'ಡಿ.ಕೆ.ಶಿವಕುಮಾರ್ ಬಿಜೆಪಿ ಕಡೆ ಒಂದು ಕಾಲಿಟ್ಟಿದ್ದಾರೆ, ದೆಹಲಿಯಲ್ಲಿ ಚರ್ಚೆಯೂ ಆಗಿದೆ'
ಡಿ.ಕೆ.ಶಿವಕುಮಾರ್ ಅವರು ಸಿಎಂ ಕುರ್ಚಿಯ ಆಕಾಂಕ್ಷಿ ಎನ್ನುವುದು ಇಡೀ ರಾಜ್ಯ ರಾಜಕೀಯ ವಲಯದ ಚರ್ಚಾ ವಿಷಯ. ಆದರೆ ಸಿದ್ದರಾಮಯ್ಯ ಅವರು ತಾನೇ ಪೂರ್ಣಾವಧಿ ಸಿಎಂ ಎನ್ನುವ ಮೂಲಕ ಶಾಕ್ ಕೊಟ್ಟಿದ್ದಾರೆ. ಅವಕಾಶ ಬಂದಾಗ ಸಿಎಂ ಆಗೇ ಆಗ್ತೀನಿ ಅನ್ನೋದು ಡಿಕೆ ಶಿವಕುಮಾರ್ ಅವರ ಬಲವಾದ ನಂಬಿಕೆ. ಇತ್ತೀಚೆಗೆ ಆರ್ಎಸ್ಎಸ್ ಗೀತೆ ಹಾಡುವ ಮೂಲಕ ಸ್ವಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದ ಡಿಕೆಶಿ ಕ್ಷಮೆ ಕೇಳಿ, ನಾನು ಕಾಂಗ್ರೆಸ್ನ ನಿಷ್ಠಾವಂತ, ಸಾಯುವವರೆಗೆ ಕಾಂಗ್ರೆಸ್ನಲ್ಲೇ ಇರುತ್ತೇನೆ ಎಂದಿದ್ದರು. ಈ ಬೆಳವಣಿಗೆಯ ನಡುವೆ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಗೆ ಹೋಗ್ತಾರೆ ಎಂಬ ಚರ್ಚೆ ಶುರುವಾಗಿದೆ. ಡಿಕೆ ಶಿವಕುಮಾರ್ ಆಗಲೇ ಒಂದು ಕಾಲು ಬಿಜೆಪಿ ಕಡೆ ಇಟ್ಟಾಗಿದೆ ಎಂದು ಶಾಸಕರೊಬ್ಬರು ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. 'ಡಿಕೆ ಶಿವಕುಮಾರ್ ನಾಟಕ ಮಾಡ್ತಿದ್ದಾರೆ. ಅವರು ಈಗಾಗಲೇ ಬಿಜೆಪಿ ಕಡೆಗೆ ಒಂದು ಕಾಲಿಟ್ಟಿದ್ದಾರೆ. ಬಿಜೆಪಿಗೆ ಬರುವ ಬಗ್ಗೆ ಒಂದು ಚರ್ಚೆ ಕೂಡ ನಡೆದಿದೆ. ಆದರೆ ಅವರ ಹಿಂದೆ ಸಾಕಷ್ಟು ಶಾಸಕರು ಇಲ್ಲ ಎಂಬ ಕಾರಣಕ್ಕೆ ಸುಮ್ಮನಾಗಿದ್ದಾರೆ. ದೆಹಲಿಯಲ್ಲಿ ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಚರ್ಚೆಯೂ ನಡೆದಿದೆ' ಎಂದು ಹೇಳಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

'ಕಾಂಗ್ರೆಸ್ನ 70 ಶಾಸಕರು ಬಿಜೆಪಿಗೆ'
'ಡಿಕೆಶಿ ಹಾಗೂ ವಿಜಯೇಂದ್ರ ನೇತೃತ್ವದಲ್ಲಿ 60ರಿಂದ 70 ಕಾಂಗ್ರೆಸ್ ಶಾಸಕರನ್ನ ಕರೆತರುತ್ತೀವಿ ಎಂಬ ಚರ್ಚೆಯೂ ಆಗಿದೆ. ಮುಂದೆ ನಮಸ್ತೆ ಸದಾ ವತ್ಸಲೇ ಹಾಡ್ತೀವಿ ಎಂದು ಹಾಡಿದ್ದಾರಷ್ಟೇ. ನಮಗಿರುವ ಮಾಹಿತಿ ಪ್ರಕಾರ ಡಿಕೆ ಶಿವಕುಮಾರ್ ಅವರ ಹಿಂದೆ 13 ಜನ ಶಾಸಕರಿಲ್ಲ. ಎಲ್ಲರೂ ಸಿದ್ದರಾಮಯ್ಯ ಅವರ ಕಡೆ ಇದ್ದಾರೆ. ನನಗೆ ನಮ್ಮ ಪಕ್ಷದ ಹೈಕಮಾಂಡ್ ನಾಯಕರೊಬ್ಬರು ಇದೇ ವಿಚಾರ ಕೇಳಿದ್ರು. ಅದಕ್ಕೆ ನಾನು ಒಂದು ಹತ್ತು ಮಂದಿ ಇರಬಹುದು. ಬಿಜೆಪಿಗೆ ಅಂದ್ರೆ ಅವರೂ ಬರೋಲ್ಲ ಎಂದೆ. ಅದಕ್ಕೆ ಅವರೂ ಕೂಡ ಹೌದು ಅಂದ್ರು' ಎಂದಿದ್ದಾರೆ.
'ಇನ್ನು ಡಿಕೆ ಶಿವಕುಮಾರ್ ಬಿಜೆಪಿಗೆ ಬಂದ್ರೆ ಅವರೇ ಸಿಎಂ, ವಿಜಯೇಂದ್ರ ಉಪಮುಖ್ಯಮಂತ್ರಿ ಆಗಬಹುದು. ಇಬ್ಬರೂ ಸೇರಿ ಕರ್ನಾಟಕವನ್ನು ಮಾರಿಬಿಡುತ್ತಾರೆ ಎಂದಿದ್ದಾರೆ. ಅದಕ್ಕೆ ನಾವು ಡಿಕೆ ಶಿವಕುಮಾರ್ ಬೇಡ ಅಂತಿದ್ದೀವಿ. ಸಿದ್ದರಾಮಯ್ಯ ಅವರು ಸಾಬ್ರ ಪರ ಒಂದೆರಡು ವರ್ಷ ಮಾಡಲಿ. ಆದರೆ ಡಿಕೆ ಶಿವಕುಮಾರ್ ಸಿಎಂ ಆಗೋದು ಬೇಡವೇ ಬೇಡ. ಅವರೊಬ್ಬ ಭ್ರಷ್ಟ, ಬಿಜೆಪಿಯಲ್ಲಿ ಇವನೊಬ್ಬ ಭ್ರಷ್ಟ. ಇಬ್ಬರೂ ಸೇರಿದ್ರೆ ಕರ್ನಾಟಕದ ಗತಿ ಅಧೋಗತಿ' ಎಂದಿದ್ದಾರೆ ಯತ್ನಾಳ್.
ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಆರ್ಎಸ್ಎಸ್ ಗೀತೆ ಹಾಡುವ ಮೂಲಕ ಕಾಂಗ್ರೆಸ್ಗೆ ಶಾಕ್ ನೀಡಿದ್ದರು. ಬಳಿಕ ಸ್ಪಷ್ಟನೆಯೂ ನೀಡಿ ಕ್ಷಮೆ ಕೇಳಿದ್ದರು. ನಾನು ಹುಟ್ಟು ಕಾಂಗ್ರೆಸ್ಸಿಗ, ನಾನು ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ. ನನ್ನ ಪಕ್ಷನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು. ಯಾರಿಗೇ ಆಗಲಿ ನನ್ನಿಂದ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ ಎಂದು ಹೇಳಿದ್ದರು. ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.












Click it and Unblock the Notifications