ರಾಜ್ಯದ ಇಂಜಿನಿಯರ್ ಗಳು ಮನೆಹಾಳರು: ಆರ್ ಅಶೋಕ್ ಹೇಳಿಕೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಏನಂದ್ರು?
ಬೆಂಗಳೂರು, ಜುಲೈ 26: ಕಾಮಗಾರಿಗಳ ಪರಿಷ್ಕೃತ ವೆಚ್ಚಗಳ ಕುರಿತು ವಿಧಾನಸಭೆಯಲ್ಲಿ ಮಾತನಾಡುವ ವೇಳೆ ರಾಜ್ಯದ ಎಂಜಿನಿಯರ್ ಗಳನ್ನು ಮನೆಹಾಳರು ಎಂದು ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ಆರ್ ಅಶೋಕ್ ಅವರು ಜರೆದಿರುವುದನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಖಂಡಿಸಿದ್ದಾರೆ.
ಸರ್ ಎಂ ವಿಶ್ವೇಶ್ವರಯ್ಯ ಅವರಿಂದ ಹಿಡಿದು ಈಗಿನವರವರೆಗೂ ರಾಜ್ಯದ ಪ್ರಗತಿಯಲ್ಲಿ ಇಂಜಿನಿಯರ್ ಗಳ ಕೊಡುಗೆ ಗಣನೀಯವಾದದ್ದು. ಅಣೆಕಟ್ಟೆಗಳು, ವಿದ್ಯುತ್ ಯೋಜನೆಗಳು, ಬೃಹತ್ ಕಟ್ಟಡಗಳು, ಐಟಿಬಿಟಿ ಸೇರಿದಂತೆ ನಾಡಿನ ಅಭಿವೃದ್ಧಿಗೆ ಅನೇಕ ಕ್ಷೇತ್ರಗಳಲ್ಲಿ ಇಂಜಿನಿಯರ್ ಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಇಲ್ಲದೆ ರಾಜ್ಯ ಮತ್ತು ದೇಶದ ಪ್ರಗತಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಪ್ರಗತಿಯ ರುವಾರಿಗಳನ್ನು ಮನೆಹಾಳರು ಎಂದು ಅಶೋಕ್ ಅವರು ಕರೆದಿರುವುದು ಸರಿಯಲ್ಲ ಎಂದು ಶಿವಕುಮಾರ್ ಅವರು ಹೇಳಿದ್ದಾರೆ.

ಅಶೋಕ್ ಅವರು ತಕ್ಷಣವೇ ಇಂಜಿನಿಯರ್ ಗಳ ಕ್ಷಮಾಪಣೆ ಕೇಳಬೇಕು. ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ. ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಶೋಕ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಇಂಜಿನಿಯರ್ ಗಳನ್ನು ಅವಹೇಳನ ಮಾಡಿರುವ ಹೇಳಿಕೆಯನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು.
ಇದಕ್ಕೂ ಮೊದಲು ಅಧ್ಯಕ್ಷ ದೇವರಾಜ್ ನೇತೃತ್ವದಲ್ಲಿ ಕರ್ನಾಟಕ ಇಂಜಿನಿಯರ್ ಗಳ ಸಂಘದ ಪ್ರತಿನಿಧಿಗಳು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಗುರುವಾರ ಭೇಟಿ ಮಾಡಿ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಲು ಅಶೋಕ್ ಅವರ ಮೇಲೆ ಒತ್ತಡ ತರಬೇಕೆಂದು ಕೋರಿದರು.
ಕಾಮಗಾರಿಗಳ ಪರಿಷ್ಕೃತ ವೆಚ್ಚಗಳ ಕುರಿತು ವಿಧಾನಸಭೆಯಲ್ಲಿ ಮಾತನಾಡುವ ವೇಳೆ ಎಂಜಿನಿಯರ್ಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವಿಪಕ್ಷ ನಾಯಕರಾದ ಆರ್.ಅಶೋಕ್ ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಲು ಅವರ ಮೇಲೆ ಒತ್ತಡ ತರಬೇಕೆಂದು ಕರ್ನಾಟಕ ಇಂಜಿನಿಯರ್ಗಳ ಸಂಘದ ಪದಾಧಿಕಾರಿಗಳು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.












Click it and Unblock the Notifications