ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಅಂತ್ಯ; ಮುಂದಿರುವ 4 ಆಯ್ಕೆ
Recommended Video
ಬೆಂಗಳೂರು, ಸೆಪ್ಟೆಂಬರ್ 13 : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಇಂದು ಅಂತ್ಯಗೊಳ್ಳಲಿದೆ. ಶುಕ್ರವಾರ ಮಧ್ಯಾಹ್ನ ಅವರನ್ನು ಇಡಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಗುರುವಾರ ರಾತ್ರಿ ಡಿ. ಕೆ. ಶಿವಕುಮಾರ್ ಆರೋಗ್ಯ ಏರುಪೇರಾಗಿದೆ. ಆದ್ದರಿಂದ, ಇಡಿ ಕಚೇರಿಯಿಂದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಯಲ್ಲಿಯೇ ಅವರು ವಿಶ್ರಾಂತಿಯನ್ನು ಪಡೆದರು.
ಲೋ ಬಿಪಿ, ಹೊಟ್ಟೆನೋವಿನಿಂದ ಬಳಲುತ್ತಿರುವ ಡಿ. ಕೆ. ಶಿವಕುಮಾರ್ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಶುಕ್ರವಾರ ಬೆಳಗ್ಗೆ ಅವರನ್ನು ತುಘಲಕ್ ರಸ್ತೆಯಲ್ಲಿರುವ ಪೊಲೀಸ್ ಠಾಣೆಗೆ ಇಡಿ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ.
ಇಡಿ ಕಸ್ಟಡಿ ಮುಗಿದ ಹಿನ್ನಲೆಯಲ್ಲಿ ಡಿ. ಕೆ. ಶಿವಕುಮಾರ್ ಪರ ವಕೀಲರು ಇಂದು ಜಾಮೀನು ನೀಡುವಂತೆ ಮನವಿ ಮಾಡಲಿದ್ದಾರೆ. ನ್ಯಾಯಾಲಯದಲ್ಲಿ ಇಂದು ವಿಚಾರಣೆ ಇರುವ ಕಾರಣ ಡಿ. ಕೆ. ಶಿವಕುಮಾರ್ ತವರು ಕ್ಷೇತ್ರ ಕನಕಪುರ, ರಾಮನಗ ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಡಿ. ಕೆ. ಶಿವಕುಮಾರ್ ಮುಂದೆ ಇರುವ ಆಯ್ಕಗಳ ವಿವರ ಇಲ್ಲಿದೆ.

ಇಡಿ ವಶಕ್ಕೆ ಕೇಳುವ ಸಾಧ್ಯತೆ
ಇಡಿ ಅಧಿಕಾರಿಗಳು ಡಿ. ಕೆ. ಶಿವಕುಮಾರ್ರನ್ನು ಶುಕ್ರವಾರ ಮಧ್ಯಾಹ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಇನ್ನೂ 4 ದಿನಗಳ ಕಾಲ ವಶಕ್ಕೆ ನೀಡುವಂತೆ ಅವರು ಮನವಿ ಸಲ್ಲಿಸುವ ಸಾಧ್ಯತೆ ಇದೆ. ಮೊದಲು 14 ದಿನ ಕಸ್ಟಡಿಗೆ ನೀಡುವಂತೆ ಇಡಿ ಮನವಿ ಮಾಡಿತ್ತು. ಆದರೆ, ನ್ಯಾಯಾಲಯ 10 ದಿನಗಳ ಕಾಲ ಮಾತ್ರ ವಶಕ್ಕೆ ನೀಡಿತ್ತು.

ಜಾಮೀನು ನೀಡಬಹುದು
ಡಿ. ಕೆ. ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಇಡಿ ವಿಶೇಷ ನ್ಯಾಯಾಲಯದಲ್ಲಿ ಇಂದು ಜಾಮೀನು ಅರ್ಜಿ ಹಾಕಲಿದ್ದಾರೆ. 10 ದಿನ ವಿಚಾರಣೆ ಎದುರಿಸಿರುವುದರಿಂದ ಜಾಮೀನು ನೀಡುವಂತೆ ಪ್ರಬಲವಾದ ವಾದ ಮಂಡನೆ ಮಾಡಲಿದ್ದಾರೆ. ಜಾಮೀನು ಸಿಗುವುದೇ? ಕಾದು ನೋಡಬೇಕು.

ನ್ಯಾಯಾಂಗ ಬಂಧನ
10 ದಿನ ವಿಚಾರಣೆ ಎದುರಿಸಿರುವುದರಿಂದ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದಾಗಿದೆ. ಕನಿಷ್ಠ 14 ದಿನಗಳ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದಾಗಿದೆ. ಈ ವೇಳೆ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಬಹುದಾಗಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ದೆಹಲಿಯ ತಿಹಾರ್ ಜೈಲನ್ನು ಡಿ. ಕೆ. ಶಿವಕುಮಾರ್ ಸೇರಬೇಕಾಗುತ್ತದೆ.

ದೆಹಲಿ ಹೈಕೋರ್ಟ್ಗೆ ಅರ್ಜಿ
ಇಂದು ಇಡಿ ವಿಶೇಷ ನ್ಯಾಯಾಲಯ ಜಾಮೀನು ನೀಡದಿದ್ದರೆ ಡಿ. ಕೆ. ಶಿವಕುಮಾರ್ ದೆಹಲಿ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಬೇಕಾಗಿದೆ. ಅವರು ದೆಹಲಿಯಲ್ಲಿಯೇ ಇಡಿ ವಶದಲ್ಲಿ ಇರುವುದರಿಂದ ಅಲ್ಲಿಯ ಹೈಕೋರ್ಟ್ನಲ್ಲಿಯೇ ಅರ್ಜಿಯನ್ನು ಹಾಕಬೇಕಿದೆ.












Click it and Unblock the Notifications