ಒಂದೇ ವೇದಿಕೆಯಲ್ಲಿ ಗೌಡ್ರ ಸೊಸೆ, ಡಿಕೆಶಿ: ಏನೇನೋ ರಾಜಕೀಯ ಸುದ್ದಿ
Recommended Video
ಜೆಡಿಎಸ್ ವರಿಷ್ಠ ದೇವೇಗೌಡರ ತಲೆಯಲ್ಲಿ ಅದೇನು ರಾಜಕೀಯ ಲೆಕ್ಕಾಚಾರ ಓಡಾಡುತ್ತಿದೆಯೋ ಗೊತ್ತಿಲ್ಲ. ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸಲಿದ್ದಾರೆಂದು ಕುಮಾರಸ್ವಾಮಿ ಹೇಳಿದ್ದರೂ, ಕುಟುಂಬದಿಂದ ಇನ್ನೂ ಮೂವರು ಅಸೆಂಬ್ಲಿ ಚುನಾವಣಾ ತಯಾರಿಯಲ್ಲಿದ್ದಾರೆ.
ಗೌಡ್ರ ಸೊಸೆ ಮತ್ತು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿಯವರು ಚನ್ನಪಟ್ಟಣದ ಕಾರ್ಯಕ್ರಮವೊಂದರಲ್ಲಿ ಭಾನುವಾರ (ನ 26) ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಇಂಧನ ಸಚಿವ ಡಿ ಕೆ ಶಿವಕುಮಾರ್ ಕೂಡಾ ಭಾಗಿಯಾಗಿದ್ದರು.
'ಚನ್ನಪಟ್ಟಣವನ್ನ ರಾಜಕೀಯವಾಗಿ ಮದುವೆ ಮಾಡಿಕೊಂಡಿದ್ದೇನೆ'
ರಾಜಕೀಯವಾಗಿ ಹಾವು-ಮುಂಗುಸಿಯಂತಿರುವ ಗೌಡ್ರ ಮತ್ತು ಡಿಕೆಶಿ ಕುಟುಂಬ, ಚನ್ನಪಟ್ಟಣದಲ್ಲಿ ಸಿ ಪಿ ಯೋಗೀಶ್ವರ್ ಅವರನ್ನು ಮುಂದಿನ ಚುನಾವಣೆಯಲ್ಲಿ ಹೆಡೆಮುರಿಕಟ್ಟಲು, ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದ್ದಾರಾ ಎನ್ನುವುದು ಚನ್ನಪಟ್ಟಣದ ಕಾರ್ಯಕ್ರಮದ ನಂತರ ಹೊರಬಿದ್ದ ರಾಜಕೀಯ ಗುಸುಗುಸು ಸುದ್ದಿ.
ಡಿಕೆಶಿ ನನ್ನ ವಿರುದ್ದ ಸ್ಪರ್ಧಿಸಲಿ :ಸಿ.ಪಿ.ಯೋಗೇಶ್ವರ್ ಸವಾಲು
ಚನ್ನಪಟ್ಟಣದಲ್ಲಿ ಆಯೋಜಿಸಲಾಗಿದ್ದ 'ಕನಕನ ಹಬ್ಬ' ಕಾರ್ಯಕ್ರಮಕ್ಕೆ ಅನಿತಾ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಇಬ್ಬರೂ ಗಹನ ಚರ್ಚೆಯಲ್ಲಿ ತೊಡಗಿದ್ದದ್ದು, ಮುಂದಿನ ಚುನಾವಣೆಯಲ್ಲಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈ ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾ ಎನ್ನುವ ಚರ್ಚೆ ಆರಂಭವಾಗಲು ಕಾರಣವಾಗಿದೆ.
ಅನಿತಾ-ಡಿಕೆಶಿ ಮಾತುಕತೆಗೆ ವಿಶೇಷ ಅರ್ಥಬೇಡ: ಎಚ್ಡಿಕೆ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೀಶ್ವರ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಕಣಕ್ಕಿಸಲಿದೆ ಎನ್ನುವ ಸುದ್ದಿಯ ನಡುವೆ, ಒಂದು ವೇಳೆ ಸೂಕ್ತ ಅಭ್ಯರ್ಥಿ ಸಿಗದೇ ಇದ್ದ ಪಕ್ಷದಲ್ಲಿ ಡಿ ಕೆ ಸುರೇಶ್ ಅವರನ್ನು ಕಾಂಗ್ರೆಸ್ ಕಣಕ್ಕಿಸಲಿದೆ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಆದರೆ, ಡಿಕೆಶಿ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ, ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ.. ಇನ್ನೂ ಇದೆ..
ಎರಡೆರಡು ಜವಾಬ್ದಾರಿಯನ್ನು ಡಿಕೆಶಿ ಹೊರಬೇಕಾಗುತ್ತದೆ
ಸಹೋದರ ಡಿ ಕೆ ಸುರೇಶ್ ಅವರನ್ನು ಚನ್ನಪಟ್ಟಣದಿಂದ ಕಣಕ್ಕಿಳಿಸಿದರೆ, ಎರಡೆರಡು ಜವಾಬ್ದಾರಿಯನ್ನು ಡಿಕೆಶಿ ಹೊರಬೇಕಾಗುತ್ತದೆ. ಚನ್ನಪಟ್ಟಣದಿಂದ ಸಹೋದರನನ್ನು ಗೆಲ್ಲಿಸುವುದು ಮತ್ತು ಡಿ ಕೆ ಸುರೇಶ್ ಅವರಿಂದ ತೆರವಾಗುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನೂ ಉಳಿಸಿಕೊಳ್ಳುವ ಜವಾಬ್ದಾರಿ ಡಿಕೆ ಶಿವಕುಮಾರ್ ಮೇಲೆ ಬೀಳಲಿದೆ.
ರಾಜಕೀಯ ಬದ್ದ ವೈರಿ ಗೌಡ್ರ ಕುಟುಂಬದ ಜೊತೆ ಹೊಂದಾಣಿಕೆ
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಗೌಡ್ರ ಕುಟುಂಬದ ವಿರುದ್ದ ಹಠಕ್ಕೆ ಬಿದ್ದು ಸಹೋದರನನ್ನು ಗೆಲ್ಲಿಸಿದ್ದ ಡಿ ಕೆ ಶಿವಕುಮಾರ್, ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಯೋಗೀಶ್ವರ್ ಅವರನ್ನು ಸೋಲಿಸಲು ತಮ್ಮ ರಾಜಕೀಯ ಬದ್ದ ವೈರಿ ಗೌಡ್ರ ಕುಟುಂಬದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಲೆಕ್ಕಾಚಾರ, ಡಿಕೆಶಿ ತಲೆಯಲ್ಲಿ ಓಡಾಡುತ್ತಿದೆಯಾ ಎನ್ನುವುದು ಈ ಭಾಗದ ಜನರ ಪ್ರಶ್ನೆ.
ಈ ಕ್ಷೇತ್ರದಲ್ಲಿ ಬರುವ ನಾಯಕರೆಲ್ಲಾ ಟೆಂಪರರಿ ನಾಯಕರು
ಅನಿತಾ ಕುಮಾರಸ್ವಾಮಿಯವರೇ, ಈ ಕ್ಷೇತ್ರದಲ್ಲಿ ಬರುವ ನಾಯಕರೆಲ್ಲಾ ಟೆಂಪರರಿ ನಾಯಕರು. ಆದರೆ, ಈ ಕ್ಷೇತ್ರದ ಜನ ಮತ್ತು ನಾವು, ನಿಮ್ಮ ಜೊತೆ ಶಾಶ್ವತವಾಗಿ ಇರುತ್ತೇವೆ. ಅನಿತಾ ಕುಮಾರಸ್ವಾಮಿಯವರು ನಿಮ್ಮನ್ನೇ ನಂಬಿಕೊಂಡು ಬಂದಿದ್ದಾರೆಂದು ಡಿ ಕೆ ಶಿವಕುಮಾರ್ ಚನ್ನಪಟ್ಟಣದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. (ಚಿತ್ರಕೃಪೆ: ಪಬ್ಲಿಕ್ ಟಿವಿ)
ಪರೋಕ್ಷವಾಗಿ ಯೋಗೀಶ್ವರ್ ಅವರಿಗೆ ಠಾಂಗ್ ನೀಡಿದ ಡಿಕೆಶಿ
ಚನ್ನಪಟ್ಟಣ ಮತ್ತು ರಾಮನಗರವನ್ನು ನನ್ನ ಕೊನೆಯ ಉಸಿರನವರೆಗೂ ನಾನು ಮರೆಯುವುದಿಲ್ಲ. ನಾನೇ ಚಕ್ರಾಧಿಪತಿ ಎಂದು ಬಂದವರು ನೇಪಥ್ಯಕ್ಕೆ ಸರಿದಿದ್ದಾರೆ. ನಿಮ್ಮ ಹೆಣಹೊರಕ್ಕೂ ನಾವಿರುತ್ತೇವೆ, ಪಲ್ಲಕ್ಕಿ ಹೊರಕ್ಕೂ ನಾವಿರುತ್ತೇವೆ ಎಂದು ಡಿಕೆಶಿ, ಪರೋಕ್ಷವಾಗಿ ಯೋಗೀಶ್ವರ್ ಅವರಿಗೆ ಠಾಂಗ್ ನೀಡಿದ್ದಾರೆ.
ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ
ಆದರೆ, ಅನಿತಾ ಕುಮಾರಸ್ವಾಮಿಯವರು ತಮ್ಮ ಭಾಷಣದಲ್ಲಿ ಮತ್ತೆ ಸ್ಪರ್ಧಿಸುವ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಇದೇ ಅನಿತಾ ಕುಮಾರಸ್ವಾಮಿಯವರನ್ನು ಚುನಾವಣೆಯಲ್ಲಿ ಸೋಲಿಸಲು, ಸಿ ಪಿ ಯೋಗೀಶ್ವರ್ ಅವರನ್ನು ತನ್ನತ್ತ ಸೆಳೆದುಕೊಂಡಿದ್ದ ಡಿ ಕೆ ಶಿವಕುಮಾರ್, ಈಗ ಅವರನ್ನು ಹಣೆಯಲು ಅನಿತಾ ಅವರಿಗೆ ಬೆಂಬಲ ನೀಡಿದ್ದೇ ಆದಲ್ಲಿ, ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎನ್ನುವ ಆಡುಮಾತು ಮತ್ತೆ ಸತ್ಯವಾಗುತ್ತದೆ.