ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಡಿ.ಕೆ.ಸುರೇಶ್?
Recommended Video
ಬೆಂಗಳೂರು, ನವೆಂಬರ್ 10 : 'ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ನಾನು ಎಲ್ಲಿಂದ ಸ್ಪರ್ಧಿಸಬೇಕು? ಎನ್ನುವುದನ್ನು ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ' ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ. ರಂಗೇರಿರುವ ಚನ್ನಪಟ್ಟಣ ಕ್ಷೇತ್ರದ ಚುನಾವಣೆಗೆ ಇದರಿಂದ ಹೊಸ ದಿಕ್ಕು ಸಿಕ್ಕಿದೆ.
ಡಿಕೆಶಿ ನನ್ನ ವಿರುದ್ದ ಸ್ಪರ್ಧಿಸಲಿ :ಸಿ.ಪಿ.ಯೋಗೇಶ್ವರ್ ಸವಾಲು
ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮೇಲೆ ಡಿಕೆಶಿ ಸಹೋದರರ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ಡಿ.ಕೆ.ಸುರೇಶ್ ಅವರು ಚನ್ನಪಟ್ಟಣ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ ವಿರುದ್ಧ ಸ್ಪರ್ಧಿಸುವರೇ? ಕಾದು ನೋಡಬೇಕು.
ಚನ್ನಪಟ್ಟಣದಲ್ಲಿ ಶಕ್ತಿ ಪ್ರದರ್ಶಿಸಿದ ಸಿ.ಪಿ.ಯೋಗೇಶ್ವರ ಹೇಳಿದ್ದೇನು?
ರಾಮನಗರದಲ್ಲಿ ಗುರುವಾರ ಮಾತನಾಡಿದ ಡಿ.ಕೆ.ಸುರೇಶ್ ಅವರು, 'ಡಿಕೆಶಿ ಸಹೋದರರು ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇವೆ. ಕಾಂಗ್ರೆಸ್ ಪಕ್ಷ ನಮಗೆ ಎಲ್ಲವನ್ನೂ ಕೊಟ್ಟಿದೆ' ಎಂದು ಹೇಳಿದರು.
ಮೊದಲ ಬಾರಿ 2014ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಡಿ.ಕೆ.ಸುರೇಶ್ ಗೆಲುವು ಸಾಧಿಸಿದ್ದರು. ಈಗ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ.
'ತೀರ್ಮಾನ ಹೈಕಮಾಂಡ್ಗೆ ಬಿಟ್ಟಿದ್ದು'
'ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಆದರೆ, ತೀರ್ಮಾನ ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು. ನಾನು ಎಲ್ಲಿಂದ ಸ್ಪರ್ಧಿಸಬೇಕು? ಎನ್ನುವುದನ್ನು ಅವರೇ ತೀರ್ಮಾನಿಸಲಿದ್ದಾರೆ' ಎಂದು ಡಿ.ಕೆ.ಸುರೇಶ್ ಹೇಳಿದರು.
'ನಾವು ಬಿಜೆಪಿ ಸೇರಲ್ಲ'
'ನಮ್ಮ ವಿರುದ್ಧ ಯಾವುದೇ ತಂತ್ರಗಾರಿಕೆ ನಡೆದರೂ ನಾವು ಬಿಜೆಪಿ ಸೇರುವುದಿಲ್ಲ. ಕಾಂಗ್ರೆಸ್ ಪಕ್ಷ ನಮಗೆ ಎಲ್ಲವನ್ನೂ ಕೊಟ್ಟಿದೆ. ಡಿಕೆಶಿ ಸಹೋದರರು ಕಾಂಗ್ರೆಸ್ ಪಕ್ಷದಲ್ಲಿಯೇ ಇರಲಿದ್ದಾರೆ' ಎಂದು ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ
ಡಿ.ಕೆ.ಸುರೇಶ್ ಮೊದಲ ಬಾರಿಗೆ 2014 ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 652,723 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿಯಾದ ಪಿ.ಮುನಿರಾಜು ಗೌಡ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದರು.
ಚನ್ನಪಟ್ಟಣದಿಂದ ಡಿ.ಕೆ.ಸುರೇಶ್ ಸ್ಪರ್ಧೆ?
ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ಬಿಜೆಪಿ ಸೇರಿದ ಮೇಲೆ ಚನ್ನಪಟ್ಟಣ ಚುನಾವಣಾ ಕಣ ರಂಗೇರಿದೆ. 'ಡಿ.ಕೆ.ಶಿವಕುಮಾರ್ ನನ್ನ ವಿರುದ್ಧ ಸ್ಪರ್ಧೆ ಮಾಡಲಿ' ಎಂದು ಯೋಗೇಶ್ವರ ಅವರು ಸವಾಲು ಹಾಕಿದ್ದಾರೆ. ಡಿ.ಕೆ.ಸುರೇಶ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರೆ ಚನ್ನಪಟ್ಟಣದಿಂದಲೇ ಸ್ಪರ್ಧಿಸಬಹುದು ಎಂಬ ಸುದ್ದಿಗಳು ಹಬ್ಬಿವೆ.
'ಸಹೋದರನಿಗೆ ಸಹಾಯ ಮಾಡು ಎಂದು ಭಿಕ್ಷೆ ಬೇಡಿದ್ರು'
ಸಿ.ಪಿ.ಯೋಗೇಶ್ವರ ಅವರು ಕಾಂಗ್ರೆಸ್ ತೊರೆದ ಮೇಲೆ 'ಚನ್ನಪಟ್ಟಣಕ್ಕೆ ನಾನೇ ಶಾಸಕ ಎಂದು ಹೇಳುವ ಡಿ.ಕೆ.ಶಿವಕುಮಾರ್ ಅಂದು ನನ್ನ ಬಳಿಗೆ ಹಾರ ತೂರಾಯಿ ಹಿಡಿದುಕೊಂಡು ಬಂದು ನನ್ನ ಸಹೋದರನಿಗೆ ಸಹಾಯ ಮಾಡು ಅಂತಾ ಭಿಕ್ಷೆ ಬೇಡಿದ್ರು. ನನ್ನ ಸಹಾಯದಿಂದ ಅವರ ತಮ್ಮ ಡಿ.ಕೆ.ಸುರೇಶ್ ಸಂಸದರಾದರು. ಅವರ ಸಂಬಂಧಿಕ ರವಿ ವಿಧಾನಪರಿಷತ್ ಸದಸ್ಯರಾದರು' ಎಂದು ಹೇಳಿಕೆ ನೀಡಿದ್ದರು. ಚನ್ನಪಟ್ಟಣ ಕ್ಷೇತ್ರದ ಚುನಾವಣೆ ಡಿಕೆಶಿ ಸಹೋದರರು ಮತ್ತು ಸಿ.ಪಿ.ಯೋಗೇಶ್ವರ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿದೆ.