ಆಸ್ಪತ್ರೆಯಿಂದ ಡಿ. ಕೆ. ಶಿವಕುಮಾರ್ ಡಿಸ್ಚಾರ್ಜ್, ವಿಶ್ರಾಂತಿಗೆ ಸಲಹೆ
ಬೆಂಗಳೂರು, ನವೆಂಬರ್ 03 : ಮಾಜಿ ಸಚಿವ, ಕನಕಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಭಾನುವಾರ ಬೆಳಗ್ಗೆ ಡಿ. ಕೆ. ಶಿವಕುಮಾರ್ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಬೆನ್ನು ನೋವು, ರಕ್ತದೊತ್ತಡದ ಕಾರಣ ಶುಕ್ರವಾರ ರಾತ್ರಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ರಕ್ತ ಪರೀಕ್ಷೆ ಬಳಿಕ ಅವರಿಗೆ ಯಾವುದೇ ಸೋಂಕಿಲ್ಲ ಎಂದು ವರದಿ ಬಂದಿದ್ದು ಡಿಸ್ಚಾರ್ಜ್ ಮಾಡಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿ. ಕೆ. ಶಿವಕುಮಾರ್, "ನಿಮ್ಮೆಲರ ಆಶೀರ್ವಾದದಿಂದ ಚೆನ್ನಾಗಿದ್ದೇನೆ. ನನಗೆ ವಿಶ್ರಾಂತಿ ಬೇಕಿದೆ" ಎಂದು ಹೇಳಿದರು.

ಬೆನ್ನು ನೋವಿನಿಂದ ಬಳಲುತ್ತಿರುವ ಡಿ. ಕೆ. ಶಿವಕುಮಾರ್ಗೆ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಆದರೆ, ಡಿ. ಕೆ. ಶಿವಕುಮಾರ್ ಇಂದು ರಾತ್ರಿ ದೆಹಲಿಗೆ ತೆರಳುವ ಸಾಧ್ಯತೆ ಇದೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಡಿ. ಕೆ. ಶಿವಕುಮಾರ್ ಸದಾಶಿವ ನಗರದ ನಿವಾಸಕ್ಕೆ ತೆರಳಿದರು. ಅಲ್ಲಿಂದ ಅವರು ಆರ್. ಆರ್. ನಗರಕ್ಕೆ ತೆರಳಲಿದ್ದಾರೆ. ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಪ್ಪ ಪುತ್ರಿಯ ವಿವಾಹದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ಡಿ. ಕೆ. ಶಿವಕುಮಾರ್ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿ ಇರುವಾಗಲೂ ಆರೋಗ್ಯ ಹದಗೆಟ್ಟು ಆರ್. ಎಂ. ಎಲ್ ಆಸ್ಪತ್ರೆಗೆ ದಾಖಲಾಗಿದ್ದರು.












Click it and Unblock the Notifications