DK Suresh: ಕನಕಪುರದಿಂದ ಡಿಕೆ ಸುರೇಶ್ ನಾಮಪತ್ರ: ಇರುವ ಒಂದು ಎಂಪಿ ಸ್ಥಾನ ಕಳೆದುಕೊಳ್ಳಲು ಕಾಂಗ್ರೆಸ್ ಸಿದ್ಧತೆ?
ಬೆಂಗಳೂರು, ಏಪ್ರಿಲ್. 20: ರಾಜ್ಯ ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆಯಾಗಿದ್ದು, ಸಂಸದ ಡಿಕೆ ಸುರೇಶ್ ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಂದರೆ ಡಿ.ಕೆ. ಶಿವಕುಮಾರ್ ನಾಮಪತ್ರ ಸಲ್ಲಿಸಿರುವ ಕನಕಪುರದಿಂದಲೇ ಡಿಕೆ ಸುರೇಶ್ ಕೂಡ ನಾಮಪತ್ರ ಸಲ್ಲಿಸಿ ಸ್ಫೋಟಕ ತಿರುವು ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಪ್ರ ಆದಾಯ ಮೀರಿದ ಆಸ್ತಿ ಗಳಿಕೆ, ಅಕ್ರಮ ಹಣ ವರ್ಗಾವಣೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಇರುವ ಕಾರಣ ಅವರ ನಾಮಪತ್ರ ತಿರಸ್ಕೃತವಾಗುವ ಭೀತಿಯಿದೆ. ತಮ್ಮ ಮೇಲಿರುವ ಪ್ರಕರಣಗಳ ಬಗ್ಗೆ ನಿಯಮಗಳ ಅನುಸಾರವಾಗಿ ಅಫಿಡವಿಟ್ ಸಲ್ಲಿಸಿದ್ದರೂ ಆತಂಕವಿರುವ ಕಾರಣ ಮುನ್ನೇಚ್ಚರಿಕೆ ಕ್ರಮವಾಗಿ ಡಿಕೆ ಸುರೇಶ್ ಅವರಿಂದ ನಾಮಪತ್ರ ಸಲ್ಲಿಕೆ ಮಾಡಿಸಲಾಗಿದೆ.

ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಮೂಲತಃ ಕೃಷಿಕ ಹಾಗೂ ನಂತರ ವ್ಯಾಪಾರೋದ್ಯಮಿಯಾಗಿ ಬೆಳೆದ ಡಿ.ಕೆ. ಸುರೇಶ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ 2013 ರಲ್ಲಿ ಪ್ರಥಮ ಬಾರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭಾ ಸಂಸದರಾಗಿ ಚುನಾಯಿತರಾಗಿದ್ದರು. ತದನಂತರ 2014 ರಲ್ಲಿ ನಡೆದ 16ನೇ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಸಂಸದರಾಗಿ ಚುನಾಯಿತರಾದರು. ಬಳಿಕ ಸತತವಾಗಿ 2019ರಲ್ಲಿಯೂ ಆಯ್ಕೆಯಾಗಿದ್ದಾರೆ.
ಆದರೆ, ಈಗ ಇರುವ ಪ್ರಶ್ನೆಯೆಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಸಂಸದ ಎಂದು ಇರುವುದು ಡಿಕೆ ಸುರೇಶ್ ಮಾತ್ರ ಅವರು ಕೂಡ ರಾಜ್ಯ ರಾಜಕಾರಣಕ್ಕೆ ಬಂದರೆ, ಇರುವ ಒಂದೇ ಒಂದು ಸಂಸದ ಸ್ಥಾನವನ್ನು ಕಾಂಗ್ರೆಸ್ ಕಳೆದುಕೊಳ್ಳಲು ಸಿದ್ಧವಿದೆಯಾ ಎಂಬುದು. ಏಕೆಂದರೆ ರಾಜ್ಯದಿಂದ ಸದನದಲ್ಲಿ ಪ್ರತಿನಿಧಿಸಲು ಇರುವ ಏಕೈಕ ವ್ಯಕ್ತಿಯನ್ನೂ ರಾಜ್ಯ ರಾಜಕಾರಣಕ್ಕೆ ಕರೆತಂದರೇ ಕಾಂಗ್ರೆಸ್ ಸ್ಥಾನವೇ ಕಳೆದು ಹೋಗಲಿದೆ.

ರಾಜ್ಯದ 28 ಲೋಕಸಭಾ ಸ್ಥಾನಗಳಲ್ಲಿ 25 ಸ್ಥಾನಗಳಲ್ಲಿ ಬಿಜೆಪಿ ಸಂಸದರಿದ್ದು, ಒಂದು ಸ್ಥಾನದಲ್ಲಿ ಜೆಡಿಎಸ್ನ ಪ್ರಜ್ವಲ್ ರೇವಣ್ಣ, ಮಂಡ್ಯದಿಂದ ಸ್ವತಂತ್ರ ಸಂಸದೆ ಸುಮಲತಾ ಮತ್ತು ಕಾಂಗ್ರೆಸ್ನಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಡಿಕೆ ಸುರೇಶ್ ಇದ್ದಾರೆ. ಇದನ್ನು ಬಿಟ್ಟರೇ ಮತ್ತೆ ಉಪಚುನಾವಣೆ ನಡೆಯಬೇಕಾಗುತ್ತದೆ. ಕಾಂಗ್ರೆಸ್ ಇರುವ ಒಂದು ಎಂಪಿ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ.
ಈ ಹಿಂದೆ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ವದಂತಿಗಳು ಹರಡಿದ್ದವು. ಆದರೆ, ರಾಜ್ಯ ರಾಜಕಾರಣಕ್ಕೆ ಇಳಿಯುವ ಬಗ್ಗೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ 'ನನಗೆ ರಾಜ್ಯ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ. ಉಪಚುನಾವಣೆಗಳನ್ನು ಮಾಡಿ ಮಾಡಿ ರೋಸಿ ಹೋಗಿದ್ದೇನೆ. ಮತ್ತೆ ಉಪ ಚುನಾವಣೆಗಳನ್ನು ಮಾಡಲು ನಾನು ಸಿದ್ದನಿಲ್ಲ. ನಾನು ಸ್ಪರ್ಧೆ ಮಾಡೋದಕ್ಕೆ ಸಿದ್ದನಿಲ್ಲ. ಈ ಬಗ್ಗೆ ಕ್ಷೇತ್ರದ ಜನರ ಅಭಿಪ್ರಾಯ ಪಡೆದುಕೊಳ್ಳಬೇಕು" ಎಂದು ಹೇಳಿದ್ದರು.
ಇದರ ಜೊತೆಗೆ "ಲೋಕಸಭಾ ವ್ಯಾಪ್ತಿಯ ಎಲ್ಲ ಕ್ಷೇತ್ರಕ್ಕೂ ನಾನೇ ಅಭ್ಯರ್ಥಿ ಅಂತ, ನನಗೆ ಶಕ್ತಿ ಕೊಡಿ ಅಂತ ಮತ ಯಾಚನೆ ಮಾಡ್ತಾ ಇದ್ದೇನೆ. ನನಗೆ ಜವಾಬ್ದಾರಿ ಇರುವುದರಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಎಲ್ಲ ಕ್ಷೇತ್ರಗಳಲ್ಲೂ ನನಗೆ ಚುನಾವಣೆ ನಿಲ್ಲಿ ಎನ್ನುವ ಒತ್ತಡ ಇದೆ. ರಾಮನಗರ, ಚನ್ನಪಟ್ಟಣ, ಆರ್ ಆರ್ ನಗರ ಸೇರಿ ಎಲ್ಲ ಕಡೆಯ ಕಾರ್ಯಕರ್ತರು ಕೂಡ ಕೇಳ್ತಾ ಇದ್ದಾರೆ "ಎಂದಿದ್ದರು.
ಆದರೆ, ತಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿರುವ ಡಿಕೆ ಸುರೇಶ್, ಅಣ್ಣನಿಗಾಗಿ ತನ್ನ ಸಂಸದ ಸ್ಥಾನವನ್ನು ಬಿಡಲು ಸಿದ್ಧರಾಗಿ ರಾಜ್ಯ ರಾಜಕಾರಣಕ್ಕೆ ಬಂದಿದ್ದಾರೆ. " ಕೆಲವೊಂದು ಮಾಹಿತಿ ಆಧಾರದ ಮೇಲೆ ನಾಮಪತ್ರ ಸಲ್ಲಿಸಿದ್ದೇನೆ. ಬಿಜೆಪಿಯಿಂದ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಚುನಾವಣಾಧಿಕಾರಿಗಳು ಸಹ ಸರ್ಕಾರದ ಅಧೀನದಲ್ಲೇ ಇದ್ದಾರೆ. ಬಿಜೆಪಿಯ ಕುತಂತ್ರಕ್ಕೆ ತಕ್ಕ ಉತ್ತರ ಕೊಡಬೇಕಿದೆ" ಎಂದು ಹೇಳಿದ್ದಾರೆ.












Click it and Unblock the Notifications