ಹೃದಯಾಘಾತದಿಂದ ಮಾಜಿ ಸಚಿವ ಅಂಜನಮೂರ್ತಿ ನಿಧನ
ಬೆಂಗಳೂರು,ಮಾರ್ಚ್23: ಹೃದಯಾಘಾತದಿಂದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಅಂಜನಮೂರ್ತಿ(72) ನಿಧನರಾಗಿದ್ದಾರೆ. ಇಂದು (ಗುರುವಾರ) ಮುಂಜಾನೆ ಮಲ್ಲೇಶ್ವರಂನ ಅಪೋಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಅವರನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾಜಿ ಸಚಿವ ಅಂಜನಮೂರ್ತಿ ಇಹಲೋಕ ತ್ಯಜಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ನಿಂದ ಶಾಸಕರಾಗಿ ಆಯ್ಕೆಯಾಗಿ ನಂತರ ಸಚಿರಾಗಿಯೂ ಕಾರ್ಯನಿರ್ವಹಿಸಿದ್ದ ಅಂಜನಮೂರ್ತಿ ಉಪ ಸಭಾಪತಿಯೂ ಆಗಿ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿಯೂ ಸಾಕಷ್ಟು ಶ್ರಮಿಸಿದ್ದ ಕಾಂಗ್ರೆಸ್ ನಾಯಕ ಅಂಜನಮೂರ್ತಿ ಅವರು ಬೆಂಗಳೂರಿನ ನೆಲಮಂಗಲದಲ್ಲಿರುವ ಇಂದಿರಾನಗರದಲ್ಲಿ ಅವರು ನೆಲೆಸಿದ್ದರು.
2023 ರ ಚುನಾವಣೆಯ ಸಿದ್ದತೆಯಲ್ಲಿದ್ದ ಅಂಜನ ಮೂರ್ತಿ ಅವರ, ಹೆಚ್ಚಾಗಿ ಪಕ್ಷ ಸಂಘಟನೆಯನ್ನ ಮಾಡಿದ್ದಾರೆ. ಅಲ್ಲದೇ ಈ ಹಿಂದೆ ವಸತಿ ಸಚಿವ, ಉಪ ಸಭಾಪತಿಯಾಗಿ ಕರ್ತವ್ಯ ಸಲ್ಲಿಸಿದ್ದರು. 10ನೇ ಏಪ್ರಿಲ್ 1941ರಂದು ಜನಿಸಿದ್ದ ಅಂಜನಮೂರ್ತಿ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಇನ್ನೂ 1989-1994, 1999-2004, 2004-2007 ಮೂರು ಅವಧಿಗೆ ಅಂಜನ ಮೂರ್ತಿ ಅವರು ಶಾಸಕರಾಗಿದ್ದರು. ಫೆಬ್ರವರಿ 1993 ರಿಂದ ಡಿಸೆಂಬರ್ 1994ರವರೆಗೆ ವಿಧಾನಸಬಾ ಉಪಸಭಾಪತಿ ಆಗಿ ಸೇವೆ ಸಲ್ಲಿಸಿದ್ದರು. 2003 ರಿಂದ 2004 ಎಸ್ಸಿ ಮತ್ತು ಎಸ್ಟಿ ಆಯೋಗದ ಮುಖ್ಯಸ್ಥರಾಗಿದ್ದರು. 2005 ರಿಂದ 2006 ಅವಧಿಯಲ್ಲಿ ವಸತಿ ಸಚಿವರು ಆಗಿದ್ದರು.
2005 ರಿಂದ 06 ರವರೆಗೆ ಪ್ರಧಾನ ಕಾರ್ಯದರ್ಶಿ- ನೆಲಮಂಗಲ ತಾಲೂಕು ಯುವ ಕಾಂಗ್ರೆಸ್, 1972-76 ಸದಸ್ಯರು-ತಾಲೂಕು ಅಭಿವೃದ್ಧಿ ಮಂಡಳಿ, 1983-88 ಅಧ್ಯಕ್ಷರು, ವಕೀಲರ ವಕೀಲರ ಸಂಘ, ನೆಲಮಂಗಲ 1985-88 ಅಧ್ಯಕ್ಷರು, ಅರುಂಧತಿ ವಿದುವಾ ಸಂಸ್ಥೆ ನೆಲಮಂಗಲ, ನೆಲಮಂಗಲ 1978-83 ಲ್ಯಾಂಡ್ ಟ್ರಿಬ್ಯೂನಲ್ ಸದಸ್ಯರಾಗಿದ್ದರು.
ಮಾಜಿ ಸಚಿವ ಅಂಜನಮೂರ್ತಿ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ
ಕಾಂಗ್ರೆಸ್ ನಾಯಕ, ಮಾಜಿ ಸಚಿವ ಅಂಜನಮೂರ್ತಿ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.'ಅಂಜನಮೂರ್ತಿ ಅವರು ಧರ್ಮಸಿಂಗ್ ಅವರ ಸಂಪುಟದಲ್ಲಿ ವಸತಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಜನಾನುರಾಗಿ ಆಗಿದ್ದರು. ಅವರ ನಿಧನದ ಸುದ್ದಿ ಕೇಳಿ ಬಹಳ ನೋವಾಗಿದೆ.
ನೆಲಮಂಗಲ ಕ್ಷೇತ್ರದ ಅಭಿವದ್ಧಿಗೆ ಸಾಕಷ್ಟು ಶ್ರಮಿಸಿದ್ದರು. ಪಕ್ಷದ ಸಂಘಟನೆಯಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿ ಬಳಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಮಾಜಿ ಸಚಿವ ಅಂಜನಮೂರ್ತಿ ಅವರ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ
ಮಾಜಿ ಸಚಿವ ಅಂಜನಮೂರ್ತಿ ಅವರ ನಿಧನದಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾರ್ಗದರ್ಶಕನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಅಗಲಿಕೆಯ ದುಃಖ ದಲ್ಲಿರುವ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಾಂತ್ವನಗಳು. ಹಿರಿಯರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಇನ್ನೂ ನಿಧನರಾದ ಮಾಜಿ ಸಚಿವ ಅಂಜನಮೂರ್ತಿ ಅವರ ನಿವಾಸಕ್ಕೆ ಸಿದ್ದರಾಮಯ್ಯ ಅವರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.












Click it and Unblock the Notifications