿ ನ.26ರಂದು ಅಂಬರೀಶ್ ಅಂತ್ಯಕ್ರಿಯೆ
ಚಿತ್ರರಂಗದಲ್ಲಿ 'ರೆಬಲ್ ಸ್ಟಾರ್' ಎಂದು ಹೆಸರು ಪಡೆದಿದ್ದ ಅಂಬರೀಶ್ (66) ಅವರು ರಾಜಕೀಯದಲ್ಲಿಯೂ ರೆಬಲ್ ಗುಣವನ್ನು ಬಿಟ್ಟಿರಲಿಲ್ಲ. ಕಾವೇರಿ ಸಮಸ್ಯೆ ಭುಗಿಲೆದ್ದಾಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹಿರಿಯ ನಟ, ಮಾಜಿ ಸಚಿವ ಎಂ.ಎಚ್.ಅಂಬರೀಶ್ ಪರಿಚಯ
2014ರ ಲೋಕಸಭಾ ಚುನಾವಣೆ ಸಮಯದಿಂದಲೇ ಅಂಬರೀಶ್ ಅವರ ಆರೋಗ್ಯ ಹದಗೆಟ್ಟಿತ್ತು. ಆಗಿನಿಂದಲೇ ಸಕ್ರಿಯ ರಾಜಕೀಯದಿಂದ ದೂರವಾಗಿದ್ದರು. 2018ರ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡದೇ ದೂರ ಉಳಿದಿದ್ದರು.
ನಟ-ಮಾಜಿ ಸಚಿವ ಅಂಬರೀಶ್ ಹೃದಯಾಘಾತದಿಂದ ನಿಧನ
ಸಿನಿಮಾದಿಂದ ರಾಜಕೀಯಕ್ಕೆ
ಸಿನಿಮಾದಿಂದ ರಾಜಕೀಯಕ್ಕೆ ಬಂದ ಅಂಬರೀಶ್ ಅವರು 1994 ರಲ್ಲಿ ಪಿ.ವಿ.ನರಸಿಂಹರಾವ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಕಾಂಗ್ರೆಸ್ ತೊರೆದಿದ್ದ ಅವರು, ಜನತಾದಳಕ್ಕೆ ಸೇರಿದ್ದರು. 1996ರಲ್ಲಿ ದೇವೇಗೌಡರ ರಾಜೀನಾಮೆಯಿಂದ ತೆರವಾದ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಿ, ಕಾಂಗ್ರೆಸ್ನ ಸಿ.ಎಂ.ಲಿಂಗಪ್ಪ ವಿರುದ್ಧ ಸೋತರು.
ಲೋಕಸಭೆಗೆ ಚುನಾವಣೆಗೆ ಸ್ಪರ್ಧೆ
1998ರಲ್ಲಿ ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಜನತಾದಳದ ಸ್ಪರ್ಧಿಸಿ ಆಯ್ಕೆಯಾದರು. 1999ರ ಲೋಕಸಭಾ ಚುನಾವಣೆಯಲ್ಲಿ ಜನತಾದಳ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. 2004ರಲ್ಲಿ ಪುನಃ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಅವರು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ವಾರ್ತಾ ಮತ್ತು ಪ್ರಚಾರ ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಷ್ಟರಲ್ಲೇ ಕಾವೇರಿ ವಿವಾದ ಭುಗಿಲೆದ್ದಿತ್ತು. ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ರಾಜಕೀಯ ನಾಯಕರು ರಾಜೀನಾಮೆ ನೀಡಿ ಎಂದು ಮಂಡ್ಯದ ರೈತರು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಅಂಬರೀಶ್ ಅವರು ರಾಜೀನಾಮೆ ನೀಡಿದರು.
2008ರ ಚುನಾವಣೆಯಲ್ಲಿ ಸೋಲು
2008ರ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿ ಜೆಡಿಎಸ್ನ ರಮೇಶ್ ಬಂಡಿಸಿದ್ದೇಗೌಡ ಅವರ ವಿರುದ್ಧ ಸೋಲು ಕಂಡರು. 2009ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ ಅವರು ಚೆಲುವರಾಯಸ್ವಾಮಿ ಅವರ ವಿರುದ್ಧ ಸೋಲು ಅನುಭವಿಸಿದರು.
2013ರ ಚುನಾವಣೆಯಲ್ಲಿ ಗೆಲುವು
2013ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ವಸತಿ ಸಚಿವರಾದರು. 2016ರಲ್ಲಿ ಸಂಪುಟ ಪುನಾರಚನೆ ವೇಳೆ ಅವರನ್ನು ಸಂಪುಟದಿಂದ ಕೈ ಬಿಡಲಾಯಿತು. ಇದರಿಂದ ಕೋಪಗೊಂಡ ಅವರು ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದ ದೂರವುಳಿದರು.
ಜೆಡಿಎಸ್ಗೆ ಬೆಂಬಲ
2018ರ ವಿಧಾನಸಭೆ ಚುನಾವಣೆಯಲ್ಲಿ ಅಂಬರೀಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತು. ಆದ್ದರಿಂದ, ಅವರು ಪಕ್ಷದ ಚಟುವಟಿಕೆಯಿಂದ ದೂರವಾದರು. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದರು.