ಸೋಮವಾರದಂದು ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಬಂಧನ ಸಾಧ್ಯತೆ
ಬೆಂಗಳೂರು, ಸೆಪ್ಟೆಂಬರ್ 08: ಐಟಿ ಹಾಗೂ ಇಡಿ ಸಂಸ್ಥೆಗಳು ಸಚಿವ ಡಿ.ಕೆ.ಶಿವಕುಮಾರ್ ಅವರ ಬೆನ್ನುಬಿಡುತ್ತಿಲ್ಲ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಸಚಿವರನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ.
ದೆಹಲಿಯಲ್ಲಿನ ಡಿ.ಕೆ.ಶಿವಕುಮಾರ್ ಅವರ ಆಪ್ತರ ಮನೆ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಅದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ.ಕೆ.ಶಿವಕುಮಾರ್ ಅವರ ಮೇಲೆ ಎಫ್ಐಆರ್ ದಾಖಲಿಸಲಿದ್ದಾರೆ.
ಇಂದು ಸಂಜೆ ವೇಳೆಗೆ ಎಫ್ಐಆರ್ ದಾಖಲಿಸಿ. ಸೋಮವಾರ ದೆಹಲಿಯಿಂದ ಕರ್ನಾಟಕಕ್ಕೆ ಬರಲಿರುವ ಇಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಮತ್ತು ಸಹೋದರ ಡಿ.ಕೆ.ಸುರೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ವಿಚಾರಣೆ ನಡೆಸಿದ ನಂತರ ಬಂಧಿಸುವ ಸಾಧ್ಯತೆಯೂ ಇದೆ.

ಮೋದಿಗೆ ಪತ್ರ ಬರೆದಿರುವ ಸುರೇಶ್
ಈ ಕುರಿತು ಈಗಾಗಲೇ ಡಿ.ಕೆ.ಸುರೇಶ್ ಅವರು ಆತಂಕ ವ್ಯಕ್ತಪಡಿಸಿದ್ದು. 'ನನಗೆ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಬಂಧನ ಭೀತಿ' ಇದೆ ಎಂದು ಈಗಾಗಲೇ ನರೇಂದ್ರ ಮೋದಿ ಅವರಿಗೆ ಈ ಕುರಿತು ಪತ್ರ ಬರೆದಿದ್ದಾರೆ.

ದೆಹಲಿಯಲ್ಲಿ ದಾಳಿ ನಡೆಸಿತ್ತು ಐಟಿ ಇಲಾಖೆ
ಈ ಹಿಂದೆ ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ಆಪ್ತರ ಮನೆ ಮೇಲೆ ದಾಳಿ ಮಾಡಿದ್ದ ಐಟಿ ಅಧಿಕಾರಿಗಳು ಅಕ್ರಮ ಆಸ್ತಿ ಪತ್ತೆ ಮಾಡಿದ್ದರು. ಆ ನಂತರ ಆ ಪ್ರಕರಣವನ್ನು ಇಡಿ (ಜಾರಿ ನಿರ್ದೇಶನಾಲಯ)ಕ್ಕೆ ವರ್ಗಾಯಿಸಲಾಗಿತ್ತು. ಈಗ ಇಡಿ ಅಧಿಕಾರಿಗಳು ಡಿ.ಕೆ.ಎಸ್ ಸಹೋದರರನ್ನು ಬಂಧಿಸುವ ಸಾಧ್ಯತೆ ಇದೆ.

ಫೆಮಾ, ಫೆರಾ ಕಾಯ್ದೆ ಉಲ್ಲಂಘನೆ
ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಸಹೋದರರು ಫೆಮಾ, ಫೆರಾ ಕಾಯ್ದೆಯನ್ನು ಉಲ್ಲಂಘಿಸಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೆ ಅಲ್ಲದೆ ಹವಾಲಾ ದಂಧೆಗೆ ಸಂಬಂಧಪಟ್ಟ ಪ್ರಕರಣ ಸಹ ಡಿ.ಕೆ.ಶಿವಕುಮಾರ್ ಹಾಗೂ ಸಹೋದರ ಶಿ.ಕೆ.ಸುರೇಶ್ ಅವರ ಆಪ್ತರ ಮೇಲೆ ಇದೆ.

ಜಾಮೀನು ಪಡೆಯಲು ಚರ್ಚೆ
ಬಂಧನ ಭೀತಿ ಎದುರಾಗಿರುವ ಕಾರಣ ಈಗಾಗಲೇ ಡಿ.ಕೆ.ಶಿವಕುಮಾರ್ ಅವರು ಜಾಮೀನು ಪಡೆಯುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಯಾವ ಅಂಶಗಳನ್ನು ಮುಂದಿಟ್ಟು ಕೊಂಡು ಜಾಮೀನು ಪಡೆಯಬಹುದು ಎಂಬ ಬಗ್ಗೆ ಡಿ.ಕೆ.ಶಿವಕುಮಾರ್ ಅವರು ಚರ್ಚೆ ಮಾಡುತ್ತಿದ್ದಾರೆ.

ಡಿ.ಕೆ.ಸುರೇಶ್ ಪತ್ರ ಬಿಡುಗಡೆ
ಡಿ.ಕೆ.ಸುರೇಶ್ ಅವರು ಇಂದು ಮುಂಜಾನೆ ಪತ್ರಿಕಾಗೋಷ್ಠಿ ನಡೆಸಿ ಬಿ.ಎಸ್.ಯಡಿಯೂರಪ್ಪ ಅವರು ಐಟಿ ಮತ್ತು ಇಡಿ ಇಲಾಖೆಗೆ 2017ರಲ್ಲಿ ಬರೆದಿರುವುದು ಎನ್ನಲಾಗಿರುವ ಪತ್ರವನ್ನು ಬಿಡುಗಡೆಗೊಳಿಸಿ ಯಡಿಯೂರಪ್ಪ ಅವರೇ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications