ರಾಜ್ಯ ಬಿಜೆಪಿಯಲ್ಲಿ ಭಾರೀ ಬದಲಾವಣೆ: ಡಿಸಿಎಂ ಲಕ್ಷ್ಮಣ್ ಸವದಿ ತಲೆದಂಡ?
ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಲಕ್ಷ್ಮಣ್ ಸವದಿ, ಮಹೇಶ್ ಕುಮಟಳ್ಳಿ ವಿರುದ್ದ ಸೋತಾಗ, ಸದ್ಯದ ಮಟ್ಟಿಗೆ ಸವದಿ ರಾಜಕೀಯ ಜೀವನ ತೆರೆಮೆರೆಗೆ ಸರಿದಂತೆ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಆದರೆ, ಆಪರೇಷನ್ ಕಮಲದ ಮೂಲಕ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಸವದಿಯ ಪ್ರಯತ್ನವೂ ಸಾಕಷ್ಟಿತ್ತು.
ಯಡಿಯೂರಪ್ಪನವರ ಸರಕಾರದ ಸಂಪುಟ ವಿಸ್ತರಣೆಗೊಂಡಾಗ ಈಶ್ವರಪ್ಪ, ಅಶೋಕ್ ಗೆ ಡಿಸಿಎಂ ಸ್ಥಾನ ಸಿಗಬಹುದು ಎನ್ನುವ ಲೆಕ್ಕಾಚಾರ ಎಲ್ಲರಲ್ಲಿಯೂ ಇತ್ತು. ಆದರೆ ಆಗಿದ್ದೇ ಬೇರೆ. ಡಾ. ಅಶ್ವಥ್ ನಾರಾಯಣ್, ಗೋವಿಂದ ಕಾರಜೋಳ ಸಹಿತ ಲಕ್ಷ್ಮಣ್ ಸವದಿಗೂ ಡಿಸಿಎಂ ಸ್ಥಾನ ಲಭಿಸಿತ್ತು.
ವಿಧಾನಸಭಾ ಚುನಾವಣೆ ಗೆಲ್ಲಲಾಗದ ವ್ಯಕ್ತಿಗೆ ಉಪಮುಖ್ಯಮಂತ್ರಿಯೇ ಹುದ್ದೆಯೇ ಎಂದು ಮೂಗು ಮುರಿದವರೇ ಹೆಚ್ಚು. ಮೂರು ಡಿಸಿಎಂಗಳು ಬಿಜೆಪಿ ಸರಕಾರದಲ್ಲಿ ಏನು ನೇಮಕಗೊಂಡರೋ, ಅದರ ಸಣ್ಣ ಸುಳಿವು ಯಡಿಯೂರಪ್ಪನವರಿಗೂ ಇರಲಿಲ್ಲ ಎನ್ನುವ ಮಾತಿತ್ತು.
ಆದರೆ, ಲಕ್ಷ್ಮಣ್ ಸವದಿ ಆಯ್ಕೆಯ ಹಿಂದೆ, ಬಿಜೆಪಿ ವರಿಷ್ಠರ ಲೆಕ್ಕಾಚಾರವೇ ಬೇರೆ ಇತ್ತು. ಕಾರಣ, ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ ಮತ್ತು ಲಿಂಗಾಯತ ಮತಬ್ಯಾಂಕ್. ಆದರೆ, ಕೆಲವೊಂದು ಮೂಲಗಳ ಪ್ರಕಾರ, ಸವದಿ ಸ್ಥಾನಕ್ಕೆ, ವರಿಷ್ಠರು ಇನ್ನೊಬ್ಬರನ್ನು ತರಲು ಪೂರ್ವತಯಾರಿ ಮಾಡುತ್ತಿದ್ದಾರೆ.

ಅಮಿತ್ ಶಾ, ಲಕ್ಷ್ಮಣ್ ಸವದಿಗೆ ವಹಿಸಿದ್ದರು
ಪಶ್ಚಿಮ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳ ಚುನಾವಣಾ ಉಸ್ತುವಾರಿಯನ್ನು ಅಮಿತ್ ಶಾ, ಲಕ್ಷ್ಮಣ್ ಸವದಿಗೆ ವಹಿಸಿದ್ದರು. ಹಲವು ಬಾರಿ ಸವದಿಯನ್ನು ದೆಹಲಿಗೆ ಕರೆಸಿಕೊಂಡು ಶಾ ಮಾತುಕತೆಯನ್ನು ನಡೆಸಿದ್ದರು. ಯಡಿಯೂರಪ್ಪ, ಸವದಿ, ಮಹಾರಾಷ್ಟ್ರದಲ್ಲಿ ಜಂಟಿಯಾಗಿ ಪ್ರಚಾರವನ್ನೂ ನಡೆಸಿದ್ದರು.

ಯಡಿಯೂರಪ್ಪ ಮತ್ತು ಸವದಿ ಬಿರುಸಿನ ಪ್ರಚಾರ
ಕೊಲ್ಹಾಪುರ, ಸೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿ ಯಡಿಯೂರಪ್ಪ ಮತ್ತು ಸವದಿ ಬಿರುಸಿನ ಪ್ರಚಾರವನ್ನು ನಡೆಸಿದ್ದರು. ಕನ್ನಡಿಗರು ಹೆಚ್ಚಿರುವ ಈ ಭಾಗದ ಪ್ರಚಾರಕ್ಕೆ ಬಿಜೆಪಿ ವರಿಷ್ಠರು ಇವರಿಬ್ಬರನ್ನು ಬಹಳಸಿಕೊಂಡರೆ ಪಕ್ಷಕ್ಕೆ ಲಾಭವಾಗುತ್ತೆ ಎನ್ನುವ ಲೆಕ್ಕಾಚಾರದಲ್ಲಿದ್ದರು. ಆದರೆ, ಬಿಜೆಪಿಗೆ ಇವರಿಂದ ಲಾಭವಾಗಲಿಲ್ಲ. ಕಾಂಗ್ರೆಸ್ ಮತ್ತು ಎನ್ಸಿಪಿಯ ಅಭ್ಯರ್ಥಿಗಳು ಹೆಚ್ಚಿನ ಗೆಲುವನ್ನು ಈ ಮೂರು ಜಿಲ್ಲೆಗಳಲ್ಲಿ ಕಂಡರು.

ಲಕ್ಷ್ಮಣ್ ಸವದಿ ಚುನಾವಣಾ ತಂತ್ರಗಾರಿಕೆ
ಇಷ್ಟಲ್ಲದೇ ಲಕ್ಷ್ಮಣ್ ಸವದಿ ಚುನಾವಣಾ ತಂತ್ರಗಾರಿಕೆ ಒಟ್ಟಾರೆಯಾಗಿ ವರ್ಕೌಟ್ ಆಗಿಲ್ಲ ಎನ್ನುವುದು ಬಿಜೆಪಿ ವರಿಷ್ಠರ ಸಿಟ್ಟಿಗೆ ಕಾರಣ ಎನ್ನುವ ಮಾತಿದೆ. ಮಹಾರಾಷ್ಟ್ರದಲ್ಲಿ ಗಣನೀಯ ಸಾಧನೆ ಮಾಡಬೇಕು ಎನ್ನುವ ಮೂಲ ಉದ್ದೇಶವನ್ನು ಇಟ್ಟುಕೊಂಡೇ, ಲಕ್ಷ್ಮಣ್ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದು. ಇದು ಈಗ ವರ್ಕೌಟ್ ಆಗದ ಹಿನ್ನಲೆಯಲ್ಲಿ, ಆ ಭಾಗದ ಮತ್ತೋರ್ವ ಹಿರಿಯ, ಪ್ರಭಾವಿ ಮುಖಂಡನಿಗೆ ಡಿಸಿಎಂ ಹುದ್ದೆ ನೀಡಲಾಗುತ್ತದೆ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಮಂಚೂಣೆಯಲ್ಲಿದ್ದ ಹೆಸರು ಉಮೇಶ್ ಕತ್ತಿ
ರಾಜ್ಯ ಬಿಜೆಪಿ ಘಟಕದ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಮಂಚೂಣೆಯಲ್ಲಿದ್ದ ಹೆಸರು ಉಮೇಶ್ ಕತ್ತಿ. ಆದರೆ, ಆಶ್ಚರ್ಯಕರ ರೀತಿಯಲ್ಲಿ ಅವರ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ಇದರಿಂದ ಉಮೇಶ್ ಕತ್ತಿ ಬೇಸರಿಸಿಕೊಂಡು, ಕೆಲವೊಂದು ವ್ಯಂಗ್ಯವಾದ ಹೇಳಿಕೆಯನ್ನೂ ನೀಡಿದ್ದರು. ಆದರೆ, ಪರಿಸ್ಥಿತಿಯನ್ನು ಅರಿತಿದ್ದ ಯಡಿಯೂರಪ್ಪ, ಅವರನ್ನು ಸಮಾಧಾನಿಕೊಂಡು, ಸಂಭಾಳಿಸಿಕೊಂಡು ಬಂದಿದ್ದರು.

ಮುಂದಿನ ಒಂದೆರಡು ತಿಂಗಳಲ್ಲಿ ಕತ್ತಿ, ಡಿಸಿಎಂ ಆಗುವ ಸಾಧ್ಯತೆ
ಕೆಲವೊಂದು ಮೂಲಗಳ ಪ್ರಕಾರ, ಲಕ್ಷ್ಮಣ್ ಸವದಿಯವರನ್ನು ಕೆಳಗಿಳಿಸಿ, ಉಮೇಶ್ ಕತ್ತಿಯವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಸಾಧ್ಯತೆಯಿದೆ. ಹುಕ್ಕೇರಿ ಕ್ಷೇತ್ರದ ಶಾಸಕರೂ ಆಗಿರುವ ಕತ್ತಿ, ಕಳೆದ ಚುನಾವಣೆಯಲ್ಲಿ15,385 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಕೂಡಲೇ, ಕತ್ತಿ ನೇಮಕಾತಿ ಇಲ್ಲದಿದ್ದರೂ, ಮುಂದಿನ ಒಂದೆರಡು ತಿಂಗಳಲ್ಲಿ ಕತ್ತಿ, ಡಿಸಿಎಂ ಆಗುವ ಸಾಧ್ಯತೆಯಿದೆ. ಆ ಮೂಲಕ, ಇಷ್ಟುದಿನ ಕಾದರೂ, ಒಳ್ಳೆಯ ಹುದ್ದೆ ಕತ್ತಿಗೆ ಸಿಗಬಹುದು.












Click it and Unblock the Notifications