ಈಶ್ವರಪ್ಪಗೆ ಭಾರೀ ಹಿನ್ನಡೆ: ರಾಯಣ್ಣ ಬ್ರಿಗೇಡ್ ಪಥಸಂಚಲನ ಬಂದ್?
ಗಣರಾಜ್ಯೋತ್ಸವದ ದಿನವಾದ ಜನವರಿ 26ರಂದು ಕೂಡಲಸಂಗಮದಲ್ಲಿ ನಡೆಯುವ ರಾಯಣ್ಣ ಬ್ರಿಗೇಡ್ ಸಮಾವೇಶದ ನಂತರ, ಈ ಸಂಘಟನೆಯ ಚಟುವಟಿಕೆಗೆ ಸದ್ಯದ ಮಟ್ಟಿಗೆ ಫುಲ್ ಸ್ಟಾಪ್ ಬೀಳಲಿದೆ ಎನ್ನುವ ಸುದ್ದಿಯಿದೆ.
ರಾಜ್ಯ, ಕೇಂದ್ರದ ಮುಖಂಡರಿಂದ ಹಿಡಿದು ಬೂತ್ ಮಟ್ಟದಲ್ಲಿರುವ ಕಾರ್ಯಕರ್ತರಿಗೆ ಇರುವ ಗೊಂದಲವೆಂದರೆ, ಪಕ್ಷದೊಳಗಿನ ಆಂತರಿಕ ಕಲಹಕ್ಕೆ ಧಾರಾಳವಾಗಿ ತುಪ್ಪ ಸುರಿಯುತ್ತಿರುವವರಾರು? ಈಗಿನ ರಾಜ್ಯ ಬಿಜೆಪಿ ಘಟಕದ ಅಶಿಸ್ತಿಗೆ ಕಾರಣರಾರು? ಯಡಿಯೂರಪ್ಪ, ಈಶ್ವರಪ್ಪ ಅಥವಾ ಶೋಭಾ ಕರಂದ್ಲಾಜೆ?
ಬಲ್ಲ ಮೂಲಗಳಿಂದ ಬಂದ ಸುದ್ದಿಯ ಪ್ರಕಾರ ಬಿಜೆಪಿಯ ಹಿರಿಯ ಮತ್ತು ನಿಷ್ಠಾವಂತ ಮುಖಂಡ ಕೆ ಎಸ್ ಈಶ್ವರಪ್ಪನವರ ಮಹತ್ವಾಕಾಂಕ್ಷೆಯ ರಾಯಣ್ಣ ಬ್ರಿಗೇಡ್ ಸಂಘಟನೆ ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದೆಲ್ಲಡೆ ತನ್ನ ಪೆರೇಡ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ. (ರಾಯಣ್ಣ ಬ್ರಿಗೇಡ್, ಈಶ್ವರಪ್ಪ ತಮ್ಮ ಸ್ಥಾನ ಕಳೆದುಕೊಳ್ತಾರಾ)
ಗಣರಾಜ್ಯೋತ್ಸವದ ದಿನವಾದ ಜನವರಿ 26ರಂದು ಬಸವಣ್ಣನವರ ಪವಿತ್ರಭೂಮಿ ಕೂಡಲಸಂಗಮದಲ್ಲಿ ನಡೆಯುವ ರಾಯಣ್ಣ ಬ್ರಿಗೇಡ್ ಸಮಾವೇಶದ ನಂತರ, ಈ ಸಂಘಟನೆಯ ಚಟುವಟಿಕೆಗೆ ಸದ್ಯದ ಮಟ್ಟಿಗೆ ಫುಲ್ ಸ್ಟಾಪ್ ಬೀಳಲಿದೆ.
ಕಲಬುರಗಿಯಲ್ಲಿ ಭಾನುವಾರ (ಜ 22) ಮುಕ್ತಾಯಗೊಂಡ ಪಕ್ಷದ ಕಾರ್ಯಕಾರಿಣಿಯಲ್ಲಿ ಹಲವು ರೀತಿಯಲ್ಲಿ ಮುಜುಗರ ಎದುರಿಸಿದರೂ, ಬ್ರಿಗೇಡ್ ವಿಚಾರದಲ್ಲಿ ಕಡ್ಡಿತುಂಡಾದಂತೇ ನಿರ್ಧಾರ ತಳೆದಿದ್ದ ಈಶ್ವರಪ್ಪ ಇದ್ದಕ್ಕಿದ್ದಂತೆಯೇ ಯುಟರ್ನ್ ಹೊಡೆದಿದ್ದಾರೆ ಎನ್ನುವ ಸುದ್ದಿಯಿದೆ.
ಈ ಯುಟರ್ನಿಗೆ ಕಾರಣ ಏನಿರಬಹುದು ಎಂದು ಅತ್ತಇತ್ತ ಅವಲೋಕಿಸಿದರೆ, ಯಡಿಯೂರಪ್ಪ ಮತ್ತು ಈಶ್ವರಪ್ಪನವರಿಗೆ ಬಿಜೆಪಿ ರಾಷ್ಟ್ರಾಧಕ್ಷ ಅಮಿತ್ ಶಾ ನೀಡಿದ ಖಡಕ್ ವಾರ್ನಿಂಗ್ ಎನ್ನುವುದು ಬಿಜೆಪಿ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿ.
ರಾಯಣ್ಣ ಬ್ರಿಗೇಡ್ ರಾಜಕೀಯದಿಂದ ಹೊರತಾದ ಸಂಘಟನೆಯಾಗಿದ್ದು, ಇದರ ಮೂಲ ಉದ್ದೇಶ ಯಡಿಯೂರಪ್ಪನವರನ್ನು ಮತ್ತೆ ಸಿಎಂ ಮಾಡುವುದು ಎಂದು ಹೇಳುತ್ತಿದ್ದ ಈಶ್ವರಪ್ಪ, ಯಾವಾಗ ಉಲ್ಟಾ ಹೊಡೆದರೋ ಅಲ್ಲಿಂದ ಇಬ್ಬರ ನಡುವಿನ ಕಲಹ ನಿರ್ಣಾಯಕ ಹಂತ ಬಂದು ತಲುಪಿತು. ಮುಂದೆ ಓದಿ..
ಬಿಎಸ್ವೈ Vs ಈಶ್ವರಪ್ಪ
ಯಡಿಯೂರಪ್ಪನವರು ಸಂಧಾನಕ್ಕೆ ಆಹ್ವಾನ ಕಳುಹಿಸಿದ್ದರೂ, ಅದರಲ್ಲಿ ಭಾಗವಹಿಸಲು ಈಶ್ವರಪ್ಪ ಆಸಕ್ತಿ ತೋರದ ಹಿನ್ನಲೆಯಲ್ಲಿ ಇಬ್ಬರ ನಡುವಿನ ಸಂಧಾನ ಸಭೆ ನಡೆಯಲೇ ಇಲ್ಲ. ಉತ್ತರ ದಕ್ಷಿಣ ಮುಖದಂತಾಗಿರುವ ಪಕ್ಷದ ಇಬ್ಬರು ಪ್ರಮುಖ ಮುಖಂಡರನ್ನು ಒಂದು ಮಾಡಲು ಪಕ್ಷದ ಮಾತೃ ಸಂಘಟನೆ RSS ನಡೆಸಿದ ಪ್ರಯತ್ನವೂ ವರ್ಕೌಟ್ ಆಗಲಿಲ್ಲ.
ಬಲೀ ಕಾ ಬಕ್ರಾ
ಈ ನಡುವೆ ರಾಯಣ್ಣ ಬ್ರಿಗೇಡ್ ಹುಟ್ಟುಹಾಕುವಲ್ಲಿ ಏಕಮೇವ ಕಾರಣಕರ್ತರಾದ ಈಶ್ವರಪ್ಪನವರನ್ನು ಬಿಟ್ಟು ಪಕ್ಷ ವಿರೋಧಿ ಚಟುವಟಿಕೆ ಎನ್ನುವ ಕಾರಣ ನೀಡಿ ಬೆಂಗಳೂರಿನ ಮಾಜಿ ಮೇಯರ್ ವೆಂಕಟೇಶ್ ಮೂರ್ತಿಯವರನ್ನು ಬಿಜೆಪಿಯಿಂದ ಉಚ್ಚಾಟಿಸಿ 'ಬಲೀ ಕಾ ಬಕ್ರಾ' ಮಾಡಲಾಯಿತು. ಜೊತೆಗೆ ಒಂದಷ್ಟು ಮುಖಂಡರಿಗೆ ನೋಟೀಸ್ ನೀಡಲಾಯಿತು.
ಕಲಬುರುಗಿ ಕಾರ್ಯಕಾರಿಣಿ
ಈ ಬೆಳವಣಿಗೆಯ ನಂತರ ಬಿಎಸ್ವೈ ಮತ್ತು ಈಶ್ವರಪ್ಪ ನಡುವಿನ ವಿರಸ ಕಂದಕವಾಗಿ, ಕಲಬರುಗಿ ಕಾರ್ಯಕಾರಿಣಿಯಲ್ಲಿ ಎರಡು ಮುಖಂಡರ ಬೆಂಬಲಿಗರು ಸಭೆಯಲ್ಲೇ ಪರವಿರೋಧ ತಕರಾರು ಎತ್ತಲಾರಂಭಿಸಿದರು. ಶಿಸ್ತಿನ ಪಕ್ಷದ ಅಶಿಸ್ತು ಊರೆಲ್ಲಾ ಮಾತನಾಡುವ ಹಾಗಾಯಿತು.
ಅಮಿತ್ ಶಾ
ಈ ಬೆಳವಣಿಗೆಯ ನಂತರ ಮತ್ತು ರಾಜ್ಯದ ಇಬ್ಬರು ಕೇಂದ್ರ ಸಚಿವರ ಒತ್ತಾಯದ ಮೇರೆಗೆ ಮಧ್ಯಪ್ರವೇಶಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಇಬ್ಬರೂ ಹಿರಿಯ ಮುಖಂಡರಿಗೂ ಖಡಕ್ ಎಚ್ಚರಿಕೆ ನೀಡಿ ಶಿಸ್ತು ಪಾಲಿಸುವಂತೆ ಸೂಚನೆ ನೀಡಿದರು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕೈಬಿಡುವಂತೆ ಅಮಿತ್ ಶಾ, ಈಶ್ವರಪ್ಪನವರಿಗೆ ಮೌಕಿಕ ಎಚ್ಚರಿಕೆ ನೀಡಿದ್ದಾರೆ, ಇಲ್ಲದಿದ್ದರೆ ನಿರ್ದ್ಯಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ವಾರ್ನಿಂಗ್ ನೀಡಿದ್ದಾರೆ. ಈ ಬೆಳವಣೆಗೆಯ ನಂತರ ಬಂದ ದಾರಿಗೆ ಸುಂಕ ಇಲ್ಲ ಎನ್ನುವ ಗಾದೆ ಮಾತಿನಂತೆ, ಯಾವ ಉದ್ದೇಶಕ್ಕೆ ಬ್ರಿಗೇಡ್ ಸ್ಥಾಪನೆ ಮಾಡಿದರೋ, ಅದಕ್ಕೆ ಗಣರಾಜ್ಯೋತ್ವದ ನಂತರ ಕೃಷ್ಣಾರ್ಪಣೆ ಬಿಡಲು ಈಶ್ವರಪ್ಪನವರು ನಿರ್ಧಾರಿಸಿದ್ದಾರೆ ಎನ್ನುವ ಮಾಹಿತಿಯಿದೆ.