ಸಿದ್ದರಾಮಯ್ಯ ಅಕ್ಷರಸ: ಬೇಸ್ತು ಬೀಳುವಂತೆ ಮಾಡಿದ ಕುಮಾರಸ್ವಾಮಿ ಆರೋಪ
ಬೆಂಗಳೂರು, ಸೆ 23: " ಮುಂಬರುವ ಹದಿನೈದು ಅಸೆಂಬ್ಲಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ" ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಜೆಪಿ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಎಚ್ಡಿಕೆ, ಕಾಂಗ್ರೆಸ್, ಬಿಜೆಪಿ, ಅದರಲ್ಲೂ ಪ್ರಮುಖವಾಗಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. " ಆಪರೇಷನ್ ಕಮಲದಿಂದಾಗಿ ಉಪಚುನಾವಣೆ ಎದುರಾಗಿದೆ" ಎಂದು ಕುಮಾರಸ್ವಾಮಿ ಆರೋಪಿಸಿದರು.
ಉಪ ಚುನಾವಣೆ; ಮಿಷನ್ 12 ಜೊತೆ ಕಣಕ್ಕಿಳಿದ ಸಿದ್ದರಾಮಯ್ಯ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಅಕ್ಷರಸಃ ಕಿಡಿಕಾರಿರುವ ಕುಮಾರಸ್ವಾಮಿ, " ಸಿದ್ದರಾಮಯ್ಯನವರ ಬೃಹನ್ನಾಟಕವನ್ನು ಅರಿಯದವನು ನಾನಲ್ಲ" ಎಂದು ವಾಗ್ದಾಳಿ ನಡೆಸಿದರು.
" ಸ್ವತಂತ್ರ ಸ್ಪರ್ಧೆಯಿಂದ ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಹೆಚ್ಚು ಸ್ಥಾನವನ್ನು ನಾವು ಪಡೆಯುತ್ತೇವೆ" ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ ಎಚ್ಡಿಕೆ, ಮಂಡ್ಯ, ತುಮಕೂರು, ಕೋಲಾರದಲ್ಲಿ ಸಿದ್ದರಾಮಯ್ಯ ಏನೇನು ಮಾಡಿದ್ದಾರೆ ಎನ್ನುವುದು ಗೊತ್ತಿದೆ" ಎಂಡು ಕಿಡಿಕಾರಿದರು.
ಮಂಡ್ಯದಲ್ಲಿ ಸುಮಲತಾ ಅವರನ್ನು ಕಣಕ್ಕಿಳಿಸಿದ್ದು ಯಾರು
ಎಲ್ಲಾ 15ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತೇವೆ
" ಇನ್ನು ಎರಡು ದಿನಗಳಲ್ಲಿ ಎಲ್ಲಾ 15ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತೇವೆ. ದೇವೇಗೌಡರ ಕುಟುಂಬ ಈತನಕ ಅನುಭವಿಸಿರುವ ನೋವು ಸಾಕಾಗಿ ಹೋಗಿದೆ. ಕೆಲವು ಮಾಧ್ಯಮಗಳಲ್ಲಿ ಮತ್ತೆ ಗೌಡರ ಕುಟುಂಬದ ಸದಸ್ಯರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಇದೆ. ನಮ್ಮ ಕುಟುಂಬದ ಸದಸ್ಯರು ಯಾರೂ ಉಪಕದನವಾಗಲಿ, ದೊಡ್ಡ ಕದನದನ್ನಾಗಲಿ ಸ್ಪರ್ಧೆ ಮಾಡುವುದಿಲ್ಲ" ಎಂದು ಎಚ್ಡಿಕೆ ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ನಾಯಕರ ಕಿತ್ತಾಟ ಜನರಿಗೆ ಬೇಸರ ಮೂಡಿಸಿದೆ
" ಕಾಂಗ್ರೆಸ್ ನಲ್ಲಿ ಸ್ಥಳೀಯ ಮುಖಂಡರಲ್ಲಿ ಗೊಂದಲವಿದೆ. ಕಾಂಗ್ರೆಸ್ ನಾಯಕರ ಕಿತ್ತಾಟ ಜನರಿಗೆ ಬೇಸರ ಮೂಡಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಶಕ್ತಿ ಮೀರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೆರವು ನೀಡಿ ಹೃದಯ ವೈಶಾಲ್ಯ ಮೆರೆದವು. ಆದರೆ, ಕಾಂಗ್ರೆಸ್ ನಿಂದ ಸಹಾಯ ನಮಗೆ ಸಿಗಲಿಲ್ಲ. ಹೀಗಾಗಿ ಯಾರ ಸಹವಾಸವೂ ಬೇಡ ಅಂತ ಸ್ವತಂತ್ರವಾಗಿಯೇ ನಾವು ಉಪ ಚುನಾವಣೆ ಎದುರಿಸುತ್ತೇವೆ " - ಎಚ್.ಡಿ.ಕುಮಾರಸ್ವಾಮಿ.
ಕಾಂಗ್ರೆಸ್ ಸೋಲು ಕಂಡಿದ್ದು ಸಿದ್ದರಾಮಯ್ಯನವರ ಅವರ ಸ್ವಯಂಕೃತ ಅಪರಾಧದಿಂದ
" ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದು ಸಿದ್ದರಾಮಯ್ಯನವರ ಅವರ ಸ್ವಯಂಕೃತ ಅಪರಾಧದಿಂದ. ನಿನ್ನೆ ಸಿದ್ದರಾಮಯ್ಯ ಸ್ವಾಭಿಮಾನದ ಭಾಷಣ ಮಾಡಿದರು. ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಸಾಯುತ್ತಿದ್ದಾರೆ. ಎಲ್ಲಿಗೆ ಹೋಯಿತು ಸಿದ್ದರಾಮಯ್ಯನವರ ಸ್ವಾಭಿಮಾನ" - ಎಚ್ಡಿಕೆ.
ಸಿದ್ದರಾಮಯ್ಯನವರ ನಾಟಕ ನನಗೆ ಗೊತ್ತಿಲ್ಲವೇ?
" ಸಿದ್ದರಾಮಯ್ಯನವರ ನಾಟಕ ನನಗೆ ಗೊತ್ತಿಲ್ಲವೇ? ಮಂಡ್ಯದಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಏನ್ ಏನ್ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಸಿದ್ದರಾಮಯ್ಯನವರ ಹೊಸಕೋಟೆ ಭಾಷಣ ಕೇಳಿದ್ದೇನೆ. ದೇವೇಗೌಡರ ಸೋಲು, ಮಂಡ್ಯದಲ್ಲಿ ಸೋಲು ಒಂದು ಕಡೆ ಇರಲಿ. ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಯಾರು ಕಾರಣ ಅಂತ ಮೊದಲು ಸಿದ್ದರಾಮಯ್ಯ ಹೇಳಲಿ " ಎಂದು ಕುಮಾರಸ್ವಾಮಿ, ನೇರವಾಗಿ ಸಿದ್ದರಾಮಯ್ಯನವರನ್ನು ಗುರಿಯಾಗಿಸಿದರು.
ಮುನಿಯಪ್ಪರವರನ್ನು ಕುಕ್ಕಿದ್ದು ಯಾರು ಅಂತ ಸಿದ್ದರಾಮಯ್ಯನವರೇ ಹೇಳಲಿ
" ಹದ್ದಾಗಿ ಕುಕ್ಕಿತಲ್ಲೊ ಅಂತ ನಿನ್ನೆ ಯಾರೋ ಭಾಷಣ ಮಾಡಿದ್ದಾರೆ. ಕಾಂಗ್ರೆಸ್ಸಿನ ಸ್ಥಳೀಯ ನಾಯಕರೇ ಸಿದ್ದರಾಮಯ್ಯ ನೇತೃತ್ವದಲ್ಲಿ, ಮಂಡ್ಯ , ತುಮಕೂರು ಮತ್ತು ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣ ಎಂದು ಹೇಳುತ್ತಿದ್ದಾರೆ. ಕೆ.ಚ್. ಮುನಿಯಪ್ಪರವರನ್ನು ಕುಕ್ಕಿದ್ದು ಯಾರು ಅಂತ ಸಿದ್ದರಾಮಯ್ಯನವರೇ ಹೇಳಲಿ. ನಾಚಿಕೆ ಆಗೋದಿಲ್ವಾ ಅವರಿಗೆ " ಎಚ್.ಡಿ.ಕುಮಾರಸ್ವಾಮಿ.