ಡಿಕೆ ಶಿವಕುಮಾರ್ ಬೆಂಬಲಿಗರಿಗೆ ಡಿ.ಕೆ.ಸುರೇಶ್ ಪತ್ರ
ಬೆಂಗಳೂರು, ಸೆಪ್ಟೆಂಬರ್ 15 : ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರಿಗೆ ಸೆಪ್ಟೆಂಬರ್ 17ರಂದು ದೆಹಲಿಗೆ ಬರದಂತೆ ಸಂಸದ ಡಿ. ಕೆ. ಸುರೇಶ್ ಮನವಿ ಮಾಡಿದ್ದಾರೆ. ಮಂಗಳವಾರ ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಅಂತ್ಯಗೊಳ್ಳಲಿದೆ.
ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್ ಪತ್ರದ ಮೂಲಕ ಮನವಿಯನ್ನು ಮಾಡಿದ್ದಾರೆ. ಶುಕ್ರವಾರ ನ್ಯಾಯಾಲಯದ ಕಲಾಪದ ವೇಳೆ ಡಿ. ಕೆ. ಶಿವಕುಮಾರ್ ಬೆಂಬಲಿಗರು ಗದ್ದಲ ಮಾಡಿದ್ದರು. ಇದರಿಂದಾಗಿ ನ್ಯಾಯಾಧೀಶರು ಅಸಮಾಧಾನಗೊಂಡಿದ್ದರು.
ಸೆಪ್ಟೆಂಬರ್ 17ರ ಮಂಗಳವಾರ ನ್ಯಾಯಾಲಯದ ಕಲಾಪದ ವೇಲೆ ಈ ರೀತಿಯ ಘಟನೆಗಳು ನಡೆಯಬಾರದು. ಆದ್ದರಿಂದ, ಅಭಿಮಾನಿಗಳು, ಬೆಂಬಲಿಗರು ಅಂದು ನವದೆಹಲಿಗೆ ಬರುವುದು ಬೇಡ, ನಿಮ್ಮ ಊರಿನಲ್ಲಿಯೇ ಇರಿ ಎಂದು ಡಿ. ಕೆ. ಸುರೇಶ್ ಮನವಿ ಮಾಡಿದ್ದಾರೆ.

ನವದೆಹಲಿಗೆ ಸೆಪ್ಟೆಂಬರ್ 17ರಂದು ಬರದಂತೆ ಡಿ. ಕೆ. ಶಿವಕುಮಾರ್ ಪರವಾಗಿ ಬೇಡಿಕೊಳ್ಳುತ್ತೇನೆ. ನ್ಯಾಯಾಲಯದಲ್ಲಿ ಕಲಾಪಕ್ಕೆ ತೊಂದರೆ ಆಗದಂತೆ ಸುಗಮವಾಗಿ ಕಲಾಪ ನಡೆಯುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಇದಕ್ಕೆ ನೀವೆಲ್ಲರೂ ಬೆಂಬಲ ನೀಡಲಿದ್ದೀರಿ ಎಂದು ನಂಬುತ್ತೇನೆ ಎಂದು ಡಿ. ಕೆ. ಸುರೇಶ್ ಪತ್ರದಲ್ಲಿ ಹೇಳಿದ್ದಾರೆ.
ಶುಕ್ರವಾರ ಡಿ. ಕೆ. ಶಿವಕುಮಾರ್ರನ್ನು ಇಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ 4 ದಿನಗಳ ಕಾಲ ಅವರನ್ನು ಇಡಿ ಕಸ್ಟಡಿಗೆ ವಹಿಸಿ ಆದೇಶ ನೀಡಿತ್ತು. ಸೆಪ್ಟೆಂಬರ್ 17ರಂದು ಪುನಃ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಜ್ವರ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಡಿ. ಕೆ. ಶಿವಕುಮಾರ್ರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಶನಿವಾರ ಸಂಜೆ ದಾಖಲು ಮಾಡಲಾಗಿದೆ. ಅನಾರೋಗ್ಯದ ಕಾರಣ ಭಾನುವಾರ ಅವರ ವಿಚಾರಣೆ ನಡೆದಿಲ್ಲ.












Click it and Unblock the Notifications