ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮುಖವಾಡ ಕಳಚಿತು
ಬೆಂಗಳೂರು, ಜ 26: ಕೇಂದ್ರದ ನೂತನ ಕೃಷಿ ಕಾಯ್ದೆ ವಿರುದ್ದ ನವದೆಹಲಿಯಲ್ಲಿ ನಡೆಯುತ್ತಿರುವ ಕಿಸಾನ್ ಗಣತಂತ್ರ ಪೆರೇಡ್ ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಒಬ್ಬ ಹೋರಾಟಗಾರ ಪ್ರತಿಭಟನೆಯಲ್ಲಿ ಮೃತ ಪಟ್ಟಿದ್ದರೆ, ಹಲವಾರು ಪೊಲೀಸರು ಗಾಯಗೊಂಡಿದ್ದಾರೆ.
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಜೊತೆಗೆ ರೈತರದ್ದು ಎಂದು ಹೇಳಲಾಗುವ ಧ್ವಜ ಹಾರಾಡಿದೆ. ಇದು, ದೇಶದೆಲ್ಲಡೆ ವ್ಯಾಪಕ ಪರವಿರೋಧ ಚರ್ಚೆಗೆ ಕಾರಣವಾಗಿದೆ.
ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, "ನಿಜವಾದ ರೈತರು ಈ ಕೂಡಲೇ ದೆಹಲಿ ನಗರವನ್ನು ಬಿಟ್ಟು ಗಡಿಗೆ ಬನ್ನಿ"ಎನ್ನುವ ಮೂಲಕ, ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರ ಜೊತೆಗೆ, ಇನ್ಯಾರಾದರೂ ಕೈಜೋಡಿಸಿದ್ದಾರಾ ಎನ್ನುವ ಬಲವಾದ ಸಂದೇಹ ಎದುರಾಗಿದೆ.
ಕೆಂಪುಕೋಟೆಯಲ್ಲಿ ಇಂದು ನಡೆದ ಘಟನೆಯನ್ನು ಪಕ್ಷಾತೀತವಾಗಿ ಎಲ್ಲರೂ ವಿರೋಧಿಸಿದರೂ, ಇದಕ್ಕೆ ಕೇಂದ್ರದ ವಿಳಂಬ ಧೋರಣೆಯೇ ಕಾರಣ ಎಂದಿದ್ದಾರೆ. ಇನ್ನು, ಇಂದಿನ ಘಟನೆಗೆ ರಾಜ್ಯ ಬಿಜೆಪಿ ನಾಯಕರ ಪ್ರತಿಕ್ರಿಯೆ ಹೀಗಿದೆ:

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್
"ದೆಹಲಿಯಲ್ಲಿ ನಡೆದ ಗಲಭೆ ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮುಖವಾಡವನ್ನು ಕಳಚಿದೆ. ಅನ್ನ ನೀಡುವ ರೈತ ಭೂತಾಯಿಯಷ್ಟೇ ಸಹನಾಮಯಿ. ನೇಗಿಲ ಹಿಡಿಯುವ ಯೋಗಿ ಎಂದೂ ಅಸ್ತ್ರ ಹಿಡಿಯುವುದಿಲ್ಲ. ತುತ್ತು ನೀಡುವ ಅನ್ನದಾತ ಎಂದೂ ನೆತ್ತರು ಹರಿಸುವುದಿಲ್ಲ. ದೇಶದ ಬೆನ್ನೆಲುಬಾಗಿರುವ ಕೃಷಿಕ ಎಂದೂ ದೇಶ ತಲೆತಗ್ಗಿಸುವ ಕೆಲಸ ಮಾಡಲಾರ" - ಡಾ.ಸುಧಾಕರ್.

ಸಚಿವ ಸುರೇಶ್ ಕುಮಾರ್
"ದೆಹಲಿ ಪ್ರತಿಭಟನೆ ರೈತರದಲ್ಲ, ಕೇವಲ ಆ ಕಾಯ್ದೆಗಳ ವಿರುದ್ಧ ವಲ್ಲ ಎಂದು ಇಂದು ಬಯಲಾಯಿತು. ಉದ್ದೇಶ ಕ್ಕಿಂತ ದುರುದ್ದೇಶ ಎದ್ದು ಕಾಣುತ್ತಿದೆ"ಎಂದು ಪ್ರಾಥಮಿಕ ಮತ್ತು ಸೆಕೆಂಡರಿ ಶಿಕ್ಷಣ ಖಾತೆಯ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಕೃಷಿ ಖಾತೆಯ ಸಚಿವ ಬಿ.ಸಿ.ಪಾಟೀಲ್
"ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ, ಭಯೋತ್ಪಾದಕರು. ಈ ಪ್ರತಿಭಟನಾಕಾರರಿಗೆ ಬೇರೆ ದೇಶಗಳ ಜೊತೆಗೆ ಪಾಕಿಸ್ತಾನದ ಕುಮ್ಮುಕ್ಕು ಇದೆ. ಕೆಂಪುಕೋಟೆಯಲ್ಲಿ ಗಲಾಟೆ ಮಾಡುತ್ತಾರೆ ಎಂದರೆ ಇವರಿಗೆ ಉಗ್ರರ ಬೆಂಬಲ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ"ಎಂದು ಕೃಷಿ ಖಾತೆಯ ಸಚಿವ ಬಿ.ಸಿ.ಪಾಟೀಲ್ ಟೀಕಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ
"ಪ್ರತಿಭಟನಾಕಾರರು ಖಂಡಿತವಾಗಿಯೂ ಅನ್ನದಾತರಲ್ಲ. ರೈತರ ಸೋಗಿನಲ್ಲಿ ಇರುವ ಇವರು ದೇಶದ್ರೋಹಿಗಳು. ಇಂದು ನಡೆದ ಎಲ್ಲಾ ಹಿಂಸಾಚಾರಕ್ಕೆ ಅವರನ್ನೇ ಜವಾಬ್ದಾರಿಯನ್ನಾಗಿಸಬೇಕು"ಎಂದು ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

ಸಂಸದ ಎಸ್.ಮುನಿಸ್ವಾಮಿ
"ರೈತರ ಹೆಸರಿನಲ್ಲಿ ಉಗ್ರ ಹೋರಾಟ ಮಾಡುತ್ತಿರುವವರು ರೈತರಲ್ಲ. ನಿಜವಾದ ರೈತ ಹೋರಾಟಗಾರರು ಪೋಲಿಸರು ಮೇಲೆ ಟ್ರಾಕ್ಟರ್ ಹರಿಸುವುದು, ಹಲ್ಲೆ ಮಾಡುವುದು, ಬಸ್ ಗಳನ್ನು ಧ್ವಂಸ ಮಾಡುವ ಸ್ಥಿತಿಗೆ ಹೋಗುವುದಿಲ್ಲ. ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದವರು ದೇಶದ್ರೋಹಿಗಳು" ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ ನಡೆಸಿದರು.












Click it and Unblock the Notifications