ಸಿದ್ದರಾಮಯ್ಯ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತಿರುವುದಕ್ಕೆ ಇದಾ ಕಾರಣ?
Recommended Video
ಐದು ವರ್ಷ ಸರಕಾರ ಸುಭದ್ರವಾಗಿರುತ್ತದೆ ಎಂದು ಸಾರ್ವಜನಿಕವಾಗಿ ಹೇಳುತ್ತಿರುವ ನಾಯಕರುಗಳೇ, ಮಧ್ಯಂತರ ಚುನಾವಣೆಗೆ ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದಾರಾ? ಎರಡು ಪಕ್ಷಗಳ ನಡುವೆ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ, ಇನ್ನೊಂದು ವರ್ಷದಲ್ಲಿ ಅಸೆಂಬ್ಲಿ ಚುನಾವಣೆ ಎದುರಾದರೂ ಆಶ್ಚರ್ಯವಿಲ್ಲ.
ದೇವೇಗೌಡ್ರು ಒಂದು ಕಡೆ ಮಧ್ಯಂತರ ಚುನಾವಣೆಯ ಬಗ್ಗೆ ಮಾತನಾಡುತ್ತಾ, ಇನ್ನೊಂದು ಕಡೆ ಕಾಂಗ್ರೆಸ್ ಕಡೆ ಬೊಟ್ಟು ಮಾಡುತ್ತಿದ್ದಾರೆ. ಇವೆಲ್ಲದರ ನಡುವೆ, ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ಎರಡು ದಿನಗಳಿಂದ, ತಮ್ಮ ಪುತ್ರ ಡಾ. ಯತೀಂದ್ರ ಪ್ರತಿನಿಧಿಸುವ ವರುಣಾ ಕ್ಷೇತ್ರದ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಂತಿದೆ.
ಸತತವಾಗಿ, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಮಾತುಕತೆಯಲ್ಲಿ ಸಿದ್ದರಾಮಯ್ಯ ತೊಡಗಿದ್ದಾರೆ. ಕಳೆದ ಅಸೆಂಬ್ಲಿ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವರುಣಾ ಅಸೆಂಬ್ಲಿ ಕ್ಷೇತ್ರದಲ್ಲಿ ನಿರೀಕ್ಷಿಸಿದಷ್ಟು ಲೀಡ್ ಸಿಗದೇ ಇರುವುದು ಸಿದ್ದರಾಮಯ್ಯನವರ ಚಿಂತೆಗೆ ಕಾರಣವಾಗಿದೆ.
ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ಅಂಶವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ, ಇದು ಮುಂದಿನ ಚುನಾವಣೆಯಲ್ಲಿ ಮುಂದವರಿಯದಂತೆ ನೋಡಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಮುಖಂಡರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ಯತೀಂದ್ರ ಸುಮಾರು 58ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು
ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವರುಣ ಅಸೆಂಬ್ಲಿ ಕ್ಷೇತ್ರದಿಂದ ಕಾಂಗ್ರೆಸ್ಸಿಗೆ ಕೇವಲ ಒಂಬತ್ತು ಸಾವಿರ ಲೀಡ್ ಬಂದಿರುವುದು ಸಿದ್ದರಾಮಯ್ಯನವರ ಚಿಂತೆಗೆ ಕಾರಣವಾಗಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಯತೀಂದ್ರ ಸುಮಾರು 58ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಮುಂದಿನ ಚುನಾವಣೆಯಲ್ಲಿ ಪುತ್ರನ ಭವಿಷ್ಯಕ್ಕೆ ತೊಂದರೆಯಾಗಬಹುದು
ಅದೇ ಅಂತರ ಲೋಕಸಭಾ ಚುನಾವಣೆಯಲ್ಲೂ ಮುಂದುವರಿದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಧೃವನಾರಾಯಾಣ ನಿರಾಯಾಸವಾಗಿ ದಡ ಸೇರಬಹುದಿತ್ತು ಎನ್ನುವುದು ಸಿದ್ದರಾಮಯ್ಯನವರ ಚಿಂತೆಗೆ ಕಾರಣವಾಗಿದೆ. ಇದು ಹೀಗೇ ಮುಂದುವರಿದರೆ, ಮುಂದಿನ ಚುನಾವಣೆಯಲ್ಲಿ ಪುತ್ರನ ಭವಿಷ್ಯಕ್ಕೆ ತೊಂದರೆಯಾಗಬಹುದು ಎನ್ನುವುದನ್ನು ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಂಡು, ಮುಖಂಡರುಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ಧೃವನಾರಾಯಣ್ ವಿರುದ್ದ ಕೇವಲ 1,817 ಮತಗಳ ಅಂತರದಿಂದ ಗೆಲುವು
ಅತ್ಯಂತ ತುರುಸಿನ ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶ್ರೀನಿವಾಸ ಪ್ರಸಾದ್, ಕಾಂಗ್ರೆಸ್ಸಿನ ಧೃವನಾರಾಯಣ್ ವಿರುದ್ದ ಕೇವಲ 1,817 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ವರುಣ ಕ್ಷೇತ್ರದಿಂದ ಕಾಂಗ್ರೆಸ್ಸಿಗೆ ಉತ್ತಮ ಲೀಡ್ ಸಿಗಬಹುದು ಎನ್ನುವ ಸಿದ್ದರಾಮಯ್ಯನವರ ಲೆಕ್ಕಾಚಾರ ತಪ್ಪಿತ್ತು. ಇದು, ಈಗ ಸಿದ್ದು ಚಿಂತೆಗೆ ಕಾರಣವಾಗಿದೆ.

ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗುವಂತೆ ಸಿದ್ದರಾಮಯ್ಯ ನೋಡಿಕೊಳ್ಳುತ್ತಿದ್ದಾರೆ
ಪ್ರತೀ ಬೂತ್ ಮಟ್ಟದ ಕಾರ್ಯಕರ್ತರು, ಮುಖಂಡರು, ಉಸ್ತುವಾರಿಗಳನ್ನು ಸತತವಾಗಿ ಸಿದ್ದರಾಮಯ್ಯ ಭೇಟಿಯಾಗುತ್ತಿದ್ದಾರೆ. ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗುವಂತೆ ಸಿದ್ದರಾಮಯ್ಯ ನೋಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಜೊತೆ, ಅಭಿವೃದ್ದಿ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ.

ಕೆಲವೊಂದು ವರ್ಗಗಳ ಮತಗಳು ದೂರವಾಗುತ್ತಿರುವುದಕ್ಕೆ ಕಾರಣಗಳೇನು?
ಚಾಮುಂಡೇಶ್ವರಿ ಸೋಲಿಗಿಂತ ಹೆಚ್ಚಾಗಿ ವರುಣ ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯ ತಲೆಕೆಡಿಸಿಕೊಂಡಂತಿರುವ ಸಿದ್ದರಾಮಯ್ಯ, ಕೆಲವೊಂದು ವರ್ಗಗಳ ಮತಗಳು ದೂರವಾಗುತ್ತಿರುವುದಕ್ಕೆ ಕಾರಣಗಳೇನು? ಅದನ್ನು ಸರಿಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳೇನು ಎನ್ನುವುದನ್ನು ವಿಸ್ಕೃತವಾಗಿ ಚರ್ಚಿಸುತ್ತಿದ್ದಾರೆ.












Click it and Unblock the Notifications