ವಿಧಾನಸಭಾ ಚುನಾವಣೆ: ವಿಶೇಷ ಅಂಚೆ ಚೀಟಿ ಬಿಡುಗಡೆ
ಬೆಂಗಳೂರು, ಮೇ 8: ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ವತಿಯಿಂದ ಮುಂಬರುವ ವಿಧಾನಸಭಾ ಚುನಾವಣೆ-2018ರ ಅಂಗವಾಗಿ ಅಂಚೆ ಇಲಾಖೆಯ ಸಹಯೋಗದೊಂದಿಗೆ ಹೊರತಂದಿರುವ ನಾಲ್ಕು ಅಂಚೆ ಚೀಟಿ ಮತ್ತು ವಿಶೇಷ ಅಂಚೆ ಲಕೋಟೆಗಳನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಬಿಡುಗಡೆಗೊಳಿಸಿದರು.
15ನೇ ವಿಧಾನಸಭಾ ಚುನಾವಣೆಯ ಅಂಗವಾಗಿ ಬಿಡುಗಡೆ ಮಾಡಲಾದ ವಿಶೇಷ ಅಂಚೆ ಲಕೋಟೆ ಮೇಲೆ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಂದೇಶಗಳನ್ನು ಮುದ್ರಿಸಲಾಗಿದೆ. ಹಾಗೆಯೇ, ಕರ್ನಾಟಕದ ಕಲೆ-ಸಂಸ್ಕೃತಿಯ ಜೊತೆಗೆ ಚುನಾವಣೆಯ ಆಶಯವನ್ನು ಪ್ರತಿಬಿಂಬಿಸುವಂತಿವೆ.
ವೋಟ್ ಮಾಡಿ ಎನ್ನುತ್ತಿರುವ ಪುನೀತ್, ವೈಷ್ಣವಿ, ಕಂಬಾರರು
ಇದೇ ಸಂದರ್ಭದಲ್ಲಿ ಹೊರತಂದಿರುವ ವಿಶೇಷ ಅಂಚೆ ಚೀಟಿಗಳ ಪೈಕಿ 'ಪ್ರಜಾಪ್ರಭುತ್ವ ಹಬ್ಬ- ಕರ್ನಾಟಕ ಚುನಾವಣೆಗಳು-2018' ಎಂದು ಶೀರ್ಷಿಕೆಯೊಂದಿಗೆ ಹೊರತಂದಿದೆ. ಇದರಲ್ಲಿ ನೃತ್ಯ ಮತ್ತು ಯಕ್ಷಗಾನ ಚಿತ್ರದ ಜೊತೆಗೆ ಮೈಸೂರು ಅರಮನೆಯನ್ನು ತೋರಿಸಲಾಗಿದೆ. ಇನ್ನುಳಿದ 3 ಅಂಚೆ ಚೀಟಿಗಳಲ್ಲಿ ವಿಧಾನಸಭಾ ಚುನಾವಣೆ 2018ರ ಆಶಯಗಳನ್ನು ಪ್ರತಿಬಿಂಬಿಸುವ ವರ್ಣಚಿತ್ರಗಳಿಂದ ಕೂಡಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಜಾಗೃತಿ ಹಾಗೂ ಕೈಗೊಂಡಿರುವ ಅನೇಕ ಕ್ರಮಗಳ ಪೈಕಿ ಅಂಚೆ ಚೀಟಿ ಮತ್ತು ಲಕೋಟೆಯು ಸಹ ಒಂದಾಗಿದೆ. ಇಂದು ಬಿಡುಗಡೆ ಮಾಡಲಾದ ಅಂಚೆ ಚೀಟಿ ಮತ್ತು ಲಕೋಟೆಗಳನ್ನು ಬಳಸಿಕೊಂಡು ಭಾರತದ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಹಾಗೂ ಎಲ್ಲ ರಾಜ್ಯಗಳ ರಾಜ್ಯಪಾಲರುಗಳಿಗೆ ಕಳುಹಿಸಲಾಗುವುದು.
ಇದರ ಜೊತೆಗೆ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗಳು ಎಲ್ಲ ರಾಜ್ಯಗಳಲ್ಲಿರುವ ಮುಖ್ಯ ಚುನಾವಣಾಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಎಲ್ಲಾ ಜಿಲ್ಲಾಧಿಕಾರಿಗಳು , ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ಅಧಿಕಾರಿಗಳಿಗೆ ಕಳುಹಿಸಲಾಗುವುದು.
VVPAT ಹೇಗೆ ಕೆಲಸಮಾಡುತ್ತದೆ? ಮತದಾನಕ್ಕೂ ಮುನ್ನ ಒಂದಷ್ಟು ಮಾಹಿತಿ
ವಿಶೇಷ ಚೇತನರಿಗೂ ಪತ್ರ : 2018ರ ವಿಧಾನಸಭಾ ಚುನಾವಣೆಯ ಆಶಯ, ಒಳಗೊಳ್ಳುವ ಸುಗಮ ಮತ್ತು ನೈತಿಕ ಚುನಾವಣೆ ಆಗಿದೆ. ಇದರ ಆಶಯದಂತೆ ಎಲ್ಲರನ್ನೂ ತಲುಪಲು ಪ್ರಯತ್ನಿಸಲಾಗುತ್ತಿದೆ. ವಿಶೇಷ ಚೇತನರು ಅದರಲ್ಲೂ ದೃಷ್ಠಿ ವಿಕಲಚೇತನರನ್ನು ಗಮನದಲ್ಲಿರಿಸಿಕೊಂಡು, ಅವರಿಗಾಗಿಯೇ ಬ್ರೈಲ್ ಲಿಪಿಯಲ್ಲಿ ಪತ್ರವನ್ನು ಬರೆದು ಅವರುಗಳಿಗೆ ಅಂಚೆ ಮೂಲಕ ಕಳುಹಿಸಲಾಗುತ್ತಿದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದೃಷ್ಠಿ ವಿಕಲಚೇತನರಿಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಬ್ರೈಲ್ ಲಿಪಿಯಲ್ಲಿ ಬರೆದ ಪತ್ರವನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಕಳುಹಿಸಲಾಗುತ್ತಿದೆ. ದೃಷ್ಠಿ ವಿಕಲಚೇತನರು ಮತ್ತು ಅಂಗವಿಕಲರಿಗೆ ಅರಿವು ಮೂಡಿಸಲು ಪತ್ರ ಕಳುಹಿಸುವುದರ ಜೊತೆಗೆ ವಿಶೇಷ ಚೇತನರು ರಚಿಸಿಕೊಂಡಿರುವ ವಾಟ್ಸಪ್ ಗ್ರೂಪ್ಗಳಿಗೆ ಚುನಾವಣಾ ಜಾಗೃತಿಯ ಆಡಿಯೋ ಮತ್ತು ವಿಡಿಯೋ ತುಣುಕುಗಳನ್ನು ಕಳುಹಿಸಿಕೊಡಲಾಗುತ್ತಿದೆ. ಹಾಗೆಯೇ, ಫೇಸ್ ಬುಕ್ , ಇ-ಮೇಲ್ ಸಹಾಯವಾಣಿಗಳ ಮೂಲಕವೂ ಅವರುಗಳಿಗೆ ಅರಿವನ್ನು ಮೂಡಿಸಲಾಗುತ್ತಿದೆ.