ಡಿಕೆ ರವಿ ಸಂಸಾರದಲ್ಲಿ ಯಾವುದೇ ತೊಂದರೆ ಇರ್ಲಿಲ್ಲ
ಕುಣಿಗಲ್,ಮೇ.3: "ನನ್ನ ಮಗನ ಸಂಸಾರದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಮಗ, ಸೊಸೆ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಮ್ಮ ಕೈಗೆ ಇನ್ನೂ ಮರಣೋತ್ತರ ಪರೀಕ್ಷೆ ವರದಿ ಬಂದಿಲ್ಲ" ಎಂದು ಡಿಕೆ ರವಿ ಅವರ ಪೋಷಕರು ಸಿಬಿಐ ತಂಡದ ಮುಂದೆ ತಮ್ಮ ದುಃಖ ತೋಡಿಕೊಂಡಿದ್ದಾರೆ.
ಫೆ.13ರಂದು ಡಿಕೆ ರವಿ ಹಾಗೂ ಪತ್ನಿ ಕುಸುಮಾ ಗ್ರಾಮಕ್ಕೆ ಆಗಮಿಸಿ ಸ್ಥಳೀಯ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಊರಲ್ಲಿ ಯಾರನ್ನಾದರೂ ಕೇಳಿ ನನ್ನ ಮಗ ಸೊಸೆ ಹೇಗಿದ್ದರು ಎಂದು ಹೇಳುತ್ತಾರೆ ಎಂದು ಡಿಕೆ ರವಿ ತಾಯಿ ಗೌರಮ್ಮ ಅವರು ಅಧಿಕಾರಿಗಳ ಹೇಳಿದರು.[ಡಿಕೆ ರವಿ ಕೇಸ್: ಸಾವು, ಸಿಐಡಿ, ಸಿಬಿಐ ತನಕ ಟೈಮ್ ಲೈನ್]
ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣದ ತನಿಖೆಯನ್ನು ತೀವ್ರಗೊಳಿಸುವ ಸಿಬಿಐ ತಂಡ ರವಿ ಅವರ ಸ್ವಗ್ರಾಮ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ದೊಡ್ಡಕೊಪ್ಪಲಿಗೆ ಭೇಟಿ ನೀಡಿದೆ. ಎರಡು ದಿನಗಳಿಂದ ಡಿಕೆ ರವಿ ಕುಟುಂಬ, ಸ್ನೇಹಿತರು ಹಾಗೂ ಸ್ಥಳೀಯರಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.
ಡಿಕೆ ರವಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಮರಣೋತ್ತರ ಪರೀಕ್ಷಾ ವರದಿ ಇನ್ನು ನಮ್ಮ ಕೈಗೆ ಸಿಕ್ಕಿಲ್ಲ ಎಂದು ರವಿ ಕುಟುಂಬ ಆರೋಪಿಸಿದೆ. [ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]

ರವಿ ಅವರ ವ್ಯಕ್ತಿತ್ವ, ಕುಟುಂಬದವರೊಂದಿಗಿನ ಸಂಬಂಧ, ಜನರೊಂದಿಗೆ ಇದ್ದ ಒಡನಾಟ, ಹಬ್ಬಹರಿದಿನಗಳಲ್ಲಿ ಅವರು ಪಾಲ್ಗೊಳ್ಳುತ್ತಿದ್ದ ರೀತಿ ಹೀಗೆ ಹಲವಾರು ವಿಷಯಗಳ ಬಗ್ಗೆ ಸಿಬಿಐ ತಂಡ ಮಾಹಿತಿ ಕಲೆ ಹಾಕಿದೆ.
ಮೊಬೈಲ್ ಸ್ವಿಚ್ ಆಫ್ ಮಾಡಿ: ಎಸ್ಪಿ ಕೃಷ್ಣಮೂರ್ತಿ ಮತ್ತು ನಾಲ್ವರು ಅಧಿಕಾರಿಗಳ ತಂಡ ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿಯ ದೊಡ್ಡಕೊಪ್ಪಲು ಗ್ರಾಮ ಡಿ.ಕೆ.ರವಿ ಅವರ ತಂದೆ ಕರಿಯಪ್ಪ, ತಾಯಿ ಗೌರಮ್ಮ ಹಾಗೂ ಸಹೋದರ ಡಿ.ಕೆ.ರಮೇಶ್ ಅವರನ್ನು ಭೇಟಿ ಮಾಡಿ ಸುದೀರ್ಘ ವಿಚಾರಣೆ ನಡೆಸಿ ವಿವರ ಕಲೆ ಹಾಕಿದೆ. [ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]
ವಿಚಾರಣೆ ಹಾಗೂ ಹೇಳಿಕೆ ಪಡೆಯುವ ತನಕ ನಿಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಎಂದು ಎಸ್ ಪಿ ಕೃಷ್ಣಮೂರ್ತಿ ಸೂಚಿಸಿದ್ದು ವಿಶೇಷವಾಗಿತ್ತು. ಸ್ಥಳೀಯ ಅಧಿಕಾರಿಗಳು ಅನುವಾದಕರಾಗಿ ಕೃಷ್ಣಮೂರ್ತಿ ಅವರಿಗೆ ಮಾಹಿತಿ ನೀಡುತ್ತಿದ್ದರು.
ಅಗತ್ಯಬಿದ್ದರೆ ಮರು ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಅದರೆ, ಅಟಾಪ್ಸಿ ವರದಿ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಸಿಬಿಐ ತಂಡದ ಜೊತೆಗೆ ಡಿಎಆರ್ ಪ್ಲಾಟೂನ್, ಸಬ್ ಇನ್ಸ್ ಪೆಕ್ಟರ್ ಮೂವರು ಪೊಲೀಸ್ ಪೇದೆಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದರು.












Click it and Unblock the Notifications