ಸಾಲಮನ್ನಾ: ಊರೆಲ್ಲಾ ಸುತ್ತಿಬಳಸಿ ನಿಂತಲ್ಲೇ ಬಂದು ಕೂತ ಸಿಎಂ ಕುಮಾರಣ್ಣ
53ಸಾವಿರ ಕೋಟಿ ರೂಪಾಯಿಯಷ್ಟು ಬೃಹತ್ ರೈತರ ಸಾಲವನ್ನು ಅಧಿಕಾರಕ್ಕೆ ಬಂದ ಕೂಡಲೇ ಮನ್ನಾ ಮಾಡುವುದು ಯಾವುದೇ ಸರಕಾರಕ್ಕೆ ಕಷ್ಟ ಎನ್ನುವ ವಿಚಾರ ತಿಳಿಯದಷ್ಟು ದಡ್ಡರು ಇಲ್ಲಿನ ರೈತರೂ ಅಲ್ಲ, ಜನಸಾಮಾನ್ಯರೂ ಅಲ್ಲ. ಆದರೆ, ಕೈಲಾಗದ ಭರವಸೆಯನ್ನು ಯಾಕೆ ನೀಡಬೇಕು ಎನ್ನುವುದೇ ಇಲ್ಲಿ ಕ್ವೆಷನ್ ಮಾರ್ಕ್..
ಸಚಿವ ಸ್ಥಾನವನ್ನು ಯಾವಯಾವ ಪಕ್ಷಕ್ಕೆ ಎಷ್ಟೆಷ್ಟು ಹಂಚಿಕೊಳ್ಳಬೇಕು ಎನ್ನುವ ಗೊಂದಲವನ್ನು ಬಗೆಹರಿಸಿಕೊಳ್ಳುವುದು ಸಮ್ಮಿಶ್ರ ಸರಕಾರಕ್ಕೆ ಮೊದಲ ಆದ್ಯತೆ ಎಂದು ಕಂಡುಬರುತ್ತಿರುವ ಈ ಹೊತ್ತಿನಲ್ಲಿ, ಬುಧವಾರ (ಮೇ 30) ರೈತರ ಸಭೆಯನ್ನು ಕರೆದ ಮುಖ್ಯಮಂತ್ರಿಗಳು ಸಾಲಮನ್ನಾದ ಕುರಿತಾದ ಅಂತಿಮ ನಿರ್ಧಾರಕ್ಕೆ ಹದಿನೈದು ದಿನಗಳ ಕಾಲಾವಕಾಶವನ್ನು ಕೇಳಿದ್ದಾರೆ.
ಸೋನಿಯಾ ಗಾಂಧಿಯವರ ಆರೋಗ್ಯ ತಪಾಸಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದಾಗಲೇ, ಅವರ ಅನುಪಸ್ಥಿತಿಯಲ್ಲಿ ಸಾಲಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಯಾವುದೇ ನಿರ್ಧಾರಕ್ಕೆ ಬರಲಾರರು ಎನ್ನುವುದು ತಿಳಿದಿದ್ದ ವಿಚಾರವಾಗಿದ್ದರೂ, ಬುಧವಾರ ಸಾಲಮನ್ನಾ ವಿಚಾರದಲ್ಲಿ ನನ್ನ ನಿರ್ಧಾರ ಪ್ರಕಟಿಸುವೆ ಎಂದು ಕುಮಾರಣ್ಣ ಹೇಳಿದ್ದರಿಂದ, ಅವರ ಇಂದಿನ ಸಭೆಗೆ ಹೆಚ್ಚಿನ ಮಹತ್ವ ಬಂದಿತ್ತು.
ಯಾಕೆಂದರೆ, ಪ್ರಧಾನಿಯನ್ನು ದೆಹಲಿಯಲ್ಲಿ ಭೇಟಿಯಾದ ನಂತರ, ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕುಮಾರಣ್ಣ, ರೈತರ ಸಾಲಮನ್ನಾ ಮಾಡಲು ಆಗದೇ ಇದ್ದಲ್ಲಿ ರಾಜೀನಾಮೆ ಬಿಸಾಕಿ ಹೋಗುವೆ ಎಂದು ಹೇಳಿದ್ದರಿಂದ, ಇಂದಿನ ಸಭೆಯಲ್ಲಿ ಏನಾಗಬಹುದು ಎನ್ನುವ ಕುತೂಹಲ ಜನಸಾಮಾನ್ಯರಲ್ಲಿ ಇತ್ತು.
ಅದರೆ, ಹದಿನೈದು ದಿನ ಕಾಲಾವಕಾಶ ಕೇಳಲು ಕುಮಾರಸ್ವಾಮಿ, ಸಾಲಮನ್ನಾ ಮಾಡುವ ವಿಚಾರದಲ್ಲಿರುವ ತೊಡಕುಗಳೇನು ಎನ್ನುವುದನ್ನು ವಿವರಿಸಿದ ಪರಿ ಮೆಚ್ಚುವಂತದ್ದಾಗಿತ್ತು. ಹಾಗಾಗಿಯೇ, ಅವರು ಸಮಯಾವಕಾಶ ಕೇಳಿದಾಗ, ರೈತರು ಹೆಚ್ಚಿನ ಆಕ್ರೋಶ ವ್ಯಕ್ತಪಡಿಸದೇ ಸುಮ್ಮನಾಗಿದ್ದದ್ದು. ಮುಂದೆ ಓದಿ..

ರೈತರ ಜೊತೆಗಿನ ಸಂವಾದದಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯಗಳು
ಕುಮಾರಸ್ವಾಮಿ ರೈತರ ಜೊತೆಗಿನ ಸಂವಾದದಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯಗಳು ಚರ್ಚಿಸಬೇಕಾದಂತಹ ವಿಷಯಗಳೇ. ಅದರಲ್ಲಿ ಕಾಫಿ ಪ್ಲ್ಯಾಂಟ್ ಇಟ್ಟುಕೊಂಡವರ ಸಾಲವನ್ನು ಮನ್ನಾ ಮಾಡಬೇಕಾ, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವವರು ಕೃಷಿ ಸಾಲ ತೆಗೆದುಕೊಂಡಿರುತ್ತಾರೆ, ಅವರ ಸಾಲಮನ್ನಾ ಮಾಡಬೇಕಾ..

ಒಂದೆರಡು ಎಕರೆ ಜಮೀನು ಇರುವವರ ಸಾಲ
ಶೂನ್ಯ ಬಡ್ಡಿದರದಲ್ಲಿ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡು, ನಂತರ ಅದನ್ನು ಬಡ್ಡಿಗೆ ಬಿಡುವವರ ಸಾಲಮನ್ನಾ ಮಾಡಬೇಕಾ, ಒಂದೆರಡು ಎಕರೆ ಜಮೀನು ಇರುವವರ ಸಾಲವನ್ನು ಆದ್ಯತೆಯಲ್ಲಿ ಮನ್ನಾ ಯಾಕೆ ಮಾಡಬಾರದು, ಬೆಳೆಸಾಲದ ಬಗ್ಗೆ ಪರಿಶೀಲನೆ, ಜನಪ್ರತಿನಿಧಿಗಳ ಸಾಲ ಯಾಕೆ ಮನ್ನಾ ಮಾಡಬಾರದು.. ಮುಂತಾದ ಅವರ ಅಭಿಪ್ರಾಯಗಳು ಸೂಕ್ತವಾದುದ್ದೇ..

ಇಸ್ರೇಲ್ ಮಾದರಿ ಕೃಷಿಪದ್ದತಿ ಜಾರಿಗೆ ತರುವ ಬಗ್ಗೆ ಚಿಂತನೆ
ಇಸ್ರೇಲ್ ಮಾದರಿ ಕೃಷಿಪದ್ದತಿ ಜಾರಿಗೆ ತರುವ ಬಗ್ಗೆ ಚಿಂತನೆ ವ್ಯಕ್ತಪಡಿಸಿದ ಕುಮಾರಸ್ವಾಮಿ, ಇಂದಿನ ಸಭೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಿದ್ದು .. ಒಂದೇ ಹಂತದಲ್ಲಿ ಸಾಲಮನ್ನಾ ಸಾಧ್ಯವಿಲ್ಲ ಎನ್ನುವುದು. ಇನ್ನೊಂದು ಮೊದಲ ಹಂತದಲ್ಲಿ ಗ್ರಾಮೀಣ, ಸಹಕಾರ ಬ್ಯಾಂಕುಗಳ ಸಾಲ, ನಂತರವಷ್ಟೇ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ.

ಪುಣ್ಯಾತ್ಮ ರಾಹುಲ್ ಗಾಂಧಿ ನನಗೆ ಸಹಕಾರ ನೀಡಿದ್ದಾರೆ
ಪುಣ್ಯಾತ್ಮ ರಾಹುಲ್ ಗಾಂಧಿ ನನಗೆ ಸಹಕಾರ ನೀಡಿದ್ದಾರೆ, ಅವರಲ್ಲೊಮ್ಮೆ ಚರ್ಚಿಸಿ, ಇನ್ನು ಹದಿನೈದು ದಿನಗಳೊಳಗೆ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಹದಿನೈದು ದಿನಗಳಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಕುಮಾರಣ್ಣ ಹೇಳಿದ್ದಾರೆಯೇ ಹೊರತು, ಸಾಲಮನ್ನಾ ಆಗುತ್ತದೆ ಎಂದಲ್ಲ.

ಸುತ್ತಿಬಳಸಿ ನಿಂತಲ್ಲೇ ಬಂದು ಕೂತ ಸಿಎಂ ಕುಮಾರಣ್ಣ
ಒಟ್ಟಿನಲ್ಲಿ, 'ಕೊಂಕಣ ಸುತ್ತಿ ಮೈಲಾರ' ಎನ್ನುವ ಗಾದೆಮಾತಿನ ಹಾಗೇ.. ರೈತರ ಸಾಲಮನ್ನಾದ ವಿಚಾರದಲ್ಲಿ ಕುಮಾರಸ್ವಾಮಿ ಇಂದು (ಮೇ 30) ಯಾವುದೇ ಗಟ್ಟಿ ನಿರ್ಧಾರಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಸುತ್ತಿಬಳಸಿ, ನಿನ್ನೆ ಮೊನ್ನೆ ಎಲ್ಲಿ ಇದ್ದರೋ, ಇಂದೂ ಕೂಡಾ ಅಲ್ಲೇ ಇದ್ದಾರೆ. ಆದರೆ, ರೈತರಿಗೆ ಮನವರಿಕೆ ಮಾಡುವ ಕೆಲಸವನ್ನು ಮಾಡಿದ್ದಾರೆ.












Click it and Unblock the Notifications