ಅಧಿಕೃತವಾಗಿ ಜೆಡಿಎಸ್ ಸೇರಿದ ಆನಂದ್ ಅಸ್ನೋಟಿಕರ್
ಬೆಂಗಳೂರು, ಜನವರಿ 15 : ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸೋಮವಾರ ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರಿದರು. ಕಾರವಾರ ಕ್ಷೇತ್ರದಿಂದ ಅವರು 2018ರ ಚುನಾವಣಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಸೋಮವಾರ ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಆನಂದ್ ಅಸ್ನೋಟಿಕರ್ ಜೆಡಿಎಸ್ ಪಕ್ಷ ಸೇರಿದರು. ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಮಧು ಬಂಗಾರಪ್ಪ ಮುಂತಾದ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆನಂದ್ ಅಸ್ನೋಟಿಕರ್ 2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಾರವಾರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 44, 847 ಮತಗಳನ್ನು ಪಡೆದು ಸೋಲು ಕಂಡಿದ್ದರು. ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದರು.
ಆನಂದ್ ಅಸ್ನೋಟಿಕರ್ ಬೆಂಬಲಿಗರು ಎರಡು ತಿಂಗಳ ಹಿಂದೆ ಅವರ ಮನೆಗೆ ಮುತ್ತಿಗೆ ಹಾಕಿ ಪುನಃ ರಾಜಕೀಯಕ್ಕೆ ಬರಬೇಕು ಎಂದು ಒತ್ತಾಯಿಸಿದ್ದರು. ಜ್ಯೋತಿಷಿಗಳ ಸಲಹೆ ಪಡೆದು ಅಸ್ನೋಟಿಕರ್ ರಾಜಕೀಯ ಪ್ರವೇಶದ ನಿರ್ಧಾರ ಕೈಗೊಂಡಿದ್ದರು.
ಕಾರವಾರ ಕ್ಷೇತ್ರ: ಕಡಲ ಕಿನಾರೆ ಒಲಿಯುವುದು ಯಾರಿಗೆ?
ಸೊರಬ ಶಾಸಕ ಮಧು ಬಂಗಾರಪ್ಪ ಆನಂದ್ ಅಸ್ನೋಟಿಕರ್ ಜೊತೆ ಮಾತುಕತೆ ನಡೆಸಿ ಪಕ್ಷಕ್ಕೆ ಆಹ್ವಾನಿಸಿದ್ದರು. ಸೋಮವಾರ ಅವರು ದೇವೇಗೌಡ, ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಆನಂದ್ ಅಸ್ನೋಟಿಕರ್ ಮೀನುಗಾರಿಕಾ ಸಚಿವರಾಗಿದ್ದರು. 2013ರ ಚುನಾವಣೆಗೂ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈಗ ಅವರು ಜೆಡಿಎಸ್ ಸೇರಿದ್ದು, ಬಿಜೆಪಿಗೆ ಹಿನ್ನಡೆ ಉಂಟು ಮಾಡಿದಂತಾಗಿದೆ.