E-Khata: ಇ- ಖಾತಾ: ತಲೆಕೆಳಗಾಯ್ತು ಕರ್ನಾಟಕ ಸರ್ಕಾರದ ಲೆಕ್ಕಾಚಾರ: ರಿಯಲ್ ಎಸ್ಟೇಟ್ ಡಲ್!
E-Khata: ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಇ ಖಾತಾವನ್ನು ಕಡ್ಡಾಯ ಮಾಡಿದೆ. ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವವರನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ. ಆದರೆ, ಕರ್ನಾಟಕ ಸರ್ಕಾರದ ಈ ನಿರ್ಧಾರದಿಂದ ಸರ್ಕಾರಕ್ಕೆ ಸಂಕಷ್ಟ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಇ - ಖಾತಾ ಪ್ರಮುಖವಾಗಿದೆ. ಆದರೆ ಸರ್ಕಾರಕ್ಕೆ ಇದೀಗ ದೊಡ್ಡ ಸಂಕಷ್ಟ ಸೃಷ್ಟಿಯಾಗಿದೆ. ಅಲ್ಲದೆ ರಾಜ್ಯ ಸರ್ಕಾರದ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಅದೇನು ಎನ್ನುವ ವಿವರ ಇಲ್ಲಿದೆ.
ಆಸ್ತಿ ವಿಚಾರದಲ್ಲಿ ರಾಜ್ಯ ಸರ್ಕಾರವು ತಂದಿರುವ ಯೋಜನೆಗಳು ಲಾಭವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಸರ್ಕಾರವು ಇ ಖಾತಾ ಜಾರಿ ಮಾಡಿದ ಮೇಲೆ ರಿಯಲ್ ಎಸ್ಟೇಟ್ಗೆ ಪೆಟ್ಟು ಬಿದ್ದಿದೆ. ರಿಯಲ್ ಎಸ್ಟೇಟ್ ವಹಿವಾಟುಗಳು ನಿಧಾನವಾಗಿ ನಡೆಯುತ್ತಿರುವುದರಿಂದಾಗಿ ಆದಾಯದ ಕೊರತೆಗೆ ಕಾರಣವಾಗಿದೆ. ಇದು ಪರೋಕ್ಷವಾಗಿ ರಾಜ್ಯ ಸರ್ಕಾರಕ್ಕೆ ಪೆಟ್ಟುಕೊಟ್ಟಿದೆ. ಅದೇನು ಎನ್ನುವ ವಿವರ ನೋಡೋಣ.

2024-25ನೇ ಹಣಕಾಸು ವರ್ಷದಲ್ಲಿ 26,000 ಕೋಟಿ ರೂಪಾಯಿಯ ಆದಾಯದ ಗುರಿಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಕಿಕೊಂಡಿತ್ತು. ಆದರೆ, ಸರ್ಕಾರವೇ ರೂಪಿಸಿರುವ ಕಠಿಣ ನಿಯಮಗಳಿಂದಾಗಿ ರಾಜ್ಯದಲ್ಲಿ ಸರ್ಕಾರದ ಆದಾಯಕ್ಕೆ ಭರ್ಜರಿ ಕತ್ತರಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಫೆಬ್ರವರಿ 28ರ ವರೆಗೆ 20,186 ಕೋಟಿ ರೂಪಾಯಿ ಆದಾಯ ಸಂಗ್ರವಾಗಿದ್ದರೆ. ಇತ್ತೀಚಿನ ವರೆಗೆ ಬರೋಬ್ಬರಿ 5,800 ಕೋಟಿ ರೂಪಾಯಿ ಆದಾಯ ಸಂಗ್ರಹ ಬಾಕಿ ಉಳಿದಿದೆ ಎಂದು ಅಂದಾಜಿಸಲಾಗಿದೆ.
ಯಾವ ಭಾಗದಲ್ಲಿ ಎಷ್ಟು ಆದಾಯ ಸಂಗ್ರಹ: ಬೆಂಗಳೂರಿನಲ್ಲಿ ಈ ಬಾರಿ ಆಸ್ತಿದಾರರಿಂದ ಭರ್ಜರಿ ಆದಾಯ ಸಂಗ್ರಹವಾಗಿದೆ. ಬೆಂಗಳೂರಿನಲ್ಲಿ 13,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಸಂಗ್ರಹವಾಗುವ ಮೂಲಕ ಪ್ರಥಮ ಸ್ಥಾನದಲ್ಲಿ ಇದೆ. ನಂತರದಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ 1,200 ಕೋಟಿ ರೂಪಾಯಿಗಿಂತ ಹೆಚ್ಚು ಆದಾಯ ಸಂಗ್ರಹವಾಗಿದೆ. ಆದರೆ ರಾಜ್ಯದ ಇನ್ನುಳಿದ 29 ಜಿಲ್ಲೆಗಳಿಂದ 5,000 ಕೋಟಿ ರೂಪಾಯಿಗಿಂತ ಹೆಚ್ಚು ಟ್ಯಾಕ್ಸ್ ಸಂಗ್ರಹವಾಗಿದೆ ಎಂದು toi ವರದಿ ಮಾಡಿದೆ.
ಆಸ್ತಿ ರಿಜಿಸ್ಟ್ರೇಷನ್ಗೆ ಹಿನ್ನಡೆ: ಇನ್ನು ಸರ್ಕಾರವು ಆಸ್ತಿ ವಿಚಾರದಲ್ಲಿ ತೆಗೆದುಕೊಂಡಿರುವ ಕಠಿಣ ಕ್ರಮಗಳು ಹಾಗೂ ಇ - ಖಾತಾದಿಂದ ಕೆಲವು ಆಸ್ತಿದಾರರು ಆಸ್ತಿ ರಿಜಿಸ್ಟ್ರೇಷನ್ ಮಾಡುವುದು ಕಡಿಮೆಯಾಗಿದೆ. ಇದರಿಂದಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆದಾಯದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಇನ್ನು ರಾಜ್ಯದಲ್ಲಿ ಆಸ್ತಿಗಳ ಖರೀದಿ ಹಾಗೂ ಮಾರಾಟದಲ್ಲಿ ಮೋಸವಾಗಬಾರದು. ಅಲ್ಲದೇ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವ ಎಲ್ಲಾ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರಬೇಕು ಎನ್ನುವ ಮುಖ್ಯ ಉದ್ದೇಶದಿಂದ ಇ ಖಾತಾ ಜಾರಿ ಮಾಡಲಾಗಿದೆ.
ಆದರೆ, ಈ ರೀತಿಯ ಕಠಿಣ ಕ್ರಮಗಳಿಂದ ಅಕ್ರಮಗಳಿಗೆ ತಾತ್ಕಾಲಿಕ ಕಡಿವಾಣ ಬಿದ್ದಿದೆಯಾದರೂ, ಇದರಿಂದ ಸರ್ಕಾರಕ್ಕೆ ಬರುತ್ತಿದ್ದ ಆದಾಯ ಭರ್ಜರಿ ಕುಸಿತ ಕಂಡಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ನಿಗದಿ ಮಾಡಲಾಗಿರುವ ಗುರಿಯನ್ನು ತಲುಪುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.
ಇ ಖಾತಾ ಹಾಗೂ ಬಿ ಖಾತಾಗಳನ್ನು ಜಾರಿ ಮಾಡುವುದರಿಂದ ಭರ್ಜರಿ ಆದಾಯ ಬರಲಿದೆ ಎಂದು ನಿರೀಕ್ಷೆ ಮಾಡಿದ್ದ ಕರ್ನಾಟಕ ಸರ್ಕಾರದ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಹೌದು ಈ ನಿಯಮಗಳನ್ನು ಜಾರಿ ಮಾಡಿದ ಮೇಲೆ ಈ ಹಿಂದೆಯಂತೆ ಆಸ್ತಿಯ ವಹಿವಾಟುಗಳು ನಡೆಯುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಬರುತ್ತಿದ್ದ ಆದಾಯಕ್ಕೆ ಭಾರೀ ದೊಡ್ಡ ಮಟ್ಟದ ಪೆಟ್ಟು ಬಿದ್ದಿದೆ.












Click it and Unblock the Notifications