ಕಾಂಗ್ರೆಸ್ನಲ್ಲಿ ಭುಗಿಲೆದ್ದ ಬಣ ರಾಜಕೀಯ: ಸಿದ್ದು ಟೀಂಗೆ ಡಿಕೆ ಅಭಿಮಾನಿಗಳ ಪತ್ರದ ಟಾಂಗ್
ಬೆಂಗಳೂರು, ಜು. 13: ಚುನಾವಣೆ ಹೊಸ್ತಿನಲ್ಲಿ ಸಿಎಂ ಅಭ್ಯರ್ಥಿ ಖಾಯಂ ಮಾಡಿಕೊಳ್ಳಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಬಣ ರಾಜಕೀಯ ತಾರಕ್ಕೇರಿದೆ.
ಸಿದ್ದರಾಮಯ್ಯ ಹುಟ್ಟುಹಬ್ಬದ ಅಂಗವಾಗಿ ಆ. 03 ರಂದು ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.ಇದಕ್ಕೆ ಟಾಂಗ್ ಕೊಟ್ಟಿರುವ ಡಿ.ಕೆ. ಶಿವಕುಮಾರ್ ಅಭಿಮಾನಿಗಳು, ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಮಾದರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಶಿವಕುಮಾರೋತ್ಸವ 23 ತಮ್ಮ ನೇತೃತ್ವದಲ್ಲಿ ಆಚರಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಸಮಿತಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ಶಿವಕುಮಾರೋತ್ಸವ ಆಚರಣೆಗೆ ಒತ್ತಾಯ
ನಾಗಮಂಗಲ ತಾಲೂಕಿನ ಹೊಣಕೆರೆ ಗ್ರಾಮ ಪಂಚಾಯಿತಿ ಸದಸ್ಯ ಜಿ.ಸಿ. ರಾಜು ಅವರು ಈ ಕುರಿತು ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿಗೆ ಪತ್ರ ಬರೆದಿದ್ದು, ಇದು ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ತಾವು ಸೇರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75 ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮ ಮಾಡುತ್ತಿರುವುದು ಪಕ್ಷದ ಹಿರಿಯರಿಂದ ಸಾಮಾನ್ಯ ಕಾರ್ಯಕರ್ತರಿಗೆ ಖುಷಿ ತಂದಿದೆ. ಈ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಕೈ ಜೋಡಿಸುತ್ತೇವೆ.
ಡಿಕೆಶಿ 60 ವರ್ಷದಿಂದ ನಿಷ್ಠೆಯಿಂದ ಕೆಲಸ:
ಆದರೆ ತಾವು ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮದ ರೀತಿ ಚಿಕ್ಕ ವಯಸ್ಸಿನಿಂದಲೇ ಪಕ್ಷಕ್ಕಾಗಿ ದುಡಿದು ಕೊಟ್ಟಂತಹ ಜವಾಬ್ಧಾರಿ ನಿರ್ವಹಿಸಿ ಪಕ್ಷಕ್ಕಾಗಿ ಡಿ.ಕೆ. ಶಿವಕುಮಾರ್ ವೈಯಕ್ತಿಕ ತೊಂದರೆ ಅನುಭವಿಸಿದ್ದಾರೆ. ಡಿಕೆ ಶಿವಕುಮಾರ್ ಪಕ್ಷ ನಿಷ್ಠೆ ನೋಡಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಂದಿನಿಂದ ಹಗಲಿರುಳು ಪಕ್ಷ ಬಲ ಪಡಿಸಲು ತನುಮನ ಧನ ಅರ್ಪಿಸಿದ್ದಾರೆ. ಇತ್ತೀಚೆಗೆ 60 ವರ್ಷ ತುಂಬಿದ ಡಿ.ಕೆ. ಶಿವಕುಮಾರ್ ಅವರ ಹೆಸರಿನಲ್ಲಿ ಶಿವಕುಮಾರೋತ್ಸವ 23 ಆಚರಿಸುವ ಮೂಲಕ ಅವರಿಗೆ ಗೌರವ ಅರ್ಪಣೆ ಮಾಡಬೇಕಿದೆ. ಅದಕ್ಕಾಗಿ ತಮ್ಮ ಸಮಿತಿಯ ಮೂಲಕವೇ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದು ಕೈ ಮುಗಿದು ಕೇಳುತ್ತೇನೆ ಎಂದು ಬರೆದಿದ್ದಾರೆ.
ಶಿವಕುಮಾರೋತ್ಸವ ಕೂಡ ಸಮಿತಿ ಆಚರಿಸಲು ಮನವಿ:
ಅಲ್ಲದೇ ಜು. 13 ರಂದು ನಡೆಯುವ ಅಮೃತ ಮಹೋತ್ಸವ ಸಮಿತಿ ಪೂರ್ವಭಾವಿ ಸಭೆಯಲ್ಲಿ ಶಿವಕುಮಾರೋತ್ಸವ ಆಚರಿಸುವ ಬಗ್ಗೆ ಪ್ರಸ್ತಾಪ ಮಾಡಬೇಕು ಎಂದು ಸಮಿತಿಯಲ್ಲಿ ಮನವಿ ಮಾಡುತ್ತೇನೆ. ಪಕ್ಷಕ್ಕಾಗಿ, ರಾಜ್ಯದ ಜನರ ಸೇವೆ ಮಾಡಿದ ಹಿರಿಯ ನಾಯಕರಿಗೆ ಪಕ್ಷದ ಹಿರಿಯರಿಂದ ಗೌರವ ಅರ್ಪಣೆ ಮಾಡುವ ಕಾರ್ಯಕ್ರಮಕ್ಕೆ ನನ್ನಂತಹ ಲಕ್ಷಾಂತರ ಕಾರ್ಯಕರ್ತರು ಜೊತೆಗಿರುತ್ತೇವೆ. ನಮ್ಮ ಪಕ್ಷದಲ್ಲಿ ನಾಯಕರ ವಿಚಾರ ಬಂದಾಗ, ನನ್ನಂತಹ ಕಾರ್ಯಕರ್ತರಲ್ಲಿ ಎಲ್ಲಾ ನಾಯಕರಿಗೂ ಸಮನಾದ ಗೌರವವಿದೆ. ಇದರ ಬಗ್ಗೆ ಗೊಂದಲವಿಲ್ಲ. ಸಮಿತಿಯ ಪದಾಧಿಕಾರಿಗಳು ನನ್ನ ಮನವಿಯನ್ನು ಪುರಸ್ಕರಿಸಬೇಕು ಎಂದು ಮನವಿ ಮಾಡುತ್ತೇನೆ. ಸಮಿತಿಯ ಪದಾಧಿಕಾರಿಗಳಾದ ತಾವು ಪಕ್ಷದ ಹಿರಿಯ ನಾಯಕರು ಹೀಗಾಗಿ ತಮ್ಮಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೇನೆ. ಈ ಪತ್ರವನ್ನು ರಾಷ್ಟ್ರೀಯ ಅಧ್ಯಕ್ಷ ಸೋನಿಯಾಗಾಂಧಿ, ಯುವ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಮನವಿ ಮಾಡುತ್ತೇನೆ ಎಂದು ಜಿ.ಸಿ. ರಾಜು ಮನವಿ ಮಾಡಿದ್ದಾರೆ.
ಸಿದ್ದುಗೆ ಟಾಂಗ್ ಕೊಟ್ಟ ಡಿಕೆಶಿ ಬೆಂಬಲಿಗರು?
ಜಿ.ಸಿ ರಾಜು ಅವರು ಬರೆದಿರುವ ಪತ್ರ ಇದೀಗ ಕಾಂಗ್ರೆಸ್ ನಲ್ಲಿನ ಬಣ ರಾಜಕೀಯ ತಾರಕಕ್ಕೇರಿದೆ. ಇದನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.ಆದರೆ ಸಿದ್ದರಾಮಯ್ಯ ಅವರು ಈ ಕುರಿತು ಸದ್ಯಕ್ಕೆ ತುಟಿ ಬಿಚ್ಚಿಲ್ಲ. ಸಿದ್ದರಾಮಯ್ಯ ಅಮೃತ ಮಹೋತ್ಸವ ಆಚರಣೆ ಸಮಿತಿ ಕೂಡ ಪ್ರತಿಕ್ರಿಯೆ ನೀಡಿಲ್ಲ. ಸಿದ್ದರಾಮಯ್ಯ ಅಮೃತ ಮಹೋತ್ಸವ ಆಚರಣೆಗೆ ಹದಿನೇಳು ದಿನ ಬಾಕಿಯಿದೆ. ಇದರ ನಡುವೆ ಸಾಕಷ್ಟು ಬದಲಾವಣೆ ಆಗಲಿದೆ. ಮೇಲ್ನೋಟಕ್ಕೆ ಡಿಕೆ ಶಿವಕುಮಾರ್ ನನ್ನ ಉತ್ಸವ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ ಅವರ ಅಭಿಮಾನಿ ಬರೆದಿರುವ ಶಿವಕುಮಾರೋತ್ಸವದ ಪತ್ರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಮೂಲಕ ಡಿಕೆಶಿ ಬಣದ ಬಲ ಪ್ರದರ್ಶನದ ಕಾರ್ಯಕ್ರಮ ರೂಪರೇಷೆಗಳು ಸಿದ್ದಗೊಂಡರೂ ಅಚ್ಚರಿ ಪಡಬೇಕಿಲ್ಲ.
Recommended Video