Shreyanka Patil: ಟಿ20 ವಿಶ್ವಕಪ್ ವೇಳೆಯೇ 'ಡ್ರೆಸ್ಸಿಂಗ್ ರೂಂ' ಕಣ್ಣೀರಿನ ಕಥೆ ರಿವೀಲ್ ಮಾಡಿದ ಕನ್ನಡತಿ ಶ್ರೇಯಾಂಕಾ ಪಾಟೀಲ್
Shreyanka Patil: ಈಗಾಗಲೇ ಶುಕ್ರವಾರ (ಜೂನ್ 12)ದಿಂದ ಮಹಿಳಾ ಟಿ20 ವಿಶ್ವಕಪ್ 2026 ಹಬ್ಬ ಆರಂಭವಾಗಿದೆ. ಟೀಮ್ ಇಂಡಿಯಾ ಜೂನ್ 14ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ಮೂಲಕ ಇನ್ನಿಂಗ್ಸ್ ಆರಂಭಿಸಲಿದೆ. ಇದಕ್ಕೂ ಮುನ್ನ ಭಾರತ ತಂಡದ ಸ್ಟಾರ್ ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಭಾರತೀಯ ಮಹಿಳಾ ಕ್ರಿಕೆಟ್ನ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಅವರು ಮಹಿಳಾ ಟಿ20 ವಿಶ್ವಕಪ್ ವೇಳೆಯೇ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಾವು ಎದುರಿಸಿದ ಕಠಿಣ ದಿನಗಳು, ಗಾಯದ ಸಮಸ್ಯೆಗಳು ಮತ್ತು ಮಾನಸಿಕವಾಗಿ ಹೇಗೆ ಬಲಿಷ್ಠವಾದೆ ಎಂಬುದನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಡ್ರೆಸ್ಸಿಂಗ್ ರೂಂನಲ್ಲಿ ಕಣ್ಣೀರಿಟ್ಟಿದ್ದ ಶ್ರೇಯಾಂಕಾ
ಈ ವರ್ಷದ ಆರಂಭದಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಜಯಗಳಿಸಿತ್ತು. ಆದರೂ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಶ್ರೇಯಾಂಕಾಗೆ ಅದು ಕಹಿ ನೆನಪಾಗಿತ್ತು. ಕರ್ನಾಟಕದ ಅದ್ಭುತ ಪ್ರತಿಭೆ ಶ್ರೇಯಾಂಕಾ ಪಾಟೀಲ್ ಸತತ ಗಾಯದ ಸಮಸ್ಯೆಗಳಿಂದಾಗಿ ತಂಡದಿಂದ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಹೊರಗುಳಿಯಬೇಕಾಯಿತು.
ಈ ಸಮಸ್ಯೆಗಳಿಂದ ಮುಕ್ತರಾಗಿ ಹೊರಬಂದ ಬಳಿಕ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂಲಕ ಭರ್ಜರಿ ಪುನರಾಗಮನದ ಕನಸು ಕಂಡಿದ್ದರು. ಆದರೆ ಕಮ್ಬ್ಯಾಕ್ ಮಾಡಿದ ಮೊದಲ ಪಂದ್ಯದಲ್ಲೇ ಮಳೆಯ ಅಡಚಣೆಯ ನಡುವೆ 2 ಓವರ್ಗಳಲ್ಲಿ 24 ರನ್ ನೀಡಿ ನಿರಾಸೆ ಅನುಭವಿಸಿದರು. ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್ನಲ್ಲಿ ಅವರು ಭಾವುಕರಾಗಿ ಕಣ್ಣೀರಿಟ್ಟಿದಾಗಿ ಹೇಳಿಕೊಂಡಿದ್ದಾರೆ.
ಶ್ರೇಯಾಂಕಾ ಪಾಟೀಲ್ ಹೇಳಿದ್ದೇನು?
'ಗೊಂದಲ ಮತ್ತು ನೋವಿನಿಂದ ಕಂಗೆಟ್ಟಿದ್ದ ನನಗೆ ಏನು ಮಾಡಬೇಕೆಂದು ತಿಳಿಯದೆ ಡ್ರೆಸ್ಸಿಂಗ್ ರೂಮ್ಗೆ ತೆರಳಿದೆ. ಒಳಗೆ ಹೋದಾಗ ಮೊದಲು ಸ್ಮೃತಿಯನ್ನು ನೋಡಿ ತಕ್ಷಣವೇ ಅವರನ್ನು ಅಪ್ಪಿಕೊಂಡೆ. ಆ ಬಳಿಕ ಕಣ್ಣೀರು ಹರಿಯಲು ಆರಂಭವಾಯಿತು,' ಎಂದು ಪಾಟೀಲ್ ಅವರು ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಹೇಳಿಕೊಂಡಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
'ನನ್ನನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಳ್ಳುವ ವ್ಯಕ್ತಿ ಅಂದ್ರೆ ಅದು ಸ್ಮೃತಿ ಮಂದಾನ. ನಾನು ಅವರ ಮುಂದೆ ಕಣ್ಣೀರಿಟ್ಟೆ. ಆಗ ಅವರು ನೀನು ಇಲ್ಲಿ ಇರುವುದಕ್ಕೆ ನನಗೆ ಹೆಮ್ಮೆ ಇದೆ. ನೀನು ಭಾರತದ ಪರ ಪಂದ್ಯಗಳನ್ನು ಗೆಲ್ಲಿಸುತ್ತೀಯಾ ಎಂಬ ನಂಬಿಕೆ ನನಗಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು. ಅವರು ಹೇಳಿದ ಪ್ರತಿಯೊಂದು ಮಾತು ಕೂಡ ನಿಜವಾಗಿಯೂ ಅವರ ಹೃದಯದಿಂದ ಬಂದಿತ್ತು,' ಎಂದು ಶ್ರೇಯಾಂಕಾ ಪಾಟೀಲ್ ಅವರು ನೆನಪಿಸಿಕೊಂಡಿದ್ದಾರೆ.
ಸೋಲು-ಗೆಲುವಿನ ಬಗ್ಗೆ ಮಹತ್ವದ ಹೇಳಿಕೆ
'ನಾವು ಸದಾ ಯಶಸ್ಸಿನತ್ತ ಮುಖ ಮಾಡಿರಬೇಕು ನಿಜ, ಆದರೆ ಅದೇ ಸಮಯದಲ್ಲಿ ನಮ್ಮ ಕಣ್ಮುಂದೆ ಸೋಲು ಎದುರಾದರೂ ಅದನ್ನು ಸ್ವೀಕರಿಸುವ ಮತ್ತು ಜೀರ್ಣಿಸಿಕೊಳ್ಳುವ ಮಾನಸಿಕ ಸ್ಥಿತಿಯನ್ನು ನಾವು ರೂಢಿಸಿಕೊಳ್ಳಬೇಕು. ತಪ್ಪುಗಳನ್ನು ಯಾರಾದರೂ ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದರೆ ನನಗೆ ಇಷ್ಟ. ಅದನ್ನು ತಿದ್ದಿಕೊಂಡು ಉತ್ತಮ ಆಟಗಾರ್ತಿಯಾಗಲು ಬಯಸುತ್ತೇನೆ,' ಎಂದು ಶ್ರೇಯಾಂಕಾ ತಮ್ಮ ಪ್ರಬುದ್ಧತೆಯನ್ನು ಮೆರೆದಿದ್ದಾರೆ.
'ವಿರಾಟ್ ಕೊಹ್ಲಿಯೇ ಯಾವಗಲೂ ಸ್ಫೂರ್ತಿ'
ಐಸಿಸಿ ಜೊತೆಗಿನ ಸಂಭಾಷಣೆಯಲ್ಲಿ ತಮ್ಮ ರೋಲ್ ಮಾಡೆಲ್ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೇಯಾಂಕಾ, 'ನನ್ನ ಸಾರ್ವಕಾಲಿಕ ದೊಡ್ಡ ಪ್ರೇರಣೆ ಎಂದರೆ ಅದು ವಿರಾಟ್ ಕೊಹ್ಲಿ ಮಾತ್ರ. ನಾನು ಕೂಡ ಆರ್ಸಿಬಿ ಹುಡುಗಿ ಆಗಿರುವುದರಿಂದ ಅವರ ಕಠಿಣ ಪರಿಶ್ರಮ, ಫಿಟ್ನೆಸ್ ಹಾಗೂ ಆಟದ ಮೇಲಿರುವ ನಿಷ್ಠೆಯನ್ನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ. ಅವರು ಕೇವಲ ಕ್ರಿಕೆಟ್ಗ ಮಾತ್ರವಲ್ಲ, ಒಟ್ಟಾರೆ ಜೀವನಶೈಲಿಗೇ ದೊಡ್ಡ ಸ್ಪೂರ್ತಿ,' ಎಂದಿದ್ದಾರೆ.
ಇನ್ನೂ ಇದೀಗ ಆರಂಭವಾಗಿರುವ ಮಹಿಳಾ ಟಿ20 ವಿಶ್ವಕಪ್ನಲ್ಲಿ ಶ್ರೇಯಾಂಕಾ ಪಾಟೀಲ್ ಭಾರತ ತಂಡದ ಪ್ರಮುಖ ಅಸ್ತ್ರವಾಗಿದ್ದು, ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವ ತವಕದಲ್ಲಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಇವರ ಆಫ್-ಸ್ಪಿನ್ ಮತ್ತು ಆಲ್ರೌಂಡ್ ಪ್ರದರ್ಶನ ಅತ್ಯಂತ ನಿರ್ಣಾಯಕವಾಗಲಿದೆ.












Click it and Unblock the Notifications