ಮೈಲಾರ ಲಿಂಗೇಶ್ವರನಿಗೆ ಡಿ.ಕೆ. ಶಿವಕುಮಾರ್ ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆ ಕೊಟ್ಟಿದ್ಯಾಕೆ?
ಬೆಂಗಳೂರು, ಡಿ. 18: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಮಾಡಿದ್ದ ತಪ್ಪನ್ನೆ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂಕಷ್ಟಕ್ಕೆ ಸಿಲುಕಿದ್ದರು. ಆ ತಪ್ಪು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ, ಡಿಕೆ ಶಿವಕುಮಾರ್ ಅವರು, ಅಸ್ಸಾಂ ರಾಜ್ಯದ ಗುಹವಾಟಿಯ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಇವತ್ತು ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಕಪ್ಪು ಕಾಣಿಕೆ ಕೊಟ್ಟಿದ್ದಾರೆ. ಮೈಲಾರಲಿಂಗೇಶ್ವರನಿಗೆ ಬೆಳ್ಳಿಯ ಹೆಲಿಕಾಪ್ಟರ್ ಕಾಣಿಕೆ ನೀಡುವ ಮೂಲಕ ತಮ್ಮಿಂದ ಆಗಿದ್ದ ಪ್ರಮಾದವನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಡಿಕೆಶಿ ಅವರು ಮಾಡಿದ್ದಾರೆ.
ಇಂದು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರಕ್ಕೆ ತೆರಳಿದ್ದ ಡಿಕೆಶಿ ಅವರು, ಕಳೆದ ಎರಡು ವರ್ಷಗಳ ಹಿಂದೆ ಅರಿಯದೆ ಆಗಿದ್ದ ಪ್ರಮಾದಕ್ಕೆ ಹೆಲಿಕಾಪ್ಟರ್ ಕಾಣಿಕೆಯನ್ನು ಮೈಲಾರಲಿಂಗೇಶ್ವರನಿಗೆ ಸಲ್ಲಿಸಿದ್ದಾರೆ. ದೇವಸ್ಥಾನದ ಎದುರು ರುದ್ರಸ್ನಾನ ಮಾಡುವ ಮೂಲಕ ಆ ಭಾಗದ ಜನರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಅಷ್ಟಕ್ಕೂ ಡಿಕೆಶಿ ಮೈಲಾರಲಿಂಗೇಶ್ವರನಿಗೆ ಹೆಲಿಕಾಪ್ಟರ್ ಕಾಣಿಗೆ ಕೊಟ್ಟಿದ್ದು ಯಾಕೆ? ಜನಾರ್ಧನ ರೆಡ್ಡಿ ಅವರು ಯಾವ ತಪ್ಪನ್ನು ಮಾಡಿದ್ದರು? ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆ
ಮೈಲಾರದ ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕಿಂತ ಹೆಚ್ಚಿನ ಎತ್ತರದಲ್ಲಿ ಯಾರೂ ಹೋಗಬಾರದು. ಹಾಗೇನಾದರೂ ಹೋದಲ್ಲಿ ಅವರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂಬ ಮಾತೊಂದು ಮೈಲಾರಲಿಂಗೇಶ್ವರನ ಭಕ್ತರಲ್ಲಿದೆ. ಇದೇ ತಪ್ಪು ಕಳೆದ 2018ರಲ್ಲಿ ಡಿಕೆ ಶಿವಕುಮಾರ್ ಅವರಿಂದ ಆಗಿತ್ತು. ಹೀಗಾಗಿ ಮೈಲಾರ ಲಿಂಗೇಶ್ವರನಿಗೆ ಒಂದು ಕೆಜಿ ತೂಕದ ಬೆಳ್ಳಿಹೆಲಿಕಾಪ್ಟರ್ ನ್ನು ಕಾಣಿಕೆ ನೀಡಿದ್ದಾರೆ. ಹೆಲಿಕಾಪ್ಟರ್ ನಿಂದಾದ ಪ್ರಮಾದವನ್ನು ಬೆಳ್ಳಿ ಹೆಲಿಕಾಪ್ಟರ್ ರೂಪದಲ್ಲಿ ತಪ್ಪು ಕಾಣಿಕೆ ಕೊಡುವ ಮೂಲಕ ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಡಿಕೆಶಿ ಮಾಡಿದ್ದಾರೆ.
ಹೆಲಿಕ್ಯಾಪ್ಟರ್ ತಂದಿಟ್ಟ ಸಂಕಷ್ಟ: ಮೈಲಾರದಲ್ಲಿ ಡಿಕೆಶಿ ಶಾಪ ವಿಮೋಚನೆ ಮಾಡಿಕೊಂಡ ಡಿಕೆಶಿ!
2018ರಲ್ಲಿ ಆಗಿದ್ದ ಅಪಚಾರ
ಕಳೆದ 2018ರಲ್ಲಿ ಮೈಲಾರ ಕಾರ್ಣಿಕದ ಸಂದರ್ಭದಲ್ಲಿ ಡಿಕೆಶಿ ಮೈಲಾರಕ್ಕೆ ಬಂದಿದ್ದರು. ಆಗ ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ ಮಾಡಿಸಿದ್ದರು. ಆದರೆ ಹೆಲಿಕಾಪ್ಟರ್ ನಲ್ಲಿ ದೇವಸ್ಥಾನಕ್ಕೆ ಬಂದಿದ್ದರಿಂದ ಅಪಚಾರ ಆಗಿತ್ತು. ಹೆಲಿಕಾಪ್ಟರ್ ನಲ್ಲಿ ಬಂದು ಹೋದ ನಂತರ ಅವರಿಗೆ ಸಮಸ್ಯೆಗಳು ಎದುರಾಗಿದ್ದವು. ನಂತರ ಪಕ್ಷದ ಮುಖಂಡರು ಹಾಗೂ ದೇವಸ್ಥಾನದ ಪೂಜಾರಿಗಳ ಸಲಹೆ ಮೇರೆಗೆ ದೇವಸ್ಥಾನಕ್ಕೆ ತೆರಳಿ ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆ ಕೊಟ್ಟು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಉದ್ದಂಡ ನಮಸ್ಕಾರ ಹಾಕಿದ ಡಿಕೆಶಿ
ಡಿ.ಕೆ. ಶಿವಕುಮಾರ್ ಅವರು, ದೇವಸ್ಥಾನದ ಆವರಣದಲ್ಲಿ ಗರ್ಭಗುಡಿಗೆ ಐದು ಬಾರಿ ದೀಡ ನಮಸ್ಕಾರ (ಉದ್ದಂಡ ನಮಸ್ಕಾರ) ಹಾಕಿದರು. ದೀಡ ನಮಸ್ಕಾರದ ಬಳಿಕ ದೇವಸ್ಥಾನದ ಎದುರು ರುದ್ರಸ್ನಾನದ ವಿಧಿ ನೆರವೇರಿಸಿ, ಪೂಜೆ ಸಲ್ಲಿಸಿದರು. ನಂತರ ಮೈಲಾರಲಿಂಗೇಶ್ವರನಿಗೆ ಪೂಜೆ ಸಲ್ಲಿಸಿ ಬೆಳ್ಳಿಯ ಹೆಲಿಕಾಪ್ಟರ್ ಕಾಣಿಕೆ ನೀಡಿ ಹರಕೆ ತೀರಿಸಿದರು. ತಮ್ಮಿಂದ ಅರಿಯದೇ ಆಗಿದ್ದ ಪ್ರಮಾದವನ್ನು ಕ್ಷಮಿಸುವಂತೆ ದೇವರಲ್ಲಿ ಬೇಡಿಕೊಂಡರು. ದೇವಸ್ಥಾನದ ಮೇಲ್ಭಾಗದಲ್ಲಿ ಹೆಲಿಕಾಪ್ಟರ್ ಹಾಯ್ದು ಹೋಗಿದ್ದರಿಂದ ಹಲವು ಸಂಕಷ್ಟ ಎದುರಿಸಿದ್ದ ಡಿಕೆಶಿ ಅವರು, ಇಂದು ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಮೈಲಾರಕ್ಕೆ ಹೋಗಿದ್ದರು.
2018ರಲ್ಲಿ ಕಾರ್ಣಿಕದ ದಿನ ನಡೆದಿದ್ದೇನು?
ಮೈಲಾರ ಲಿಂಗ ಕ್ಷೇತ್ರಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ ಬರುತ್ತಾರೆ. ಇಲ್ಲವೇ ಎತ್ತಿನ ಬಂಡಿ, ವಾಹನದಲ್ಲಿ ಅನುಕೂಲಕ್ಕೆ ತಕ್ಕಂತೆ ಬರುವ ಸಂಪ್ರದಾಯವಿದೆ. ಈ ಮುಂಚೆ ಹೊಂಕಣ ಪ್ರದೇಶವನ್ನು ಸುತ್ತಿ ಮೈಲಾರಕ್ಕೆ ಬರುತ್ತಿದ್ದರಂತೆ ಹಾಗಾಗಿ ಗಾದೆಯೂ ಪ್ರಚಲಿತವಾಗಿದೆ. 2018ರಲ್ಲಿ ಕಾರ್ಣಿಕ ಭವಿಷ್ಯ ವಾಣಿ ಕಾರ್ಯಕ್ರಮ ನೋಡಲು ಡಿಕೆ ಶಿವಕುಮಾರ್ ಅವರು ಹೆಲಿಕಾಪ್ಟರ್ ಮೂಲಕ ಬಂದಿದ್ದರು. ಈ ವೇಳೆ ಅವರ ಹೆಲಿಕಾಪ್ಟರ್ ಮೈಲಾರಲಿಂಗೇಶ್ವರ ದೇವಸ್ಥಾನ ಮತ್ತು ಕಾರ್ಣಿಕ ನುಡಿಯುವ ಡೆಂಕಣಮರಡಿ ಕ್ಷೇತ್ರದ ಮೇಲೆ ಹಾರಾಡಿದೆ. ಇದರಿಂದ ಡಿ.ಕೆ. ಶಿವಕುಮಾರ್ ಅವರಿಗೆ ಸಂಕಷ್ಟ ಎದುರಾಗಿತ್ತು ಎಂದು ಅಲ್ಲಿನ ಪೂಜಾರಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ದರು.
Recommended Video
ಮಾಜಿ ಸಚಿವ ಜನಾರ್ದನ ರೆಡ್ಡಿ
2008ರಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡಾ ಹೆಲಿಕಾಪ್ಟರ್ ಮೂಲಕ ಈ ಕ್ಷೇತ್ರಕ್ಕೆ ಆಗಮಿಸಿದ್ದರು. ನಂತರ ಅವರ ಬದುಕಲ್ಲೂ ಸಾಕಷ್ಟು ಕಷ್ಟ ನೋವು, ಅವಮಾನ ಎದುರಿಸಿದ್ದು ಈಗ ಇತಿಹಾಸ. ಡಿ.ಕೆ. ಶಿವಕುಮಾರ್ ಆದಷ್ಟು ಬೇಗ ಕ್ಷೇತ್ರಕ್ಕೆ ಬಂದು ಸ್ವಾಮಿಯ ದರ್ಶನ ಪಡೆದು, ತಪ್ಪು ಕಾಣಿಕೆ ಹಾಕಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದೊಂದೇ ಮಾರ್ಗ ಎಂದು ಅಲ್ಲಿನ ಪೂಜಾರಿ ವೆಂಕಪ್ಪಯ್ಯ ಹೇಳಿದ್ದರು. ಅದರಂತೆ ಇದೀಗ ಬೆಳ್ಳಿ ಹೆಲಿಕಾಪ್ಟರ್ ಕೊಡುವ ಮೂಲಕ ಡಿಕೆಶಿ ಪ್ರಮಾದ ಸರಿಪಡಿಸಿಕೊಳ್ಳುವ ಯತ್ನವನ್ನು ಡಿಕೆಶಿ ಮಾಡಿದ್ದಾರೆ.