ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಏಳ್ಗೆಗೆ ಡಿಕೆಶಿ ಪ್ರತಿಜ್ಞೆ ಏನು?
ಮೈಸೂರು, ಜುಲೈ 13: ಕೊರೊನಾ ಮಹಾಮಾರಿ ಜನತೆಯನ್ನು ತಲ್ಲಣಗೊಳಿಸಿರುವ ಸಂಕಷ್ಟದ ಸಮಯದಲ್ಲಿಯೇ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರ ಮುಂದೆ ಹತ್ತಾರು ಜವಾಬ್ದಾರಿಗಳಿರುವುದು ಎದ್ದು ಕಾಣುತ್ತಿದೆ.
Recommended Video
ರಾಜ್ಯದಲ್ಲಿ ಅಧಿಕಾರ ಮತ್ತು ಒಂದಷ್ಟು ಶಾಸಕರನ್ನು ಕಳೆದುಕೊಂಡಿರುವ, ಸಂಘಟನೆಯಲ್ಲಿಯೂ ದುರ್ಬಲವಾಗಿರುವ ಕಾಂಗ್ರೆಸ್ನಲ್ಲಿ ಅಧ್ಯಕ್ಷ ಸ್ಥಾನ ಎನ್ನುವುದು ಅಲಂಕರಿಸುವ ಸ್ಥಾನವಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಹಿಂದೆ ಇದ್ದವರು ಆ ಸ್ಥಾನವನ್ನು ಅಲಂಕರಿಸಿದ್ದರಿಂದಲೇ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿತು ಎಂಬುದನ್ನು ತಳ್ಳಿಹಾಕುವಂತಿಲ್ಲ.
ಕಳೆದೊಂದು ದಶಕದ ಅವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಸ್ಥಾನ ಅಲಂಕರಿಸಿದವರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳದಿರುವುದು ಮತ್ತು ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮತ್ತು ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಿ ಒಂದೇ ವೇದಿಕೆಗೆ ತರುವಲ್ಲಿ ವಿಫಲವಾಗಿದ್ದು ಎದ್ದು ಕಾಣುತ್ತದೆ.

ಇವತ್ತಿನ ಮಟ್ಟಿಗೆ ಮುಳ್ಳಿನ ಹಾಸಿಗೆ
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಸೂಕ್ತ ಎಂಬುದು ಎಲ್ಲ ಕಾರ್ಯಕರ್ತರ ಮನದಲ್ಲಿ ಒಡಮೂಡಿದೆ. ಇತ್ತೀಚೆಗೆ ಅಧಿಕಾರ ಸ್ವೀಕಾರ ಸಮಯದಲ್ಲಿ ಡಿಕೆಶಿ ಅವರ ಉತ್ಸಾಹದ ಮಾತುಗಳು ಮತ್ತು ಪ್ರತಿಜ್ಞೆಗಳು ಸಾಮಾನ್ಯ ಕಾರ್ಯಕರ್ತರಲ್ಲಿಯೂ ಹುರುಪು ತಂದಿದೆ. ಕೊರೊನಾದಂತಹ ಮಾರಕ ಸೋಂಕಿನಿಂದ ಸಂಕಷ್ಟಕ್ಕೀಡಾಗಿರುವ ಈ ಸಮಯದಲ್ಲಿ ಪಕ್ಷದ ಸಾರಥ್ಯ ವಹಿಸಿಕೊಂಡಿರುವ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೂವಿನ ಹಾಸಿಗೆಯಲ್ಲ. ಅದು ಇವತ್ತಿನ ಮಟ್ಟಿಗೆ ಮುಳ್ಳಿನ ಹಾಸಿಗೆ. ಅಲ್ಲಿ ಸ್ವಲ್ಪವೂ ಮೈಮರೆಯುವಂತಿಲ್ಲ.

ಹೈಕಮಾಂಡ್ಗೆ ಡಿಕೆಶಿ ಮೇಲೆ ವಿಶ್ವಾಸ
ಹೈಕಮಾಂಡ್ ಡಿಕೆಶಿ ಮೇಲೆ ವಿಶ್ವಾಸವಿಟ್ಟಿದೆ. ಅವರ ಸಾರಥ್ಯದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಬಯಕೆಯೂ ಇದೆ. ಈಗಾಗಲೇ ಗುಂಪುಗಾರಿಕೆ, ಬ್ಲಾಕ್ ಮೇಲ್ ಮಾಡುವಂತಹ ನಾಯಕರಿಗೆ ಖಡಕ್ ಆಗಿಯೇ ಪಕ್ಷ ಬಿಟ್ಟು ಹೋಗುವವರಿದ್ದರೆ ಹೋಗಬಹುದು ಎಂಬ ಸಂದೇಶವನ್ನು ರವಾನಿಸಿದ್ದಾರೆ. ಅದು ಸ್ವಪಕ್ಷದ ಕೆಲವು ನಾಯಕರಿಗೆ ಎಚ್ಚರಿಕೆಯ ಗಂಟೆಯೂ ಆಗಿದೆ.
ಇವತ್ತಿನ ಪರಿಸ್ಥಿತಿಯಲ್ಲಿ ರಾಜಕೀಯದ ಸನ್ನಿವೇಶವೇ ಬದಲಾಗಿದೆ. ಜನ ಮೊದಲಿನಂತಿಲ್ಲ. ಅಕ್ಷರಸ್ಥರಾಗಿದ್ದಾರೆ. ರಾಜ್ಯ, ದೇಶದ ವಿದ್ಯಮಾನಗಳನ್ನು ಸದಾ ಗಮನಿಸುತ್ತಿರುತ್ತಾರೆ. ಜತೆಗೆ ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿದ್ದು, ಎಲ್ಲರ ಮನೆಮನ ತಲುಪುತ್ತಿದೆ. ಜನರಲ್ಲಿಯೂ ಪ್ರಶ್ನಿಸುವ ಮನೋಭಾವ ಬೆಳೆಯಲಾರಂಭಿಸಿದೆ. ಹೀಗಿರುವಾಗ ಒಂದೆರಡು ದಶಕಗಳ ಹಿಂದೆ ಮಾಡಿದಂತೆ ರಾಜಕೀಯ ಮಾಡುವುದು ಕಷ್ಟಸಾಧ್ಯ. ಪಕ್ಷದ ಹೆಸರು ಹೇಳಿಕೊಂಡು, ನೆಹರು ಕುಟುಂಬವನ್ನು ಮುಂದಿಟ್ಟು ಚುನಾವಣೆ ಗೆಲ್ಲುತ್ತೇವೆ ಎನ್ನುವುದು ಭ್ರಮೆಯಾಗುತ್ತದೆ.

ಕಠಿಣ ಪರಿಸ್ಥಿತಿಯಲ್ಲಿ ರಾಜಕೀಯ ಕಷ್ಟ
ಇವತ್ತಿಗೂ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪ್ರಶ್ನೆಯೊಂದು ಕಾಡುತ್ತಿದೆ. ಅದನ್ನು ಹಲವು ಸಂದರ್ಭಗಳಲ್ಲಿಯೂ ಹೇಳಿಕೊಂಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದೆ, ಆದರೂ ಜನ ಮತ್ತೆ ನನಗೆ ಅಧಿಕಾರ ನಡೆಸಲು ಅವಕಾಶ ಮಾಡಿಕೊಡಲಿಲ್ಲ.
ಈಗಿನ ಪರಿಸ್ಥಿತಿ ತುಂಬಾ ಕಠಿಣವಾಗಿದೆ. ಕೊರೊನಾ ಮಹಾಮಾರಿಯಿಂದಾಗಿ ಜನ ತಲ್ಲಣಗೊಂಡಿದ್ದಾರೆ. ಹೀಗಿರುವಾಗ ಇದು ರಾಜಕೀಯ ಮಾಡಲು ಸಕಾಲವಲ್ಲ ಎಂಬುದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಡಿ.ಕೆ.ಶಿವಕುಮಾರ್ ಅವರಿಗೂ ಗೊತ್ತಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅವರು ಮೌನವಾಗಿದ್ದುಕೊಂಡು ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದರೂ ತಪ್ಪಾಗುವುದಿಲ್ಲ. ಬೇರೆ ಯಾರೇ ಆಗಿದ್ದರೂ ಅಧ್ಯಕ್ಷ ಸ್ಥಾನ ಅಲಂಕರಿಸಿದ ತಕ್ಷಣವೇ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದರು. ಆದರೆ ಅದನ್ನೆಲ್ಲ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಟ್ಟಿದ್ದಾರೆ.

ರಾಜ್ಯದಲ್ಲಿ ಪಕ್ಷದ ಏಳ್ಗೆಗೆ ಚಿಂತನೆ
ಇಷ್ಟರಲ್ಲಿಯೇ ಸಂಘಟನೆಗೆ ಇಳಿಯಬೇಕಾಗಿತ್ತು. ಆದರೆ ಕೊರೊನಾದಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಆದರೂ ಬೆಂಗಳೂರಿನಲ್ಲಿಯೇ ಕುಳಿತು ರಾಜ್ಯದಲ್ಲಿ ಪಕ್ಷದ ಏಳ್ಗೆಗೆ ಏನು ಮಾಡಬೇಕು ಎಂಬುದರ ಚಿಂತನೆಯಲ್ಲಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಹಲವು ಕ್ಷೇತ್ರಗಳು ಕೈಬಿಟ್ಟು ಹೋಗಿವೆ. ಅವುಗಳನ್ನು ಮತ್ತೆ ಕೈವಶ ಮಾಡಿಕೊಂಡರೆ ಮಾತ್ರ ಪಕ್ಷ ಬಲಗೊಳ್ಳಲು ಸಾಧ್ಯ. ಈಗಾಗಲೇ ಪಕ್ಷದಲ್ಲಿರುವ ಕೆಲವು ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ಶಮನಗೊಳಿಸಿ ಒಂದು ಮಾಡಬೇಕಿದೆ. ಜತೆಗೆ ಕಾಂಗ್ರೆಸ್ನಿಂದ ಬಿಜೆಪಿಯತ್ತ ಹೋಗಿರುವ ನಾಯಕರಿಗೆ ಪರ್ಯಾಯ ನಾಯಕರನ್ನು ಪಕ್ಷದಲ್ಲಿ ತಯಾರು ಮಾಡುವ ಜವಾಬ್ದಾರಿಯೂ ಅವರ ಮೇಲಿದೆ.

ಕಾರ್ಯವೈಖರಿಯನ್ನು ಕಾದು ನೋಡಬೇಕು
ಬಹಳಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಲೇ ಇಲ್ಲ. ಅಂತಹ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಬೇಕಾದ ಅಗತ್ಯತೆಯೂ ಇದೆ. ರಾಜಕೀಯದಲ್ಲಿ ಎಲ್ಲ ರೀತಿಯ ಕಷ್ಟನಷ್ಟಗಳನ್ನು ಅನುಭವಿಸಿರುವ ಡಿಕೆಶಿಗೆ ಇದೊಂದು ಸವಾಲು ಆಗಿದ್ದರೂ ಎಲ್ಲವನ್ನು ನಿಭಾಯಿಸಿ ಪಕ್ಷವನ್ನು ಮುಂದಿನ ದಿನಗಳಲ್ಲಿ ಹೇಗೆ ಸಂಘಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications