ಚಾಮುಂಡೇಶ್ವರಿ ಹಿಂದೂಗಳ ಆಸ್ತಿಯಲ್ಲ: ಡಿಕೆ ಶಿವಕುಮಾರ್ ಹೇಳಿಕೆಗೆ ಯದುವೀರ್ ಖಂಡನೆ
ಡಿಕೆ ಶಿವಕುಮಾರ್ ವಿಧಾನಸಭೆಯಲ್ಲಿ ಆರ್ಎಸ್ಎಸ್ ಗೀತೆ ಹಾಡಿದ ವಿಚಾರಕ್ಕೆ ಸ್ವಪಕ್ಷದಿಂದಲೇ ವಿರೋಧ ವ್ಯಕ್ತವಾಗಿದ್ದರಿಂದ ಕ್ಷಮೆ ಕೋರಿದರು. ಇದರ ಬೆನ್ನಲ್ಲೇ ಅವರು ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. "ಚಾಮುಂಡೇಶ್ವರಿ, ಚಾಮುಂಡಿ ಕೇವಲ ಹಿಂದೂಗಳ ಆಸ್ತಿ ಅಲ್ಲ, ದಸರಾ ಧಾರ್ಮಿಕ ಆಚರಣೆ ಅಲ್ಲ, ಸಾಂಸ್ಕೃತಿಕ ಆಚರಣೆ. ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಿದ್ರೆ ತಪ್ಪೇನು? ಎಂದು ಡಿಕೆ ಶಿವಕುಮಾರ್ ಹೇಳಿದ್ದು, ಇದಕ್ಕೆ ಬಿಜೆಪಿ ನಾಯಕರಿಂದ ಭಾರಿ ಖಂಡನೆ ವ್ಯಕ್ತವಾಗುತ್ತಿದೆ. ಬಿಜೆಪಿ ಸಂಸದ ಹಾಗೂ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಕೂಡ ಆಕ್ರೋಶ ಹೊರಹಾಕಿದ್ದಾರೆ.
ಗೌರಿ ಹಬ್ಬದ ದಿನವೇ ಡಿಸಿಎಂ ಡಿ.ಕೆ. ಶಿವಕುಮಾರ್ "ಚಾಮುಂಡಿ ಬೆಟ್ಟ, ಚಾಮುಂಡಿ ದೇವರು ಹಿಂದೂಗಳ ಆಸ್ತಿ ಅಲ್ಲ" ಎಂದಿರುವುದು ಅತ್ಯಂತ ದುಃಖಕರ ಮತ್ತು ನಿಂದನೀಯ. ಚಾಮುಂಡಿ ಬೆಟ್ಟ ಶಕ್ತಿಪೀಠ-ಶಾಸ್ತ್ರಸಮ್ಮತವಾಗಿ ಪವಿತ್ರಗೊಂಡು ಕೋಟ್ಯಾಂತರ ಹಿಂದೂಗಳಿಂದ ಆರಾಧಿತವಾಗಿದೆ. ಈ ದೇವಾಲಯ ಹಿಂದೂಗಳದ್ದೇ ಆಗಿತ್ತು, ಇದೆ ಮತ್ತು ಎಂದೆಂದಿಗೂ ಇರುತ್ತದೆ ಎಂದು ಯದುವೀರ್ ಗುಡುಗಿದ್ದಾರೆ.

ಕಾಂಗ್ರೆಸ್ ಯಾವಾಗಲೂ ಹಿಂದೂ ಭಾವನೆಗಳಿಗೆ ಧಕ್ಕೆ ತಂದು, ತನ್ನ ನಕಲಿ ಸೆಕ್ಯುಲರಿಸಂ ಪ್ರದರ್ಶನ ಮಾಡುತ್ತಿದೆ. ಕರ್ನಾಟಕದ ಜನರು ಎಲ್ಲ ಧರ್ಮಗಳನ್ನೂ ಗೌರವಿಸುತ್ತಾರೆ. ಆದರೆ ಹಿಂದೂ ಹಬ್ಬಗಳು, ಸಂಪ್ರದಾಯಗಳು ಮತ್ತು ದೇವಾಲಯಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಯನ್ನು ಯಾವತ್ತೂ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಧರ್ಮಸ್ಥಳದ ಬಳಿಕ ನಾಡದೇವತೆ ಚಾಮುಂಡಿ ದೇವಿಯ ಜಾಗಕ್ಕೆ ಕಾಂಗ್ರೆಸ್ ಕಣ್ಣು ಹಾಕಿದೆ ಎಂದು ಬಿಜೆಪಿ ಕೂಡ ಆರೋಪ ಮಾಡಿದೆ. ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಚಾಮುಂಡಿ ಬೆಟ್ಟ ಹಿಂದುಗಳದ್ದಲ್ಲ ಎಂದು ಘೋಷಿಸಿದ್ದಾರೆ. ಈ ಹಿಂದೆ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡಿ, ಹೈಕಮಾಂಡ್ ಓಲೈಸಿದ್ದ ಡಿಕೆಶಿ ಇಂದು ಚಾಮುಂಡಿ ಬೆಟ್ಟಕ್ಕೂ ಕನ್ನ ಹಾಕಲು ಮುಂದಾಗಿದ್ದಾರೆ. ಓಲೈಕೆ ರಾಜಕಾರಣಕ್ಕಾಗಿ ಹಿಂದೂಗಳ ಭಾವನೆಗೆ ಪದೇ ಪದೇ ಧಕ್ಕೆ ತರುತ್ತಿರುವ ಕಾಂಗ್ರೆಸ್ ಪಕ್ಷ, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ನಶಿಸಿ ಹೋಗಲಿದೆ. ಇದು ಖಚಿತ ನಿಶ್ಚಿತ ಎಂದಿದೆ.
ಡಿಕೆಶಿ ಹೇಳಿದ್ದೇನು?
ಚಾಮುಂಡೇಶ್ವರಿ ಹಿಂದೂಗಳ ಆಸ್ತಿಯಲ್ಲ, ಎಲ್ಲ ಸಮುದಾಯದವರು ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗ್ತಾರೆ. ಅದು ಅವರ ನಂಬಿಕೆ ಎಂದಿದ್ದಾರೆ. ಚಾಮುಂಡಿ ಬೆಟ್ಟ, ಚಾಮುಂಡಿ ದೇವರು ಎಲ್ಲ ಧರ್ಮದವರ ಪಾಲಿಗೂ ಇದೆ. ನಾವು ಮಸೀದಿ, ಚರ್ಚ್ಗೆ ಹೋಗ್ತೀವಿ, ಗುರುದ್ವಾರಗೆ ಹೋಗ್ತೀವಿ. ಅದೇ ರೀತಿ ಹಿಂದೂ ದೇವಾಲಯಕ್ಕೆ ಬೇರೆಯವರು ಬರುವುದನ್ನ ತಪ್ಪಿಸಲು ಆಗುತ್ತಾ? ಯಾರು ಬೇಕಾದರೂ ಬರಬಹುದು. ಅಯೋಧ್ಯೆಯಲ್ಲಿ ಹಿಂದೂಗಳಿಗೆ ಮಾತ್ರ ಅಂತ ಯಾಕೆ ಬೋರ್ಡ್ ಹಾಕಿಲ್ಲ? ಎಂದಿದ್ದರು.
ಚಾಮುಂಡಿ ಬೆಟ್ಟ ಹಿಂದೂಗಳ ಸ್ವತ್ತೇ ಹೊರತು, ಮುಸ್ಲಿಮರ ಸ್ವತ್ತಲ್ಲ. ಇಂತಹ ನೂರು ಡಿಕೆ ಶಿವಕುಮಾರ್ ಬಂದ್ರೂ ಅದನ್ನ ಏನೂ ಮಾಡೋಕೆ ಆಗಲ್ಲ. ಇದು ಹಿಂದೂಗಳ ಸ್ವತ್ತು, ಧರ್ಮಸ್ಥಳ, ತಿರುಪತಿ ಎಲ್ಲವೂ ಹಿಂದೂಗಳ ಸ್ವತ್ತು. ಈ ವಿಚಾರಕ್ಕೆ ಬಂದರೆ ದಂಗೆಯಾಗುತ್ತೆ ಹುಷಾರ್ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಎಚ್ಚರಿಕೆ ಕೊಟ್ಟಿದ್ದಾರೆ.












Click it and Unblock the Notifications