DK Shivakumar: ಕರ್ನಾಟಕದ ಜೈಲಲ್ಲಿ ಭದ್ರತೆ ಹೆಚ್ಚಿಸಿ: ಅಮಿತ್ ಶಾಗೆ ಡಿ.ಕೆ.ಶಿವಕುಮಾರ್ ಮನವಿ
ನವದೆಹಲಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಕರ್ನಾಟಕದ ಭದ್ರತಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹೈಟೆಕ್ ಮಾಡಲು ಹಾಗೂ ಪೊಲೀಸ್ ಇಲಾಖೆಯನ್ನು ಆಧುನೀಕರಣಗೊಳಿಸಲು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಬರೋಬ್ಬರಿ 9 ಪ್ರಮುಖ ಬೇಡಿಕೆಗಳ ಪಟ್ಟಿಯನ್ನು ಕೇಂದ್ರದ ಮುಂದಿಟ್ಟಿದ್ದಾರೆ.
ಕರ್ನಾಟಕ ಪೊಲೀಸ್ಗೆ 'ಪ್ರೆಸಿಡೆಂಟ್ಸ್ ಕಲರ್' ಗೌರವ
ರಾಜ್ಯ ಪೊಲೀಸ್ ಇಲಾಖೆಯ ಅತ್ಯುನ್ನತ ಸೇವೆಗಾಗಿ 'ಪ್ರೆಸಿಡೆಂಟ್ಸ್ ಕಲರ್' (ರಾಷ್ಟ್ರಪತಿಗಳ ವಿಶೇಷ ಗೌರವ) ಪ್ರಶಸ್ತಿ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದುವರೆಗೆ ಕರ್ನಾಟಕಕ್ಕೆ ಈ ಪ್ರತಿಷ್ಠಿತ ಗೌರವ ಸಿಕ್ಕಿಲ್ಲದ ಕಾರಣ, ಇದನ್ನು ಶೀಘ್ರವಾಗಿ ಪರಿಶೀಲಿಸಿ ಅನುಮೋದನೆ ನೀಡಬೇಕೆಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ವಿಜಯನಗರ ಮತ್ತು ರಾಮನಗರದಲ್ಲಿ ಹೊಸ ಬೆಟಾಲಿಯನ್ಸ್
ರಾಜ್ಯದಲ್ಲಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ವಿಜಯನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ 2 ಹೊಸ 'ಇಂಡಿಯಾ ರಿಸರ್ವ್ ಬೆಟಾಲಿಯನ್ಸ್' (IRBs) ಸ್ಥಾಪಿಸಲು ಪ್ಲಾನ್ ಮಾಡಲಾಗಿದೆ. ಇದಕ್ಕೆ ಅಂದಾಜು 243.87 ಕೋಟಿ ರೂ. ವೆಚ್ಚ ತಗಲಲಿದ್ದು, ಈ ಪ್ರಸ್ತಾವನೆಗೆ ತಕ್ಷಣ ಒಪ್ಪಿಗೆ ನೀಡುವಂತೆ ಕೋರಲಾಗಿದೆ.
4 ನಗರಗಳಲ್ಲಿ ಹೈಟೆಕ್ ಕಮಾಂಡ್ ಸೆಂಟರ್
ರಾಜ್ಯದ 4 ಪ್ರಮುಖ ನಗರಗಳಲ್ಲಿ ಅತ್ಯಾಧುನಿಕ 'ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್' ಹಾಗೂ ಹೊಸ ತಂತ್ರಜ್ಞಾನದ ಸಂವಹನ ಉಪಕರಣಗಳನ್ನು ಅಳವಡಿಸಲು ASUMP ಯೋಜನೆಯಡಿ 280 ಕೋಟಿ ರೂ.ಗಳ ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ಖಾಸಗಿ ಕಂಪನಿಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಪೊಲೀಸ್ ಇಲಾಖೆಯ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅನುವಾಗುವಂತೆ, ಕಂಪನಿಗಳ ಕಾಯ್ದೆಯಡಿ ಪೊಲೀಸ್ ಸಂಬಂಧಿತ ಕೆಲಸಗಳನ್ನು ಸೇರಿಸಲು ಕೇಂದ್ರದ ಅನುಮೋದನೆ ಕೋರಿದ್ದಾರೆ.
ಜೈಲುಗಳ ಭದ್ರತೆಗೆ 20 ಕೋಟಿ ರೂ.
ರಾಜ್ಯದಲ್ಲಿರುವ ಪೊಲೀಸ್ ತರಬೇತಿ ಕೇಂದ್ರಗಳ ಮೂಲಸೌಕರ್ಯಗಳನ್ನು ಅಪ್ಗ್ರೇಡ್ ಮಾಡಲು 258.53 ಕೋಟಿ ರೂ.ಗಳ ಬೃಹತ್ ಯೋಜನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ರಾಜ್ಯದ ಕಾರಾಗೃಹಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಭದ್ರತೆ ಹೆಚ್ಚಿಸಲು 2025-26 ರ ಸಾಲಿನಲ್ಲಿ ಸಿಸಿಟಿವಿ, ವಾಕಿ-ಟಾಕಿ ಸೇರಿದಂತೆ ಆಧುನಿಕ ಉಪಕರಣಗಳ ಖರೀದಿಗೆ 20 ಕೋಟಿ ರೂ.ಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ.
ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989 ರ ನಿಯಮ 52-A ಅನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಕಾಲಾವಕಾಶವನ್ನು ವಿಸ್ತರಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದೊಂದಿಗೆ ಚರ್ಚಿಸಿ ಅನುಮೋದನೆ ಕೊಡಿಸಲು ಗೃಹ ಸಚಿವರಿಗೆ ವಿನಂತಿಸಿದ್ದಾರೆ. ಸುಪ್ರೀಂಕೋರ್ಟ್ನ ನಿರ್ದೇಶನದಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿರುವ ಹಳೆಯ ಸಿಸಿಟಿವಿ ಕ್ಯಾಮೆರಾಗಳನ್ನು ಅತ್ಯಾಧುನಿಕ ತಂತ್ರಜ್ಞಾನಕ್ಕೆ ಮೇಲ್ದರ್ಜೆಗೆ ಏರಿಸಲು 278.26 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಪರಿಗಣಿಸಲು ಕೋರಿದ್ದಾರೆ.
'K4C' ಯುನಿಟ್ ಸ್ಥಾಪನೆ
ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ವಂಚನೆ ಹಾಗೂ ಡಿಜಿಟಲ್ ಅಪರಾಧಗಳಿಗೆ ಬ್ರೇಕ್ ಹಾಕಲು ಕರ್ನಾಟಕ ಸರ್ಕಾರ ಮಹತ್ತರ ಹೆಜ್ಜೆ ಇಟ್ಟಿದೆ. ಅಂದಾಜು 360 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ 'ಕರ್ನಾಟಕ ಸೈಬರ್ ಕ್ರೈಮ್ ಕಂಟ್ರೋಲ್ ಅಂಡ್ ಕೋಆರ್ಡಿನೇಷನ್ ಯುನಿಟ್' (K4C) ಸ್ಥಾಪಿಸಲು ಉದ್ದೇಶಿಸಿದ್ದು, ಇದರ ಸವಿಸ್ತಾರವಾದ ವರದಿಯನ್ನು ಶೀಘ್ರದಲ್ಲೇ ಕೇಂದ್ರಕ್ಕೆ ಸಲ್ಲಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸದ್ಯ ದೆಹಲಿಯಲ್ಲಿ ಬೀಡುಬಿಟ್ಟಿರುವ ಡಿಕೆಶಿ, ಕರ್ನಾಟಕ ಅಭಿವೃದ್ಧಿ ಸಂಬಂಧ ಕೇಂದ್ರ ನಾಯಕರ ಜೊತೆ ಸರಣಿ ಮಾತುಕತೆಯಲ್ಲಿ ತೊಡಗಿದ್ದಾರೆ.













Click it and Unblock the Notifications